ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಪರಿಚಯ
ಬೆಂಗಳೂರು, ಮಾರ್ಚ್ 14 : ಕೂಡಲಸಂಗಮ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಅವರು ಲಿಂಗೈಕ್ಯರಾಗಿದ್ದಾರೆ. ಕೂಡಲಸಂಗಮದಲ್ಲಿ ಶನಿವಾರ ಬೆಳಗ್ಗೆ ಮಾತೆ ಮಹಾದೇವಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ (74) ಗುರುವಾರ ಸಂಜೆ 4.45ರ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾದರು. ಉಸಿರಾಟ ಸಮಸ್ಯೆ, ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.
ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಲಿಂಗೈಕ್ಯ
ಬೆಂಗಳೂರಿನ ರಾಜಾಜಿನಗರದ ಬಸವ ಮಂಟಪದಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆಯ ತನಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಕೂಡಲಸಂಗಮಕ್ಕೆ ಪಾರ್ಥೀವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತದೆ.
ಮಾತೆ ಮಹಾದೇವಿ ವಿರುದ್ಧ ಪ್ರತಿಭಟನೆ
ಪ್ರಥಮ ಮಹಿಳಾ ಜಗದ್ಗುರು ಮಾತೆ ಮಹಾದೇವಿ ಅವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. 'ಬಸವ ತತ್ವ ಪ್ರಚಾರಕ್ಕೆ ತನ್ನ ಬದುಕನ್ನೇ ಮುಡಿಪಾಗಿಟ್ಟಿದ್ದ, ನೇರ ನಡೆ-ನುಡಿ ಮತ್ತು ಜನಪರ ನಿಲುವಿನ ಶರಣೆ ಇನ್ನಷ್ಟು ಕಾಲ ಮಾರ್ಗದರ್ಶಕರಾಗಿ ನಮ್ಮ ಜತೆ ಇರಬೇಕಿತ್ತು' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
1946 ರಿಂದ 2019
ಮಾರ್ಚ್ 13, 1946ರಂದು ಚಿತ್ರದುರ್ಗ ಜಿಲ್ಲೆಯ ಸಾಸಲಹಟ್ಟಿಯಲ್ಲಿ ಮಾತೆ ಮಹಾದೇವಿ ಅವರು ಜನಿಸಿದ್ದರು. ತಂದೆ ಬಸಪ್ಪ, ತಾಯಿ ಗಂಗಮ್ಮ. ಮಾತೆ ಮಹಾದೇವಿ ಅವರ ಬಾಲ್ಯದ ಹೆಸರು ರತ್ನಾ. 19ನೇ ವಯಸ್ಸಿನಲ್ಲಿಯೇ ಆಧ್ಯಾತ್ಮದತ್ತ ಒಲವು ತೋರಿಸಿದ್ದರು.ಬಿಎಸ್ಸಿ, ಎಂ.ಎ, ತತ್ವಶಾಸ್ತ್ರದಲ್ಲಿ ಪದವಿ ಪಡೆಯುವ ಮೂಲಕ ಅಗಾಧ ಜ್ಞಾನ ಸಂಪಾದಿಸಿದ್ದರು.
ಸನ್ಯಾಸ ದೀಕ್ಷೆ ಸ್ವೀಕಾರ
ಲಿಗಾನಂದ ಶ್ರೀಗಳಿಂದ ಸನ್ಯಾಸ ಲಿಂಗ ದೀಕ್ಷೆಯನ್ನು ಪಡೆದರು. 1970ರಲ್ಲಿ ಮಹಿಳಾ ಜಗದ್ಗುರು ಪಟ್ಟ ಸ್ವೀಕರಿಸಿದರು. ಗುರುಗಳಾದ ಲಿಂಗಾನಂದರ ಅಣತಿಯಂತೆ ಬೆಳೆದು 1987ರಲ್ಲಿ ಬಸವಧರ್ಮ ಪೀಠ ಸಂಸ್ಥೆ ನೋಂದಾಯಿಸಿದರು. 1992ರಲ್ಲಿ ಬಸವಧರ್ಮ ಪೀಠ ಸ್ಥಾಪನೆ ಮಾಡಿದರು. ಕರ್ನಾಟಕ ಮಾತ್ರವಲ್ಲದೇ ದೆಹಲಿ, ಮಹಾರಾಷ್ಟ್ರ, ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಬಸವಧರ್ಮ ಪಿಠ ಸ್ಥಾಪಿಸಿದರು. ಈ ಮೂಲಕ ಹೊರ ರಾಜ್ಯದಲ್ಲಿಯೂ ಬಸವ ಧರ್ಮದ ಪ್ರಚಾರ ನಡೆಸಿದರು.
ಶರಣ ಸಮ್ಮೇಳನ ಆಯೋಜನೆ
ಮಾತೆ ಮಹಾದೇವಿ ಅವರು ಉತ್ತಮ ವಾಗ್ಮಿ ಮತ್ತು ಸಾಹಿತಿಗಳಾಗಿದ್ದರು. ಸಚ್ಚಿದಾನಂದ ಎಂಬ ಅಂಕಿತನಾಮದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದರು. ಬಾಲ್ಯದಲ್ಲಿಯೇ ಸುಮಾರು 500ಕ್ಕು ಹೆಚ್ಚು ಪುಸ್ತಕಗಳನ್ನ ಓದಿ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಕೂಡಲಸಂಗಮದಲ್ಲಿ ಹಾಗೂ ಬಸವ ಕಲ್ಯಾಣದಲ್ಲಿ ಶರಣ ಧರ್ಮ ಪ್ರಚಾರಕ್ಕಾಗಿ ಶರಣ ಸಮ್ಮೇಳನ ಆರಂಭಿಸಿದರು.
ಹಲವು ಪುಸ್ತಕಗಳ ರಚನೆ
ತಮ್ಮನ್ನು ತಾವು ತ್ಯಾಗ ಜೀವನಕ್ಕೆ ಅರ್ಪಿಸಿ ಕೊಂಡ ಮಾತೆ ಮಹಾದೇವಿ ಅವರು ಬಸವಾದಿ ಶರಣರ ತತ್ವಗಳನ್ನ ಜಗತ್ತಿಗೆ ತಿಳಿಸುವ ಉದ್ದೇಶದಿಂದ ಋಷಿಕೇಶಕ್ಕೆ ತೆರಳಿದರು. 'ಗಂಗಾ ತರಂಗ' ಎಂಬ ಪುಸ್ತಕ ರಚನೆ ಮಾಡಿದರು. 'ಬಸವ ತತ್ವ ದರ್ಶನ' ಎಂಬ ಗ್ರಂಥವನ್ನು ಕೇವಲ 3 ತಿಂಗಳಲ್ಲಿ ರಚಿಸಿದರು. ಅದನ್ನು ಗುರು ಲಿಂಗಾನಂದರಿಗೆ ಮತ್ತು ಬಸವ ಭಕ್ತರಿಗೆ ಅರ್ಪಿಸಿದರು.
ಧಾರವಾಡದಲ್ಲಿ ಆಶ್ರಮ ಸ್ಥಾಪನೆ
ಧಾರವಾಡದಲ್ಲಿ ಅಕ್ಕಮಹಾದೇವಿ ಆಶ್ರಮ ಸ್ಥಾಪಿಸಿದರು. ಬಸವ ತತ್ವ ಪ್ರಚಾರಕ್ಕೆ ಅನುಕೂಲವಾಗಲೆಂದು 'ಕಲ್ಯಾಣ ಕಿರಣ' ಮಾಸ ಪತ್ರಿಕೆ ಬಿಡುಗಡೆ ಮಾಡಿದರು. ಐತಿಹಾಸಿಕ ಅಕ್ಕ ಮಹಾದೇವಿ ಅನುಭವ ಪೀಠವೆಂಬ ವಿಶ್ವದ ಮೊಟ್ಟಮೊದಲ ಮಹಿಳಾ ಜಗದ್ಗುರು ಪೀಠ ಸ್ಥಾಪನೆ ಮಾಡಿ, ಅದರ ಪ್ರಥಮ ಪಿಠಾಧ್ಯಕ್ಷರಾದರು.
ಹಲವು ಪ್ರಶಸ್ತಿಗಳು ಲಭಿಸಿವೆ
ಮಾತೆ ಮಹಾದೇವಿ ಅವರ ಸಾಮಾಜಿಕ ಕಾದಂಬರಿ 'ಹೆಪ್ಪಿಟ್ಟ ಹಾಲು' ಪುಸ್ತಕಕ್ಕೆ ರಾಜ್ಯ ಸಾಹಿತ್ಯ ಆಕಾಡಮಿ ಪುರಸ್ಕಾರ ಸಿಕ್ಕಿದೆ. 4/5/1975 ರಂದು ಬೆಂಗಳೂರಿನ ರಾಜಾಜಿನಗರದಲ್ಲಿ ಬಸವ ಮಂಟಪ ಸ್ಥಾಪನೆ ಮಾಡಿದರು. 1976 ಬಸವ ಧರ್ಮ ಪ್ರಚಾರಕ್ಕೆ ಇಂಗ್ಲೆಂಡ್ ಪ್ರವಾಸ ಕೈಗೊಂಡರು. 1977 ವಿಶ್ವ ಕಲ್ಯಾಣ ಮಿಷನ್ (ಟ್ರಸ್ಟ್ )ಸ್ಥಾಪಿಸಿದರು. 1978 ಕುಂಬಳಗೋಡಿನಲ್ಲಿ ಬಸವ ಗಂಗೋತ್ರಿ ಆಶ್ರಮ ನಿರ್ಮಾಣ ಮಾಡಿದರು.
ಯೋಗಪೀಠ ಸ್ಥಾಪನೆ
1980 ಬಸವ ಧರ್ಮ ಪ್ರಚಾರಕ್ಕೆ ಅಮೆರಿಕ ಪ್ರವಾಸ ಕೈಗೊಂಡರು. 1983 ಗುರು ಬಸವಣ್ಣನವರ ಜೀವನ ಚರಿತ್ರೆ ಆಧರಿಸಿ 'ಕ್ರಾಂತಿ ಯೋಗಿ ಬಸವಣ್ಣ' ಚಲನಚಿತ್ರ ನಿರ್ಮಾಣ ಮಾಡಿದರು. 2002 ರಲ್ಲಿ ಬಸವ ಕಲ್ಯಾಣದಲ್ಲಿ ಅಲ್ಲಮಪ್ರಭು ಶೂನ್ಯ ಪೀಠವನ್ನು ಸ್ಥಾಪಿಸಿದರು. ಬಸವ ಕಲ್ಯಾಣದಲ್ಲಿ 108 ಅಡಿ ವಿಶ್ವಗುರು ಬಸವಣ್ಣನವರ ಮೂತಿ೯ಯನ್ನು ಸ್ಥಾಪಿಸಿದರು. 2007ರಲ್ಲಿ ಅಲ್ಲಮ ಗಿರಿಯಲ್ಲಿ ಅಲ್ಲಮಪ್ರಭು ಯೋಗಪೀಠವನ್ನು ಸ್ಥಾಪಿಸಿದರು.
2006ರಲ್ಲಿ ದೆಹಲಿಯಲ್ಲಿ ಬಸವ ಧರ್ಮ ಪೀಠದ ಶಾಖೆಯನ್ನು ತೆರೆದರು. ಮಾತೆ ಮಹಾದೇವಿ ಅವರು ಕೂಡ ಸಾಕಷ್ಟು ಟೀಕೆ ಹಾಗೂ ವಿವಾದಕ್ಕೆ ಗುರಿಯಾಗಿದ್ದರು. ಇತ್ತಿಚೆಗಷ್ಟೆ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮಾತೇಮಹಾದೇವಿ ಅವರ ಕೂಡ ಮುಂಚೂಣಿಯಲ್ಲಿದ್ದರು.