ಎಲ್ಲದಕ್ಕೂ ನಿಮ್ಮ ಮಗನ ಬಳಿಯೇ ಮಾತನಾಡಬೇಕೇ?: ವಿಜಯೇಂದ್ರ ವಿರುದ್ಧ ಯತ್ನಾಳ್ ನೇರಾ ನೇರ ಕಿಡಿ
ಬೆಂಗಳೂರು, ಜನವರಿ 5: ಆಡಳಿತ ಸಂಬಂಧಿ ಕಾರ್ಯಗಳಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿ ಕಿಡಿಕಾರಿದ್ದಾರೆ.
ಬಜೆಟ್ ತಯಾರಿಗೂ ಮುನ್ನ ಸೋಮವಾರ ಪಕ್ಷದ ಶಾಸಕರ ಜತೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಭೆ ನಡೆಸಿದರು. ಈ ಸಭೆಯಲ್ಲಿ ಅನೇಕ ಶಾಸಕರು ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಲ್ಲಿನ ಹಿನ್ನಡೆ, ಅಧಿಕಾರಿಗಳ ಅಸಹಕಾರ ಮುಂತಾದವುಗಳ ಕುರಿತು ಆರೋಪಿಸಿದರು. ಸಿಎಂ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು ಎನ್ನಲಾಗಿದೆ.
ಬಿಎಸ್ವೈ ಪುತ್ರರಿಬ್ಬರಲ್ಲಿ ರಾಘವೇಂದ್ರ ಕಾಣದ ಯಶಸ್ಸನ್ನು ವಿಜಯೇಂದ್ರ ಕಾಣುತ್ತಿರುವುದು ಹೇಗೆ?
'ನನ್ನ ಕ್ಷೇತ್ರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ಒಬ್ಬ ಶಾಸಕನಾಗಿ ನಾನು ನನ್ನ ಕೆಲಸಗಳಿಗೆ ನಿಮ್ಮ ಬಳಿ ಮಾತನಾಡಬೇಕೇ ಹೊರತು ನಿಮ್ಮ ಮಗನ ಬಳಿ ಏಕೆ ಮಾತನಾಡಬೇಕು? ಎಲ್ಲದಕ್ಕೂ ನಿಮ್ಮ ಮಗನ ಮಾತೇ ಅಂತಿಮ ಎನ್ನುವುದಾದರೆ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಪಾಡೇನು? ಪಕ್ಷದ ಹಿರಿಯರಾಗಿ ನೀವು ಎಲ್ಲದಕ್ಕೂ ತಲೆದೂಗಬೇಡಿ. ಮೊದಲು ಮಗನ ಹಸ್ತಕ್ಷೇಪ ಕಡಿಮೆ ಮಾಡಿ' ಎಂದು ಯಡಿಯೂರಪ್ಪ ಅವರಿಗೆ ಖಾರವಾಗಿ ಹೇಳಿದ್ದಾರೆ. ಮುಂದೆ ಓದಿ.
ವಿಪಕ್ಷದವರು ನಗುತ್ತಿದ್ದಾರೆ
'ಆಡಳಿತ ಪಕ್ಷದ ಶಾಸಕರಾಗಿದ್ದೂ ನಾವು ಅನುದಾನಕ್ಕೆ ಅಲೆದಾಡುವಂತಾಗಿದೆ. ವಿರೋಧಪಕ್ಷದವರು ನಮ್ಮ ಪಾಡು ನೋಡಿ ನಗುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡಲಾಗುತ್ತಿದೆ. ನೀವೇನೋ ಅನುದಾನ ಬಿಡುಗಡೆಗೆ ಬರೆದುಕೊಡ್ತೀರಿ. ಆದರೆ ಅದು ಬಿಡುಗಡೆಯಾಗುವುದಿಲ್ಲ. ಈವರೆಗೂ ಅನುದಾನ ಬಂದಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರ ಭಾವನೆಗೆ ಅವಕಾಶ ನೀಡಿ: ಬಸನಗೌಡ ಪಾಟೀಲ್ ಯತ್ನಾಳ್ ಪತ್ರ
ಪಕ್ಷ ಮತ್ತು ಸರ್ಕಾರಕ್ಕೆ ಹಾನಿ
ಯತ್ನಾಳ್ ಅವರನ್ನು ಸಮಾಧಾನ ಪಡಿಸಲು ಮುಂದಾದ ಯಡಿಯೂರಪ್ಪ, 'ನಿಮ್ಮ ಸಮಸ್ಯೆಗಳಿದ್ದರೆ ನೇರವಾಗಿ ನನ್ನ ಬಳಿ ಮಾತನಾಡಿ. ಕಾವೇರಿ ಮತ್ತು ಕೃಷ್ಣಾ ಪ್ರವೇಶಕ್ಕೆ ನಿಮಗೆ ಮುಕ್ತ ಅವಕಾಶವಿದೆ. ನನ್ನ ಬಳಿಯೇ ಬಂದು ಮಾತನಾಡಿ. ಅದನ್ನು ಬಿಟ್ಟು ಬೆಂಗಳೂರಿನಲ್ಲಿ ಒಂದು, ವಿಜಯಪುರದಲ್ಲಿ ಇನ್ನೊಂದು ಹೇಳಿಕೆ ಕೊಡುವುದು ಬೇಡ. ಇದರಿಂದ ಪಕ್ಷ ಮತ್ತು ಸರ್ಕಾರಕ್ಕೆ ಹಾನಿಯಾಗುತ್ತದೆ' ಎಂದು ಹೇಳಿದರು.
ಎಲ್ಲರಿಗೂ ಗೊತ್ತಿರುವ ಸಂಗತಿ
'ಹಾನಿ ಯಾರಿಂದ ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತು. ನಮ್ಮ ಅಭಿಪ್ರಾಯ ಹೇಳಿಕೊಳ್ಳಲು ಸಿಗುವುದು ಇದೊಂದೇ ವೇದಿಕೆ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಪ್ರತಿ ಮಂಗಳವಾರ ಸಭೆ ನಡೆಸಿ ನಮ್ಮ ಜತೆ ಮಾತನಾಡುತ್ತಿದ್ದರು' ಎಂದು ಯತ್ನಾಳ್ ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದ ಬಿ.ವೈ ವಿಜಯೇಂದ್ರ
ಫೋನ್ ಮೂಲಕವೂ ಬಗೆಹರಿಸಿ
ಯತ್ನಾಳ್ ಹೇಳಿಕೆಗೆ ದನಿಗೂಡಿಸಿದ ಶಾಸಕ ಉಮೇಶ್ ಕತ್ತಿ, ಹಿರಿಯ ಶಾಸಕರು ಬೆಂಗಳೂರಿಗೆ ಬಂದು ಮಾತನಾಡಲು ಆಗುವುದಿಲ್ಲ. ಎಲ್ಲದಕ್ಕೂ ಬೆಂಗಳೂರಿಗೆ ಬರಲಾಗದು. ಫೋನ್ ಮೂಲಕವೂ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಹಸ್ತಕ್ಷೇಪ ಗಮನಕ್ಕೆ ಬಂದಿಲ್ಲ
ವಿಜಯೇಂದ್ರ ಹಸ್ತಕ್ಷೇಪದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಇದ್ದರೆ ಅದನ್ನು ಸರಿಪಡಿಸುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದರು. ಯತ್ನಾಳ್ ಮಾತನಾಡುವಾಗ ಮಧ್ಯಪ್ರವೇಶಿಸಲು ಪ್ರಯತ್ನಿಸಿದ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ವಿರುದ್ಧ ಯತ್ನಾಳ್ ಗುಡುಗಿದರು. ನಾನು ಮಾತನಾಡುವಾಗ ಮಧ್ಯೆ ಅಡ್ಡ ಬರಬೇಡ. ನಿನ್ನ ಅಭಿಪ್ರಾಯ ಏನಿದೆಯೋ ಅದನ್ನು ಆಮೇಲೆ ಹೇಳು ಎಂದು ಹೇಳಿದರು ಎನ್ನಲಾಗಿದೆ.
Recommended Video
ಯಾರೂ ಸ್ಪಂದಿಸುತ್ತಿಲ್ಲ
'ನಮ್ಮ ಸರ್ಕಾರ ಇರುವುದರಿಂದ ನಮ್ಮ ಕ್ಷೇತ್ರಗಳಿಗೆ ಹೆಚ್ಚು ಅನುದಾನಗಳನ್ನು ನಿರೀಕ್ಷಿಸುವುದು ಸಹಜ. ಈ ಮೊದಲು ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ನಮ್ಮ ಕ್ಷೇತ್ರಗಳನ್ನು ನಿರ್ಲಕ್ಷಿಸಲಾಗಿತ್ತು. ಈಗಲೂ ಅದೇ ಸ್ಥಿತಿ ಇದೆ. ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ಕೈಗೆ ಸಿಗುತ್ತಿಲ್ಲ. ಕೆಡಿಪಿ ಸಭೆಗಳಿಗೆ ನಮ್ಮನ್ನು ಆಹ್ವಾನಿಸುತ್ತಿಲ್ಲ. ಜಿಲ್ಲಾಧಿಕಾರಿಗಳು ಕೂಡ ಸ್ಪಂದಿಸುತ್ತಿಲ್ಲ' ಎಂದು ಅನೇಕ ಶಾಸಕರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.