ಮಹೇಂದ್ರ ಮಿಶ್ರಾ ಜಾಗಕ್ಕೆ ಬರನ್ ದಾಸ್: ಟಿವಿ 9ಗೆ ನೂತನ ಸಿಇಓ ನೇಮಕ
ಬೆಂಗಳೂರು, ಆಗಸ್ಟ್ 27 : ಕರ್ನಾಟಕದಲ್ಲಿ ಅತಿ ಹೆಚ್ಚು ವೀಕ್ಷಣೆಗೆ ಒಳಗಾಗಿರುವ ಟಿವಿ 9 ಕರ್ನಾಟಕವೂ ಸೇರಿದಂತೆ ಪ್ರಾದೇಶಿಕ ಭಾಷೆಗಳನ್ನು ಹಲವು ಸುದ್ದಿ ಸಂಸ್ಥೆಗಳನ್ನು ಹೊಂದಿರುವ ಟಿವಿ 9 ಸಮೂಹ ಸಂಸ್ಥೆಗಳಲ್ಲಿ ಮಹತ್ವ ಬೆಳವಣಿಗೆಯೊಂದು ನಡೆದಿದೆ. ಸಂಸ್ಥೆಯ ನೂತನ ಸಿಇಓ ಆಗಿ ಬರನ್ ದಾಸ್ ನೇಮಕವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಟಿವಿ 9 ಸಂಸ್ಥೆಯೊಳಗೆ ದೊಡ್ಡಮಟ್ಟದ ಆಡಳಿತಾತ್ಮಕ ಬದಲಾವಣೆಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಸಮೂಹಕ್ಕೆ ಹಂಗಾಮಿ ಸಿಇಓ ಆಗಿದ್ದ ಕರ್ನಾಟಕ ಟಿವಿ 9 ಮುಖ್ಯಸ್ಥ ಮಹೇಂದ್ರ ಮಿಶ್ರಾ ನೇಮಕಗೊಂಡಿದ್ದರು. ಇದೀಗ ಆಡಳಿತ ಮಂಡಳಿ ಮಿಶ್ರಾರನ್ನು ಪ್ರಧಾನ ಸಲಹೆಗಾರರನ್ನಾಗಿ ನೇಮಕ ಮಾಡಿದ್ದಲ್ಲದೆ, ಅವರ ಜಾಗಕ್ಕೆ ಪೂರ್ಣಾವಧಿ ಸಿಇಓ ಆಗಿ ಬರನ್ ದಾಸ್ರನ್ನು ನೇಮಕ ಮಾಡಿದೆ.
ಐಐಟಿ ಮದ್ರಾಸ್, ಐಐಎಂ ಕೋಲ್ಕತ್ತಾ, ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್ನಲ್ಲಿ ಅಧ್ಯಯನ ಮಾಡಿರುವ ಬರನ್ ದಾಸ್ ಮಾಧ್ಯಮ ಸಂಸ್ಥೆಗಳಲ್ಲಿ ಸುಮಾರು 25 ವರ್ಷಗಳ ಅನುಭವ ಹೊಂದಿದ್ದಾರೆ. ಕಳೆದ 5 ವರ್ಷಗಳಿಂದ ಅವರು ಝೀ ಮೀಡಿಯಾ ಸಿಇಒ ಆಗಿದ್ದರು.
ಟಿವಿ9 ಸಿಇಒ ರವಿ ಪ್ರಕಾಶ್ ವಿರುದ್ಧ ಫೋರ್ಜರಿ ಕೇಸ್ ದಾಖಲು
ಝೀ ವಾಹಿನಿ ಸೇರುವ ಮೊದಲು ಬರನ್ ದಾಸ್ ಎಬಿಪಿ ನ್ಯೂಸ್, ಇಂಡಿಯಾ ಟುಡೇ ಗ್ರೂಪ್, ಆಸ್ಟ್ರೋ ಆಲ್ ಏಷ್ಯಾ ನೆಟ್ವರ್ಕ್ ಸೇರಿದಂತೆ ಪ್ರಮುಖ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಸುದ್ದಿಮನೆ ಸದ್ದು: ಪಬ್ಲಿಕ್ ಟಿವಿ, ಸುವರ್ಣ ಹಿಂದಿಕ್ಕಿದ ನ್ಯೂಸ್ 18 ಕನ್ನಡ
"ಹೊಸ ಅವಕಾಶ ಸಿಕ್ಕಿರುವ ಬಗ್ಗೆ ಉತ್ಸುಕನಾಗಿದ್ದೇನೆ. ಪ್ರತಿಯೊಂದು ಹೊಸ ಅವಕಾಶದ ಜೊತೆಗೆ ಅನೇಕ ಸವಾಲುಗಳು ಇರುತ್ತವೆ. ತಂಡದೊಂದಿಗೆ ಸೇರಿ ನನ್ನ ಚಿಕ್ಕ ಕೊಡುಗೆ ಕೊಡುತ್ತೇನೆ" ಎಂದು ಬರನ್ ದಾಸ್ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ವಾರ ಟಿವಿ 9 ಹಂಗಾಮಿ ಸಿಇಓ ಮಹೇಂದ್ರ ಮಿಶ್ರಾ ಬದಲಾವಣೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ವಾಟ್ಸಪ್ನಲ್ಲಿ ಮಿಶ್ರಾ ಅವರು ಬರೆದಿದ್ದಾರೆ ಎನ್ನಲಾದ ಆಕ್ಷೇಪಣಾ ಪತ್ರವೊಂದು ಹರಿದಾಡುತ್ತಿತ್ತು. ಇದು ನಕಲಿ ಎಂಬ ಸ್ಪಷ್ಟನೆಯೂ ಕೂಡ ಮತ್ತದೇ ವಾಟ್ಸಾಪ್ನಲ್ಲಿ ಹರಿದಾಡಿತ್ತು. ಇದೀಗ ಅಧಿಕೃತವಾಗಿ ಸಿಇಓ ಬದಲಾವಣೆ ಸುದ್ದಿ ಹೊರಬಿದ್ದಿದೆ.