ಗಣೇಶ ಪ್ರತಿಷ್ಠಾಪನೆಗೆ ಶಾಲೆಗಳಿಗೆ ಮುಕ್ತ ಅವಕಾಶ: ಚರ್ಚೆಗೀಡಾದ ಸಚವ ಬಿ.ಸಿ. ನಾಗೇಶ್ ಹೇಳಿಕೆ
ಬೆಂಗಳೂರು, ಆಗಸ್ಟ್ 17: ಶಿಕ್ಷಣ ಸಂಸ್ಥೆಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಪೂರ್ಣ ಸ್ವಾತಂತ್ರ್ಯವಿದೆ ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ನೀಡಿರುವ ರಾಜ್ಯದಲ್ಲಿ ಮತ್ತೊಂದು ವಿವಾದಕ್ಕೆ ನಾಂದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗುರಿಯಾಗಿದೆ.
ಕರ್ನಾಟಕದಲ್ಲಿ ಹಿಜಾಬ್ ವಿವಾದ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಈ ವಿವಾದ ದೇಶದ ಗಡಿಯನ್ನು ದಾಟಿತ್ತು. ಆದರೆ ಹೈಕೋರ್ಟ್ ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಗುರುತು ತೋರಿಸುವುದಕ್ಕೆ ಅವಕಾಶ ಇಲ್ಲ ಎಂದು ತೀರ್ಪು ನೀಡಿ ಹಿಜಾಬ್ ಧರಿಸಿ ಶಾಲೆಗೆ ಬರುವುದನ್ನು ನಿಷೇಧಿಸಿತ್ತು. ಆದರೂ ಘಟನೆ ಇನ್ನೂ ತಿಳಿಯಾಗಿಲ್ಲ, ಬೂದಿ ಮುಚ್ಚಿದ ಕೆಂಡದಂತಿದೆ.
ಈದ್ಗಾ ಮೈದಾನ ವಿವಾದ, ಮುಸ್ಲಿಂ ಮುಖಂಡರ ಜೊತೆ ಶಾಂತಿ ಸಭೆ- ನಾಳೆ ಶುಭಸುದ್ದಿ ಎಂದ ಆರ್ ಅಶೋಕ್
ಈ ಸಂದರ್ಭದಲ್ಲಿ ಶಿಕ್ಷಣ ಸಚಿವ ಶಾಲೆಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿರುವುದು ಮತ್ತೊಂದು ವಿವಾದ ಸೃಷ್ಠಿಸುತ್ತಿದೆ. ಸರಕಾರಿ ಶಾಲೆಗಳಲ್ಲಿ ಗಣೇಶ ಹಬ್ಬದಂದು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುತ್ತೀರಾ ಎಂದು ಕೇಳಿದ್ದಕ್ಕೆ " ಖಂಡಿತಾ ಪೂರ್ಣ ಸ್ವಾತಂತ್ರ್ಯವಿದೆ, ಎಲ್ಲೆಲ್ಲಿ ಹಿಂದಿನಿಂದ ಮಾಡಿಕೊಂಡು ಬಂದಿದ್ದಾರೋ, ಅವರಿಗೆ ಅಧಿಕಾರವಿದೆ. ಹೊಸದಾಗಿ ಮಾಡುವವರಿಗೆ ಅವಕಾಶವಿಲ್ಲ. ಇದು ಸಮಾಜವನ್ನು ಜೋಡಿಸುವಂತಹ ಕ್ರಿಯೆ, ಹಾಗಾಗಿ ಹಿಂದಿನಿಂದ ಮಾಡಿಕೊಂಡು ಬಂದವರು ಮಾಡಲಿ" ಎಂದು ಹೇಳಿದ್ದಾರೆ.
ಆದರೆ ಅವರ ಹೇಳಿಕೆಗೆ ಸಾಮಾಜಿಕ ಜಾಲಾತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಸಮವಸ್ತ್ರ ಹಾಗೂ ಧಾರ್ಮಿಕ ಸಂಕೇತಗಳಿಗೆ ಅವಕಾಶ ಇಲ್ಲ ಎಂದ ಮೇಲೆ, ಗಣೇಶ ವಿಗ್ರಹವನ್ನು ಶಾಲೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡುವುದಕ್ಕೆ ಅವಕಾಶ ಹೇಗೆ ಕೊಡುತ್ತಿದ್ದಾರೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಕೆಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗ ಶಾಲೆಗಳಲ್ಲಿ ಗಣೇಶ ಪೂಜೆಗೆ ಅವಕಾಶ ನೀಡಿದರೆ ಮುಂದೊಂದು ದಿನ ಕ್ರಿಶ್ಚಿಯನ್ನರಿಗೆ ಪ್ರಾರ್ಥನೆ ಮಾಡಲು, ಮುಸ್ಲೀಮರಿಗೆ ನಮಾಜ್ ಮಾಡುವುದಕ್ಕೆ ಅವಕಾಶ ಬೇಕೇಂದು ಬೇಡಿಕೆ ಬರಬಹುದು ಎಂದು ಶಿಕ್ಷಣ ಸಚಿವರ ಹೇಳಿಕೆ ಭಾರಿ ಚರ್ಚೆಗೀಡಾಗಿದೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಖಂಡನೆ
Recommended Video
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ವಿದ್ಯಾರ್ಥಿ ಘಟಕವಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಶಿಕ್ಷಣ ಸಚಿವರ ಹೇಳಿಕೆಯನ್ನು ಖಂಡಿಸಿದೆ. 'ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲು ಶಿಕ್ಷಣ ಸಚಿವರು ಅವಕಾಶ ನೀಡಿರುವುದು ಶಿಕ್ಷಣ ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ರಾಜಕೀಯ ಲಾಭ ಪಡೆಯುವ ಪ್ರಯತ್ನವಾಗಿದೆ. ಇದು ಖಂಡನೀಯ. ವಿಪರ್ಯಾಸವೆಂದರೆ, ಇದೇ ಸಚಿವರು ಒಮ್ಮೆ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದರು. ಈಗ ಗಣೇಶೋತ್ಸವಕ್ಕೆ ಹೇಗೆ ಅನುಮತಿಸುತ್ತಾರೆ" ಎಂದು ಕ್ಯಾಂಪಸ್ ಫ್ರಂಟ್ನ ರಾಜ್ಯಾಧ್ಯಕ್ಷ ಅಥಾವುಲ್ಲಾ ಪುಂಜಾಲಕಟ್ಟೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.