ತಮ್ಮದೇ ಸರಕಾರದ ವಿರುದ್ದ ಯುವ ಬಿಜೆಪಿ ನಾಯಕರ ಗುಡುಗು, ಅಸಲಿಯತ್ತು ಏನು?
ಸಾಮಾನ್ಯವಾಗಿ ರಾಜಕೀಯ ನಾಯಕರ ಯಾವುದೇ ಹೋರಾಟದ ಹಿಂದೆ ಪಬ್ಲಿಸಿಟಿ ಸ್ಟಂಟ್ ಇರುತ್ತೆ ಎನ್ನುವುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಮಾತು. ತಮ್ಮ/ಪಕ್ಷದ ಹಿತಾಶಕ್ತಿ ಇದ್ದರೇ ಮಾತ್ರ ಸಾರ್ವಜನಿಕ ಹಿತಾಶಕ್ತಿಯ ಬಗ್ಗೆ ಜನ ಪ್ರತಿನಿಧಿಗಳು ಮುನ್ನುಗ್ಗುತ್ತಾರೆ ಎನ್ನುವ ಮಾತು ಜನನಿತ.
Recommended Video
ಮಂಗಳವಾರ (ಮೇ 4) ರಾಜಧಾನಿ ಬೆಂಗಳೂರು ಒಂದು ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಬಿಬಿಎಂಪಿ ಕೋವಿಡ್ ವಾರ್ ರೂಂನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದೆ ಎಂದು ಅದರ ವಿರುದ್ದ ಬಿಜೆಪಿಯ ಜನ ಪ್ರತಿನಿಧಿಗಳೇ ರಸ್ತೆಗಿಳಿದಿದ್ದರು.
ಕೋವಿಡ್ ವಾರ್ ರೂಂ ಫ್ರಾಡ್: ಹೆಣದ ಮೇಲಿನ ಹಣವನ್ನೂ ಬಿಡಲ್ವಲ್ರೋ!
ಸಾಮಾನ್ಯವಾಗಿ ತಮ್ಮದೇ ಪಕ್ಷದ ಸರಕಾರದ ವಿರುದ್ದ ಅದೇ ಪಕ್ಷದ ನಾಯಕರು ಹೋರಾಟಕ್ಕೆ ಇಳಿಯುವ ನಿದರ್ಶನಗಳು ಕಮ್ಮಿ. ಆದರೆ, ಸಂಸದ ತೇಜಸ್ವಿ ಸೂರ್ಯ ಆದಿಯಾಗಿ, ಬಿಜೆಪಿಯ ಮೂವರು ಶಾಸಕರು ಬಿಬಿಎಂಪಿ ವಿರುದ್ದ ಸಮರ ಸಾರಿದ್ದರು. ಇದು, ವ್ಯಾಪಕ ಪ್ರಚಾರವನ್ನೂ ಪಡೆಯಿತು.
ಸಂಸದ ತೇಜಸ್ವಿ ಸೂರ್ಯ ಈ ಪ್ರಶ್ನೆಗಳನ್ನು ನೀವು ಕೇಳಬೇಕಿತ್ತು!
ಬೆಡ್ ಬ್ಲಾಕಿಂಗ್ ವಿರುದ್ದ ಈಗಾಗಲೇ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ, ಇಬ್ಬರನ್ನು ಈ ವಿಚಾರದಲ್ಲಿ ಬಂಧಿಸಲಾಗಿದೆ. ತೇಜಸ್ವಿ ಸೂರ್ಯ ಅವರದ್ದು ಬರೀ ನಾಟಕ ಎಂದು ಸಾಮಾಜಿಕ ತಾಣದಲ್ಲಿ ಅಲ್ಲಲ್ಲಿ ಮೆಸೇಜುಗಳು ಹರಿದಾಡುತ್ತಿದ್ದವು. ಆದರೆ, ಬಿಜೆಪಿ ಸರಕಾರದ ವಿರುದ್ದವೇ ಯಾಕೆ ಹೋರಾಟ ಮಾಡುತ್ತಾರೆ ಎನ್ನುವ ವಿಚಾರ ಬಂದಾಗ, ಕೆಲವೊಂದು ಆಯಾಮಗಳನ್ನು ಇಲ್ಲಿ ನೋಡಬಹುದಾಗಿದೆ.
ತೇಜಸ್ವಿ ಸೂರ್ಯ ಹೋರಾಟದಲ್ಲಿ ಸಮಾಜ ಯಾಕೆ ಇಷ್ಟು ಕುಲಗೆಟ್ಟು ಹೋಗಿದೆ ಎನ್ನುವ ಸಿಟ್ಟು
ಜಾತ್ಯಾತೀತವಾಗಿ ಹೇಳುವುದಾದರೆ ತೇಜಸ್ವಿ ಸೂರ್ಯ ಅವರ ನಿನ್ನೆಯ ಹೋರಾಟದಲ್ಲಿ ಸಮಾಜ ಯಾಕೆ ಇಷ್ಟು ಕುಲಗೆಟ್ಟು ಹೋಗಿದೆ ಎನ್ನುವ ಸಿಟ್ಟು ಅವರಲ್ಲಿ ಕಾಣಬಹುದಾಗಿತ್ತು. ಇದೇ ರೀತಿ, ವ್ಯವಸ್ಥೆಯ ಬಗ್ಗೆ ಮತ್ತೋರ್ವ ಯುವ ಸಂಸದ ಪ್ರತಾಪ್ ಸಿಂಹ ಕೂಡಾ ಸಿಟ್ಟಿನ ಧಾಟಿಯಲ್ಲೇ ಮಾತನಾಡಿದ್ದರು. ಕ್ಷೇತ್ರದ ಜನರಿಗೆ ಒಂದು ಬೆಡ್ ಕೊಡಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎನ್ನುವುದೂ ಇವರ ಕೋಪಕ್ಕೆ ಕಾರಣವಾಗಿತ್ತು. ನಮಗೇ ಹೀಗಾದರೆ, ಜನ ಸಾಮಾನ್ಯರ ಪಾಡೇನು ಎನ್ನುವ ಅವರ ಹೇಳಿಕೆಯನ್ನು ಒಂದು ಆಯಾಮದಲ್ಲಿ ಹೌದೆಂದೇ ಹೇಳಬಹುದಾಗಿದೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಸರಕಾರದ ವಿರುದ್ದ ಸಿಟ್ಟು
ಕೆಲವು ದಿನಗಳ ಹಿಂದೆ, ಅಂದರೆ ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ನಡೆದಾಗ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡಾ ಸರಕಾರದ ವಿರುದ್ದ ಸಿಟ್ಟಿನ ಮಾತನ್ನು ಆಡಿದ್ದರು. ಸುಧಾಕರ್ ಅವರು ಬರೀ ಚಿಕ್ಕಬಳ್ಳಾಪುರದ ಆರೋಗ್ಯ ಸಚಿವರಲ್ಲ, ಅವರು ಈ ರಾಜ್ಯದ ಆರೋಗ್ಯ ಸಚಿವರು ಎಂದು ನೇರವಾಗಿ ಡಾ. ಸುಧಾಕರ್ ವಿರುದ್ದ ಕಿಡಿಕಾರಿದ್ದರು. ತೇಜಸ್ವಿ ಸೂರ್ಯ ಅವರ ನಿನ್ನೆಯ ಘಟನೆ ಅದರ ಮುಂದಿನ ಭಾಗವಾಗಿರಬಹುದು.
ಆರೋಗ್ಯ ಸಚಿವ ಡಾ.ಸುಧಾಕರ್ ಸುದ್ದಿಯಲ್ಲಿದ್ದಷ್ಟು ಬೇರೆ ಯಾವ ಸಚಿವರೂ ಇಲ್ಲ
ಕೋವಿಡ್ ಹಾವಳಿಯ ನಂತರ ಆರೋಗ್ಯ ಸಚಿವ ಡಾ.ಸುಧಾಕರ್ ಸುದ್ದಿಯಲ್ಲಿದ್ದಷ್ಟು ಬೇರೆ ಯಾವ ಸಚಿವರೂ ಇಲ್ಲ ಎನ್ನುವುದು ವಾಸ್ತವತೆ. ಆದರೆ, ಇಲಾಖೆಯ ಕೆಲಸವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಅವರು ಯಶಸ್ವಿಯಾಗಿದ್ದಾರಾ ಎಂದು ಕೇಳಿದಾಗ ಹೌದು ಎನ್ನುವುದಕ್ಕೆ ಮುಖ್ಯಮಂತ್ರಿಗಳ ಆತ್ಮಸಾಕ್ಷಿಯೂ ಬಹುಷಃ ಒಪ್ಪಲಾರದು. ಆಕ್ಸಿಜನ್ ದುರಂತದ ಸಾವಿನಲ್ಲೂ ತಪ್ಪು ಲೆಕ್ಕ ಹೇಳಿದ್ದಾರೆ ಎನ್ನುವುದು ಬಿಜೆಪಿಯ ಕೆಲವು ಸಚಿವರುಗಳ ಕೋಪಕ್ಕೂ ಕಾರಣವಾಗಿದೆ ಎನ್ನುವುದು ಗೌಪ್ಯವಾಗಿ ಉಳಿದಿಲ್ಲ.
ಸದ್ಯದ ಮಟ್ಟಿಗೆ ಸಚಿವ ಡಾ.ಸುಧಾಕರ್ ಅವರ ಪವರ್ ಅನ್ನು ಕಿತ್ತುಕೊಳ್ಳಲಾಗಿದೆ
ನಿನ್ನೆಯ ಕ್ಯಾಬಿನೆಟ್ ಸಭೆಯ ವೇಳೆ, ಕೋವಿಡ್ ನಿರ್ವಹಣೆಯನ್ನು ಐದು ಸಚಿವರಿಗೆ ಹಂಚಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶವೇನಂದರೆ ಈ ಐವರು ಸಚಿವರೂ ಮೂಲ ಬಿಜೆಪಿಗರು. ಅಲ್ಲಿಗೆ, ಸದ್ಯದ ಮಟ್ಟಿಗೆ ಸಚಿವ ಡಾ.ಸುಧಾಕರ್ ರಬ್ಬರ್ ಸ್ಟ್ಯಾಂಪ್ ರೀತಿಯಲ್ಲಿ ಅವರ ಪವರ್ ಅನ್ನು ಕಿತ್ತುಕೊಳ್ಳಲಾಗಿದೆ.
ಬಿಬಿಎಂಪಿ ವೆಬ್ಸೈಟ್ ನಲ್ಲಿ ಸುಮಾರು ಎರಡು ಸಾವಿರಕ್ಕೂ ಬೆಡ್ ಗಳು ಖಾಲಿ
ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ರವಿ ಸುಬ್ರಮಣ್ಯ, ಸತೀಶ್ ರೆಡ್ಡಿ, ಸಿ.ಟಿ.ರವಿ ಮುಂತಾದವರು ಬಿಬಿಎಂಪಿ ಕಾರ್ಯವೈಖರಿಯನ್ನು ಟೀಕಿಸುತ್ತಾ, ಆರೋಗ್ಯ ಇಲಾಖೆಯ ಮೇಲೆ ತಮ್ಮ ಸಿಟ್ಟನ್ನು ಆ ಮೂಲಕ ಹೊರಹಾಕಿರಬಹುದು. ಅಥವಾ ಯುವಕರಾಗಿ, ಇಂತಹ ಸಮಯದಲ್ಲೂ ನಮ್ಮಿಂದ ಏನೂ ಮಾಡಲಾಗುತ್ತಿಲ್ಲವಲ್ಲಾ ಎನ್ನುವ ತುಡಿತವೂ ನಿನ್ನೆಯ ಘಟನೆಗೆ ಕಾರಣವಾಗಿರಬಹುದು. ಒಟ್ಟಿನಲ್ಲಿ, ತೇಜಸ್ವಿ ಸೂರ್ಯ ಘಟನೆಯ ನಂತರ ಬಿಬಿಎಂಪಿ ವೆಬ್ಸೈಟ್ ನಲ್ಲಿ ಸುಮಾರು ಎರಡು ಸಾವಿರಕ್ಕೂ ಬೆಡ್ ಗಳು ಖಾಲಿಯಿದೆ ಎಂದು ತೋರಿಸುತ್ತಿದೆ.