ಪೊಲೀಸರ ಕಾರಣಕ್ಕೆ ಸುದ್ದಿಗೆ ಬಂತು ವಕೀಲರು-ಪತ್ರಕರ್ತರ ಗಲಾಟೆ
ಬೆಂಗಳೂರು, ಜೂ. 18: ಬೆಂಗಳೂರಿನ ಸಿವಿಲ್ ಕೋರ್ಟ್ ಅವರಣದಲ್ಲಿ ನಡೆದಿದ್ದ ವಕೀಲರು ಮತ್ತು ಪತ್ರಕರ್ತರು ಹಾಗೂ ಪೊಲೀಸರ ನಡುವೆ ಘರ್ಷಣೆಗೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಸಲು ಸಿಬಿಐಗೆ ಅನುಮತಿ ನಿರಾಕರಣೆ ಮಾಡುವ ಕುರಿತು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮವನ್ನು ವಿರೋಧಿಸಿ ವಕೀಲರು ಜೂ. 19ರಂದು ಕೋರ್ಟ್ ಕಲಾಪ ಬಹಿಷ್ಕಾರ ಮಾಡಲಿದ್ದಾರೆ.
2012ರಲ್ಲಿ ವಕೀಲರು-ಪತ್ರಕರ್ತರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆ ಸುದ್ದಿಯಾಗಿತ್ತು. ಕೋರ್ಟ್ ಕಲಾಪ ಬಹಿಷ್ಕರಿಸಿ, ನಗರ ಸಿವಿಲ್ ಕೋರ್ಟ್, ಮ್ಯಾಜಿಸ್ಟ್ರೇಟ್ ಕೋರ್ಟ್, ಹೈಕೋರ್ಟ್ಗಳಿಂದ ಕೆ.ಆರ್. ವೃತ್ತ ಮಾರ್ಗವಾಗಿ ರಾಜಭವನದವರೆಗೆ ಮೆರವಣಿಗೆ ತೆರಳಲಾಗುವುದು ಎಂದು ಸಂಘದ ಅಧ್ಯಕ್ಷ ಎಚ್.ಸಿ.ಶಿವರಾಮು ತಿಳಿಸಿದ್ದಾರೆ.[ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಎಚ್. ಸಿ ಶಿವರಾಮು]
ನಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು. ರಾಜ್ಯದಲ್ಲಿನ ಎಲ್ಲಾ 189 ವಕೀಲರ ಸಂಘದ ಪದಾಧಿಕಾರಿಗಳು ಕಲಾಪದಿಂದ ಹೊರಗುಳಿದು ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ ಎಂದು ಶಿವರಾಮು ಹೇಳಿದ್ದಾರೆ.
ಅಧೀನ ನ್ಯಾಯಾಲಯದಲ್ಲಿ ಬಾಕಿ ಇರುವ ನ್ಯಾಯಧೀಶರ ಹುದ್ದೆ ಭರ್ತಿ ಸೇರಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಹೈಕೋರ್ಟ್ ನಲ್ಲಿಯೂ ಸಹ 27 ನ್ಯಾಮೂರ್ತಿಗಳ ಹುದ್ದೆ ಭರ್ತಿ ಮಾಡ ಬೇಕಿದೆ. ನ್ಯಾಯಮೂರ್ತಿಗಳ ನೇಮಕ ಆಗದ ಪರಿಣಾಮ ಅರ್ಜಿ ವಿಲೇವಾರಿ ಯಲ್ಲಿ ವಿಳಂಬ ಆಗುತ್ತಿದೆ. ಇದಕ್ಕೆ ವಕೀಲರು ಹೊಣೆಗಾರರಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.[ವಕೀಲರು ಮತ್ತು ಪತ್ರಕರ್ತರ ನಡುವಿನ ಸಂಘರ್ಷಕ್ಕೆ ಏನು ಕಾರಣ?]
ವಕೀಲರು ರಜಾ ದಿನದಂದೂ ಲೋಕ ಅದಾಲತ್ನಲ್ಲಿ ಭಾಗವಹಿಸುವ ಮೂಲಕ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಹಕರಿಸುತ್ತಿದ್ದಾರೆ. ಸರ್ಕಾರದ ಕ್ರಮಗಳೇ ವಿಳಂಬಕ್ಕೆ ಕಾರಣ ಎಂದು ದೂರಿದರು. ಸಂಘದ ಪ್ರಧಾನ ಕಾರ್ಯದರ್ಶಿ ಪುಟ್ಟೇಗೌಡ, ಖಜಾಂಚಿ ಎಚ್.ವಿ.ಪ್ರವೀಣ್ ಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.