ಬಿಜೆಪಿಗೆ ಮರಳಿದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರು, ಏಪ್ರಿಲ್ 4 : ಹಲವಾರು ವಿರೋಧಗಳ ನಡುವೆಯೇ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮಲ್ಲಿಕಾರ್ಜುನ ಖೂಬಾ ಇಂದು ಬಿಜೆಪಿ ಸೇರಿದ್ದಾರೆ. 'ಇನ್ನಷ್ಟು ನಾಯಕರು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ' ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಲ್ಲೇಶ್ವರಂನಲ್ಲಿನ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಬಸವರಾಜ ಪಾಟೀಲ್ ಅನ್ವರಿ, ಮಾಜಿ ಶಾಸಕ ನಾಗಪ್ಪ ಸಾಲೋನಿ, ಬಸವಕಲ್ಯಾಣ ಕ್ಷೇತ್ರದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಬಿಜೆಪಿ ಸೇರಿದರು.
ಬಿಜೆಪಿ ಸೇರಲು 3 ಷರತ್ತು ವಿಧಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಎಲ್ಲಾ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡರು. 'ಪಕ್ಷದ ಸಿದ್ಧಾಂತ ಮತ್ತು ಸಮರ್ಥ ನಾಯಕತ್ವ ಒಪ್ಪಿ ಬಿಜೆಪಿ ಸೇರುವ ಎಲ್ಲಾ ನಾಯಕರನ್ನು ಸ್ವಾಗತಿಸುತ್ತೇನೆ' ಎಂದು ಹೇಳಿದರು.
'ಏಪ್ರಿಲ್ 7ರ ಬಳಿಕ ಬೇರೆ ಪಕ್ಷಗಳ ವಿವಿಧ ನಾಯಕರು ಬಿಜೆಪಿ ಸೇರಲಿದ್ದಾರೆ' ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ಆದರೆ, ಯಾವ-ಯಾವ ನಾಯಕರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದರೆ? ಎಂದು ಮಾತ್ರ ಅವರು ಮಾಹಿತಿ ನೀಡಲಿಲ್ಲ.
ಕುತೂಹಲ ಮೂಡಿಸಿದ ಯಡಿಯೂರಪ್ಪ, ಯತ್ನಾಳ್ ರಹಸ್ಯ ಭೇಟಿ!
ಮಾತೃಪಕ್ಷಕ್ಕೆ ಯತ್ನಾಳ್ ವಾಪಸ್ : ಮೊದಲು ಬಿಜೆಪಿಯಲ್ಲಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಜವಳಿ ಖಾತೆ ಸಚಿವರಾಗಿದ್ದರು. ನಂತರದ ಬೆಳವಣಿಗೆಗಳಿಂದ ಪಕ್ಷ ತೊರೆದು ಜೆಡಿಎಸ್ ಸೇರಿದ್ದರು.
2013ರ ಚುನಾವಣೆ ನಂತರ ಯತ್ನಾಳ್ ಬಿಜೆಪಿಗೆ ಮರಳಿದ್ದರು. ಆದರೆ, 2015ರಲ್ಲಿ ನಡೆದ ವಿಜಯಪುರ-ಬಾಗಲಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದರು. ಇದಕ್ಕಾಗಿ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿತ್ತು.
ವಿಜಯಪುರ-ಬಾಗಲಕೋಟೆ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಗೆಲುವು ಸಾಧಿಸಿದ್ದರು. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅವರು ಬಿಜೆಪಿ ಸೇರಿದ್ದಾರೆ.