ಉಪ ಚುನಾವಣೆಗೆ ಮುನ್ನ ಸಿಎಂ ಬೊಮ್ಮಾಯಿ ಆಡಿಯೋ ವೈರಲ್
ಹಾನಗಲ್ ಮತ್ತು ಸಿಂಧಗಿ ಅಸೆಂಬ್ಲಿ ಉಪ ಚುನಾವಣೆಗೆ ಸಲ್ಲಿಸಲಾಗಿರುವ ನಾಮಪತ್ರಗಳ ಪೈಕಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿದ್ದು, ಅಕ್ಟೋಬರ್ ಹದಿಮೂರು ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ. ಅಕ್ಟೋಬರ್ 30ರಂದು ಚುನಾವಣೆ ನಡೆಯಲಿದ್ದು, ನವೆಂಬರ್ ಎರಡಕ್ಕೆ ಫಲಿತಾಂಶ ಹೊರಬೀಳಲಿದೆ.
ಉಪ ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದಸರಾ ನಂತರ ಸತತ ಪ್ರಚಾರ ನಡೆಸಲಿದ್ದಾರೆ. ಚುನಾವಣೆ ನಡೆಯುತ್ತಿರುವ ಒಂದು ಕ್ಷೇತ್ರ ಅವರ ತವರು ಜಿಲ್ಲಾ ವ್ಯಾಪ್ತಿಯ ಹಾವೇರಿಯಲ್ಲಿ (ಹಾನಗಲ್) ಬರುತ್ತದೆ.
ಎಲ್ಲಾ ನಾಮಪತ್ರ ಕ್ರಮಬದ್ಧ; ಕುತೂಹಲ ಕೆರಳಿಸಿದ ಸಿಂಧಗಿ ಉಪ ಚುನಾವಣೆ
ಉಪ ಚುನಾವಣೆಯ ಹೊಸ್ತಿಲಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರದ್ದು ಎನ್ನಲಾಗುತ್ತಿರುವ ಆಡಿಯೋ ಒಂದು ವೈರಲ್ ಆಗಿದ್ದು, ಭಾರೀ ಸದ್ದನ್ನು ಮಾಡುತ್ತಿದೆ. ವಿಪಕ್ಷಗಳು ಈ ವಿಚಾರವನ್ನು ಇಟ್ಟುಕೊಂಡು ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಎಂದು ಚುನಾವಣಾ ಆಯೋಗದ ಮೊರೆ ಹೋಗುವ ಸಾಧ್ಯತೆಯಿದೆ.
ಸಿಂಧಗಿ ಕ್ಷೇತ್ರದ ಫಲಿತಾಂಶದ ಮೇಲೆ ನಿರ್ಣಾಯಕ ಪಾತ್ರ ವಹಿಸುವ ಸಮುದಾಯದ ನಾಯಕರೊಬ್ಬರ ಜೊತೆ ಸಿಎಂ ಬೊಮ್ಮಾಯಿ ಮಾತನಾಡಿರುವ ಆಡಿಯೋದಲ್ಲಿ, ಚುನಾವಣೆ ಮುಗಿದ ಮೇಲೆ ಮೀಸಲಾತಿ ಪ್ರಮಾಣ ಪತ್ರದ ವಿಚಾರದ ಬಗ್ಗೆ ಭರವಸೆಯನ್ನು ನೀಡಿದ್ದಾರೆ.
ಉಪ ಚುನಾವಣೆ: ದಾವಣಗೆರೆಯಲ್ಲಿ ಸಿಎಂ ಮ್ಯಾರಥಾನ್ ಸಭೆ
ಅಕ್ಟೋಬರ್ ಹದಿನೆಂಟರಿಂದ ಮುಖ್ಯಮಂತ್ರಿಗಳು ಎರಡು ಕ್ಷೇತ್ರಗಳಲ್ಲಿ ಪ್ರಚಾರ
ಅಕ್ಟೋಬರ್ ಹದಿನೆಂಟರಿಂದ ಮುಖ್ಯಮಂತ್ರಿಗಳು ಎರಡು ಕ್ಷೇತ್ರಗಳಲ್ಲಿ ಪ್ರಚಾರವನ್ನು ನಡೆಸಲಿದ್ದಾರೆ. ವಿಜಯದಶಮಿ ಮುಗಿದ ನಂತರ ತಡ ಮಾಡದೇ, ಉಸ್ತುವಾರಿಗಳಿಗೆ ಕ್ಷೇತ್ರಗಳಲ್ಲಿ ಬೀಡು ಬಿಡಲು ಬೊಮ್ಮಾಯಿ ಸೂಚಿಸಿದ್ದಾರೆ. ಅಕ್ಟೋಬರ್ 18-19ರಂದು ಹಾನಗಲ್ ನಲ್ಲಿ ಪ್ರಚಾರ ನಡೆಸುವ ಸಿಎಂ ಕಾರ್ಯಕ್ರಮ ನಿಗದಿಯಾಗಿದೆ. ಇದಾದ ನಂತರ ಅಕ್ಟೋಬರ್ 22ರಿಂದ ಪ್ರತೀದಿನ ಪ್ರಚಾರದಲ್ಲಿ ಸಿಎಂ ತೊಡಗಿಸಿಕೊಳ್ಳಲಿದ್ದಾರೆ.
ತಳವಾರ ಸಮುದಾಯವನ್ನು ಎಸ್ಟಿ ಮೀಸಲಾತಿ ಅಡಿಯಲ್ಲಿ ತರುವ ವಿಚಾರ
ಸಿಂಧಗಿಯಲ್ಲಿ ತಳವಾರ ಮತ್ತು ಪರಿವಾರ ಸಮುದಾಯದ 36ಸಾವಿರಕ್ಕೂ ಹೆಚ್ಚಿನ ಮತಗಳಿವೆ. ಈ ಸಮುದಾಯವನ್ನು ಓಲೈಸುವ ಸಲುವಾಗಿ ಆ ಸಮುದಾಯದ ಶಿವಾಜಿ ಮೆಟಗಾರ ಎನ್ನುವವರ ಜೊತೆ ಬೊಮ್ಮಾಯಿ ಮಾತನಾಡಿರುವ ಆಡಿಯೊ ಈಗ ಸದ್ದು ಮಾಡುತ್ತಿದೆ. ತಳವಾರ ಸಮುದಾಯವನ್ನು ಎಸ್ಟಿ ಮೀಸಲಾತಿ ಅಡಿಯಲ್ಲಿ ತರಲಾಗುವುದು ಎನ್ನುವ ಭರವಸೆಯನ್ನು ಬೊಮ್ಮಾಯಿಯವರು ಶಿವಾಜಿಗೆ ನೀಡಿದ್ದಾರೆ.
ಚುನಾವಣೆ ನೀತಿ ಸಂಹಿತೆ ಇರುವುದರಿಂದ ಉಪ ಚುನಾವಣೆ ಮುಗಿದ ಕೂಡಲೇ ಮೀಸಲಾತಿ
"ಚುನಾವಣೆ ನೀತಿ ಸಂಹಿತೆ ಇರುವುದರಿಂದ ಉಪ ಚುನಾವಣೆ ಮುಗಿದ ಕೂಡಲೇ ಮೀಸಲಾತಿ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು. ನನ್ನ ಮೇಲೆ ವಿಶ್ವಾಸವಿಡಿ, ಖಂಡಿತ ಈ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ, ಎಸ್ಟಿ ಪ್ರಮಾಣಪತ್ರವನ್ನು ನೀಡುತ್ತೇನೆ" ಎಂದು ಮುಖ್ಯಮಂತ್ರಿಗಳದ್ದು ಎನ್ನಲಾಗುತ್ತಿರುವ ಆಡಿಯೋದಲ್ಲಿ ಭರವಸೆಯನ್ನು ನೀಡಲಾಗಿದೆ. ಇದಕ್ಕೆ ಸಮದಾಯದ ನಾಯಕನಿಂದ ಯಾವುದೇ ಪ್ರತಿಕ್ರಿಯೆ ಕೂಡಲೇ ವ್ಯಕ್ತವಾಗಿಲ್ಲ.
ಆಡಿಯೋ ಬಗ್ಗೆ ಜೆಡಿಎಸ್ ಮತ್ತು ಕಾಂಗ್ರೆಸ್ಸಿನಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ
ಈ ಆಡಿಯೋ ಬಗ್ಗೆ ಜೆಡಿಎಸ್ ಮತ್ತು ಕಾಂಗ್ರೆಸ್ಸಿನಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಈ ಆಡಿಯೋವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಚುನಾವಣಾ ಆಯೋಗದ ಬಾಗಿಲು ತಟ್ಟಲಿದೆಯೇ ಎಂದು ಕಾದು ನೋಡಬೇಕಿದೆ. ತಳವಾರ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡುವ ಕಡತ ಸಿಎಂ ಅವರ ಮುಂದಿದೆ ಮತ್ತು ಉಪ ಚುನಾವಣೆ ಮುಗಿದ ಕೂಡಲೇ ಇದಕ್ಕೆ ಸಹಿ ಬೀಳುವ ಸಾಧ್ಯತೆಯಿದೆ.
ದಾವಣಗೆರೆ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪ ಚುನಾವಣೆ ಸಂಬಂಧ ಸೋಮವಾರ (ಅ 11) ತಡರಾತ್ರಿವರೆಗೂ ಸಭೆಗಳನ್ನು ನಡೆಸಿದ್ದರು. ಉಪಚುನಾವಣೆಯಲ್ಲಿ ಗೆಲ್ಲಲು ನಡೆಸಬೇಕಾದ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದ್ದರು. ಸಭೆಯಲ್ಲಿ, ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಸಚಿವರಾದ ಬಿ.ಸಿ. ಪಾಟೀಲ, ಸುನೀಲ್ ಕುಮಾರ್, ಮುನಿರತ್ನ ಸಹಿತ ಹಲವು ಶಾಸಕರು ಪಾಲ್ಗೊಂಡಿದ್ದರು.
Recommended Video