ಕನ್ನಡಿಗರ ಬ್ಯಾಂಕುಗಳ ಮೇಲೆ ಮೋದಿ ಸವಾರಿ; ವಿಲೀನ ಎಷ್ಟು ಸರಿ?
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗಣೇಶ ಚತುರ್ಥಿಗೂ ಮುನ್ನ ನೀಡಿದ 'ಮಹಾಬ್ಯಾಂಕ್ ವಿಲೀನ'ದ ಸುದ್ದಿಯಲ್ಲಿ ಕರ್ನಾಟಕ ನಿಟ್ಟುಸಿರು ಬಿಟ್ಟಿದ್ದು; ಕೆನರಾ ಮತ್ತು ಸಿಂಡಿಕೇಟ್ ಬ್ಯಾಂಕುಗಳನ್ನು ಇನ್ನೊಂದು ಬ್ಯಾಂಕಿನ ಜತೆ ವಿಲೀನಗೊಳಿಸದೇ ಇದ್ದ ಕಾರಣಕ್ಕೆ!
ಒಂದು ವೇಳೆ, ಇವೆರಡೂ ಬ್ಯಾಂಕ್ಗಳನ್ನು ವಿಲೀನಗೊಳಿಸಿದ್ದರೆ, ಅಲ್ಲಿಗೆ ಕರ್ನಾಟಕ ಮೂಲದ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳು ಇತಿಹಾಸದ ಪುಟಕ್ಕೆ ಸೇರುವಂತಾಗುತ್ತಿದ್ದವು. ಮೊದಲಿಗೆ ಮೈಸೂರು ಬ್ಯಾಂಕ್, ಇದಾದ ನಂತರ ವಿಜಯಾ ಬ್ಯಾಂಕ್. ಈಗ, ಕಾರ್ಪೋರೇಷನ್ ಬ್ಯಾಂಕ್.
ಸಿಂಡಿಕೇಟ್ ಬ್ಯಾಂಕ್- ಕೆನರಾ ಬ್ಯಾಂಕ್ ಜೊತೆ ವಿಲೀನಗೊಳ್ಳುತ್ತಿರುವುದರಿಂದ, 'ನಮ್ಮದು' ಎನ್ನುವುದಕ್ಕೆ ಒಂದಾದರೂ ಉಳಿದುಕೊಂಡಿದಷ್ಟೇ ಕನ್ನಡಿಗರಿಗಿರುವ ಸಂತೋಷ. ಆಡಳಿತಾತ್ಮಕ ಖರ್ಚು (operational expenses) ಈ ವಿಲೀನದಿಂದ ಬಹಳಷ್ಟು ಕಮ್ಮಿಯಾಗಲಿದೆ ಎನ್ನುವುದು ನಿರ್ಮಲಾ ಸೀತಾರಾಮನ್ ನೀಡಿದ ಸಮಜಾಯಿಷಿ.
10 ಬ್ಯಾಂಕುಗಳು ವಿಲೀನವಾಗಿ 4 ಬ್ಯಾಂಕ್, ಉದ್ಯೋಗ ಕಡಿತ ಭೀತಿ ಬೇಡ
ಆದರೂ, ಶತಮಾನಗಳ ಇತಿಹಾಸವಿರುವ ಈ ಬ್ಯಾಂಕುಗಳು ಇನ್ನೊಂದು ಬ್ಯಾಂಕುಗಳ ಜೊತೆ ವಿಲೀನಗೊಳ್ಳುತ್ತಿರುವುದು ಆಡಳಿತಾತ್ಮಕ ಅಂಶದ ಜತೆಗೆ ಭಾವನಾತ್ಮಕ ವಿಚಾರ ಕೂಡ. ಪ್ರಮುಖವಾಗಿ, ರಾಜ್ಯದ ಹಲವು ಜಿಲ್ಲೆಗಳಲ್ಲಿನ ಗ್ರಾಹಕರಿಗೆ ಈ ಬ್ಯಾಂಕ್ ಜೊತೆಗಿರುವ ನಂಟು.
ದಕ್ಷಿಣಕನ್ನಡ, ಉಡುಪಿ ಬ್ಯಾಂಕಿಂಗ್ ಉದ್ಯಮದಲ್ಲೂ ಮುಂಚೂಣಿ
ಕರಾವಳಿಯ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ ಹೇಗೆ ಶೈಕ್ಷಣಿಕ ವಿಚಾರದಲ್ಲಿ ಮಂಚೂಣಿಯಲ್ಲಿ ಬರುತ್ತವೋ, ಅದೇ ರೀತಿ ಬ್ಯಾಂಕಿಂಗ್ ಉದ್ಯಮದಲ್ಲೂ ಕೂಡಾ. ಕರ್ನಾಟಕ ಮೂಲದ ರಾಷ್ಟ್ರೀಕೃತ ಬ್ಯಾಂಕುಗಳ ಪೈಕಿ, ಮೈಸೂರು ಬ್ಯಾಂಕ್ ಒಂದನ್ನು ಹೊರತು ಪಡಿಸಿ, ಮಿಕ್ಕೆಲ್ಲವೂ ಕರಾವಳಿ ಭಾಗದಲ್ಲಿ ಹುಟ್ಟಿದವು ಎಂಬುದು ಗಮನಾರ್ಹ ಸಂಗತಿ.
ವಿಲೀನದ ಬಳಿಕ ಯಾವ ಬ್ಯಾಂಕಿನ ಮಾರುಕಟ್ಟೆ ಮೌಲ್ಯ ಎಷ್ಟಾಗಲಿದೆ?
ಸಿಂಡಿಕೇಟ್ ಬ್ಯಾಂಕ್ ಹೆಡ್ ಆಫೀಸ್ ಉಡುಪಿ ಜಿಲ್ಲೆಯಲ್ಲಿದೆ
ಆಡಳಿತಾತ್ಮಕವಾಗಿ ಸುಧಾರಣೆಯನ್ನು ತರಲು, ಜೊತೆಗೆ, ಇತರ ಬ್ಯಾಂಕುಗಳಿಗೆ ಪೈಪೋಟಿಯನ್ನು ನೀಡಲು, ನಂತರದ ದಿನಗಳಲ್ಲಿ ಕೆನರಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ತಮ್ಮ ಕೇಂದ್ರ ಕಚೇರಿಯನ್ನು ಬೆಂಗಳೂರಿಗೆ ವರ್ಗಾಯಿಸಿದ್ದವು. ಆದರೆ ಕಾರ್ಪೊರೇಷನ್ ಹಾಗೂ ಸಿಂಡಿಕೇಟ್ ಬ್ಯಾಂಕ್ಗಳ ಕೇಂದ್ರ ಕಚೇರಿಗಳು ಈಗಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಕಾರ್ಪೋರೇಷನ್ ಬ್ಯಾಂಕಿನ ಕೇಂದ್ರ ಕಚೇರಿ ಮಂಗಳೂರಿನಲ್ಲಿ ಮತ್ತು ಸಿಂಡಿಕೇಟ್ ಬ್ಯಾಂಕ್ ಹೆಡ್ ಆಫೀಸ್ ಮಣಿಪಾಲದಲ್ಲಿದೆ.
ದಕ್ಷಿಣ ಕನ್ನಡದವರ ಭಾವನಾತ್ಮಕ ಸಂಬಂಧ
ಈ ಎಲ್ಲಾ ಬ್ಯಾಂಕಿನ ಸಿಬ್ಬಂದಿಗಳು, ಗ್ರಾಹಕರು ಭಾವನಾತ್ಮಕ ಸಂಬಂಧವನ್ನು ತಮ್ಮತಮ್ಮ ಬ್ಯಾಂಕ್ ಜೊತೆ ಹೊಂದಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಬ್ಯಾಂಕುಗಳು ಪೈಪೋಟಿಯಲ್ಲಿದ್ದರೆ, ಹಲವಾರು ಅನುಕೂಲಗಳು ಸಿಗಲಿವೆ ಎನ್ನುವುದು ತಜ್ಞರ ಅಭಿಪ್ರಾಯವಾದರೂ, ಈ ಬ್ಯಾಂಕುಗಳಿಗೆ ಗ್ರಾಮೀಣ ಭಾಗದ ಜನರ ಜೊತೆಗಿನ ನಂಟು ಗಮನಿಸಬೇಕಾದ ಅಂಶ.
ಉಡುಪಿಯಲ್ಲಿ ಹುಟ್ಟಿದ ಕಾರ್ಪೋರೇಷನ್ ಬ್ಯಾಂಕ್
1925ರಲ್ಲಿ ಉಪೇಂದ್ರ ಅನಂತ ಪೈ, ಟಿಎಂಎ ಪೈ ಮತ್ತು ವಾಮನ ಕುಡ್ವ 'ಕೆನರಾ ಇಂಡಸ್ಟ್ರಿಯಲ್ ಆಂಡ್ ಬ್ಯಾಂಕಿಂಗ್ ಸಿಂಡಿಕೇಟ್' ಎನ್ನುವ ಹೆಸರಿನಲ್ಲಿ ಸಂಸ್ಥೆಯನ್ನು ಉಡುಪಿಯಲ್ಲಿ ಸ್ಥಾಪಿಸಿದ್ದರು. ತದನಂತರ ಇದು ಸಿಂಡಿಕೇಟ್ ಬ್ಯಾಂಕ್ ಎಂದು ಬದಲಾಯಿತು. ಉಡುಪಿಯಲ್ಲಿ ಹುಟ್ಟಿದ ಇನ್ನೊಂದು ಬ್ಯಾಂಕ್ ಕಾರ್ಪೋರೇಷನ್ ಬ್ಯಾಂಕ್. 1906ರಲ್ಲಿ ಸ್ಥಾಪನೆಗೊಂಡಿದ್ದ ಈ ಬ್ಯಾಂಕ್, 1980ರಲ್ಲಿ ರಾಷ್ಟ್ರೀಕೃತಗೊಂಡಿತ್ತು. 114ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಈ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನಗೊಳ್ಳಲಿದೆ.
ಮಂಗಳೂರಿನಲ್ಲಿ ಕೆನರಾ ಬ್ಯಾಂಕ್
ಇನ್ನು, 1906ರಲ್ಲಿ ಅಮ್ಮೆಂಬಳ ಸುಬ್ಬರಾವ್ 1906ರಲ್ಲಿ ಮಂಗಳೂರಿನಲ್ಲಿ ಕೆನರಾ ಬ್ಯಾಂಕ್ ಹುಟ್ಟು ಹಾಕಿದ್ದರು. ಮಂಗಳೂರಿನಲ್ಲೇ ಹಲವು ವರ್ಷ ಪ್ರಧಾನ ಕಚೇರಿಯನ್ನು ಹೊಂದಿತ್ತು. ತದನಂತರ, ಇದು ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಬ್ಯಾಂಕ್ ಆಫ್ ಬರೋಡಾದೊಳಗೆ ವಿಜಯ ಬ್ಯಾಂಕ್ ವಿಲೀನವಾದಾಗ, ಕನ್ನಡಿಗರು ಎಮೋಷನಲ್ ಆಗಿ ರಿಯಾಕ್ಟ್ ಮಾಡಿದ್ದರು. ಇದೀಗ ಎರಡನೇ ಸುತ್ತಿನ ವಿಲೀನದಲ್ಲಿ ಕನ್ನಡಿಗರು ಕಟ್ಟಿ ಬೆಳೆಸಿದ ಹೆಮ್ಮೆಯ ಮೈಸೂರು ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ, ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದ ಜೊತೆ, ಕಾರ್ಪೋರೇಷನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ವಿಲೀನಗೊಳ್ಳುತ್ತಿವೆ.
ನಮ್ಮ ಮಣ್ಣಿನ ಬ್ಯಾಂಕುಗಳು, ಇನ್ನೊಂದು ಬ್ಯಾಂಕ್ ಗಳು ವಿಲೀನ
ಆರ್ಥಿಕ ಸುಧಾರಣೆಗೆ, ಇತರೇ ಖರ್ಚುಗಳಿಗೆ ಕಡಿವಾಣ ಹಾಕಲು ಈ ನಿರ್ಧಾರ ಅವಶ್ಯಕತೆ ಇದ್ದಿರಬಹುದು. ವಿಲೀನಗೊಳ್ಳುತ್ತಿರುವ ಬ್ಯಾಂಕಿನ ಸಿಬ್ಬಂದಿಗಳ ಕೆಲಸಕ್ಕೆ ತೊಂದರೆಯಿಲ್ಲ ಎನ್ನುವ ಸುದ್ದಿಯ ನಡುವೆ, ನಮ್ಮ ಮಣ್ಣಿನ ಬ್ಯಾಂಕುಗಳು, ಹೊರರಾಜ್ಯದ ಬ್ಯಾಂಕ್ಗಳ ಜತೆ ವಿಲೀನಗೊಳ್ಳುತ್ತಿರುವುದು ಸಹಜವಾಗಿಯೇ ಬೇಸರ ಮೂಡಿಸುತ್ತದೆ. ಹಣಕಾಸಿನ ವ್ಯವಹಾರವೇ ಇದಾಗಿದ್ದರೂ, ಭಾವನಾತ್ಮಕ ತಂತೊಂದು ಇದರ ಹಿಂದಿದೆ ಎಂಬುದು ಕಾರಣ.