ಭಗತ್ ಸಿಂಗ್ ಪಠ್ಯಕ್ಕೆ ಕೊಕ್; ದೆಹಲಿ, ಪಂಜಾಬ್ ಸಿಎಂಗಳಿಂದ ಖಂಡನೆ
ಬೆಂಗಳೂರು, ಮೇ 17; ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುರಿತ ಪಾಠಗಳನ್ನು ಕರ್ನಾಟಕದ ಶಾಲಾ ಪಠ್ಯಗಳಿಂದ ತೆಗೆದು ಹಾಕಲಾಗಿದೆ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ. ಪಂಜಾಬ್ ಮುಖ್ಯಮಂತ್ರಿ ಭಗವಾಂತ್ ಮಾನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
10 ನೇ ತರಗತಿ ಪಠ್ಯ ಪುಸ್ತಕದಲ್ಲಿ ಭಗತ್ ಸಿಂಗ್ ಕುರಿತ ಪಾಠಗಳನ್ನು ತೆಗೆದು ಹಾಕಲಾಗಿದ್ದು, ಆರ್ಎಸ್ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಗಡೆವಾರ್ ಕುರಿತ ಪಠ್ಯಗಳನ್ನು ಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ರಾಜ್ಯದಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕದ ಪ್ರತಿಪಕ್ಷ ಕಾಂಗ್ರೆಸ್, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಹಲವಾರು ರಾಜಕೀಯ ನಾಯಕರು ಕೂಡ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಈ ವಿಚಾರದಲ್ಲಿ ಕಿಡಿ ಕಾರಿದ್ದಾರೆ.
ಇದೀಗ ಹೊರ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರನ ಪಠ್ಯವನ್ನು ತೆಗೆದುಹಾಕಿರುವುದಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
|
ಭಗವಂತ್ ಮಾನ್ ಖಂಡನೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಕುರಿತು ಮಾಡಿರುವ ಟ್ವೀಟ್ಗೆ ಪಂಜಾಬ್ ಸಿಎಂ ಭಗವಂತ ಮಾನ್ ಪ್ರತಿಕ್ರಿಯಿಸಿದ್ದಾರೆ. " ಕರ್ನಾಟಕದ ಶಾಲಾ ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ಕುರಿತ ಪಾಠವನ್ನು ತೆಗೆದುಹಾಕುವ ಮೂಲಕ ಬಿಜೆಪಿ ಮತ್ತೊಮ್ಮೆ ಶಹೀದ್-ಎ-ಆಜಂ ಮೇಲಿನ ದ್ವೇಷವನ್ನು ಬಹಿರಂಗಪಡಿಸಿದೆ. ಈ ಯುವ ಹುತಾತ್ಮನ ಜೀವನ ಸನ್ನಿವೇಶವು ಇಂದಿಗೂ ನಮ್ಮ ಯುವಕರ ಹೃದಯದಲ್ಲಿ ದೇಶಭಕ್ತಿ, ಉತ್ಸಾಹ ಮತ್ತು ಕ್ರಾಂತಿಯನ್ನು ಬೆಳಗಿಸುತ್ತದೆ" ಎಂದು ಹೇಳಿದ್ದಾರೆ.
ಹುತಾತ್ಮರಿಗೆ ಮಾಡಿದ ಅವಮಾನ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, "ಅಮರ್ ಶಹೀದ್ ಸರ್ದಾರ್ ಭಗತ್ ಸಿಂಗ್ ಅವರನ್ನು ಬಿಜೆಪಿ ಜನರು ಏಕೆ ದ್ವೇಷಿಸುತ್ತಾರೆ?. ಶಾಲಾ ಪುಸ್ತಕಗಳಿಂದ ಸರ್ದಾರ್ ಭಗತ್ ಸಿಂಗ್ ಅವರ ಹೆಸರನ್ನು ತೆಗೆದುಹಾಕಿರುವುದು ಅಮರ್ ಶಹೀದ್ ಅವರ ತ್ಯಾಗಕ್ಕೆ ಮಾಡಿದ ಅವಮಾನ. ಈ ದೇಶವು ತನ್ನ ಹುತಾತ್ಮರಿಗೆ ಮಾಡಿರುವ ಅವಮಾನವನ್ನು ಸಹಿಸುವುದಿಲ್ಲ. ಆದಷ್ಟು ಬೇಗ ಈ ನಿರ್ಧಾರವನ್ನು ಬಿಜೆಪಿ ಸರಕಾರ ಹಿಂಪಡೆಯಬೇಕು" ಎಂದು ಆಗ್ರಹಿಸಿದ್ದಾರೆ.
|
ಬಿಜೆಪಿ ಡೋಂಗಿ ರಾಷ್ಟ್ರ ಭಕ್ತರು
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿ ಬಿಜೆಪಿ ಸರ್ಕಾರದ ನಡೆಯನ್ನು ಖಂಡಿಸಿದ್ದು, "ಪಠ್ಯ ಪುಸ್ತಕಗಳನ್ನು ಪಕ್ಷ ಪುಸ್ತಕಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತ ರೂಪವೇ ಆಯ್ದ ಪಠ್ಯ ಪುಸ್ತಕಗಳನ್ನು ಟಾರ್ಗೆಟ್ ಮಾಡಿ ಡಿಲೀಟ್ ಮಾಡುವುದು. ಬಿಜೆಪಿಯ ಈ ಬುಡಮೇಲು ಕೃತ್ಯಗಳ ಬಗ್ಗೆ ನನಗೆ ಅಚ್ಚರಿಯೇನೂ ಇಲ್ಲ. ನನ್ನ ಜೊತೆ ಮೈತ್ರಿ ಸರ್ಕಾರ ಮಾಡಿದಾಗ ಅವರ ಬೇಳೆ ಬೇಯಲಿಲ್ಲ. ಅಪರೇಷನ್ ಕಮಲದ ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಸ್ವಘೋಷಿತ ಢೋಂಗಿ ರಾಷ್ಟ್ರಭಕ್ತರು ಇನ್ನೇನು ಮಾಡಲು ಸಾಧ್ಯ?. ಒಬ್ಬ ಮಹಾನ್ ರಾಷ್ಟ್ರ ಪ್ರೇಮಿ, ಬ್ರಿಟಿಷರಿಗೆ ಸಿಂಹಸ್ವಪ್ನ, ಭಾರತೀಯ ಹೆಮ್ಮೆಯ ಪುತ್ರ ಸರ್ದಾರ್ ಭಗತ್ ಸಿಂಗ್ ಅವರ ಪಠ್ಯಕ್ಕೆ ಕೊಕ್ ಕೊಟ್ಟು, ಆರ್ಎಸ್ಎಸ್ ಸಂಸ್ಥಾಪಕ ಹೆಡಗೇವಾರ್ ಕುರಿತ ಮಾಹಿತಿಯನ್ನು ಪಠ್ಯಕ್ಕೆ ತುರುಕುತ್ತಿರುವ ಬಿಜೆಪಿ ವಿಕೃತಿಗೆ ಇದು ಪರಾಕಷ್ಠೆ" ಎಂದು ಟೀಕಿಸಿದ್ದಾರೆ.
ಟ್ವೀಟ್ ಮಾಡುವ ಮುನ್ನ ಮಾಹಿತಿ ಕಲೆಹಾಕಿ
"ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶದ ಹುತಾತ್ಮರ ಬಗ್ಗೆ ಬಿಜೆಪಿ ಅತ್ಯಂತ ಗೌರವವನ್ನು ಹೊಂದಿದೆ. ‘ಶಹೀದ್ ಭಗತ್ ಸಿಂಗ್' ಅಧ್ಯಾಯವನ್ನು ತೆಗೆದು ಹಾಕಿಲ್ಲ ಎಂದು ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ ಸ್ಪಷ್ಟವಾಗಿ ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿ ಪದವಿಯಲ್ಲಿರುವವರು ಯಾವುದೇ ಆರೋಪ ಮಾಡುವ ಮುನ್ನ ಅಧಿಕೃತ ಮೂಲದಿಂದ ಖಚಿತಪಡಿಸಿಕೊಳ್ಳುವುದು ಉತ್ತಮ" ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದ್ದಾರೆ.
ಸತ್ಯಕ್ಕೆ ದೂರವಾದ ಮಾತು
ಸಮಾಜ ವಿಜ್ಞಾನ ಹಾಗೂ ಭಾಷಾ ಪಠ್ಯಪುಸ್ತಕಗಳಲ್ಲಿದ್ದ ಸೂಕ್ಷ್ಮ ವಿಚಾರಗಳನ್ನು ಪರಿಶೀಲಿಸಲು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಸಮಿತಿಯು 6 ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಹಾಗೂ 1 ರಿಂದ 10 ನೇ ತರಗತಿ ಕನ್ನಡ ಭಾಷಾ ಪಠ್ಯಪುಸ್ತಕ ಪರಿಷ್ಕರಿಸಿರುತ್ತಾರೆ.
10ನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿದ್ದ 'ಭಗತ್ಸಿಂಗ್' ಗದ್ಯವನ್ನು ಕೈಬಿಟ್ಟು 'ಹೆಡಗೆವಾರ್'ರವರ ಬಗ್ಗೆ ಗದ್ಯ ಸೇರಿಸಲಾಗಿದೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದುದು. ವಾಸ್ತವವಾಗಿ 'ಭಗತ್ಸಿಂಗ್' ಗದ್ಯವನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಪರಿಷ್ಕರಿಸಿರುವ 10ನೇ ತರಗತಿ ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ ಇನ್ನೂ ಮುದ್ರಣ ಹಂತದಲ್ಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
Recommended Video