Breaking: ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಇಂದೇ ರಾಜೀನಾಮೆ?
ಬೆಂಗಳೂರು, ಮೇ 16: ಜೆಡಿಎಸ್ ತೊರೆದು ಬಿಜೆಪಿಯತ್ತ ಹೆಜ್ಜೆ ಇಟ್ಟಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಸಭಾಪತಿ ಸ್ಥಾನಕ್ಕೆ ಮೇ 18ರಂದು ರಾಜೀನಾಮೆ ನೀಡುವುದಾಗಿ ಬಸವರಾಜ ಹೊರಟ್ಟಿ ಅವರೇ ಈ ಹಿಂದೆ ಹೇಳಿದ್ದರು. ಆದರೆ, ವಿಧಾನ ಪರಿಷತ್ ಚುನಾವಣೆಗೆ ತುರ್ತಾಗಿ ಸಿದ್ಧ ಆಗಬೇಕಿರುವುದರಿಂದ ಸೋಮವಾರವೇ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಬಸವರಾಜ ಹೊರಟ್ಟಿ ಅವರು ಸೋಮವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಕರೆದಿದ್ದಾರೆ. ಇದೆ ಸಂದರ್ಭದಲ್ಲಿ ರಾಜೀನಾಮೆಯ ಬಗ್ಗೆ ಘೋಷಣೆ ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು.
ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರ್ಪಡೆಯಾಗುವುದು ಖಚಿತವಾಗಿದೆ. ಈ ಹಿಂದೆ ಬೆಂಗಳೂರಿಗೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವೈಯಕ್ತಿವಾಗಿ ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹೊರಟ್ಟಿ ಅವರನ್ನು ಶಾ ಸಹ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಅದರೆ, ಸಭಾಪತಿ ಹುದ್ದೆಯಲ್ಲಿ ಇರುವುದರಿಂದ ಅಧಿಕೃತವಾಗಿ ಪಕ್ಷ ಸೇರ್ಪಡೆ ಆಗಿಲ್ಲ. ಈಗ ರಾಜೀನಾಮೆ ನೀಡಿದ ಬಳಿಕ ಬಿಜೆಪಿಯನ್ನು ಸೇರ್ಪಡೆಯಾಗಲಿದ್ದಾರೆ. ಹುಬ್ಬಳ್ಳಿಯಲ್ಲ ಬೃಹತ್ ಕಾರ್ಯಕ್ರಮ ಏರ್ಪಡಿಸಿ ಅಲ್ಲಿ ಹೊರಟ್ಟಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೆ, ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಟಿಕೆಟ್ ಸಂಬಂಧ ಮೇ 18ರ ನಂತರವೇ ಮಾತನಾಡುವುದಾಗಿ ಹೊರಟ್ಟಿ ಈ ಹಿಂದೆಯೇ ಹೇಳಿದ್ದಾರೆ.
Recommended Video