ಪ್ರಪ್ರಥಮ ಬ್ಯಾರಿ-ಇಂಗ್ಲೀಷ್-ಕನ್ನಡ ಭಾಷೆ ನಿಘಂಟು ಬಿಡುಗಡೆ
ಮಂಗಳೂರು, ಆಗಸ್ಟ್ 1: ಅಳಿವಿನಂಚಿನಲ್ಲಿರುವ ಬ್ಯಾರಿ ಭಾಷೆಯನ್ನು ಉಳಿಸುವ ಸಲುವಾಗಿ ಮೊದಲ ಬಾರಿಗೆ ಹೊರ ತಂದ 'ಬ್ಯಾರಿ - ಕನ್ನಡ - ಇಂಗ್ಲಿಷ್ ನಿಘಂಟು'ನ್ನು ಸೋಮವಾರ ಮಂಗಳೂರಿನಲ್ಲಿ ಬಿಡುಗಡೆಗೊಳಿಸಲಾಯಿತು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಈ ಅಪರೂಪದ ನಿಘಂಟನ್ನು ಹೊರತಂದಿದ್ದು ಅರಣ್ಯ ಸಚಿವ ರಮಾನಾಥ ರೈ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯುಟಿ ಖಾದರ್ ಬಿಡುಗಡೆಗೊಳಿಸಿದರು.
ಈ ಹಿಂದೆ ಬ್ಯಾರಿ ಭಾಷೆಯ ಪದಗಳಿಗೆ ಅರ್ಥ ನೀಡುವ ಕೆಲವು ನಿಘಂಟುಗಳು ಬಂದಿತ್ತಾದರೂ, 10 ಸಾವಿರ ಪದಗಳನ್ನು ಸಂಗ್ರಹಿಸುವ ದೊಡ್ಡಮಟ್ಟದ ಪ್ರಯತ್ನ ಇದೇ ಮೊದಲ ಬಾರಿಗೆ ನಡೆದಿದೆ. ಸುಮಾರು ಎರಡೂವರೆ ವರ್ಷಗಳ ಪ್ರಯತ್ನದ ನಂತರ ಇಂಥಹದ್ದೊಂದು ಅಪರೂಪದ ನಿಘಂಟು ಸಿದ್ದವಾಗಿದೆ.
ನಿಘಂಟಿನಲ್ಲಿ ಹಲವು ವಿಶೇಷತೆಗಳಿದ್ದು ಅವುಗಳು ಹೀಗಿವೆ,
ನಿಘಂಟು ರಚನೆಗೆ 2014ರಲ್ಲಿ ಚಾಲನೆ
ನಿಘಂಟು ರಚನೆಗೆ 2014ರ ಡಿಸೆಂಬರ್ನಲ್ಲಿ ಅಧಿಕೃತ ಚಾಲನೆ ನೀಡಲಾಗಿತ್ತು. ಎರಡೂವರೆ ವರ್ಷಗಳ ನಿರಂತರ ಶ್ರಮದ ನಂತರ ನಿಘಂಟು ರಚನೆಯಾಗಿ ಈಗ ಬಿಡುಗಡೆಯಾಗಿದೆ.
ಬಿ.ಎಂ.ಇಚ್ಲಂಗೋಡು ಸಂಪಾದನೆಯ ನಿಘಂಟು
ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಬಿ.ಎ.ಮೊಹಮ್ಮದ್ ಹನೀಫ್ ನಿಘಂಟಿನ ಪ್ರಧಾನ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದರೆ, ಪದಗಳ ಸಂಪಾದನೆಯ ಮಹತ್ವದ ಕೆಲಸವನ್ನು ಬಿ.ಎಂ.ಇಚ್ಲಂಗೋಡು ನಿರ್ವಹಿಸಿದ್ದಾರೆ. ಬಿ.ಎ. ಸಂಶುದ್ದೀನ್ ಮಡಿಕೇರಿ, ಅಬ್ದುಲ್ ರಹಿಮಾನ್ ಕುತ್ತೆತ್ತೂರು ಸಹ ಸಂಪಾದಕರಾಗಿದ್ದರು. ಇನ್ನು ನಿಘಂಟು ರಚನೆಗೆ ಬೇಕಾದ ಸಲಹೆಯನ್ನು ಪ್ರೊ. ಬಿ.ಎ.ವಿವೇಕ್ ರೈ, ಪ್ರೊ. ಎ.ವಿ.ನಾವಡ, ಬಿ.ಎಂ.ಹನೀಫ್, ಯು.ಪಿ.ಉಪಾಧ್ಯಾಯ ಮುಂತಾದವರು ನೀಡಿದ್ದಾರೆ.
10 ಸಾವಿರ ಪದಗಳ ಬೃಹತ್ ನಿಂಘಂಟು
ನಿಘಂಟಿನಲ್ಲಿ ಒಟ್ಟು 841 ಪುಟಗಳಿವೆ. ಒಟ್ಟು 10 ಸಾವಿರ ಪದಗಳು ನಿಘಂಟಿನಲ್ಲಿವೆ. ಆರಂಭದಲ್ಲಿ ಸುಮಾರು 50 ಸಾವಿರಕ್ಕಿಂತಲೂ ಅಧಿಕ ಪದಗಳು ಬಂದಿದ್ದವು. ಕೊನೆಗೆ ಎಲ್ಲಾ ಪದಗಳನ್ನು ಜರಡಿಯಲ್ಲಿ ಸೋಸಿ ಮಂಡಳಿ ಅಂತಿಮವಾಗಿ 10 ಸಾವಿರ ಪದಗಳಿಗೆ ಅರ್ಥ ನೀಡಿದೆ. ಮೊದಲಿಗೆ 1,000 ಪ್ರತಿಗಳನ್ನು ಮುದ್ರಣ ಮಾಡಲಾಗಿದೆ. ಒಂದು ಪ್ರತಿಗೆ 700 ರೂಪಾಯಿ ದರ
ಹಿಂದೆಯೂ ಬಂದಿತ್ತು ನಿಘಂಟು
ಮಾಹಿತಿಗಳ ಪ್ರಕಾರ ಕಾಸರಗೋಡಿನ ಮಂಜೇಶ್ವರ ಭಾಗದ ಬ್ಯಾರಿ ಭಾಷೆಯ ಪದಗಳನ್ನು ಜೋಡಿಸಿ ಮಲೆಯಾಳಂ ಭಾಷೆಯಲ್ಲಿ ಬ್ಯಾರಿ-ಮಲೆಯಾಳಂ ನಿಘಂಟು ರಚಿಸಲಾಗಿತ್ತು. ಬೆಂಗಳೂರು ಬ್ಯಾರಿ ವೆಲ್ಫೇರ್ ಅಸೋಸಿಯೇಶನ್ 1997ರಲ್ಲಿ ಸುಮಾರು 2000 ಪದಗಳ ಇಂಗ್ಲೀಷ್-ಬ್ಯಾರಿ ನಿಘಂಟನ್ನು ಸಿದ್ಧಪಡಿಸಿದ್ದರು. ಆದರೆ ಕನ್ನಡ ಲಿಪಿಯ ಮೊದಲು ನಿಘಂಟು ಇದಾಗಿದೆ.
ಹಲವು ಪ್ರಭೇದಗಳ ಭಾಷೆ ಬ್ಯಾರಿ
ಬ್ಯಾರಿ ಭಾಷೆಯನ್ನು ಹೆಚ್ಚಾಗಿ ಕರಾವಳಿ ಭಾಗದಲ್ಲಿ ಮುಸ್ಲಿಂ ಸಮುದಾಯದವರು ಬಳಸುತ್ತಾರೆ. ಆದರೆ ಇದರಲ್ಲೂ ಪ್ರದೇಶದಿಂದ ಪ್ರದೇಶಕ್ಕೆ ಭಾಷೆಯಲ್ಲಿ ವ್ಯತ್ಯಾಸಗಳಿವೆ. ಇವುಗಳನ್ನು ಸುಳ್ಯ ಪ್ರದೇಶದ ಭಾಷೆ, ಮಂಗಳೂರು-ಬಂಟ್ವಾಳ, ಕುಂದಾಪುರ ಪ್ರದೇಶ, ಮೂಲ್ಕಿ, ಬೆಳ್ತಂಗಡಿ ಪ್ರದೇಶ, ಮಂಜೇಶ್ವರ, ಪುತ್ತೂರು, ವಿಟ್ಲ, ಕಿನ್ಯ-ತಲಪಾಡಿ ಹಾಗೂ ಮಲೆನಾಡು ಭಾಗದ ಭಾಷೆಯ ಪ್ರಭೇದಗಳನ್ನು ಗುರುತಿಸಲಾಗಿದೆ. ವಿಶೇಷ ಎಂದರೆ ಈ ಎಲ್ಲ ಪ್ರಭೇದಗಳ ಪದಗಳೂ ಈ ವಿಶಿಷ್ಟ ನಿಘಂಟಿನಲ್ಲಿ ಸ್ಥಾನ ಪಡೆದುಕೊಂಡಿವೆ.