ಕರಕಶುಲ ನಿಗಮದ MD ಡಿ. ರೂಪಾ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ದೂರು
ಬೆಂಗಳೂರು, ಜೂ. 01: ಕರ್ನಾಟಕ ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಮೌದ್ಗಿಲ್ ನಡುವಿನ ಕಚ್ಚಾಟ ಬೀದಿಗೆ ಬಂದಿದೆ. ಸದಾ ಸುದ್ದಿಯಲ್ಲಿರುವ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ವಿರುದ್ಧ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಭ್ರಷ್ಟಾಚಾರ ಆರೋಪ ಹೊರಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಅಚ್ಚರಿ ಏನೆಂದರೆ, ನಿಗಮದ ಸಿಸಿಟಿವಿ ಡಿವಿಆರ್ ನಾಶ ಪಡಿಸಿದ ಅರೋಪ ಹೊರಿಸಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಮೇಲೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಡಿ ರೂಪಾ ಅವರು ಒಂದು ದಿನದ ಹಿಂದಷ್ಟೇ ದೂರು ನೀಡಿದ್ದರು. ಡಿ. ರೂಪಾ ಅವರು ದೂರು ನೀಡಿದ ಬೆನ್ನಲ್ಲೇ ಇದೀಗ ಅವರ ವಿರುದ್ಧವೇ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರತಿ ದೂರು ಸಲ್ಲಿಸಿದ್ದಾರೆ. ಎಂಡಿ ದೂರು ನೀಡಿದ ಬಳಿಕ ರಾಘವೇಂದ್ರ ದೂರು ನೀಡಿದ್ದು, ಇಷ್ಟು ದಿನ ಯಾಕೆ ನೀಡಿರಲಿಲ್ಲ ಎಂಬ ಪ್ರಶ್ನೆ ಎದ್ದಿದೆ.
ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಮಾಡಿರುವ ಅರೋಪ ಕುರಿತು 'ಒನ್ಇಂಡಿಯಾ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿದ ಐಪಿಎಸ್ ಅಧಿಕಾರಿ ಡಿ. ರೂಪಾ ಅವರು, "ರಾಘವೇಂದ್ರ ಶೆಟ್ಟಿ ಮನಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಿಗಮಲ್ಲಿ ನಡೆದಿರುವ ಘಟನೆಗಳ ಬಗ್ಗೆ ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದೇನೆ. ಅವರು ನನ್ನ ಮೇಲೆ ಮಾಡಿರುವ ಅರೋಪದ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮತ್ತೊಂದು ದೂರು ನೀಡುತ್ತಿದ್ದೇನೆ," ಎಂದು ಸ್ಪಷ್ಟನೆ ನೀಡಿದ್ದಾರೆ.
6 ಕೋಟಿ ರೂಪಾಯಿಗೂ ಅಧಿಕ ಟೆಂಡರ್
ಕರ್ನಾಟಕ ಕಲಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಡಿ. ರೂಪಾ ಅವರು ನಿಯಮ ಉಲ್ಲಂಘನೆ ಮಾಡಿ 6 ಕೋಟಿ ರೂಪಾಯಿಗೂ ಅಧಿಕ ಟೆಂಡರ್ ನೀಡಿದ್ದಾರೆ ಎಂದು ಆರೋಪಿಸಿ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.
ಕರಕುಶಲ ನಿಗಮದಲ್ಲಿ ಐದು ಲಕ್ಷ ರೂ. ಮೇಲ್ಪಟ್ಟ ಟೆಂಡರ್ ನೀಡಬೇಕಾದರೆ, ನಿಗಮದ ಅಧ್ಯಕ್ಷರು ಮತ್ತು ಸದಸ್ಯರ ಗಮನಕ್ಕೆ ತರಬೇಕು ಎಂಬ ನಿಯಮವಿದೆ. ಆದರೆ, ಈ ಎಲ್ಲಾ ನಿಯಮ ಗಾಳಿಗೆ ತೂರಿ ಆರು ಕೋಟಿ ರೂಪಾಯಿಗೂ ಅಧಿಕ ಹಣ ಎಚ್ಚ ಮಾಡಿದ್ದಾರೆ ಎಂದು ಆರೋಪಿಸಿ ಆರು ಪುಟಗಳ ದೂರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೀಡಿದ್ದಾರೆ.
ನೋಟಿಸ್ಗೆ ಉತ್ತರವಿಲ್ಲ
ಕಳೆದ ಒಂದೂವರೆ ವರ್ಷದಿಂದ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಆಗಿರುವ ಡಿ. ರೂಪಾ ಅವರಿಗೆ ಈವರೆಗೂ 70 ಕ್ಕೂ ಹೆಚ್ಚು ನೋಟಿಸ್ ನೀಡಲಾಗಿದೆ. ಒಂದು ನೋಟಿಸ್ ಗೂ ಅವರು ಉತ್ತರ ಕೊಟ್ಟಿಲ್ಲ. ವಾರಕ್ಕೆ ಎರಡು ದಿನ ಮಾತ್ರ ಕಚೇರಿಗೆ ಬರುತ್ತಿದ್ದು, ಕಡತಗಳನ್ನು ಮನೆಗೆ ತರಿಸಿಕೊಂಡು ವಿಲೇವಾರಿ ಮಾಡುತ್ತಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
19 ಕ್ಕೂ ಹೆಚ್ಚು ಟೆಂಡರ್ಗಳಲ್ಲಿ ನಿಯಮ ಉಲ್ಲಂಘನೆ
ಹೈದರಾಬಾದ್ ನಲ್ಲಿ ಶೋರೂಂಗೆ ರೂಪಾ ಅವರು ಮಾಡಿರುವ ವೆಚ್ಚ, ಹಂಪಿಗೆ ಕೇಂದ್ರ ಸರ್ಕಾರದಿಂದ ಬಂದ ಅನುದಾನದ ಬಗ್ಗೆ ನಿಗಮದ ಗಮನಕ್ಕೆ ತರದೇ ಟೆಂಡರ್ ನೀಡಿ ಅಕ್ರಮ ಎಸಗಿದ್ದಾರೆ. ಈ ರೀತಿಯಾಗಿ ಸುಮಾರು 19 ಕ್ಕೂ ಹೆಚ್ಚು ಟೆಂಡರ್ ನಲ್ಲಿ ಇದೇ ರೀತಿ ನಿಯಮ ಉಲ್ಲಂಘನೆ ಮಾಡಿದ್ದಾರೆ. ರೂಪಾ ಅವರ ನಿರ್ಣಯದಿಂದ ನಿಗಮಕ್ಕೆ ಆರು ಕೋಟಿ ರೂ. ನಷ್ಟವುಂಟಾಗಿದೆ. ಈ ಬಗ್ಗೆ ಕಡತ ಕೇಳಿದರೆ ನನ್ನ ವಿರುದ್ಧವೇ ಆರೋಪ ಹೊರಿಸಿ ದೂರು ನೀಡಿದ್ದಾರೆ ಎಂದು ಬೇಳೂರು ರಾಘವೇಂದ್ರ ಶೆಟ್ಟಿ ದೂರಿನಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಎಲ್ಲಾ ಕಡತಗಳನ್ನು ಮುಟ್ಟುಗೋಲು ಹಾಕಿಕೊಂಡು ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ದೂರುದಾರರು ಕೋರಿದ್ದಾರೆ.
ಸಿಸಿಟಿವಿ ಡಿವಿಆರ್ ನಾಶ
ಬೇಳೂರು ರಾಘವೇಂದ್ರಶೆಟ್ಟಿ ಅವರು ಕರಕುಶಲ ನಿಗಮದ ಕಚೇರಿಯ ಸಿಸಿಟಿವಿ ಡಿವಿಆರ್ ನಾಶ ಪಡಿಸಿದ್ದಾರೆ ಎಂದು ಆರೋಪಿಸಿ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಅವರು ಒಂದು ದಿನದ ಹಿಂದಷ್ಟೇ ದೂರು ನೀಡಿದ್ದರು. ವ್ಯವಸ್ಥಾಪಕ ನಿರ್ದೇಶಕರ ಅನುಮತಿ ಪಡೆಯದೇ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಸಿಸಿಟಿವಿ ಡಿವಿಅರ್ ಪಡೆದು ಅದರಲ್ಲಿದ್ದ ದೃಶ್ಯಗಳನ್ನು ನಾಶಪಡಿಸಿದ್ದಾರೆ ಎಂದು ಆರೋಪಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಡಿ. ರೂಪಾ ದೂರು ನೀಡಿದ್ದರು. ರೂಪಾ ದೂರು ನೀಡಿದ ಬೆನ್ನಲ್ಲೇ ಇದೀಗ ಬೇಳೂರು ರಾಘವೇಂದ್ರ ಶೆಟ್ಟಿ ಸಹ ದೂರು ಕೊಟ್ಟಿದ್ದಾರೆ.