ಕರ್ನಾಟಕದ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮದ್ಯ ಮಾರಾಟ ಯಾವಾಗ?
ಬೆಂಗಳೂರು, ಆಗಸ್ಟ್.21: ರಾಜ್ಯದಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಸಪ್ಟೆಂಬರ್ ತಿಂಗಳಿನಿಂದ ಮದ್ಯ ಮಾರಾಟಕ್ಕೆ ಸರ್ಕಾರವು ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಅಬಕಾರಿ ಸಚಿವ ಎಚ್. ನಾಗೇಶ್ ತಿಳಿಸಿದ್ದಾರೆ.
Recommended Video
ಕರ್ನಾಟಕ ನೈಟ್ ಕ್ಲಬ್ ಅಸೋಸಿಯೇಷನ್ ಪ್ರತಿನಿಧಿಗಳು ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡುವಂತೆ ಲಿಖಿತ ಪತ್ರದ ಮೂಲಕ ಮನವಿ ಸಲ್ಲಿಸಿದ್ದರು. ಈ ಮನವಿ ಪತ್ರವನ್ನು ಯಥಾವತ್ತಾಗಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಸಲ್ಲಿಸಲಾಗಿದೆ.
ಶೀಘ್ರ ದೆಹಲಿಯ ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಮದ್ಯ ಲಭ್ಯ
ಸಪ್ಟೆಂಬರ್ ತಿಂಗಳಿನಿಂದ ರಾಜ್ಯದಲ್ಲಿ ಅನ್ ಲಾಕ್ 5.0 ಜಾರಿಗೆ ಬರಲಿದ್ದು, ಮುಂದಿನ ತಿಂಗಳಿಂದ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ನೀಡುವ ಸಾಧ್ಯತೆಗಳಿವೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ತಿಳಿಸಿದ್ದಾರೆ.
ಕೇಂದ್ರದ ಮಾರ್ಗಸೂಚಿ ಮೇಲೆ ನಿರೀಕ್ಷೆ
ಭಾರತದಲ್ಲಿ ಅನ್ ಲಾಕ್ 5.0ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಅಧಿಕೃತವಾಗಿ ಮಾರ್ಗಸೂಚಿಯನ್ನು ಹೊರಡಿಸಲಿದೆ. ಕೇಂದ್ರದ ಮಾರ್ಗಸೂಚಿಗಳಲ್ಲಿ ಈ ಬಾರಿ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಮುಂದಿನ ತಿಂಗಳ ಈ ಸಮಸ್ಯೆಯು ಬಹುತೇಕ ನಿಶ್ಚಯವಾಗುವ ಸಾಧ್ಯತೆಗಳಿವೆ. 5.0ರ ಮಾರ್ಗಸೂಚಿಯಲ್ಲಿ ನಿಯಮಗಳ ಸಡಲಿಕೆ ಬಗ್ಗೆ ನಿರೀಕ್ಷಿಸಲಾಗುತ್ತಿದ್ದು, ಅದಕ್ಕೂ ಮೊದಲು ಯಾವುದೇ ಆದೇಶವನ್ನು ಹೊರಡಿಸಲಾಗದು ಎಂದು ಸಚಿವರು ತಿಳಿಸಿದ್ದಾರೆ.
ಆದಾಯವಿಲ್ಲದೇ ಬಾರ್, ರೆಸ್ಟೋರೆಂಟ್ ಮಾಲೀಕರ ಸಂಕಷ್ಟ
ರಾಜ್ಯದ ಬಹುತೇಕ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರು ಆದಾಯವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾರ್ ಗಳಿಗೆ ಮದ್ಯ ಖರೀದಿಸಲು ಜನರು ಹೋಗುತ್ತಿಲ್ಲ. ರೆಸ್ಟೋರೆಂಟ್ ಗಳಲ್ಲೂ ಎಂಆರ್ ಪಿ ದರದಲ್ಲಿ ಮದ್ಯ ಮಾರಾಟಕ್ಕೆ ಸರ್ಕಾರವು ಅನುಮತಿ ನೀಡಬೇಕು. ಕರ್ನಾಟಕದ ಕೆಲವು ರೆಸ್ಟೋರೆಂಟ್ ಗಳ ತಿಂಗಳ ನಿರ್ವಹಣೆ ವೆಚ್ಚವೇ 2 ಲಕ್ಷವಾಗುತ್ತಿದೆ. ಇನ್ನು, ಕೆಲವು ರೆಸ್ಟೋರೆಂಟ್ ಗಳ ನಿರ್ವಹಣೆಗೆ 2 ಲಕ್ಷಕ್ಕಿಂತ ಹೆಚ್ಚು ಹಣವನ್ನೇ ಖರ್ಚು ಮಾಡುತ್ತಿದೆ. ಹೀಗಿದ್ದರೂ ಸರಿಯಾದ ಆದಾಯವನ್ನು ಗಳಿಸಲು ಆಗದೇ ರೆಸ್ಟೋರೆಂಟ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದಾಯವಿಲ್ಲದೇ ವ್ಯಾಪಾರ ನಡೆಸುವುದೇ ಕಷ್ಟಸಾಧ್ಯವಾಗುತ್ತಿದೆ ಎಂದು ಕರ್ನಾಟಕ ಮದ್ಯ ಮಾರಾಟ ಸಂಘದ ಅಧ್ಯಕ್ಷ ಹೊನ್ನಗಿರಿ ಗೌಡ ತಿಳಿಸಿದ್ದಾರೆ.
ಆದಾಯವಿಲ್ಲದೇ ಸರ್ಕಾರಕ್ಕೆ ಶುಲ್ಕ ಪಾವತಿಸುವುದು ಹೇಗೆ?
ರಾಜ್ಯ ಸರ್ಕಾರವು ಜೂನ್ನಲ್ಲಿ ಬಾರ್ಗಳು, ರೆಸ್ಟೋರೆಂಟ್ ಗಳು ಮತ್ತು ನೈಟ್ ಕ್ಲಬ್ಗಳ ಮಾಲೀಕರಿಗೆ ಅರ್ಧದಷ್ಟು ಪರವಾನಗಿ ಶುಲ್ಕವನ್ನು ಮತ್ತು ಉಳಿದ ಭಾಗವನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಪಾವತಿಸುವಂತೆ ಸೂಚನೆ ನೀಡಿತ್ತು. ಕಳೆದ ಐದು ತಿಂಗಳಿನಿಂದ ಆದಾಯವಿಲ್ಲದ ಕಾರಣ, ಈ ಅವಧಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಯಾವುದೇ ಶುಲ್ಕ ವಿಧಿಸಬಾರದು ಎಂದು ಭಾರತದ ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಮನು ಚಂದ್ರ ಒತ್ತಾಯಿಸುತ್ತದೆ.
ರಾಜ್ಯ ಸರ್ಕಾರಕ್ಕೆ ಮನು ಚಂದ್ರ ಪ್ರಶ್ನೆ
ಅಬಕಾರಿ ಇಲಾಖೆಯು ಪರವಾನಗಿ ನವೀಕರಣಕ್ಕೆ ಎರಡು ಕಂತುಗಳಲ್ಲಿ ಹಣ ಪಾವತಿಸಲು ಅನುಮತಿ ನೀಡಿದೆ. ಆದರೆ ಕಳೆದ ಆರು ತಿಂಗಳಿನಿಂದ ನಾವು ಪಾವತಿಸಿರುವ ಶೇ.50ರಷ್ಟು ಹಣವನ್ನೇ ನಾವು ಸರಿಯಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ನಮ್ಮ ಹೂಡಿಕೆಯೂ ವ್ಯರ್ಥವಾಗುತ್ತಿದೆ. ವ್ಯಾಪಾರವಿಲ್ಲದೇ ತೀರಾ ನಷ್ಟವನ್ನು ಅನುಭವಿಸುತ್ತಿದ್ದೇವೆ. ಇಡೀ ವರ್ಷದ ಮುಂಗಡ ನವೀಕರಣ ಶುಲ್ಕವನ್ನು ಪಾವತಿಸುವಂತೆ ಸಲಹೆ ನೀಡಲಾಗುತ್ತಿದೆ. ಆದರೆ ಈ ಪರವಾನಗಿಯನ್ನು ಯಾವಾಗ ಬಳಸಿಕೊಳ್ಳಬೇಕು ಎನ್ನುವುದರ ಕುರಿತು ಸ್ಪಷ್ಟತೆಯಿಲ್ಲ. ರಾಜ್ಯದ ಪಾಲಿಗೆ ಅಬಕಾರಿ ಇಲಾಖೆಯಿಂದಲೇ ಅತಿಹೆಚ್ಚು ಆದಾಯವು ಸಂದಾಯವಾಗುತ್ತದೆ. ಹೀಗೆ ಇರುವಾಗ ನಮ್ಮನ್ನು ನಷ್ಟದ ತುತ್ತ ತುದಿಗೆ ತೆಗೆದುಕೊಂಡು ಹೋಗುತ್ತಿದ್ದೀರಿ. ಇಂಥ ಸಂದರ್ಭದಲ್ಲಿ ರಾಜ್ಯದ ಆದಾಯವನ್ನು ಹೇಗೆ ತಾನೆ ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ ಅಧ್ಯಕ್ಷ ಮನು ಚಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.