ಚುನಾವಣೆ 'ಕಟ್ಟೆ'ಯಿಂದಿಳಿಯಲು ರವಿಗೆ ಅಭ್ಯಂತರವಿಲ್ಲ
Recommended Video
ಬೆಂಗಳೂರು, ಜನವರಿ 22 : 'ಕಟ್ಟೆ ಸತ್ಯನಾರಾಯಣ ಅವರು ಬಸವನಗುಡಿ ಕ್ಷೇತ್ರದ ಟಿಕೆಟ್ ಕೇಳಿದ್ದಾರೆ. ಅದು ತಪ್ಪಲ್ಲ. ರಾಜಕೀಯದಲ್ಲಿರುವ ಪ್ರತಿಯೊಬ್ಬರಿಗೂ ಆಸೆ ಇರುತ್ತದೆ, ಅಂತಿಮ ನಿರ್ಧಾರವನ್ನು ಪಕ್ಷ ತೆಗೆದುಕೊಳ್ಳಬೇಕು' ಎಂದು ಬಸವನಗುಡಿ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಹೇಳಿದರು.
ಬೆಂಗಳೂರಿನ ಬಸವನಗುಡಿ ಕ್ಷೇತ್ರದಿಂದ ಎಲ್.ಎ.ರವಿ ಸುಬ್ರಮಣ್ಯ ಅವರು 2008, 2013ರ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯೂ ಅವರಿಗೆ ಟಿಕೆಟ್ ನಿರಾಕರಿಸಲು ಬಿಜೆಪಿಯ ಬಳಿ ಕಾರಣಗಳು ಇಲ್ಲ. ಆದರೆ, ಟಿಕೆಟ್ಗಾಗಿ ಬಿಜೆಪಿ ನಾಯಕರೊಬ್ಬರು ಬೇಡಿಕೆ ಇಟ್ಟಿದ್ದಾರೆ.
ಸಂದರ್ಶನ : ಟಿಕೆಟ್ ಬೇಕೇಬೇಕು ಎಂದು ಪಟ್ಟು ಹಿಡಿದಿರುವ ಕಟ್ಟೆ ಸತ್ಯ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಮತ್ತು ಬಸವನಗುಡಿ ಕ್ಷೇತ್ರದ ಬಿಬಿಎಂಪಿ ಸದಸ್ಯ ಕಟ್ಟೆ ಸತ್ಯನಾರಾಯಣ ಅವರು ಬಸವನಗುಡಿ ವಿಧಾನಸಭಾ ಕ್ಷೇತ್ರದ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಬಹಿರಂಗವಾಗಿ ಈ ಕುರಿತು ಹೇಳಿಕೆ ನೀಡಿದ್ದಾರೆ.
ಬಸವನಗುಡಿ ಕ್ಷೇತ್ರದ ಟಿಕೆಟ್ಗೆ ಬೇಡಿಕೆ ಇಟ್ಟ ಕಟ್ಟೆ ಸತ್ಯ
ಒನ್ ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಶಾಸಕ ಎಲ್.ಎ.ರವಿ ಸುಬ್ರಮಣ್ಯ ಅವರು ಕಟ್ಟೆ ಸತ್ಯನಾರಾಯಣ ಅವರ ಬೇಡಿಕೆ, ಕ್ಷೇತ್ರದ ಅಭಿವೃದ್ಧಿ, ಸಾಮಾಜಿಕ ಜಾಲತಾಣಗಳ ಬಳಕೆ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ವಿವರಗಳು ಇಲ್ಲಿವೆ...
ಬಸವನಗುಡಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು ಏನು?
ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಮೂಲ ಸೌಕರ್ಯಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ. 2013ರ ಚುನಾವಣೆಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕ್ಷೇತ್ರದ ಪ್ರಣಾಳಿಕೆ ರಚನೆ ಮಾಡಿ ಅದರ ಅನ್ವಯ ಕೆಲಸ ಮಾಡುತ್ತಿದ್ದೇವೆ.
ಈಗ ಬೆಂಗಳೂರು ಕ್ರೈಂ ಸಿಟಿ. ಆದರೆ, ಬಸವನಗುಡಿ ಕ್ಷೇತ್ರದಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾಗಿವೆ. ಪೊಲೀಸ್ ಇಲಾಖೆಯೇ ಇದನ್ನು ಒಪ್ಪಿಕೊಂಡಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಒಂದು ವಿಧಾನಸಭಾ ಕ್ಷೇತ್ರದಲ್ಲಿ 500 ಕ್ಯಾಮರಾಗಳನ್ನು ಅಳವಡಿಸಿ, ಕ್ಷೇತ್ರದ ಆಗು-ಹೋಗುಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಈ ಕ್ಯಾಮರಾಗಳನ್ನು ಪೊಲೀಸ್ ಠಾಣೆಗೆ ಸಂಪರ್ಕಿಸಲಾಗಿದೆ. ಇದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಾಯಕವಾಗಿದೆ. ಮಹಿಳೆಯರು, ಹಿರಿಯ ನಾಗರಿಕರ ಸುರಕ್ಷತೆಗೆ ಅನುಕೂಲವಾಗಿದೆ. ಪೊಲೀಸ್ ಇಲಾಖೆ ಇದನ್ನು ಮಾದರಿಯಾಗಿ ತೆಗೆದುಕೊಂಡು ಬೆಂಗಳೂರಿನ ಬೇರೆ ಕ್ಷೇತ್ರಗಳಲ್ಲಿಯೂ ಜಾರಿಗೆ ತರಲು ಪ್ರಯತ್ನ ನಡೆಸಿದೆ.
ಕುಡಿಯುವ ನೀರಿನ ಸೋರಿಕೆ ತಡೆಗಟ್ಟಲು, ರಾಜಾ ಕಾಲುವೆಯಲ್ಲಿ ಮಳೆ ನೀರು ಮಾತ್ರ ಹರಿದು ಹೋಗಲು, ವಿದ್ಯುತ್ ಉಳಿತಾಯ ಮಾಡಲು ಸಾಕಷ್ಟು ವ್ಯವಸ್ಥೆ ಮಾಡಿದ್ದೇವೆ. ಕ್ಷೇತ್ರದಲ್ಲಿ ಪಾರ್ಕ್, ಬಸ್ ನಿಲ್ದಾಣ ಅಭಿವೃದ್ಧಿ ಮಾಡಿದ್ದೇವೆ, ಮಾಡುತ್ತಿದ್ದೇವೆ.
ಕ್ಷೇತ್ರದ ವ್ಯಾಪ್ತಿಯಲ್ಲಿರುವ 11 ಕೆವಿ ವಿದ್ಯುತ್ ತಂತಿಗಳನ್ನು ಅಂಡರ್ ಗ್ರೌಂಡ್ ಮಾಡಿದ್ದೇವೆ. ಇದರಿಂದಾಗಿ ಮರ ಬಿತ್ತು, ವಿದ್ಯುತ್ ಸಂಪರ್ಕ ಕಡಿತವಾಯಿತು ಮುಂತಾದ ಸಮಸ್ಯೆಗಳು ಆಗುವುದಿಲ್ಲ. ಕೆಲವೇ ದಿನಗಳಲ್ಲಿ ನಮ್ಮ ಕ್ಷೇತ್ರದ ಎಲ್ಲಾ 11 ಕೆವಿ ತಂತಿಗಳನ್ನು ಅಂಡರ್ ಗ್ರೌಂಡ್ ಮಾಡಲಾಗುತ್ತದೆ.
ಬಸವನಗುಡಿ ಪಾರ್ಕಿಂಗ್ ಸಮಸ್ಯೆಗೆ ಪರಿಹಾರವೇನು?
ನಮ್ಮ ಕ್ಷೇತ್ರದಲ್ಲಿ ರಸ್ತೆಗಳು ತುಂಬಾ ಕಿರಿದಾಗಿವೆ. 15 ಅಡಿ ರಸ್ತೆಯೇ ನಮಗೆ ರಾಷ್ಟ್ರೀಯ ಹೆದ್ದಾರಿಯಾಗಿದೆ. ಹಲವು ವಾರ್ಡ್ ಗಳಲ್ಲಿ ಚರಂಡಿ ಮೇಲೆ ಚಪ್ಪಡಿ ಹಾಕಿ ಪಾರ್ಕಿಂಗ್ ಮಾಡಲು ಜಾಗ ಮಾಡಿಕೊಟ್ಟಿದ್ದೇವೆ.
ಹಿಂದೆ ನೆಟ್ಟಕಲ್ಲಪ್ಪ ವೃತ್ತದಲ್ಲಿನ ಆಟದ ಮೈದಾನವನ್ನು ವಶಕ್ಕೆ ಪಡೆದು, ಅದರ ಕೆಳಗೆ 2 ಮಹಡಿ ಪಾರ್ಕಿಂಗ್ ಲಾಟ್ ನಿರ್ಮಿಸುವ ಚಿಂತನೆ ಇತ್ತು. ಆದರೆ, ಸರ್ಕಾರ ಬದಲಾಯಿತು. ಜಾಗದ ಕೊರತೆ ಸಾಕಷ್ಟಿದೆ. ಜಾಗ ಸಿಕ್ಕಿದ ಸ್ಥಳದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮಾಡುವ ಆಲೋಚನೆ ನಮ್ಮ ಮುಂದಿದೆ.
ಬಸವನಗುಡಿ ಕ್ಷೇತ್ರ ಮಾರುಕಟ್ಟೆಯಾಗುತ್ತಿದೆ, ಕಸ ವಿಲೇವಾರಿ?
ಕಸ ವಿಲೇವಾರಿಗೆ ಸಮಸ್ಯೆಯಾಗುತ್ತದೆ. ಮುಂದೆ ಹಬ್ಬಗಳ ಸಂದರ್ಭದಲ್ಲಿ ರಸ್ತೆಯಲ್ಲಿ ಮಾರಾಟ ಮಾಡುವ ಬದಲು, ಮೈದಾನದಲ್ಲಿ ಜಾಗದ ವ್ಯವಸ್ಥೆ ಮಾಡಿಕೊಡುವ ಕುರಿತು ಚಿಂತನೆ ನಡೆದಿದೆ.
ಆಗ ವ್ಯಾಪಾರಿಗಳು ತೆರಳಿದ ಬಳಿಕ ಕಸ ಸಂಗ್ರಹಣೆ ಮಾಡಿ, ವಿಲೇವಾರಿ ಮಾಡಲು ಅನುಕೂಲವಾಗುತ್ತದೆ. ಆದರೆ, ಬೇರೆ-ಬೇರೆ ಊರಿನ ಜನರು, ಬೇರೆ-ಬೇರೆ ಸಮಯಕ್ಕೆ ವ್ಯಾಪಾರಕ್ಕೆ ಬರುವುದದಿಂದ ಇದು ಇನ್ನೂ ಜಾರಿಗೆ ಬಂದಿಲ್ಲ. ಕಸವನ್ನು ಕಾಂಪೋಸ್ಟ್ ಯುನಿಟ್ ಗೆ ಸಾಗಿಸಲಾಗುತ್ತಿದೆ.
ಈ ಬಾರಿಯೂ ಬಸವನಗುಡಿ ಕ್ಷೇತ್ರದ ಪ್ರಣಾಳಿಕೆ ರಚನೆ ಯಾಗಲಿದೆಯೇ?
ಇಡೀ ರಾಜ್ಯದಲ್ಲಿಯೇ ಮೊದಲನೇ ಬಾರಿಗೆ ಬಸವನಗುಡಿಯಲ್ಲಿ ಕ್ಷೇತ್ರದ ಪ್ರಣಾಳಿಕೆಯನ್ನು ಕಳೆದ ಚುನಾವಣೆ ಸಮಯದಲ್ಲಿ ಮಾಡಿದೆವು. ಈ ಬಾರಿಯೂ ಅಭಿಪ್ರಾಯ ಸಂಗ್ರಹಣೆ ನಡೆಯುತ್ತದೆ. ನಮ್ಮ ಬೆಂಗಳೂರು, ನಮ್ಮ ಕರ್ನಾಟಕದ ಅಭಿವೃದ್ಧಿ ಎಂದೆಲ್ಲ ಸೇರಿ ಸುಮಾರು 680 ಸಲಹೆ ಬಂದಿದೆ. ಅವುಗಳನ್ನು ಕ್ರೋಢಿಕರಣ ಮಾಡುವ ಕೆಲಸ ಸಾಗಿದೆ. ನಾವು ಜನರ ಪ್ರತಿನಿಧಿಗಳು ಅವರಿಗೆ ಏನು ಬೇಕು? ಎಂಬುದನ್ನು ಚರ್ಚಿಸಿ ನಾವು ಕೆಲಸ ಮಾಡುತ್ತೇವೆ.
ಏನಿದು ಬಸವನಗುಡಿ ಮಾಡೆಲ್ ಶಾಲೆ ಯೋಜನೆ?
ಒಂದು ಸರ್ಕಾರಿ ಶಾಲೆ ಹೇಗಿರಬೇಕು? ಎಂಬುದನ್ನು ನಾವು ಮಾಡೆಲ್ ಶಾಲೆ ಮೂಲಕ ಮಾಡಿದ್ದೇವೆ. 15 ದಿನದಲ್ಲಿ ಇದು ಲೋಕಾರ್ಪಣೆಯಾಗಲಿದೆ. ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದ ವ್ಯವಸ್ಥೆ ಈ ಶಾಲೆಯಲ್ಲಿದೆ.
ಸ್ಮಾರ್ಟ್ ಬೋರ್ಡ್, ಕಂಪ್ಯೂಟರ್ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪಿಇಎಸ್ ಕಾಲೇಜಿನಲ್ಲಿನ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಮಾದರಿಯ ಬೆಂಚ್ ಗಳ ವ್ಯವಸ್ಥೆ ಮಾಡಲಾಗಿದೆ. ಬಿಎಂಎಸ್, ಪಿಇಎಸ್ ಕಾಲೇಜಿನ ವಿದ್ಯಾರ್ಥಿಗಳು ಈ ಶಾಲೆಯ ಮಕ್ಕಳಿಗೆ ಇಂಗ್ಲಿಷ್, ಕಂಪ್ಯೂಟರ್ ಶಿಕ್ಷಣ ಹೇಳಿಕೊಡುತ್ತಾರೆ. ದಾನಿಗಳ ಜೊತೆ ಮಾತನಾಡಿ ವಿದ್ಯಾರ್ಥಿಗಳು ಶಾಲೆಗೆ ಬರಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ಕಟ್ಟೆ ಸತ್ಯನಾರಾಯಣ ಕ್ಷೇತ್ರದ ಟಿಕೆಟ್ ಕೇಳಿದ್ದಾರೆ, ಏನು ಹೇಳುವಿರಿ?
ರಾಜಕೀಯದಲ್ಲಿರುವ ಪ್ರತಿಯೊಬ್ಬರಿಗೂ ಆಸೆ ಇರುತ್ತದೆ, ಅದು ತಪ್ಪಲ್ಲ. ಅಂತಿಮ ನಿರ್ಧಾರವನ್ನು ಪಕ್ಷ ತೆಗೆದುಕೊಳ್ಳಬೇಕು. ನಾವೆಲ್ಲ ಒಂದು ತಂಡವಾಗಿ 'ಟೀಮ್ ಬಸನವಗುಡಿ' ಎಂದು ಕೆಲಸ ಮಾಡುತ್ತಿದ್ದೇವೆ. ಹಿಂದೆ ನನಗೆ ಟಿಕೆಟ್ ಸಿಕ್ಕಿದಾಗ ಅನೇಕರು ಕೆಲಸ ಮಾಡಿದ್ದಾರೆ. ಬೇರೆಯವರಿಗೆ ಅವಕಾಶ ಸಿಕ್ಕಿದರೆ ನಾನು ಕೆಲಸ ಮಾಡುತ್ತೇನೆ. ಪಕ್ಷದ ನಿರ್ದೇಶನದಂತೆ ನಾವು ಕಾರ್ಯ ನಿರ್ಹಹಿಸುತ್ತೇವೆ. ಪಕ್ಷದ ನಿರ್ಧಾರಕ್ಕೆ ನಾವು ಬದ್ಧರು.
ರಮ್ಯಾ, ಸಿದ್ದರಾಮಯ್ಯ ಯಾರು ಬಂದರೂ ಸ್ವಾಗತ
ರಮ್ಯಾ
ಅವರು
ಬಸವನಗುಡಿ
ಕ್ಷೇತ್ರದಿಂದ
ಚುನಾವಣೆಗೆ
ಸ್ಪರ್ಧಿಸುವುದಾದರೆ
ಬಹಳ
ಸಂತೋಷ.
ಸಿನಿಮಾದಲ್ಲಿ,
ಟಿವಿಯಲ್ಲಿ,
ಸಾಮಾಜಿಕ
ಜಾಲತಾಣದಲ್ಲಿ
ಅವರು
ಕಾಣಿಸಿಕೊಳ್ಳುತ್ತಾರೆ.
ಕ್ಷೇತ್ರದ
ಜನರು
ಬುದ್ಧಿವಂತರು,
ಪ್ರಜ್ಞಾವಂತರು.
ಪ್ರತಿದಿನ
ಬೆಳಗ್ಗೆ
ಮನೆ
ಬಾಗಿಲಲ್ಲಿ
ಸಿಗುವ
ಪ್ರತಿನಿಧಿಗಳನ್ನು
ಅವರು
ಆಯ್ಕೆ
ಮಾಡುತ್ತಾರೆ.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ಕ್ಷೇತ್ರಕ್ಕೆ
ಬಂದರೂ
ಸ್ವಾಗತ.
ಯಾರು
ಬಂದರೂ
ಬಿಜೆಪಿ
ಅಭ್ಯರ್ಥಿಗಳು
ಸ್ಪರ್ಧೆ
ಮಾಡಬೇಕು.
ಯಾರು
ಗೆಲ್ಲಬೇಕು?
ಎಂಬುದನ್ನು
ಜನರು
ತೀರ್ಮಾನ
ಮಾಡುತ್ತಾರೆ.
ಬಿಜೆಪಿಗೆ ಜನರು ಏಕೆ ಮತ ನೀಡಬೇಕು?
ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತದ ಮಾದರಿ ಒಂದೇ ಆಗಬೇಕು. ಯುವ ಜನರ, ಮಹಿಳೆಯರು, ಹಿರಿಯ ನಾಗರಿಕರ ಪರವಾದ ಸರ್ಕಾರ ಬೇಕು ಎಂದು ಜನರು ತೀರ್ಮಾನಿಸಿದ್ದಾರೆ. ಅಭಿವೃದ್ಧಿಯ ವೇಗ ಹೆಚ್ಚಾಗಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದೇ ಆಗಬೇಕು ಎಂಬುದು ನಮ್ಮ ಭಾವನೆ. ಜನರ ಮನಸ್ಸಿನಲ್ಲಿಯೂ ಅದೇ ಇದೆ. ಪಕ್ಷವನ್ನು ಬೆಂಬಲಿಸುತ್ತಾರೆ.
ಸಾಮಾಜಿಕ ಜಾಲ ತಾಣವನ್ನು ಹೇಗೆ ಬಳಸುತ್ತಿದ್ದೀರಿ?
ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಡಿಜಿಟಲ್ ಇಂಡಿಯಾ. ಇಂದು ಹೂವು ಮಾರುವವರು ಪೇಟಿಎಂ ಮೂಲಕ ಹಣ ಕೊಡಿ ಎನ್ನುವ ಮಟ್ಟಿಗೆ ಡಿಜಿಟಲ್ ವಹಿವಾಟು ಸಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯವಾಗಿದ್ದೇವೆ. ಅದಕ್ಕಾಗಿ ಪ್ರತ್ಯೇಕ ತಂಡ ರಚನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಕ್ರಿಯವಾಗಿ ಜನರನ್ನು ತಲುಪಲಿದ್ದೇವೆ.
ನಿಮ್ಮ ಕನಸಿನ ಬಸವನಗುಡಿಗೆ ಏನು ಬೇಕು?
· ಕ್ಷೇತ್ರದಲ್ಲಿ ಸರ್ಕಾರಿ ಪಿಯುಸಿ ಕಾಲೇಜು ಇಲ್ಲ. ದಾನಿಗಳ ಮೂಲಕ ಕಟ್ಟಡ ನಿರ್ಮಾಣ ಮಾಡಿಸಲು ಚಿಂತನೆ ನಡೆದಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳಾ ಕಾಲೇಜು. ಪಿಯುಸಿ ಕಾಲೇಜು ತರುವ ಆಲೋಚನೆ ಇದೆ.
· ಡಯಾಲಿಸಿಸ್ ಕೇಂದ್ರ ಆಗಬೇಕು ಎಂಬ ಕನಸಿತ್ತು. ಎನ್.ಆರ್.ಕಾಲೋನಿಯಲ್ಲಿ ಒಂದು ಆರಂಭವಾಗಿದೆ. ಇನ್ನೊಂದು ಶ್ರೀಘ್ರದಲ್ಲೇ ಆಗಲಿದೆ. ಕಡುಬಡವರಿಗೆ 250 ರೂ.ಗಳಲ್ಲಿ ಈ ಸೇವೆ ಒದಗಿಸುವ ಬಗ್ಗೆ ಚಿಂತನೆ ಇದೆ. ಇದಕ್ಕಾಗಿ ಸಂಘ-ಸಂಸ್ಥೆಗಳ ಜೊತೆಗೆ ಮಾತುಕತೆ ನಡೆದಿದೆ.
* ಶ್ರೀನಗರ ಬಸ್ ನಿಲ್ದಾಣ ಅಭಿವೃದ್ಧಿ ಮಾಡುವ ಯೋಜನೆ ಸಿದ್ಧವಾಗಿದೆ. ಶ್ರೀನಗರದಲ್ಲಿ ಕೌಶಲ್ಯ ತರಬೇತಿ ಕೇಂದ್ರ ಸ್ಥಾಪನೆಯಾಗುತ್ತಿದೆ. ಬಸವನಗುಡಿಯಲ್ಲಿ ಈ-ಗ್ರಂಥಾಲಯ ನಿರ್ಮಾಣವಾಗುತ್ತಿದೆ, ಕೇಂದ್ರ ಗ್ರಂಥಾಲಯದ ಕಟ್ಟಡದ ನಿರ್ಮಾಣವೂ ಆಗುತ್ತಿದೆ.