ಲವ್ ಜಿಹಾದ್: ರಾಜ್ಯ ಬಿಜೆಪಿ ಸರ್ಕಾರದ ಮಹತ್ವದ ತೀರ್ಮಾನ!
ಬೆಂಗಳೂರು, ನ. 04: ಉಪ ಚುನಾವಣೆ ಮುಗಿಯುತ್ತಲೇ ರಾಜ್ಯ ಬಿಜೆಪಿ ಸರ್ಕಾರ ಮತ್ತೊಂದು ಚುನಾವಣೆಗೆ ಸಿದ್ಧತೆ ನಡೆಸಿದೆ. ಮುಂದಿನ ಗ್ರಾಮ ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆಗೆ ರಾಜ್ಯ ಬಿಜೆಪಿ ಸರ್ಕಾರ ಸಿದ್ಧತೆ ಆರಂಭಿಸಿದೆ. ಇದೇ ಸಂದರ್ಭದಲ್ಲಿ ರಾಜ್ಯದ ಪ್ರಮುಖ ಸಚಿವರು ಕೊಟ್ಟಿರುವ ಹೇಳಿಕೆ ಇದೀಗ ಚರ್ಚೆ ಹುಟ್ಟು ಹಾಕಿದೆ.
ಮದುವೆ ಆಗುವ ಉದ್ದೇಶ ಇಟ್ಟುಕೊಂಡು ಮತಾಂತರವಾಗುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಕೊಟ್ಟಿರುವ ತೀರ್ಪು ಆಧರಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ತಮ್ಮ ಅಭಿಪ್ರಾಯ ಹಂಚಿ ಕೊಂಡಿದ್ದರು. ಅವರು ತಮ್ಮ ಅಭಿಪ್ರಾಯ ಹೇಳಿರುವುದರ ಬೆನ್ನಲ್ಲೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದೆ.
ಲವ್ ಜಿಹಾದ್ ಕುರಿತು ಬೆಂಗಳೂರಿನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಗೃಹ ಮಂತ್ರಿ ಹಾಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಸರ್ಕಾರದ ನಿರ್ಧಾರ ಪ್ರಕಟಿಸಿದ್ದಾರೆ. ಇಬ್ಬರೂ ಸಚಿವರು ಏನು ಹೇಳಿದ್ದಾರೆ? ಮುಂದಿದೆ ಸಂಪೂರ್ಣ ಮಾಹಿತಿ.
ಲವ್ ಜಿಹಾದ್ ಮಾಡಲು ತರಬೇತಿ!
ರಾಜ್ಯದಲ್ಲೂ ಲವ್ ಜಿಹಾದ್ ಪ್ರಕರಣಗಳು ಆಗುತ್ತಿವೆ. ಲವ್ ಮಾಡಿ ಮದುವೆಯಾಗಿ ಮತಾಂತರ ಮಾಡಲೆಂದೇ ಯುವಕರಿಗೆ ತರಬೇತಿ ನೀಡುವ ಬೈಕ್ ಬಟ್ಟೆ ಕೊಡಿಸುವ ಗುಂಪುಗಳು ರಾಜ್ಯದಲ್ಲಿ ಸಕ್ರೀಯವಾಗಿವೆ. ಲವ್ ಜಿಹಾದ್ಗೆ ಬಲಿಯಾಗಿ ಬದುಕು ಬರ್ಬಾದ್ ಮಾಡಿಕೊಳ್ಳುವ ಹೆಣ್ಣುಮಕ್ಕಳ ರಕ್ಷಣೆಗಾಗಿ, ಕರ್ನಾಟಕದಲ್ಲೂ ಉತ್ತರ ಪ್ರದೇಶ ಮಾದರಿಯಲ್ಲಿ ಕಾನೂನು ತರಬೇಕು. ಈ ಸಂಬಂಧ ಗೃಹ ಸಚಿವರು ಮತ್ತು ಸಿಎಂ ಜತೆ ಮಾತನಾಡುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ.
ಮತಾಂತರಕ್ಕೆ ಸಂಘಟಿತ ಪ್ರಯತ್ನ
ಇನ್ನು ಲವ್ ಜಿಹಾದ್ ವಿಚಾರ ಕುರಿತಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರೂ ಮಹತ್ವದ ಹೇಳಿಕೆಯನ್ನು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಇತ್ತೀಚಿನ ದಿನಗಳಲ್ಲಿ ಮತಾಂತರ ಮಾಡಲು ಕೆಲವು ಶಕ್ತಿಗಳು ಸಂಘಟಿತವಾಗಿ ಯುವಕರನ್ನು ದಾರಿತಪ್ಪಿಸುವ ಕಾರ್ಯಾಚರಣೆ ಮಾಡುತ್ತಿವೆ. ಲವ್ ಜಿಹಾದ್ ಹೆಸರಿನಿಂದ ಪರಿವರ್ತನೆ ಸರಿಯಲ್ಲ ಎಂದು ಅಹಮದಾಬಾದ್ ಹೈಕೋರ್ಟ್ ಕೂಡಾ ತೀರ್ಪಿನಲ್ಲಿ ಹೇಳಿದೆ.
ನಾವೂ ಗಮನಿಸುತ್ತಿದ್ದೇವೆ
ಬೇರೆ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾವು ಗಮನಿಸುತ್ತಿದ್ದೇವೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಈ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತೇವೆ. ಎಲ್ಲಾ ಸಲಹೆ ಸೂಚನೆ ಆಧಾರದಲ್ಲಿ ಲವ್ ಜಿಹಾದ್ ತಡೆಗೆ ಕಾನೂನು ಪ್ರಕ್ರಿಯೆಗೆ ಸರ್ಕಾರ ಮುಂದುವರಿಯಲಿದೆ. ದೇಶದಲ್ಲಿ 8-10 ವರ್ಷಗಳಿಂದ ಈ ಚರ್ಚೆ ಇದೆ. ಪ್ರತಿ ಪ್ರಕರಣ ಆದಾಗಲೂ ಕಾನೂನು ರಚನೆ ಕುರಿತು ಚರ್ಚೆ ಆಗುತ್ತದೆ. ಈಗ ಹೈಕೋರ್ಟ್ ವ್ಯಾಖ್ಯಾನದ ಬಳಿಕ ಕಾನೂನು ಪ್ರಕ್ರಿಯೆಯ ಮತ್ತೆ ಚಿಂತನೆ ಆರಂಭವಾಗಿದೆ. ಈ ಬಗ್ಗೆ ನಾವೂ ಗಂಭೀರ ತೀರ್ಮಾನ ಮಾಡುತ್ತೇವೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
Recommended Video
ಹೊಸ ಕಾನೂನು ರಚನೆ
ಅಹಮದಾಬಾದ್ ಹೈಕೋರ್ಟ್ ತೀರ್ಪಿನ ಬಳಿಕ ದೇಶದಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಈಗಿರುವ ಕಾನೂನು ಅಲ್ಲದೇ ವಿಶೇಷ ಕಾನೂನು ಆಗಬೇಕು ಅಂತಾ ಕೆಲವರು ಚಿಂತನೆ ಆರಂಭಿಸಿದ್ದಾರೆ. ಕೆಲವು ರಾಜ್ಯಗಳು ಘೋಷಣೆ ಕೂಡಾ ಮಾಡಿವೆ. ಸಂವಿಧಾನದ ಚೌಕಟ್ಟಿನಲ್ಲಿ ಕಾನೂನು ರಚನೆಯಾಗಬೇಕೆಂಬ ಚಿಂತನೆಯನ್ನು ನಮ್ಮ ಸರ್ಕಾರ ಮಾಡಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.