ಸಂಪುಟ ವಿಸ್ತರಣೆ ಎನ್ನುವ ಜೇನುಗೂಡು: ಈಶ್ವರಪ್ಪ ಸಿಡಿಸಲಿದ್ದಾರಾ ಬಾಂಬ್?
ಮುಖ್ಯಮಂತ್ರಿ ಆಯ್ಕೆಯ ನಂತರ ಈಗ ಸಂಪುಟ ವಿಸ್ತರಣೆಯ ಸರದಿ. ಸಮತೋಲನ ಕಾಪಾಡಿಕೊಳ್ಳುವಲ್ಲಿ ವಿಫಲರಾದರೆ ಇದು ಜೇನುಗೂಡಿಗೆ ಕಲ್ಲು ಹೊಡೆದಂತೆಯೇ ಸರಿ. ಇದರ ಸುಳಿವನ್ನು ನೀಡಿದ್ದಾರೆ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ.
ಸಂಪುಟ ವಿಸ್ತರಣೆಯ ವಿಚಾರದಲ್ಲಿ ಹೈಕಮಾಂಡ್ ಜೊತೆ ಚರ್ಚಿಸಲು ಸಿಎಂ ಬಸವರಾಜ ಬೊಮ್ಮಾಯಿ ಒಂದೆರಡು ದಿನಗಳಲ್ಲಿ ನವದೆಹಲಿಗೆ ಪ್ರಯಾಣಿಸಲಿದ್ದಾರೆ. ವರಿಷ್ಠರ ಏನು ಸಂದೇಶ ಹೊತ್ತು ತರಲಿದ್ದಾರೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
ಹಲವು ಚರ್ಚೆಗೆ ಕಾರಣವಾದ ಕೆ. ಎಸ್. ಈಶ್ವರಪ್ಪ ಹೇಳಿಕೆ
ಸಿಎಂ ಆಯ್ಕೆಯ ವಿಚಾರದಂತೆ, ಸಂಪುಟ ವಿಸ್ತರಣೆಯ ವಿಚಾರದಲ್ಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈಮೇಲಾಗುತ್ತದೋ ಅಥವಾ ಹೈಕಮಾಂಡ್ ನುಡಿದಂತೆ ನಡೆಯುತ್ತದೆಯೋ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರಲ್ಲ ಎಂದ ಶೆಟ್ಟರ್!
ಇನ್ನು, ಯಡಿಯೂರಪ್ಪನವರ ಸಂಪುಟದಲ್ಲಿದ್ದ ಹಿರಿಯ ಮುಖಂಡರ ಭವಿಷ್ಯ ಮತ್ತು ಅವರ ಮುಂದಿನ ನಡೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅದರಲ್ಲಿ ಪ್ರಮುಖವಾಗಿ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪನವರದ್ದು.
ಬೊಮ್ಮಾಯಿ ಸಂಪುಟದಲ್ಲಿ ನಾನು ಭಾಗಿಯಾಗುವುದಿಲ್ಲ, ಶೆಟ್ಟರ್
ಈಗಾಗಲೇ ಬೊಮ್ಮಾಯಿ ಸಂಪುಟದಲ್ಲಿ ನಾನು ಭಾಗಿಯಾಗುವುದಿಲ್ಲ ಎಂದು ಶೆಟ್ಟರ್ ಹೇಳಿದ್ದಾರೆ. ಅವರ ಬಳಿ ಚರ್ಚಿಸುವುದಾಗಿ ನೂತನ ಸಿಎಂ ಮತ್ತು ನಳಿನ್ ಕಟೀಲ್ ಹೇಳಿದ್ದಾರೆ. ಆದರೆ, ಈಶ್ವರಪ್ಪನವರ ನಡೆ ನೋಡಿದರೆ, ಇವರು ಶೆಟ್ಟರ್ ದಾರಿಯಲ್ಲೇ ಸಾಗುವಂತೆ ಕಾಣಿಸುತ್ತಿಲ್ಲ.
ಈಶ್ವರಪ್ಪನವರ ಪರ ಅವರ ಸಮುದಾಯದ ಮಠಾಧಿಪತಿಗಳ ಲಾಬಿ
ಕಟೀಲ್ ಅವರದ್ದು ಎಂದು ಹೇಳಲಾಗುತ್ತಿದ್ದ ಆಡಿಯೋದಲ್ಲಿ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪನವರನ್ನು ಹೊಸ ಸಂಪುಟಕ್ಕೆ ಸೇರಿಸುವುದಿಲ್ಲ ಎಂದು ಅದರಲ್ಲಿ ಹೇಳಲಾಗಿತ್ತು. ಯಡಿಯೂರಪ್ಪ ರೀತಿಯಲ್ಲೇ, ಈಶ್ವರಪ್ಪನವರ ಪರ ಅವರ ಸಮುದಾಯದ ಮಠಾಧಿಪತಿಗಳು ಈಗಾಗಲೇ ಲಾಬಿ ಆರಂಭಿಸಿದ್ದಾರೆ.
ಮುಂದಿನ ಚುನಾವಣೆಯ ಹೊತ್ತಿಗೆ ಈಶ್ವರಪ್ಪನವರಿಗೆ ಟಿಕೆಟ್ ಸಿಗುವುದೂ ಅನುಮಾನ
ಈಶ್ವರಪ್ಪನವರಿಗೆ ಉಪ ಮುಖ್ಯಮಂತ್ರಿ ಹುದ್ದೆ ಕೊಡದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ಬಿಜೆಪಿಯಲ್ಲಿ 75ವರ್ಷದ ಮೇಲಿನವರನ್ನು ಸಕ್ರಿಯ ರಾಜಕಾರಣದಿಂದ ದೂರವಿಡುವ ಕ್ರಮ ಇರುವುದರಿಂದ ಮುಂದಿನ ಚುನಾವಣೆಯ ಹೊತ್ತಿಗೆ ಈಶ್ವರಪ್ಪನವರಿಗೆ ಟಿಕೆಟ್ ಸಿಗುವುದೂ ಅನುಮಾನ.
Recommended Video
ಸಂಪುಟ ವಿಸ್ತರಣೆ ಎನ್ನುವ ಜೇನುಗೂಡು: ಈಶ್ವರಪ್ಪ ಸಿಡಿಸಲಿದ್ದಾರಾ ಬಾಂಬ್?
ಹಾಗಾಗಿ, ಪ್ರಸಕ್ತ ಅವಧಿ ಅವರಿಗೆ ಮುಖ್ಯವಾಗಲಿದೆ. ಇವೆಲ್ಲದರ ನಡುವೆ, "ಇನ್ನೂ ಪಕ್ಷದಲ್ಲಿ ಬದಲಾವಣೆಗಳು ಆಗುವುದಿದೆ" ಎಂದು ಈಶ್ವರಪ್ಪ ಹೇಳಿರುವುದು ಗಮನಿಸಬೇಕಾದ ವಿಚಾರ. ಇದರಿಂದಾಗಿ, ಸಂಪುಟ ವಿಸ್ತರಣೆ ಕಸರತ್ತು ಬೊಮ್ಮಾಯಿ ಮತ್ತು ಬಿಜೆಪಿ ವರಿಷ್ಠರಿಗೆ ಬಿಸಿ ತುಪ್ಪವಾಗುವ ಸಾಧ್ಯತೆ ಇಲ್ಲದಿಲ್ಲ.