ನ್ಯಾಯಮೂರ್ತಿಗಳ ಜತೆ ಸಂಧಾನಕ್ಕೆ ಬಾರ್ ಕೌನ್ಸಿಲ್ ನಿಂದ 7 ವಕೀಲರ ನಿಯೋಗ
ನವದೆಹಲಿ, ಜನವರಿ 13: ಸುಪ್ರಿಂ ಕೋರ್ಟ್ ನ ನ್ಯಾಯಮೂರ್ತಿಗಳ ಜತೆಗಿನ ಮಾತುಕತೆಗೆ 7 ವಕೀಲರ ತಂಡ ರಚನೆ ಮಾಡಲು 'ಭಾರತೀಯ ಬಾರ್ ಕೌನ್ಸಿಲ್' ನಿರ್ಧರಿಸಿದೆ.
ಸುಪ್ರೀಂ ಕೋರ್ಟ್ ನ ನಾಲ್ವರು ಹಿರಿಯ ವಕೀಲರು ಶುಕ್ರವಾರ ತುರ್ತು ಪತ್ರಿಕಾಗೋಷ್ಠಿ ನಡೆಸಿ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಜತೆಗಿನ ತಮ್ಮ ಅಸಮಧಾನವನ್ನು ದೇಶದ ಮುಂದೆ ತೆರೆದಿಟ್ಟಿದ್ದರು. ಈ ಹಿನ್ನಲೆಯಲ್ಲಿ ಇಂದು ಸಭೆ ಸೇರಿದ ಬಾರ್ ಕೌನ್ಸಿಲ್ ಈ ತೀರ್ಮಾನ ತೆಗೆದುಕೊಂಡಿದೆ.
"ಸುಪ್ರೀಂ ಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿಗಳ ಜತೆ ಮಾತುಕತೆ ನಡೆಸಲು ಕೌನ್ಸಿಲ್ ನ 7ಸದಸ್ಯರ ನಿಯೋಗ ರಚನೆ ಮಾಡಲು ನಾವು ಅವಿರೋಧವಾಗಿ ನಿರ್ಧರಿಸಿದ್ದೇವೆ. ಈ ಸಮಸ್ಯೆ ಆದಷ್ಟು ಬೇಗ ಬಗೆಹರಿಯಲಿ ಎಂಬುದು ನಮ್ಮ ಇಚ್ಛೆಯಾಗಿದೆ," ಎಂದು ಬಾರ್ ಕೌನ್ಸಿಲ್ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಹೇಳಿದರು.
"'ಇದು ನ್ಯಾಯಾಂಗದ ಆಂತರಿಕ ವಿಚಾರ; ಇದರಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾನೂನು ಸಚಿವರು ಹೇಳಿದ್ದಾರೆ. ಸರಕಾರದ ಈ ತೀರ್ಮಾನವನ್ನು ನಾವು ಬೆಂಬಲಿಸುತ್ತೇವೆ," ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
"ನಾವು ರಾಹುಲ್ ಗಾಂಧಿ ಮತ್ತು ರಾಜಕಾರಣಿಗಳಿಗೆ ನ್ಯಾಯಾಂಗದ ಬಗ್ಗೆ ಮಾತನಾಡುವ ಅವಕಾಶವನ್ನು ನೀಡಿದ್ದೇವೆ. ಇದೊಂದು ದುರಾದೃಷ್ಟಕರ ಘಟನೆ. ಬಾರ್ ಕೌನ್ಸಿಲ್ ಪರವಾಗಿ ಅವರಿಗೆ ಮತ್ತು ಇತರ ರಾಜಕೀಯ ಪಕ್ಷಗಳಿಗೆ ಈ ಪ್ರಕರಣವನ್ನು ರಾಜಕೀಯಗೊಳಿಸದಂತೆ ನಾವು ಮನವಿ ಮಾಡಿಕೊಳ್ಳುತ್ತೇವೆ," ಎಂದು ಮನನ್ ಮಿಶ್ರಾ ವಿವರಿಸಿದ್ದಾರೆ.
ಇದೇ ವೇಳೆ ಸೋಮವಾರ (ಜನವರಿ 15) ಸುಪ್ರೀಂ ಕೋರ್ಟ್ ನಲ್ಲಿ ನಡೆಯಬೇಕಾಗಿದ್ದ ವಿಶೇಷ ಸಿಬಿಐ ನ್ಯಾಯಾಧೀಶ ಬಿ.ಎಚ್. ಲೋಯಾ ಶಂಕಸ್ಪಾದ ಸಾವಿನ ಪ್ರಕರಣದ ವಿಚಾರಣೆ ನಡೆಯುತ್ತಿಲ್ಲ. ಪ್ರಕರಣದ ವಿಚಾರಣೆ ನಡೆಸಬೇಕಾಗಿದ್ದ ನ್ಯಾಯಪೀಠದ ಓರ್ವ ನ್ಯಾಯಮೂರ್ತಿ ಎಂ. ಶಾಂತನಗೌಡರ್ ಸೋಮವಾರ ರಜೆಯಲ್ಲಿರುವುದರಿಂದ ಪ್ರಕರಣದ ವಿಚಾರಣೆ ನಡೆಯುತ್ತಿಲ್ಲ.