ಜೈಲಿಂದ ಹೊರಬಂದ ಕೂಡ್ಲಿಗಿಯ ಶಾಸಕ ನಾಗೇಂದ್ರ
ಬೆಂಗಳೂರು, ಡಿ. 11 : ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ಸಂಬಂಧ ಕಳೆದ ವರ್ಷ ಬಂಧನಕ್ಕೊಳಗಾಗಿದ್ದ ಕೂಡ್ಲಿಗಿಯ ಪಕ್ಷೇತರ ಶಾಸಕ ನಾಗೇಂದ್ರ ಅಂತೂ ಇಂತೂ ಜೈಲು ವಾಸದಿಂದ ಮುಕ್ತಿ ಕಂಡಿದ್ದಾರೆ.
ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ಜಾಮೀನಿನ ಆಧಾರದ ಮೇಲೆ ಬುಧವಾರ ನಾಗೇಂದ್ರ ಜೈಲಿಂದ ಬಿಡುಗಡೆಯಾದರು. ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಶಾಸಕ ನಾಗೇಂದ್ರ ಸುಮಾರು ಒಂದು ವರ್ಷದಿಂದ ಜೈಲೂಟ ತಿನ್ನುತ್ತಿದ್ದರು. [ಶಾಸಕ ನಾಗೇಂದ್ರ ಕೊನೆಗೂ ಬಂಧನ]
ಬೇಲೇಕೇರಿ ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಇತ್ತೀಚೆಗೆ ಸಿಬಿಐ ನ್ಯಾಯಾಲಯ ಜಾಮೀನು ನೀಡಿತ್ತು. ಸಿಬಿಐ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಕರೆ ನೀಡಿದ್ದರೂ ನಾಗೇಂದ್ರ ಕ್ಷೇತ್ರದಲ್ಲಿ ಆರಾಮವಾಗಿ ಓಡಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು 2013ರಲ್ಲಿ ಬಂಧಿಸಲಾಗಿತ್ತು.
ಶಾಸಕ ನಾಗೇಂದ್ರ ಜತೆಗೆ ಅವರ ಆಪ್ತ ಜೀವ ರೆಡ್ಡಿ ಹಾಗೂ ಸರ್ಕಲ್ ಇನ್ಸ್ ಪೆಕ್ಟರ್ ರಮಾಕಾಂತ್ ಹುಲ್ಲೂರ್ ಅವರನ್ನು ಬಂಧಿಸಲಾಗಿತ್ತು. ಈಗಲ್ ಟ್ರೇಡರ್ ಕಂಪನಿ ಮಾಲೀಕರಾಗಿದ್ದ ನಾಗೇಂದ್ರ ಅಕ್ರಮ ಗಣಿಗಾರಿಕೆ ಮಾಡಿದ ಸ್ಟಾಕ್ ಯಾರ್ಡ್ಗಳ ಅದಿರನ್ನು ಬೇಲೆಕೇರಿಗೆ ಸಾಗಾಟ ಮಾಡುತ್ತಿದ್ದರು. ಮಾಜಿ ಸಚಿವ ಜನಾರ್ದನ ರೆಡ್ಡಿಯ ನಿರ್ದೇಶನದಂತೆ ನಾಗೇಂದ್ರ ಈ ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಿದ್ದ ಸಿಬಿಐ ಬಂಧನ ಮಾಡಿತ್ತು.