ರಾಜ್ಯದಲ್ಲಿ ಶುರುವಾಯ್ತು ಕೊರೊನಾ ವೈರಸ್ ರಾಜಕೀಯ ಕಚ್ಚಾಟ!
ಬೆಂಗಳೂರು, ಏ. 24: ಬೆಂಗಳೂರಿನ ಪಾದರಾನಯಪುರದಲ್ಲಿ ಪೊಲೀಸರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು ಸರ್ಕಾರಕ್ಕೆ ತಲೆನೋವಾಗಿದ್ದಾರೆ. ಭದ್ರತಾ ದೃಷ್ಟಿಯಿಂದ ಬೆಂಗಳೂರಿನಿಂದ ರಾಮನಗರ ಜೈಲಿಗೆ ಹಲ್ಲೆ ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಸ್ಥಳಾಂತರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಅಲ್ಲಿನ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯರ ವಿರೋಧದ ಮಧ್ಯೆ ರಾಮನಗರಕ್ಕೆ ಸ್ಥಳಾಂತರಕ್ಕೆ ಮಾಡಿದ್ದ ಆರೋಪಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿದೆ.
ಇದೀಗ ಎಚ್ಚೆತ್ತುಕೊಂಡಿರುವ ಸರ್ಕಾರ ರಾಮನಗರದಿಂದಲೂ ಪಾದರಾಯನಪುರದ ಆರೋಪಿಗಳನ್ನು ಸ್ಥಳಾಂತರ ಮಾಡಿದೆ. ರಾಮನಗರ ಜೈಲಿನಲ್ಲಿದ್ದ ಆರೋಪಿಗಳಲ್ಲಿ 5 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಮಾತನಾಡಿರುವ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರು ಆರೋಪಿಗಳ ಸ್ಥಳಾಂತರ, ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಪಗಳಿಗೆ ತಮ್ಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜೊತೆಗೆ ಪಾದರಾಯನಪುರ ಆರೋಪಿಗಳ ವಿಚಾರದಲ್ಲಿ ರಾಜಕೀಯ ಮೇಲಾಟ ಕೂಡ ಶುರುವಾಗಿದೆ. ಡಿಸಿಎಂ ಡಾ. ಅಶ್ವಥ್ ನಾರಾಯಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಧ್ಯೆ ವಾಗ್ಯುದ್ದವೇ ನಡೆದಿದೆ.
ವಿಧಾನಸೌಧದಲ್ಲಿ ಗೃಹ ಸಚಿವ ಬೊಮ್ಮಾಯಿ ತುರ್ತುಸಭೆ
ರಾಮನಗರ ಜೈಲಿನಲ್ಲಿದ್ದ ಆರೋಪಿಗಳಲ್ಲಿ ಐವರಿಗೆ ಕೊರೊನಾ ವೈರಸ್ ದೃಢಪಟ್ಟಿರುವುದರಿಂದ ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ತುರ್ತು ಸಭೆ ನಡೆದಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಡಿಜಿ ಐಜಿಪಿ ಪ್ರವೀಣ ಸೂದ್, ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಅಲೋಕ್ ಮೋಹನ್, ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ರಜನೀಶ ಗೋಯಲ್ ಸಬೆಯಲ್ಲಿ ಭಾಗವಹಿಸಿದ್ದರು. ಪಾದರಾಯನಪುರದ ಆರೋಪಿಗಳನ್ನ ಬೆಂಗಳೂರಿನ ಹಜ್ ಭವನಕ್ಕೆ ಶಿಫ್ಟ್ ಮಾಡುವ ಕುರಿತು ಚರ್ಚೆ ನಡೆಸಿದ್ದಾರೆ.
"ನನ್ನ ಮೇಲೆ ದ್ವೇಷವಿದ್ದರೆ ರಾಮನಗರದ ಮೇಲೆ ತೀರಿಸಿಕೊಳ್ಳಬೇಡಿ"
ಹಜ್ ಭವನಕ್ಕೆ ರಾಮನಗರದಲ್ಲಿನ ಕೈದಿಗಳ ಶಿಫ್ಟ್
ಪಾದರಾಯನಪುರ ಆರೋಪಿಗಳನ್ನು ಬೆಂಗಳೂರಿನ ಹಜ್ ಭವನಕ್ಕೆ ಶಿಫ್ಟ್ ಮಾಡ್ತೇವೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸ್ಥಳಾಂತರಕ್ಕಾಗಿ ಎಲ್ಲ ಅಗತ್ಯ ತಯಾರಿ ಮಾಡಿಕೊಂಡಿದ್ದೇವೆ. ರಾಮನಗರ ಜೈಲಿನ ಸಿಬ್ಬಂದಿಗೂ ಪರೀಕ್ಷೆ ಮಾಡಿ ಕ್ವಾರಂಟೈನ್ ಮಾಡಲಾಗುವುದು. ಬೆಂಗಳೂರಿನಲ್ಲಿ ಪಾದರಾಯನಪುರದಲ್ಲಿ ಕಾರ್ಯಾಚರಣೆ ಮಾಡಿದ್ದ ಪೊಲೀಸರಿಗೆ ತಪಾಸಣೆ ಮಾಡಿ ಅಗತ್ಯವಾದದರೆ ಕ್ವಾರಂಟೈನ್ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ರಾಮನಗರಕ್ಕೆ ಆರೋಪಗಳನ್ನು ಶಿಫ್ಟ್ ಮಾಡಿದ್ದರಲ್ಲಿ ತಪ್ಪಾಗಿಲ್ಲ
ರಾಮನಗರಕ್ಕೆ ಆರೋಪಗಳನ್ನು ಶಿಫ್ಟ್ ಮಾಡಿದ್ದರಲ್ಲಿ ಯಾರದ್ದೂ ತಪ್ಪಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಡಿಜಿ ಐಜಿಪಿ ಪ್ರವೀಣ ಸೂದ್ ಅವರ ಸಲಹೆಯಂತೆ ಬೆಂಗಳೂನಿಂದ ರಾಮನಗರಕ್ಕೆ ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಗೃಹಸಚಿವ ಬೊಮ್ಮಾಯಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಬೇರೆ ಬೇರೆ ಆಯಾಮಗಳು ಬರುತ್ತಲೇ ಇರುತ್ತವೆ. ಸಂದರ್ಭಕ್ಕೆ ತಕ್ಕಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಬೆಂಗಳೂರಿನಿಂದ ರಾಮನಗರಕ್ಕೆ ವಿಚಾರಾಣಾಧೀನ ಖೈದಿಗಳನ್ನು ಸ್ಥಳಾಂತರ ಮಾಡಿದ್ದನ್ನು ಬೊಮ್ಮಾಯಿ ಸಮರ್ಥಿಸಿಕೊಂಡಿದ್ದಾರೆ.
ರಾಮನಗರ: ಮತ್ತೆ 3 ಆರೋಪಿಗಳಲ್ಲಿ ಕೊರಾನಾ ಸೋಂಕು ಪತ್ತೆ
ಮಾಜಿ ಸಿಎಂ ಎಚ್ಡಿಕೆ ಹೇಳಿಕೆಗೆ ಬೊಮ್ಮಾಯಿ ತಿರುಗೇಟು
ಹಲ್ಲೆ ಆರೋಪಿಗಳ ಸ್ಥಳಾಂತರ ಕುರಿತು ಯಾರು ಸಲಹೆ ಕೊಡ್ತಾರೆ ಅನ್ನೋದು ಮುಖ್ಯ ಅಲ್ಲ. ಆವತ್ತಿನ ಸಂದರ್ಭದಲ್ಲಿ ಆರೋಪಿಗಳನ್ನು ಜೈಲಿನಲ್ಲಿ ಇಡುವುದು ಮುಖ್ಯವಾಗಿತ್ತು. ಏನೇ ಕೆಲಸ ಮಾಡಿದರೂ ಆಪಾದನೆ ಬಂದೇ ಬರುತ್ತದೆ. ಆರೋಪಿಗಳನ್ನು ಜೈಲಿನ ಬದಲು ಆಸ್ಪತ್ರೆಯಲ್ಲಿ ಟಿಟ್ಟಿದ್ದರೂ ಟೀಕೆ ಬರುತ್ತಿತ್ತು. ಹೀಗೇ ಮಾಡಬೇಕು ಹಾಗೇ ಮಾಡಬೇಕು ಎಂದು ನೋಡುವ ಕಾಲ ಇದಲ್ಲ. ಸಂದರ್ಭ, ಸಮಯ ನೋಡಿಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ರಾಮನಗರದ ಜೈಲಿನಲ್ಲಿ ಆರೋಪಿಗಳಿಗೆ ಸೋಂಕು ಕಂಡು ಬಂದರೆ ಶಿಫ್ಟ್ ಮಾಡ್ತೀವಿ ಅಂತ ಮೊದಲೇ ನಾವು ಹೇಳಿದ್ದೇವು. ಅದನ್ನು ಕುಮಾರಸ್ವಾಮಿ ಅವರಿಗೂ ತಿಳಿಸಿದ್ದೇವು ಎಂದು ಬೊಮ್ಮಾಯಿ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಜನರು ಭಯ ಪಡುವ ಅಗತ್ಯ ಇಲ್ಲ
ರಾಮನಗರ ಜಿಲ್ಲೆಯ ಜನರು ಭಯ ಪಡುವ ಅಗತ್ಯತೆ ಇಲ್ಲ. ಈಗಾಗಲೇ ಸೋಂಕಿತ ಆರೋಪಿಗಳೂ ಸೇರಿದಂತೆ 121 ಆ ಕೈದಿಗಳನ್ನು ಸ್ಥಳಾಂತರ ಮಾಡಲಾಗಿದೆ. ಜೊತೆಗೆ ರಾಮನಗರ ಜೈಲಿನಲ್ಲಿದ್ದ 17 ಇತರ ವಿಚಾರಣಾಧೀನ ಖೈದಿಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಪಾದರಾಯನಪುರದಿಂದ ಬೇರೆಯವರಿಗೆ ಸೋಂಕು ಹರಡದಂತೆ ಮೊದಲೆ ಕ್ರಮ ವಹಿಸಲಾಗಿತ್ತು. ಹೀಗಾಗಿ ಯಾರು ಭಯ ಪಡಬೇಡಿ ಎಂದು ರಾಮನಗರ ಜಿಲ್ಲೆಯ ಜನರಿಗೆ ಗೃಹ ಸಚಿವ ಬೊಮ್ಮಾಯಿ ಅಭಯ ನೀಡಿದ್ದಾರೆ.
ಪಾದರಾಯನಪುರ ಕೊರೋನಾ ರೋಗಿಗಳು ಮಧ್ಯರಾತ್ರಿ ವಿಕ್ಟೋರಿಯಾಗೆ ಶಿಫ್ಟ್
ರಾಮನಗರ ಜೈಲು ಚಿಕ್ಕದು, ಹೀಗಾಗಿ ಸ್ಥಳಾಂತರ
ಪರಪ್ಪನ ಅಗ್ರಹಾರ ಜೈಲು ಅತ್ಯಂತ ದೊಡ್ಡ ಜೈಲು. ಹೀಗಾಗಿ ಚಿಕ್ಕ ಜೈಲಾದ ರಾಮನಗರ ಜೈಲಿಗೆ ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ರಾಮನಗರಕ್ಕೆ ಖೈದಿಗಳನ್ನು ವರ್ಗಾಯಿಸುವ ವೇಳೆ ವಿರೋಧ ಇತ್ತು. ಈಗ 121 ಆರೋಪಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದೇವೆ. ಅವರಲ್ಲಿ 5 ಆರೋಪಿಗಳಲ್ಲಿ ಕೊರೊನಾ ಸೋಂಕು ಕಂಡುಬಂದಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಹೇಳಿಕೆ ಕೊಟ್ಟಿದ್ದಾರೆ.
ಆರೋಪಿ ಸೋಂಕಿತರ ಸಂಪರ್ಕದಲ್ಲಿದ್ದ 19 ಮಂದಿ ಜೈಲು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡುತ್ತೇವೆ. ಸೋಂಕಿರುವ 5 ಮಂದಿಯನ್ನು ಆಸ್ಪತ್ರೆಗೆ ಶಿಫ್ಟ್ ಮಾಡುತ್ತೇವೆ, ಉಳಿದವರನ್ನು ಹಜ್ ಭವನಕ್ಕೆ ಕಳುಹಿಸುತ್ತೇವೆ ಎಂದು ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ.
ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು
ರಾಮನಗರಕ್ಕೆ ಆರೋಪಿಗಳನ್ನು ಸ್ಥಳಾಂತರಿಸಿರುವುದಕ್ಕೆ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರು ಜನರನ್ನು ಪ್ರಚೋದನೆ ಮಾಡಬಾರದು ಎಂದು ಸಚಿವ ಡಾ. ಅಶ್ವಥ್ ನಾರಾಯಣ ಹೇಳಿದ್ದಾರೆ. ಶಿವಕುಮಾರ್ ಅವರು ಇಲ್ಲಿ ತನಕ ಸಹಕಾರ ಕೊಟ್ಟಿದ್ದಾರೆ. ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು, ಪ್ರಚೋದನೆಯ ಹೇಳಿಕೆ ಕೊಡಬಾರದು. ಇನ್ನು ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಲೇವಡಿ ಮಾಡಿರುವ ಡಾ. ಅಶ್ವಥ್ ನಾರಾಯಣ ಅವರ ಮನೆ ಏನು ಕಾರಾಗೃಹನಾ? ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ನಮ್ಮ ಮನೆಯನ್ನು ಕಾರಾಗೃಹ ಮಾಡೋದಕ್ಕೆ ಆಸೆ ಇದ್ದರೆ ಅವರಿಗೆ ಮಾಡೋಣ ಬಿಡಿ ಎಂದಿದ್ದಾರೆ.
ಡಾ. ಅಶ್ವಥ್ ನಾರಾಯಣ್ ಮನೆಯಲ್ಲಿ ಇಟ್ಟುಕೊಳ್ಳಲಿ
ರಾಮನಗರಕ್ಕೆ ಪಾದರಾಯನಪುರ ವಿಚಾರಣಾಧೀನ ಖೈದಿಗಳನ್ನು ಸ್ಥಳಾಂತರ ಮಾಡಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಮನಗರ ಗ್ರೀನ್ ಝೋನ್ನಲ್ಲಿತ್ತು. ಕುಮಾರಸ್ವಾಮಿ ಮಾತಾಡಿದ್ರು, ಡಿಕೆ ಸುರೇಶ್ ಟ್ವೀಟ್ ಮಾಡಿದ್ರು. ಆದರೂ ನಮ್ಮ ಮೇಲೆ ಯಾಕೆ ಕೋಪ ಸ್ವಾಮಿ? ಡಾ. ಅಶ್ವಥ್ ನಾರಾಯಣ್ ಅವ್ರಿಗೆ ನಮ್ಮ ಮೇಲೆ ಯಾಕೆ ಕೋಪ? ಎಂದಿದ್ದಾರೆ.
ಈಗ ರಾಮನಗರಕ್ಕೆ ಯಾಕೆ ಕರೋನಾ ಪೀಡಿತರನ್ನು ಶಿಫ್ಟ್ ಮಾಡಿದ್ದೀರಿ? ನಮ್ಮ ಜಿಲ್ಲೆಯ ಜನ ರಾತ್ರಿ ಪೂರ್ತಿ ನಮಗೆ ನಿದ್ದೆ ಮಾಡಲು ಬಿಟ್ಟಿಲ್ಲ. ಖಾಲಿ ಮಾಡಿಸಿ ಖಾಲಿ ಮಾಡಿಸಿ ಅಣ್ಣ ಅಂತ ಕೇಳುತ್ತಿದ್ದಾರೆ. ಡಾ. ಅಶ್ವಥ್ ನಾರಾಯಣ್ ಮನೆಯಲ್ಲಿ ಆದ್ರೂ ಇಟ್ಟುಕೊಳ್ಳಿ, ಮಲ್ಲೇಶ್ವರಂನಲ್ಲಿ ಆದ್ರೂ ಇಟ್ಟುಕೊಳ್ಳಿ. ಅಥವಾ ಬೇರೆ ಎಲ್ಲಾದ್ರೂ ಇಡಬಹುದಿತ್ತು. ನಮ್ಮಲ್ಲಿ ಯಾಕೆ ಇಡಬೇಕು ಎಂದು ಡಿಕೆಶಿ ಅವರು ಡಾ. ಅಶ್ವಥ್ ನಾರಾಯಣ ಅವ್ರನ್ನು ಪ್ರಶ್ನೆ ಮಾಡಿದ್ದಾರೆ.