ಸಿಎಂ ಯಡಿಯೂರಪ್ಪ, ಪುತ್ರನ ಮೇಲೆ ಶಾಸಕ ಯತ್ನಾಳ್ ಮತ್ತೆ ಹಿಗ್ಗಾಮುಗ್ಗಾ ವಾಗ್ದಾಳಿ!
ಬೆಂಗಳೂರು, ಮಾ. 17: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಮೇಲೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೆಲವು ಆಪ್ತ ಶಾಸಕರು ಶಾಸಕ ಯತ್ನಾಳ್ ಅವರ ಮೇಲೆ ವಾಗ್ದಾಳಿ ನಡೆಸಿದ್ದರು. ಜೊತೆಗೆ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆಯೂ ಒತ್ತಾಯಿಸಿದ್ದರು.
ಶಾಸಕರ ಹೇಳಿಕೆಗಳ ಬೆನ್ನಲ್ಲಿಯೇ ಇವತ್ತು ಯತ್ನಾಳ್ ಅವರು ಮತ್ತೆ ಸಿಎಂ ಹಾಗೂ ಅವರ ಪುತ್ರ ವಿಜಯೇಂದ್ರ ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ತಾಕತ್ತಿದ್ದರೇ ನನ್ನನ್ನು ಪಕ್ಷದಿಂದ ಉಚ್ಚಾಟಿಸಿ ಎಂದೂ ಯಡಿಯೂರಪ್ಪ ಅವರಿಗೆ ಶಾಸಕ ಯತ್ನಾಳ್ ಸವಾಲು ಹಾಕಿದ್ದಾರೆ. ಜೊತೆಗೆ ವಿಜಯೇಂದ್ರ ಅವರ ಮೇಲೆ ದಾಖಲೆ ಸಮೇತ ಮತ್ತೊಮ್ಮೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಇಷ್ಟೇ ಅಲ್ಲ ಹಿಂದೆಂದಿಗಿಂತಲೂ ತೀವ್ರ ವಾಗ್ದಾಳಿಯನ್ನು ಯತ್ನಾಳ್ ಅವರು ಯಡಿಯೂರಪ್ಪ ಅವರ ಮೇಲೆ ಮಾಡಿದ್ದಾರೆ. ಯತ್ನಾಳ್ ಆರೋಪಗಳೇನು?
ಯಡಿಯೂರಪ್ಪಗೆ ಸವಾಲು ಹಾಕಿದ ಯತ್ನಾಳ್
ಸಿಎಂ ಯಡಿಯೂರಪ್ಪ ಅವರ ಪರವಾಗಿ ಮಾತನಾಡಿರುವ ಶಾಸಕರ ಹೇಳಿಕೆಗೆ ನಾನು ಪ್ರತಿಕ್ರಿಯೆ ಕೊಡಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಮಾತುಗಳನ್ನು ಆಡಿದ್ದಾರೆ. ತಾಕತ್ತಿದ್ದರೆ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಿರಿ. ಅಲ್ಲಿ ಶಾಸಕರು ಮುಕ್ತ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ ಎಂದು ಸಿಎಂಗೆ ಯತ್ನಾಳ್ ಅವರು ಸವಾಲು ಹಾಕಿದ್ದಾರೆ.
ಜೊತೆಗೆ ಯಡಿಯೂರಪ್ಪನವರೇ ನಿಮ್ಮು ಕುಟುಂಬದಲ್ಲಿ 15-16 ಜನರಿಗೆ ಕ್ಯಾಬಿನೆಟ್ ದರ್ಜೆ ಸವಲತ್ತುಗಳನ್ನು ಕೊಟ್ಟಿದ್ದೀರಿ. ನಿಮ್ಮ ಅಳಿಯ ಕ್ಯಾಬಿನೆಟ್ ದರ್ಜೆಯಲ್ಲಿದ್ದಾರೆ. ನಿಮ್ಮ ಮೊಮ್ಮಗ ಕ್ಯಾಬಿನೆಟ್ ದರ್ಜೆ ಅನುಭವಿಸುತ್ತಿದ್ದಾನೆ. ಹಾಗಾದರೆ ರಾಜ್ಯದಲ್ಲಿ ನಡೆಯುತ್ತಿರುವುದು ಏನು? ಯಡಿಯೂರಪ್ಪನವರು ಯಾವಾಗ ಸಿಎಂ ಸ್ಥಾನದಿಂದ ಇಳಿಯುತ್ತಾರೆ ಎಂದು ಶಾಸಕರು ಎದುರು ನೋಡುತ್ತಿದ್ದಾರೆ.
ಹೆಲಿಕ್ಯಾಪ್ಟರ್ನಲ್ಲೇ ವಿಜಯೇಂದ್ರ ಓಡಾಟ!
ಹೀಗಾಗಿ ತಾಕತ್ತಿದ್ದರೆ ಶಾಸಕಾಂಗ ಪಕ್ಷದ ಸಭೆ ಕರೆಯಲಿ. ನಾನು 10 ವರ್ಷ ಸಂಸದನಾಗಿದ್ದೆ. ಅಟಲ್ ಬಿಹಾರಿ ಅವರು ಪ್ರಧಾನಿಯಾಗಿ, ಎಲ್ ಕೆ ಅಡ್ವಾಣಿ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾಗ ಲೋಕಸಭೆ ನಡೆಯುವಾಗ ಪ್ರತಿ ಮಂಗಳವಾರ ಬೆಳಗ್ಗೆ ಸರಿಯಾಗಿ 9 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆಯುತ್ತಿದ್ದರು. ಯಡಿಯೂರಪ್ಪ ಅವರು ಎಷ್ಟು ದಿನಗಳಿಂದ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ? ಎಂದು ಯತ್ನಾಳ್ ಅವರು ಪ್ರಶ್ನೆ ಮಾಡಿದ್ದಾರೆ.
ಇನ್ನು ನಿನ್ನೆ ಮಾತನಾಡಿದ್ದ ಶಾಸಕ ರೇಣುಕಾಚಾರ್ಯ ಅವರು ವಿಜಯೇಂದ್ರ ಏನು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದನ್ನು ದಾಖಲೆ ಸಮೇತ ಯತ್ನಾಳ್ ಅವರು ಕೊಡಲಿ ಎಂದಿದ್ದರು. ಅದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಶಾಸಕ ಯತ್ನಾಳ್ ಅವರು, ಸಿಎಂ ಆದವರು ಹೆಚ್ಚಾಗಿ ಹೆಲಿಕ್ಯಾಪ್ಟರ್ನಲ್ಲಿ ಓಡಾಡುವುದಿಲ್ಲ. ಆದರೆ ಪ್ರತಿಬಾರಿಯೂ ಬಿವೈ ವಿಜಯೇಂದ್ರ ಅವರು ಹೆಲಿಕ್ಯಾಪ್ಟರ್ನಲ್ಲಿಯೇ ಹೋಗಿ ಬರುತ್ತಾರೆ. ಇಷ್ಟೊಂದು ಹಣ ಅವರಿಗೆ ಎಲ್ಲಿಂದ ಬರುತ್ತಿದೆ ಎಂದು ಮಾರ್ಮಿಕವಾಗಿ ಶಾಸಕ ಯತ್ನಾಳ್ ಅವರು ಪ್ರಶ್ನೆ ಮಾಡಿದ್ದಾರೆ.
ಭ್ರಷ್ಟಾಚಾರ ಮಾಡದಿದ್ದರೆ ಕೋರ್ಟ್ಗೆ ಹೋಗಿದ್ಯಾಕೆ?
ಶಿವರಾಮ ಕಾರಂತ ಬಡಾವಣೆ ಭ್ರಷ್ಟಾಚಾರ, ಗಂಗೇನಹಳ್ಳಿ ಡಿನೋಟಿಫಿಕೇಶನ್ ಪ್ರಕರಣ ಸಿಎಂ ಯಡಿಯೂರಪ್ಪ ಅವರ ಮೇಲಿದೆ. ಯಡಿಯೂರಪ್ಪನವರಿಗೆ ಎರಡು ಪ್ರಕರಣಗಳಲ್ಲಿ ತಲಾ 25 ಸಾವಿರ ರೂ. ದಂಡ ವಿಧಿಸಿ, ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶ ಮಾಡಿದೆ. ಆದರೆ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಕರ್ನಾಟಕದ ಪೊಲೀಸರೇ ನಿಮ್ಮ ಅಡಿಯಲ್ಲಿ ಇರುವುದರಿಂದ ಪೊಲೀಸರು ನಿಮ್ಮ ಬಂಧನ ಮಾಡಬಾರದು ಎಂದು ಜಾಮೀನು ಕೇಳುವುದು ಹಾಸ್ಯಾಸ್ಪದ ಎಂದು ಹೇಳಿದ್ದಾರೆ. ಜೊತೆಗೆ ನೀವು ಭ್ರಷ್ಟಾಚಾರ ಮಾಡಿಲ್ಲ ಅನ್ನೋದಾದರೆ ನೀವು ಸುಪ್ರೀಂಕೋರ್ಟ್ ಮೊರೆ ಹೋಗಿದ್ಯಾಕೆ? ಎಂದು ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.
'ಸಿಡಿ' ಮಾಡಿಟ್ಟುಕೊಂಡು ಬ್ಲ್ಯಾಕ್ಮೇಲ್ ರಾಜಕೀಯ!
'ಸಿಡಿ' ಗ್ಯಾಂಗ್ ಎರಡೂ ಪಕ್ಷಗಳಲ್ಲಿಯೂ ಇವೆ ಎಂಬ ಮತ್ತೊಂದು ಸ್ಫೋಟಕ ಆರೋಪವನ್ನು ಶಾಸಕ ಯತ್ನಾಳ್ ಅವರು ಮಾಡಿದ್ದಾರೆ. ಆ ಯುವತಿಯ ತಂದೆ-ತಾಯಿ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಎರಡೂ ಪಕ್ಷಗಳ ನಾಯಕರ ಹಿಂದೆ 'ಸಿಡಿ' ತಯಾರು ಮಾಡುವ ಗುಂಪಿದೆ. ಬಿಜೆಪಿಯ ಶಾಸಕರನ್ನು, ರಾಜ್ಯ ನಾಯಕರನ್ನು ಬ್ಲ್ಯಾಕ್ಮೇಲ್ ಮಾಡಲು ಬಿಜೆಪಿಯಲ್ಲಿಯೇ ಒಂದು ತಂಡವಿದೆ.
ಹಾಗೆ ಕಾಂಗ್ರೆಸ್ನಲ್ಲೂ ಒಂದು ತಂಡವಿದೆ. ಈ ಎಲ್ಲ ವ್ಯವಹಾರಗಳು ನಡೆಯುತ್ತಿದೆ. ಅಲ್ಲಿ 'ಸಿಡಿ'ಗೆ ಬೆಲೆ ಕಟ್ಟುತ್ತಾರೆ, ಒಂದು 'ಸಿಡಿ'ಗೆ ಒಂದು ಕೋಟಿ ರೂ. ಕೊಡಬೇಕೊ? ಎರಡು ಕೋಟಿ ರೂ. ಕೊಡಬೇಕೊ? ಕೊಟ್ಟು ಖರೀದಿ ಮಾಡುತ್ತಾರೆ. ಆ ಮೇಲೆ ಆ ಪಕ್ಷದ ಶಾಸಕರಿಗೆ, ಪಕ್ಷದ ಮುಖಂಡರನ್ನು ಬ್ಲ್ಯಾಕ್ಮೇಲ್ ಮಾಡಲಾಗುತ್ತದೆ.
Recommended Video
ವಿಜಯೇಂದ್ರ ಹೇಳಿದ ಹಾಗೆ ಸಿಸಿಬಿ ಕೇಳುತ್ತದೆ!
ರಮೇಶ್ ಜಾರಕಿಹೊಳಿ ನೆಪ ಮಾತ್ರ. ಎಲ್ಲ ಪಕ್ಷಗಳ ಎಲ್ಲರ 'ಸಿಡಿ'ಗಳಿವೆ. ಎಸ್ಐಟಿಯಿಂದ ತನಿಖೆ ಆಗುವುದಿಲ್ಲ. ಈ ಹಿಂದೆ ಸಿಸಿಬಿ ತನಗೇ ಬೇಕಾದ ಮಾಹಿತಿಯನ್ನು ಮಾತ್ರ ಬಹಿರಂಗ ಮಾಡಿದೆ. ಉಳಿದಿದ್ದನ್ನು ವಿಜಯೇಂದ್ರಗೆ ಕೊಡುತ್ತದೆ. ವಿಜಯೇಂದ್ರನೊಂದಿಗೆ ವಂಚಕ ಯುವರಾಜ್ ಇದ್ದ ಫೋಟೊವನ್ನು ಸಿಸಿಬಿ ಯಾಕೆ ಬಹಿರಂಗ ಮಾಡಲಿಲ್ಲ ಎಂದು ರಾಜ್ಯ ಪೊಲೀಸ್ ಸಂಸ್ಥೆಗಳು ವಿಜಯೇಂದ್ರ ಹೇಳಿದ ಹಾಗೆ ಕೇಳುತ್ತವೆ ಎಂದು ಯತ್ನಾಳ್ ಆರೋಪಿಸಿದ್ದಾರೆ.
ಜೊತೆಗೆ ನನ್ನನ್ನು ಪಕ್ಷದಿಂದ ಹೊರಗೆ ಹಾಕುವ ತಾಕತ್ತು ಯಾರಿಗೂ ಇಲ್ಲ. ನನಗೆ ಬಿಜೆಪಿ ಟಿಕೆಟ್ ಕೊಟ್ಟದ್ದು ಯಡಿಯೂರಪ್ಪ ಅಲ್ಲ. ಬದಲಿದೆ ನನಗೆ ಅಮಿತ್ ಶಾ ಅವರು ಟಿಕೆಟ್ ಕೊಟ್ಟಿದ್ದರು. ಯಡಿಯೂರಪ್ಪ ಅವರಿಗೆ ತಾಕತ್ತಿದ್ದರೆ ನನ್ನನ್ನು ಪಕ್ಷದಿಂದ ಹೊರಗೆ ಹಾಕಲಿ ಎಂದು ಸವಾಲು ಹಾಕಿದ್ದಾರೆ.