ಶಿಸ್ತುಕ್ರಮದ ನೋಟಿಸ್: ಮತ್ತೆ ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಬಿಜೆಪಿ ಶಾಸಕ!
ಬೆಂಗಳೂರು, ಫೆ. 12: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ಕೊಟ್ಟಿದೆ ಎನ್ನಲಾದ ವಿಚಾರ ರಾಜ್ಯ ಬಿಜೆಪಿಯಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ. ನನಗೇ ಯಾವುದೇ ನೋಟಿಸ್ ಬಂದಿಲ್ಲ ಎಂದು ವಿಜಯಪುರ ಶಾಸಕ ಯತ್ನಾಳ್ ಅವರು ಹೇಳಿದ್ದಾರೆ. ಜೊತೆಗೆ ನೋಟಿಸ್ ಬಂದರೆ ಉತ್ತರಿಸುತ್ತೇನೆ ಎಂದೂ ಹೇಳಿದ್ದಾರೆ. ಈ ಮಧ್ಯೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕಾರಣ ಕೇಳಿ ನೋಟಿಸ್ ಕೊಟ್ಟಿರುವುದು ನಿಜ ಎಂದು ಬಿಜೆಪಿ ಉನ್ನತ ಮೂಲಗಳು ಖಚಿತಪಡಿಸಿವೆ. ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿಯಿಂದ ಶೋಕಾಸ್ ನೋಟೀಸ್ ಕೊಟ್ಟು ತಕ್ಷಣ ಸ್ಪಷ್ಟನೆ ಕೊಡುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ಬಿಜೆಪಿ ಉನ್ನತ ಮೂಲಗಳಿಂದ ಬಂದಿದೆ.
Recommended Video
ಕೇಂದ್ರ ಶಿಸ್ತು ಸಮಿತಿಯ ನೋಟಿಸ್ ಕುರಿತು ಬೆಂಗಳೂರಿನ ಶಾಸಕರ ಭವನದಲ್ಲಿ ಮಾತನಾಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ಷಷ್ಟನೆ ಕೊಟ್ಟಿದ್ದಾರೆ. ತಮ್ಮ ಮೇಲಿನ ಆರೋಪಗಳಿಗೆ ಸವಿಸ್ತಾರವಾಗಿ ಮಾತನಾಡಿರುವ ಅವರು, ಕೇಂದ್ರ ಶಿಸ್ತು ಸಮಿತಿಯ ಷೋಕಾಸ್ ನೋಟಿಸ್ ಕುರಿತೂ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ ಮತ್ತೆ ಸಿಎಂ ಯಡಿಯೂರಪ್ಪ ಅವರ ಮೇಲೆ ಹರಿಹಾಯ್ದಿದ್ದಾರೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್?
ಅಷ್ಟಕ್ಕೂ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಕಾರಣ ಕೇಳಿ ಕೊಟ್ಟಿರುವ ನೋಟಿಸ್ನಲ್ಲಿ ಏನಿದೆ? ಅದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಏನು ಉತ್ತರಬ ಕೊಟ್ಟಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ನಾನು ಅಂಜುವ ಮನುಷ್ಯನಲ್ಲ!
ನನಗಿನ್ನೂ ನೊಟೀಸ್ ಬಂದಿಲ್ಲ, ಯಾವ ನೊಟೀಸೋ ಏನೋ? ನನಗೆ ಅಧಿಕೃತ ಕಾಪಿ ಬಂದ ಮೇಲೆ ಅದರಲ್ಲೇನಿದೆ ಅನ್ನೋದು ಗೊತ್ತಾಗುತ್ತದೆ. ನೋಟಿಸ್ ಬಂದರೂ ನಾನು ಯಾವುದಕ್ಕೂ ಅಂಜುವ ಮನುಷ್ಯನಲ್ಲ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದ್ದಾರೆ. ಶಾಸಕರ ಭವನದಲ್ಲಿ ಮಾಧ್ಯಮಗಳೊಂದಿಗೆ ಖಡಕ್ ಆಗಿ ಮಾತನಾಡಿದ ಅವರು, ನಾನು ಪಕ್ಷದ ವಿರುದ್ಧ ಮಾತನಾಡಿಲ್ಲ. ರಾಷ್ಟ್ರೀಯ ನಾಯಕರ ವಿರುದ್ಧವೂ ಹೇಳಿಕೆ ಕೊಟ್ಟಿಲ್ಲ. ನಾನು ಸತ್ಯದ ಪರವಾಗಿ ಇದ್ದೇನೆ. ಹೀಗಾಗಿ ನನಗೆ ಯಾವದೇ ರೀತಿಯ ಶಾಕ್ ಆಗಿಲ್ಲ. ನಾನು ಕ್ಷಮೆಯನ್ನೂ ಕೇಳುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಸಂಪುಟದಲ್ಲಿ 3 'ಸಿಡಿ' ಮ್ಯಾನ್ಗಳಿದ್ದಾರೆ
ಸಿಎಂ ಯಡಿಯೂರಪ್ಪ ಅವರ ಸಂಪುಟದಲ್ಲಿ ಊವರು 'ಸಿಡಿ' ಮ್ಯಾನ್ಗಳಿದ್ದಾರೆ ಎಂದು ಹೇಳಿಕೆ ಕೊಡುವ ಮೂಲಕ ಸಿಎಂ ಯಡಿಯೂರಪ್ಪ ಅವರನ್ನು ಮತ್ತೊಮ್ಮೆ ಲೇವಡಿ ಮಾಡಿದ್ದಾರೆ. ಹಲವು ವಿಚಾರಗಳನ್ನು ಚರ್ಚೆ ಮಾಡಲು ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವಂತೆ ಶಾಸಕರು ಒತ್ತಾಯಿಸಿದ್ದಾರೆ. ಆದರೂ ಯಾಕೆ ಸಭೆಯನ್ನು ಕರೆಯುತ್ತಿಲ್ಲ? ಬರೀ ವಿಭಾಗವಾರು ಶಾಸಕರ ಸಭೆ ಕರೆದಿದ್ದೇಕೆ ಎಂದು ಸಿಎಂ ಯಡಿಯೂರಪ್ಪ ಅವರನ್ನು ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.
ನಾನು ಯಾವಾಗಲೂ ಜನಪರ
ನಾನು ಯಾವಾಗಲೂ ಜನರ ಪರವಾಗಿದ್ದೇನೆ. ಸಮುದಾಯ ವಿಚಾರ ಬಂದಾಗಲೂ ಇದನ್ನೇ ಹೇಳಿದ್ದೇನೆ. ಎಲ್ಲಾ ಸಮುದಾಯಗಳಿಗೂ ಅವಕಾಶ ಕೊಡಿ ಎಂದಿದ್ದೇನೆ.
ಕುರುಬ, ದಲಿತ, ಮರಾಠ ಮೀಸಲಾತಿ ಬಂದಾಗಲೂ ಅದನ್ನೇ ಹೇಳುತ್ತೇನೆ. ಎಲ್ಲರಿಗೂ ಮೀಸಲಾತಿ ಕೊಡಲಿ. ಸಂದರ್ಭ ಬಂದಾಗ ಒಳ್ಳೆಯದನ್ನು ಹೊಗಳುತ್ತೇನೆ. ಹಿಂದೆ ಸಿದ್ದರಾಮಯ್ಯ ಅವರನ್ನು ಹೊಗಳಿದ್ದೇನೆ. ದಿ. ಮಾಜಿ ಸಿಎಂ ಜೆ.ಹೆಚ್. ಪಟೇಲರನ್ನೂ ನಾನು ಹೊಗಳಿದ್ದೇನೆ.
ನಾನು ಒಳ್ಳೆಯದನ್ನ ಮಾಡಿದವರನ್ನು ಹೊಗಳುತ್ತೇನೆ. ಸರಿಯಾಗಿ ನಡೆಯದಿದ್ದರೆ ತೆಗಳುತ್ತೇನೆ. ಸರ್ಕಾರದಲ್ಲಿ ತಪ್ಪಾಗಿದ್ದರೂ ನಾನು ಪ್ರಶ್ನೆ ಮಾಡುತ್ತೇನೆ. ಯಾರ ಮುಲಾಜಿನಲ್ಲಿದ್ದು ರಾಜಕಾರಣ ಮಾಡಲ್ಲ. ನೇರ ರಾಜಕಾರಣ ಮಾಡುವವನು. ಸತ್ಯದ ಪರವಾಗಿ ರಾಜಕಾರಣ ಮಾಡುವವನು. ಪ್ರವಾಹ ಬಂದಾಗ ಪ್ರವಾಹದ ಬಗ್ಗೆ ಮಾತನಾಡಿದ್ದೇನೆ. ಹೀಗಾಗಿ ನೊಟೀಸ್ಗೆ ಉತ್ತರ ಕೊಡುತ್ತೇನೆ. ಪತ್ರದ ಮೂಲಕ ನೋಟಿಸ್ ಕೊಟ್ಟರೆ ಪತ್ರದ ಮೂಲಕವೇ ಉತ್ತರ ಹೇಳುತ್ತೇನೆ. ನೇರ ಭೇಟಿಗೆ ಬಯಸಿದರೆ ನೇರವಾಗಿಯೇ ಹೇಳುತ್ತೇನೆ ಎಂದು ನೇರವಾಗಿ ಹೈಕಮಾಂಡ್ಗೆ ಯತ್ನಾಳ್ ಅವರು ಸವಾಲು ಹಾಕಿದ್ದಾರೆ.
ಪ್ರಧಾನಿ ಕುಟುಂಬದವರಿಗೆ ಟಿಕೆಟ್ ಕೊಟ್ಟಿಲ್ಲ
ಇದೇ ಸಂದರ್ಭದಲ್ಲಿ ಕುಟುಂಬ ರಾಜಕಾರಣದ ಕುರಿತು ಮಾತನಾಡಿದ ಶಾಸಕ ಯತ್ನಾಳ್ ಅವರು, ನಾನು ಕುಟುಂಬ ರಾಜಕಾರಣದ ಕುರಿತು ಪಕ್ಷದ ಸಿದ್ಧಾಂತವನ್ನಿಟ್ಟುಕೊಂಡು ಮಾತನಾಡಿದ್ದೇನೆ. ಪ್ರಧಾನಿ ಮೋದಿ ಅವರವ ಕುಟುಂಬದವರಿಗೆ ವಡೋದರದಲ್ಲಿ ಕಾರ್ಪೊರೇಶನ್ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿಲ್ಲ. ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ರಾಜಕಾರಣದಲ್ಲಿರಬೇಕು. ಕಾರ್ಯಾಕರ್ತರೇನು ಹಮಾಲಿ ಕೆಲಸ ಮಾಡೋದಕ್ಕಿದ್ದಾರಾ? ಕಾರ್ಯಕರ್ತರಿಗೆ ಟಿಕೆಟ್ ಕೊಡ್ರಿ. ಮನೆ ಮಕ್ಕಳಿಗೆಲ್ಲ ಯಾಕೆ ಟಿಕೆಟ್ ಕೊಡಬೇಕು? ಎಂದು ಸಿಎಂ ಯಡಿಯೂರಪ್ಪ ಅವರ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.