ಇ.ಡಿ ದಾಳಿ ಹಿಂದೆ ಸಿದ್ದರಾಮಯ್ಯ ಕೈವಾಡ: ಬಿ.ಸಿ ಪಾಟೀಲ್
Recommended Video
ಬೆಂಗಳೂರು, ಅಕ್ಟೋಬರ್ 18: ಅಕ್ರಮ ಆಸ್ತಿಗಳಿಕೆ, ಹಣ ವರ್ಗಾವಣೆ ಮುಂತಾದ ಪ್ರಕರಣಗಳಲ್ಲಿ ರಾಜಕೀಯ ಮುಖಂಡರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿಗಳನ್ನು ನಡೆಸುತ್ತಿದೆ. ದೇಶದಾದ್ಯಂತ ನಡೆಯುತ್ತಿರುವ ಈ ದಾಳಿಗಳು ವಿರೋಧಪಕ್ಷದ ನಾಯಕರನ್ನೇ ಗುರಿಯನ್ನಾಗಿರಿಸಿಕೊಂಡು ನಡೆಯುತ್ತಿವೆ ಎಂದು ವಿವಿಧ ಪಕ್ಷಗಳು ಆರೋಪಿಸಿವೆ. ಆಡಳಿತಾರೂಢ ಬಿಜೆಪಿ ರಾಜಕೀಯ ದ್ವೇಷಕ್ಕಾಗಿ ವಿರೋಧಿಗಳನ್ನು ಹಣಿಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿವೆ.
ಈ ನಡುವೆ ರಾಜ್ಯದ ಕೆಲವು ನಾಯಕರು ಕಾಂಗ್ರೆಸ್ ಮುಖಂಡರಡೆಗೇ ಬೊಟ್ಟು ಮಾಡುತ್ತಿದ್ದಾರೆ. ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ದಾಳಿಗಳು ಆಯಾ ಪಕ್ಷದವರೇ ನಡೆಸಿರುವ ತಂತ್ರಗಳಾಗಿವೆ ಎಂದು ಪ್ರತಿ ಆರೋಪ ಮಾಡಿದ್ದಾರೆ. ಈ ಸಾಲಿಗೆ ಹಾವೇರಿ ಜಿಲ್ಲೆಯ ಹಿರೇಕೆರೂರು ವಿಧಾನಸಭೆ ಕ್ಷೇತ್ರದ ಅನರ್ಹ ಶಾಸಕ ಕೌರವ ಬಿ.ಸಿ. ಪಾಟೀಲ್ ಕೂಡ ಸೇರಿದ್ದಾರೆ.
ಶಿವಕುಮಾರ್ ಬಂಧನದಲ್ಲಿ ಅನರ್ಹ ಶಾಸಕರ ಕೈವಾಡವಿಲ್ಲ: ಬಿಸಿ ಪಾಟೀಲ್
ಕಾಂಗ್ರೆಸ್ ಪಕ್ಷದಿಂದ ಹಿರೇಕೆರೂರು ಶಾಸಕರಾಗಿ ಆಯ್ಕೆಯಾಗಿದ್ದ ಬಿಸಿ ಪಾಟೀಲ್, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಅನರ್ಹಗೊಂಡ 17 ಶಾಸಕರಲ್ಲಿ ಒಬ್ಬರು. ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು, ಮುಂಬೈಗೆ ತೆರಳಿದ್ದ ಗುಂಪಿನಲ್ಲಿದ್ದ ಬಿಸಿ ಪಾಟೀಲ್, ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ದಾಳಿಗಳು ನಡೆಯಲು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
ಧ್ವನಿ ಎತ್ತಿದವರ ಮೇಲೆ ದಾಳಿ
ಸಿದ್ದರಾಮಯ್ಯನವರ ವಿರುದ್ಧ ಧ್ವನಿ ಎತ್ತಿದವರೆಲ್ಲರೂ ಇವತ್ತು ಇಡಿಗೆ ಒಳಗಾಗುತ್ತಿರುವುದನ್ನು ನೋಡಿದರೆ ಇದು ಯಾರ ಕೈವಾಡ? ಭವಿಷ್ಯ ಸಿದ್ದರಾಮಯ್ಯನವರೇ ಇರಬಹುದೇ? ಎಂದು ಬಿಸಿ ಪಾಟೀಲ್ ಪ್ರಶ್ನೆ ಮುಂದಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ವಿರುದ್ಧ ಸಿಡಿದೆದ್ದವರೆಲ್ಲರ ಮೇಲೆ ಇಡಿ ದಾಳಿಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರನ್ನು 'ಭವಿಷ್ಯ ಸಿದ್ದರಾಮಯ್ಯ' ಎಂದು ವ್ಯಂಗ್ಯವಾಡಿದ್ದಾರೆ.
ಕೈಕೊಟ್ಟ ಸಿದ್ದರಾಮಯ್ಯ
ಸಿದ್ದರಾಮಯ್ಯ ವಿರುದ್ಧ ಬಿ.ಸಿ ಪಾಟೀಲ್ ಈ ಹಿಂದೆಯೂ ವಾಗ್ದಾಳಿ ನಡೆಸಿದ್ದರು. ಸಿದ್ದರಾಮಯ್ಯ ಅವರ ಮೇಲೆ ಭರವಸೆ ಇತ್ತು. ಕೊನೆಯ ಗಳಿಗೆಯಲ್ಲಿ ಕೈಕೊಟ್ಟರು. ಮಂತ್ರಿ ಮಾಡುತ್ತೇವೆ ಎಂದು ಕರೆದು ಮೋಸ ಮಾಡಿದರು. ಅನರ್ಹಗೊಂಡ ಶಾಸಕರು ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದವರು. ಅವರ ಸಮಾಜಕ್ಕೆ ಸೇರಿದ ನಾಲ್ವರು ಶಾಸಕರನ್ನೇ ಅವರು ಕೈ ಬಿಟ್ಟಿದ್ದಾರೆ. ಇನ್ನು ನಾನು ಯಾವ ಲೆಕ್ಕ ಎಂದು ಕಿಡಿಕಾರಿದ್ದರು.
ಕುಮಾರಸ್ವಾಮಿ ವಿಶ್ವಾಸದ್ರೋಹಿ
ಎಚ್ ಡಿ ಕುಮಾರಸ್ವಾಮಿ ವಿರುದ್ಧ ಕೂಡ ಬಿ.ಸಿ. ಪಾಟೀಲ್ ಆರೋಪ ಮಾಡಿದ್ದರು. ಬಿಜೆಪಿಯವರಿಗಿಂತ ಎರಡು ಪಟ್ಟು ಕೊಡುತ್ತೇವೆ ಎಂದು ಕುಮಾರಸ್ವಾಮಿ ಆಫರ್ ನೀಡಿದ್ದರು. ಮಾತೆತ್ತಿದರೆ ಬ್ರದರ್ ಎನ್ನುವ ಅವರು, ಮೂರು ಬಾರಿ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿ ಮೋಸ ಮಾಡಿದ್ದರು. ಅವರಂತಹ ವಿಶ್ವಾಸದ್ರೋಹಿ ಇನ್ನೊಬ್ಬರಿಲ್ಲ ಎಂದು ಆರೋಪಿಸಿದ್ದರು.
ಡಿಕೆಶಿ ಬಂಧನದಲ್ಲಿ ಕೈವಾಡವಿಲ್ಲ
ಡಿಕೆ ಶಿವಕುಮಾರ್ ಬಂಧನದಲ್ಲಿ ಅನರ್ಹ ಶಾಸಕರ ಕೈವಾಡವಿದೆ ಎಂಬ ಆರೋಪವನ್ನು ಬಿ.ಸಿ. ಪಾಟೀಲ್ ನಿರಾಕರಿಸಿದ್ದರು. ಅನರ್ಹ ಶಾಸಕರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಇದರಿಂದ ಬೇಸರವುಂಟಾಗಿದೆ. ಅವರ ಬಂಧನಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.