ಬೆಂಗಳೂರು: ಬಿಬಿಎಂಪಿಗೆ ಚುನಾವಣೆ ಬಹುತೇಕ ಡೌಟ್.. ಯಾಕೆ ಗೊತ್ತಾ?
ಬೆಂಗಳೂರು ಮೇ 10. ರಾಜ್ಯ ವಿಧಾನಸಭಾ ಚುನಾವಣೆ ನಡೆಯುವವರೆಗೆ ಬಿಬಿಎಂಪಿ ಚುನಾವಣೆ ನಡೆಯುವುದು ಬಹುತೇಕ ಡೌಟು.
ಆದರೂ ಸಹ ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧ ಮಂಗಳವಾರ ಸುಪ್ರೀಂಕೋರ್ಟ್ ನೀಡಿರುವ ಆದೇಶದಿಂದಾಗಿ ಬಿಬಿಎಂಪಿಗೂ ಚುನಾವಣೆ ನಡೆಯಲಿದೆ ಎಂಬ ಗೊಂದಲ ಸೃಷ್ಟಿಯಾಗಿದೆ.
ಬಿಬಿಎಂಪಿ ಚುನಾವಣೆ ತಡ ಮಾಡಿದ್ದಕ್ಕೆ ಒಬಿಸಿಗೆ ಅನ್ಯಾಯ: ರಾಮಲಿಂಗಾ ರೆಡ್ಡಿ
ಬಿಬಿಎಂಪಿಗೆ ಚುನಾವಣೆ ನಡೆಯದೇ ಈಗಾಗಲೇ ಎರಡು ವರ್ಷ ಕಳೆದಿದ್ದು, ರಾಜ್ಯ ಸರ್ಕಾರದ ಅರ್ಜಿ ಆಧರಿಸಿ ಸುಪ್ರೀಂಕೋರ್ಟ್ ನೀಡಿರುವ ತಡೆಯಾಜ್ಞೆಯಿಂದಾಗಿ ಈವರೆಗೆ ಬಿಬಿಎಂಪಿಗೆ ಚುನಾವಣೆ ನಡೆದಿಲ್ಲ. ಈ ಮಧ್ಯೆ ಸುಪ್ರೀಂಕೋರ್ಟ್ ನೀಡಿರುವ ಆದೇಶವೊಂದರ ಕುರಿತು ಸಚಿವ ಆರ್. ಅಶೋಕ ನೀಡಿರುವ ಹೇಳಿಕೆ ಗೊಂದಲಕ್ಕೆ ಕಾರಣವಾಗಿದ್ದು, ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ ಆರಂಭವಾಗಿದೆ.
ಬಿಬಿಎಂಪಿ ಚುನಾವಣೆ ಬಗ್ಗೆ ಸುಪ್ರೀಂಕೋರ್ಟ್ ಯಾವುದೇ ಆದೇಶ ನೀಡಿಲ್ಲ. ಅಲ್ಲದೇ ಬಿಬಿಎಂಪಿ ಪ್ರಕರಣದ ವಿಚಾರಣೆಯೂ ಮಂಗಳವಾರ ನಡೆದಿಲ್ಲ. ಬದಲಿಗೆ ಮಧ್ಯಪ್ರದೇಶದ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಬಗ್ಗೆ ತೀರ್ಪು ನೀಡಿ ಶೀಘ್ರ ಚುನಾವಣೆ ನಡೆಸುವಂತೆ ಮಧ್ಯಪ್ರದೇಶದ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಈ ಮಧ್ಯೆ ಎಲ್ಲಾ ರಾಜ್ಯಗಳೂ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಬೇಕೆಂಬ ಸೂಚನೆಯನ್ನೂ ನೀಡಿದೆ. ಆದರೆ ಇದು ಬಿಬಿಎಂಪಿ ಚುನಾವಣೆಗೆ ನೀಡಿದ ಆದೇಶವೆಂದು ಪರಿಗಣಿಸುವುದು ಸಾಧ್ಯವಿಲ್ಲ.
ಬಿಬಿಎಂಪಿಗೆ ಚುನಾವಣೆ ನಡೆಸಿ, ಎರಡು ವಾರದಲ್ಲಿ ಅಧಿಸೂಚನೆ ಪ್ರಕಟಿಸಿ: ಸುಪ್ರೀಂ ಆದೇಶ
ಬಿಬಿಎಂಪಿಗೆ ಅನ್ವಯ ಏಕಿಲ್ಲ?
ಸುಪ್ರೀಂಕೋರ್ಟ್ ಮಧ್ಯಪ್ರದೇಶದ ಪ್ರಕರಣವೊಂದರಲ್ಲಿ ಬಾಕಿ ಇರುವ ಎಲ್ಲ ಸ್ಥಳೀಯ ಚುನಾವಣೆಗಳನ್ನು ನಡೆಸಲೇಬೇಕೆಂದು ಆದೇಶಿಸಿದೆ. ಆ ತೀರ್ಪು ನೀಡಿರುವುದು ಸಿಜೆಐ ನೇತೃತ್ವದ ತ್ರಿಸದಸ್ಯ ಪೀಠ ಮತ್ತು ಬಿಬಿಎಂಪಿ ಚುನಾವಣೆ ಅರ್ಜಿ ವಿಚಾರಣೆ ಬಾಕಿ ಇರುವುದು ಮತ್ತೊಂದು ತ್ರಿಸದಸ್ಯ ನ್ಯಾಯಪೀಠದ ಮುಂದೆ. ಜೊತೆಗೆ ಬಿಬಿಎಂಪಿ ಚುನಾವಣೆಗೆ ನೀಡಿರುವ ತಡೆಯಾಜ್ಞೆ ಇನ್ನೂ ತೆರವಾಗಿಲ್ಲ.
ಹೈಕೋರ್ಟ್ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ತಡೆ ಇದ್ದರೆ ಅದು ಸಹಜವಾಗಿಯೇ ತೆರವಾಗುತ್ತಿತ್ತು. ಆದರೆ ತ್ರಿಸದಸ್ಯಪೀಠದಲ್ಲಿಯೇ ಬಾಕಿ ಇರುವುದರಿಂದ ಸರ್ಕಾರ ಅಥವಾ ಚುನಾವಣಾ ಆಯೋಗ ಅರ್ಜಿ ಸಲ್ಲಿಸಿ ತಡೆಯಾಜ್ಞೆಗೆ ಮನವಿ ಮಾಡಬೇಕು. ಆ ಮನವಿಯನ್ನು ಪುರಸ್ಕರಿಸಿ ನ್ಯಾಯಪೀಠ ತಡೆಯಾಜ್ಞೆ ತೆರವುಗೊಳಿಸಬೇಕಾಗುತ್ತದೆ. ಅಲ್ಲಿಯವರೆಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಬಿಬಿಎಂಪಿಗೆ ಅನ್ವಯಿಸುವುದಿಲ್ಲ.
ಪ್ರಕರಣದ ಹಿನ್ನೆಲೆ:
ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ನಿಗದಿತ ಅವಧಿಯಲ್ಲಿ ಬಿಬಿಎಂಪಿ ಚುನಾವಣೆ ನಡೆಸುತ್ತಿಲ್ಲ. ಒಂದಲ್ಲ ಒಂದು ಕಾರಣ ನೀಡಿ ಬಿಬಿಎಂಪಿ ಚುನಾವಣೆ ಮುಂದೂಡೋ ಪ್ರಯತ್ನವನ್ನು ಸದಾ ಮಾಡುತ್ತಲೇ ಇವೆ. ಬಿಬಿಎಂಪಿಗೆ ನಿಗದಿಯಂತೆ 2019 ರಲ್ಲೇ ಚುನಾವಣೆಗಳು ನಡೆಯಬೇಕಿತ್ತು. ಆದರೆ ಕೋವಿಡ್, ಬಿಬಿಎಂಪಿ ಕಾಯ್ದೆ, ವಾರ್ಡ್ ಪುನರ್ ವಿಂಗರಡಣೆ ಹೀಗೆ ಹತ್ತಾರು ನೆಪಗಳನ್ನು ಹೇಳಿಕೊಂಡು ಸರ್ಕಾರ ಚುನಾವಣೆಯನ್ನು ಮುಂದೂಡುತ್ತಲೇ ಇದೆ.
ಆದರೆ, ಪಾಲಿಕೆ ಸದಸ್ಯರಾದ ಶಿವರಾಜು ಮತ್ತಿತರು ಚುನಾವಣೆ ಮುಂದೂಡಿಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಹೈಕೋರ್ಟ್ 2020 ರ ಡಿಸೆಂಬರ್ 4 ರಂದು ಆದೇಶ ನೀಡಿ ತಕ್ಷಣ ಬಿಬಿಎಂಪಿ ಗೆ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಿತ್ತು. ಆದರೆ, ಹೈಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿತ್ತು. ಚುನಾವಣೆ ನಡೆಸುವಂತೆ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ 2020ರ ಡಿ.18ರಂದು ತಡೆ ನೀಡಿದ ಹಿನ್ನೆಲೆಯಲ್ಲಿ ಈವರೆಗೂ ಬಿಬಿಎಂಪಿಗೆ ಚುನಾವಣೆ ನಡೆಸಲು ಸಾಧ್ಯವಾಗಿಲ್ಲ.
ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ನೀಡಿರುವ ಆ ತಡೆಯಾಜ್ಞೆಯನ್ನು ಈವರೆಗೂ ಸುಪ್ರೀಂಕೋರ್ಟ್ ತೆರವುಗೊಳಿಸಿಲ್ಲ. ರಾಜ್ಯ ಚುನಾವಣಾ ಆಯೋಗ ಕೂಡಾ ತಡೆಯಾಜ್ಞೆ ತೆರವು ಕೋರಿ ಅರ್ಜಿ ಸಲ್ಲಿಸಿದೆ. ತಡೆಯಾಜ್ಞೆ ತೆರವುಗೊಳಿಸಿದ ಬಳಿಕವಷ್ಟೇ ಬಿಬಿಎಂಪಿಗೆ ಚುನಾವಣೆ ನಡೆಯಲು ಸಾಧ್ಯ.
Recommended Video