ಬಂಡೀಪುರದಲ್ಲಿ ತಲೈವಾ: ಫೋಟೊ ಹಂಚಿಕೊಂಡ ಬಿಯರ್ ಗ್ರಿಲ್ಸ್
ಬೆಂಗಳೂರು, ಜನವರಿ 29: ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ತಲೈವಾ ರಜನಿಕಾಂತ್ ಜತೆಗೆ 'ಮ್ಯಾನ್ ವರ್ಸಸ್ ವೈಲ್ಡ್' ಕಾರ್ಯಕ್ರಮದ ಚಿತ್ರೀಕರಣ ಮುಗಿಸಿದ ಬಳಿಕ ಬಿಯರ್ ಗ್ರಿಲ್ಸ್, ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.
'ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾಡಿದ ನಮ್ಮ ಕಾರ್ಯಕ್ರಮ ಭಾರಿ ಜನಪ್ರಿಯತೆ ಗಳಿಸಿತ್ತು (3.6 ಬಿಲಿಯನ್ ವೀಕ್ಷಣೆ). ಮುಂದೆ ನನ್ನನ್ನು ಸೂಪರ್ಸ್ಟಾರ್ ರಜನಿಕಾಂತ್ ಸೇರಿಕೊಂಡಿದ್ದಾರೆ. ನಮ್ಮ ಮುಂದಿನ ಕಾರ್ಯಕ್ರಮದಲ್ಲಿ ಅವರು ತಮ್ಮ ಟೆಲಿವಿಷನ್ ಪಾದಾರ್ಪಣೆ ಮಾಡಲಿದ್ದಾರೆ' ಎಂದು ಬಿಯರ್ ಗ್ರಿಲ್ಸ್ ಟ್ವೀಟ್ ಮಾಡಿದ್ದಾರೆ.
'ಮ್ಯಾನ್ ವರ್ಸಸ್ ವೈಲ್ಡ್' ಚಿತ್ರೀಕರಣ ಮುಗಿಸಿ ರಜನಿ ವಾಪಸ್
ಮೊದಲು ಟ್ವೀಟ್ ಮಾಡಿದ್ದ ಬಿಯರ್ ಗ್ರಿಲ್ಸ್, ರಜನಿಕಾಂತ್ ಅವರನ್ನು ಬಾಲಿವುಡ್ ಸೂಪರ್ ಸ್ಟಾರ್ ಎಂದು ಕರೆದಿದ್ದರು. ಅವರು ಬಾಲಿವುಡ್ ನಟ ಅಲ್ಲ ಎಂಬ ಪ್ರತಿಕ್ರಿಯೆಗಳು ಬಂದಿದ್ದರಿಂದ ಹಳೆಯ ಟ್ವೀಟ್ ಅಳಿಸಿ, ಬಾಲಿವುಡ್ ಪದ ತೆಗೆದುಹಾಕಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಅಕ್ಷಯ್ ಕುಮಾರ್ ಚಿತ್ರೀಕರಣ ಗುರುವಾರ
ರಜನಿಕಾಂತ್ ಅವರಲ್ಲದೆ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೂಡ 'ಮ್ಯಾನ್ ವರ್ಸಸ್ ವೈಲ್ಡ್' ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅರಣ್ಯ ಇಲಾಖೆಯು ಜ.28 ರಿಂದ ಜ. 30ರವರೆಗೆ ದಿನಕ್ಕೆ ಆರು ಗಂಟೆಗಳ ಚಿತ್ರೀಕರಣಕ್ಕೆ ಮಾತ್ರ ಅನುಮತಿ ನೀಡಿದೆ. ಗುರುವಾರ ರಜನಿಕಾಂತ್ ಅವರೊಂದಿಗೆ ಚಿತ್ರೀಕರಣ ನಡೆಸಲಾಗಿದೆ. ಜ. 30ರಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೀಮಿತ ಸ್ಥಳಗಳಲ್ಲಿ ಅನುಮತಿ
'ಸುಲ್ತಾನ್ ಬತ್ತೇರಿ ಹೆದ್ದಾರಿ ಮತ್ತು ಮುಳ್ಳೆಹೊಳೆ, ಮದ್ದೂರು ಮತ್ತು ಕಲ್ಕೆರೆ ಅರಣ್ಯ ವ್ಯಾಪ್ತಿಯಲ್ಲಿ ಚಿತ್ರೀಕರಣ ನಡೆಸಲು ಅನುಮತಿ ನೀಡಲಾಗಿದೆ. ಅವರು ಪ್ರವಾಸೋದ್ಯಮ ವಲಯವಲ್ಲದ ಸ್ಥಳದಲ್ಲಿ ಚಿತ್ರೀಕರಿಸಲಿದ್ದಾರೆ. ವೈಲ್ಡ್ ಕರ್ನಾಟಕ ಸಾಕ್ಷ್ಯ ಚಿತ್ರಕ್ಕೆ ಅವಕಾಶ ನೀಡಿದ್ದರಿಂದ ಈ ಚಿತ್ರೀಕರಣಕ್ಕೆ ಸಹ ಅವಕಾಶ ನೀಡಬೇಕಿತ್ತು. ಇದರಿಂದ ಪ್ರವಾಸೋದ್ಯಮ, ದೈನಂದಿನ ಅರಣ್ಯ ಗಸ್ತು ಮತ್ತು ಕಾಳ್ಗಿಚ್ಚು ಹಾದಿ ನಿರ್ಮಾಣ ಕಾರ್ಯಕ್ಕೆ ಇದರಿಂದ ಅಡ್ಡಿಯಾಗುವುದಿಲ್ಲ' ಎಂದು ಅವರು ಹೇಳಿದ್ದಾರೆ.
ಬಂಡೀಪುರ ರಾತ್ರಿ ಸಂಚಾರ ನಿಷೇಧ ತೆರವಿಗೆ ಮತ್ತೆ ಕೇರಳ ಮನವಿ
ತಲೈವಾ ಹೇಳಿದ್ದೇನು?
ಬಿಯರ್ ಗ್ರಿಲ್ಸ್ ನಡೆಸಿಕೊಡುತ್ತಿರುವ ಕಾರ್ಯಕ್ರಮದಲ್ಲಿ 'ನೀರಿನ ಸಂರಕ್ಷಣೆ' ಕುರಿತು ಈ ಸರಣಿ ಪ್ರಸಾರವಾಗಲಿದೆ. 'ನೀರಿನ ಸಂರಕ್ಷಣೆಗೆ ಪ್ರತಿಯೊಬ್ಬ ಭಾರತೀಯರೂ ಮುಂದೆ ಬಂದು ತಮ್ಮ ಕೊಡುಗೆ ನೀಡಬೇಕಿದೆ. ಸರ್ಕಾರ, ಸಮುದಾಯ ಮತ್ತು ವೈಯಕ್ತಿಕ ಮುಂದಾಳತ್ವ ಸೇರಿದಂತೆ ಎಲ್ಲ ಮಟ್ಟಗಳಲ್ಲಿಯೂ ಈ ಸಮರ ನಡೆಯಬೇಕಿದೆ. ದೇಶದಾದ್ಯಂತ ಪ್ರತಿ ಮನೆಯಲ್ಲಿಯೂ ನೀರಿನ ಸಂರಕ್ಷಣೆಯ ಸಂದೇಶ ರವಾನಿಸಲು ಡಿಸ್ಕವರಿ ಚಾನೆಲ್ನ ಈ ಕಾರ್ಯಕ್ರಮ ಸೂಕ್ತ ವೇದಿಕೆ ಎಂಬುದಾಗಿ ನಾನು ಭಾವಿಸಿದ್ದೇನೆ' ಎಂದು ನಟ ರಜನಿಕಾಂತ್ ಹೇಳಿದ್ದಾರೆ.
ಡಿಸ್ಕವರಿಯಲ್ಲಿ ತಲೈವಾ
'ನರೇಂದ್ರ ಮೋದಿ ಅವರ ಬಳಿಕ ಭಾರತದ ಮಾದರಿ ವ್ಯಕ್ತಿಗಳಿಗೆ ಆತಿಥ್ಯ ವಹಿಸುವುದನ್ನು ಮುಂದುವರಿಸುತ್ತಿದ್ದೇವೆ. ರಜನಿಕಾಂತ್ ಅವರು ತಮ್ಮ ಟೆಲಿವಿಷನ್ ಪಾದಾರ್ಪಣೆ ಮೂಲಕ ಬಿಯರ್ ಗ್ರಿಲ್ಸ್ ಅವರನ್ನು ಸೇರಿಕೊಂಡಿರುವುದು ಮತ್ತು ನೀರಿನ ಸಂರಕ್ಷಣೆ ಬಗ್ಗೆ ಸಂದೇಶ ನೀಡುತ್ತಿರುವುದು ಹರ್ಷದಾಯಕ. ಡಿಸ್ಕವರಿಯಲ್ಲಿ ತಲೈವಾ' ಎಂದು ಡಿಸ್ಕವರಿ ವಾಹಿನಿ ಟ್ವೀಟ್ ಮಾಡಿದೆ.