ನಾಳೆ ಫಲಿತಾಂಶ.. ಈಗಲೇ ಶುರುವಾಗಿದೆ ರಾಜಕೀಯ ತಂತ್ರ!
ಬೆಂಗಳೂರು, ಮೇ 14: ಚುನಾವಣೆಗೆ ಮುನ್ನವೇ ನಾನೇ ಮುಖ್ಯಮಂತ್ರಿ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿ ಪ್ರಮಾಣ ವಚನದ ದಿನಾಂಕವನ್ನು ನಿಗದಿ ಪಡಿಸಿದ್ದಾರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ. ಆದರೆ ಅವರೂ ಸೇರಿದಂತೆ ರಾಜ್ಯ ನಾಯಕರಿಗೆ ಇದೀಗ ಮಾಧ್ಯಮಗಳು ಬಿತ್ತರಿಸುತ್ತಿರುವ ಚುನಾವಣೋತ್ತರ ಸಮೀಕ್ಷೆ ಒಂದಷ್ಟು ಆತಂಕವನ್ನು ತಂದಿಟ್ಟಿವೆ. ಕೆಲವೇ ಕೆಲವು ಮಾತ್ರ ಬಿಜೆಪಿ ಬಹುಮತ ಗಳಿಸಲಿದೆ ಎಂದು ಹೇಳಿದರೆ ಹೆಚ್ಚಿನವು ಅತಂತ್ರ ಎಂಬುದಾಗಿ ತಿಳಿಸಿವೆ.
ಮೇಲ್ನೋಟಕ್ಕೆ ರಾಜಕೀಯ ನಾಯಕರು ಸಮೀಕ್ಷೆಯನ್ನು ನಂಬಲ್ಲ. ಅದೆಲ್ಲ ಸುಳ್ಳು ಎಂಬಂತೆ ಫೋಸ್ ನೀಡುತ್ತಿದ್ದರೂ ಒಳಗೊಳಗೆ ಆತಂಕದಲ್ಲಿರುವುದಂತೂ ಸತ್ಯ. ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ ನಾನೇ ಮುಂದೆಯೂ ಮುಖ್ಯಮಂತ್ರಿ ಆಗುತ್ತೇನೆಂದು ಚುನಾವಣಾ ಸಮಾವೇಶಗಳಲ್ಲಿ ವೀರಾವೇಶದಿಂದ ನುಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮೌನಕ್ಕೆ ಶರಣಾಗಿದ್ದು, ದಲಿತ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ಅವರಿಗೂ ತಮ್ಮ ಪಕ್ಷ ಬಹುಮತ ಪಡೆಯಲ್ಲ ಎಂಬ ಆತಂಕ ಶುರುವಾಗಿದೆಯಾ ಎಂಬ ಪ್ರಶ್ನೆ ಕಾಡತೊಡಗಿದೆ.
ಗುಪ್ತಚರ ಇಲಾಖೆ: ಕಾಂಗ್ರೆಸಿಗೆ 90, ಸಿಎಂಗೆ ಎರಡೂ ಕಡೆ ಸೋಲು?
ಚಾಮುಂಡೇಶ್ವರಿಯಲ್ಲಿ ಗೆಲುವು ಕಷ್ಟ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಮರು ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರ ಈ ಬಾರಿಯೂ ಅವರ ಕೈ ಹಿಡಿಯುತ್ತದೆ ಎಂಬುದನ್ನು ಅಷ್ಟು ಸುಲಭವಾಗಿ ಹೇಳುವಂತಿಲ್ಲ. ಏಕೆಂದರೆ ಇವರಿಗೆ ಪ್ರತಿಸ್ಪರ್ಧಿಯಾಗಿದ್ದವರು ಜೆಡಿಎಸ್ನ ಜಿ.ಟಿ.ದೇವೇಗೌಡರು. ಇನ್ನು ಇಲ್ಲಿ ಬಿಜೆಪಿ ಅಭ್ಯರ್ಥಿ ನಾಮಕಾವಸ್ಥೆ ಎಂಬುದು ಗೊತ್ತಿರುವ ವಿಚಾರವೇ. ಇದೆಲ್ಲವನ್ನು ಗಮನಿಸಿದರೆ ಭಾರೀ ಪೈಪೋಟಿಯಿದ್ದು, ಇಲ್ಲಿ ಗೆಲ್ಲುವ ಅಭ್ಯರ್ಥಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವುದಂತೂ ಖಂಡಿತಾ ಸಾಧ್ಯವಿಲ್ಲ.
ಅತಂತ್ರ ವಿಧಾನಸಭೆ ಬಿಜೆಪಿ ಲೆಕ್ಕಾಚಾರ
ಇನ್ನು ಉತ್ತರ ಭಾರತದಲ್ಲಿ ಗೆಲುವಿನ ಪತಾಕೆ ಹಾರಿಸಿರುವ ಬಿಜೆಪಿ ಒಂದು ವೇಳೆ ಅತಂತ್ರ ಪರಿಸ್ಥಿತಿ ಎದುರಾದರೆ ಏನು ಮಾಡಬೇಕೆಂಬ ಲೆಕ್ಕಾಚಾರದಲ್ಲಿ ತೊಡಗಿದೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಕಾಂಗ್ರೆಸ್ನ ಬೆನ್ನು ಮೂಳೆಯೇ ಆಗಿರುವ ಕರ್ನಾಟಕದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಕೊಡಲಿಯೇಟು ಹೊಡೆದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಮಸ್ಯೆ ಆಗಲಾರದು ಎಂಬುದು ಬಿಜೆಪಿಯ ಗಣಿತ.
ಜ್ಯೋತಿಷಿಗಳ ಭವಿಷ್ಯ : ಅತಂತ್ರ ವಿಧಾನಸಭೆ, ಬಿಜೆಪಿಗೆ ಲಾಭ
ಕಾಂಗ್ರೆಸ್ ಮುಕ್ತ ಭಾರತ
ಕಾಂಗ್ರೆಸ್ಗೆ ಸಂಪನ್ಮೂಲ ಕ್ರೋಢೀಕರಣವಾಗುವುದಿದ್ದರೆ ಅದು ಕರ್ನಾಟಕದಿಂದ ಮಾತ್ರ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಆ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಮಾಡುವುದು ಬಿಜೆಪಿಯ ಮುಖ್ಯ ಉದ್ದೇಶವೂ ಹೌದು.
ಹೀಗಿರುವಾಗ ಒಂದು ವೇಳೆ ಅತಂತ್ರ ಪರಿಸ್ಥಿತಿ ಎದುರಾದರೆ ಕಾಂಗ್ರೆಸ್ನ್ನು ಬಗ್ಗು ಬಡಿಯಲು ಜೆಡಿಎಸ್ನೊಂದಿಗೆ ಕೈ ಜೋಡಿಸಲು ಬಿಜೆಪಿ ಸಿದ್ಧವಾಗಿ ಕೂತಿದೆ. ಒಂದು ವೇಳೆ ಅತಂತ್ರ ಪರಿಸ್ಥಿತಿ ಎದುರಾದರೆ ಅದರ ಲಾಭವನ್ನು ಹೇಗೆ ಬಿಜೆಪಿ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ದೆಹಲಿಯಲ್ಲಿ ಅಮಿತ್ಶಾ, ಮೋದಿ ಸೇರಿದಂತೆ ಘಟಾನುಘಟಿ ನಾಯಕರು ತಂತ್ರ ರೂಪಿಸುತ್ತಿದ್ದಾರೆ. ಅದರ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ನಾಯಕರಿಗೆ ಕಟ್ಟು ನಿಟ್ಟಿನ ಆದೇಶವೊಂದನ್ನು ರವಾನಿಸಲಾಗಿದೆ.
ಗೊಂದಲದ ಹೇಳಿಕೆ ನೀಡದಂತೆ ಸೂಚನೆ
ಅದೇನೆಂದರೆ ರಾಜ್ಯ ನಾಯಕರು ಸರ್ಕಾರ ರಚನೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲದ ಹೇಳಿಕೆ ನೀಡಬೇಡಿ. ಮೈತ್ರಿ, ಮುಖ್ಯಮಂತ್ರಿ ಕುರಿತಂತೆಯೂ ಮಾತನಾಡಬೇಡಿ. ಎಲ್ಲಿಯೂ ಯಾವುದೇ ನಾಯಕರಿಂದಲೂ ಗೊಂದಲದ ಹೇಳಿಕೆಗಳು ಮಾಧ್ಯಮಗಳಿಗೆ ಹೋಗಬಾರದು. ನಾಳಿನ ಫಲಿತಾಂಶ ನೋಡಿಕೊಂಡು ಮುಂದೇನು ಮಾಡಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ. ಅಲ್ಲಿಯವರೆಗೆ ಯಾರಿಂದಲೂ ಈ ಸಂಬಂಧ ಹೇಳಿಕೆಗಳು ಹೊರಕ್ಕೆ ಬರದಂತೆ ಕಟ್ಟು ನಿಟ್ಟಿನ ಸೂಚನೆಯನ್ನು ರವಾನಿಸಲಾಗಿದೆ.
ಒಟ್ಟಾರೆ ಮೂರು ಪಕ್ಷಗಳಲ್ಲಿಯೂ ಕುತೂಹಲ, ಗೊಂದಲ, ಭಯ, ಆತಂಕ ಎಲ್ಲವೂ ಇದೆ. ಇದೆಲ್ಲದರ ನಡುವೆ ಒಂದಷ್ಟು ತಂತ್ರಗಳು ಕೂಡ ಈಗಿನಿಂದಲೇ ಆರಂಭವಾಗಿದೆ. ಆದರೆ ಎಲ್ಲದಕ್ಕೂ ಅಂತಿಮ ನಾಳಿನ ಫಲಿತಾಂಶ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಾಗಿದೆ.