ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡೀಪುರ: ಮನುಷ್ಯರ ತೆವಲಿಗೆ ವನ್ಯಪ್ರಾಣಿಗಳು ಬಲಿಯಾಗಬೇಕೇ?

|
Google Oneindia Kannada News

Recommended Video

Bandipur National Park : ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರದ ಬಗೆಗಿನ ವಿವಾದ ಜೋರು | Oneinda Kannada

ಬೆಂಗಳೂರು, ಆಗಸ್ಟ್ 3: ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನಗಳಲ್ಲಿ ಒಂದಾದ ಬಂಡೀಪುರದಲ್ಲಿ ರಾತ್ರಿ ವೇಳೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ವಿವಾದ ಮತ್ತೆ ಚರ್ಚೆಗೆ ಒಳಗಾಗುತ್ತಿದೆ.

ಒಂದೆಡೆ ವನ್ಯಜೀವಿಗಳ ಆವಾಸಸ್ಥಾನವಿರುವ ಪ್ರದೇಶಗಳಲ್ಲಿ ಮಾನವ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬ ತೀರ್ಪು ಕಟ್ಟುನಿಟ್ಟಾಗಿ ಜಾರಿಗೆ ಬಾರದೆ ಅವಘಡಗಳು ಸಂಭವಿಸುತ್ತಿದ್ದರೆ, ಇನ್ನೊಂದೆಡೆ ಬೇಜವಾಬ್ದಾರಿ ನಿರ್ಧಾರಗಳು ನಮ್ಮ ವನ್ಯ ಹಾಗೂ ಪ್ರಾಣಿ ಸಂಪತ್ತಿಗೆ ಮಾರಕವಾಗುತ್ತಿದೆ.

ಬಂಡೀಪುರ ಅರಣ್ಯದಲ್ಲಿ ಫ್ಲೈಓವರ್‌: ಕರ್ನಾಟಕ ಸರ್ಕಾರದ ರೆಡ್‌ ಸಿಗ್ನಲ್‌ಬಂಡೀಪುರ ಅರಣ್ಯದಲ್ಲಿ ಫ್ಲೈಓವರ್‌: ಕರ್ನಾಟಕ ಸರ್ಕಾರದ ರೆಡ್‌ ಸಿಗ್ನಲ್‌

ಬಂಡೀಪುರ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಕೇರಳ ಸರ್ಕಾರದ ಬೇಡಿಕೆಯ ವಿಚಾರವೂ ಇಂಥದ್ದೇ ಅಪಾಯಗಳಿಗೆ ಎಡೆಮಾಡಿಕೊಡಲಿದೆ. ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಅಲ್ಲಿ ಫ್ಲೈಓವರ್ ಮಾಡುವ ಪ್ರಸ್ತಾವವನ್ನೂ ತಿರಸ್ಕರಿಸಿದ್ದಾರೆ.

ಕೇರಳ ಸರ್ಕಾರದ ಲಾಬಿ

ಕೇರಳ ಸರ್ಕಾರದ ಲಾಬಿ

ನಿಜಕ್ಕೂ ಇಲ್ಲಿ ರಾತ್ರಿ ವಾಹನ ಸಂಚಾರದ ಅವಶ್ಯಕತೆಯಿದೆಯೇ? ಕೇರಳ ಸರ್ಕಾರ ಅಷ್ಟು ಒತ್ತಡ ಹಾಕುತ್ತಿರುವುದಕ್ಕೆ ಕಾರಣ ಏನು?

ವನ್ಯಜೀವಿ ಪ್ರೇಮಿಗಳ ಪ್ರಕಾರ, ಇಲ್ಲಿರುವುದು ಕೇರಳದ ಲಾರಿ ಮಾಲೀಕರ ಲಾಬಿ. ಇಲ್ಲಿ ವನ್ಯಪ್ರಾಣಿಗಳ ಜೀವ ನಗಣ್ಯ. ಸರಕು ಸಾಗಣೆ, ಪ್ರವಾಸಿಗರ ಅನುಕೂಲದ ನೆಪದಲ್ಲಿ ಅಕ್ರಮ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಮಾಡುವುದು ಈ ಒತ್ತಾಯದ ಹಿಂದಿರುವ ಮತ್ತೊಂದು ಅನಾಹುತಕಾರಿ ಉದ್ದೇಶ ಎನ್ನುವುದು ಅವರ ಆರೋಪ.

ಬಂಡೀಪುರ ಅರಣ್ಯದ ಮಾರ್ಗವು ತಮಿಳುನಾಡು ಮತ್ತು ಕೇರಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿ ತಕರಾರಿರುವುದು ಕೇರಳದಿಂದ ಮಾತ್ರ.

ಎರಡು ಬಸ್, ತುರ್ತು ವಾಹನಗಳಿಗೆ ಅವಕಾಶ

ಎರಡು ಬಸ್, ತುರ್ತು ವಾಹನಗಳಿಗೆ ಅವಕಾಶ

ಸದ್ಯ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆವರೆಗೆ ಕೇರಳ ಹಾಗೂ ಕರ್ನಾಟಕದ ತಲಾ ಎರಡು ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಮಾತ್ರ ಅವಕಾಶವಿದೆ. ಉಳಿದಂತೆ ಆಂಬುಲೆನ್ಸ್, ಫೈರ್ ಎಂಜಿನ್‌ನಂತಹ ತುರ್ತಾಗಿ ಹೋಗಬೇಕಿರುವ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ಉಳಿದಂತೆ ಬೇರಾವ ವಾಹನಗಳಿಗೂ ಈ ಮಾರ್ಗಗಳಲ್ಲಿ ಬೆಳಗಿನವರೆಗೆ ಪ್ರಯಾಣಕ್ಕೆ ಅನುಮತಿಯಿಲ್ಲ.

ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೆಂಬ ಬೇಡಿಕೆ ಇಂದು ನಿನ್ನೆಯದ್ದಲ್ಲ. ವಿವಿಧ ರೀತಿಯಲ್ಲಿ ಕರ್ನಾಟಕ ಸರ್ಕಾರದ ಮೇಲೆ ಒತ್ತಡಗಳು ಬರುತ್ತಲೇ ಇವೆ. ಇವುಗಳಿಗೆ ಮಣಿಯದೆ ಇದುವರೆಗೂ ಕರ್ನಾಟಕ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಅಲ್ಲದೆ ಈ ವಿಚಾರ ಸುಪ್ರೀಂಕೋರ್ಟ್ ನಲ್ಲಿ ಇರುವುದರಿಂದ ಸದ್ಯಕ್ಕೆ ಅದರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸಹ ತಿಳಿಸಿದೆ.

ಬಂಡೀಪುರ ಅರಣ್ಯದಲ್ಲಿ ರಾತ್ರಿ ವೇಳೆ ಉಪಟಳ: ಅರಣ್ಯ ಪ್ರಿಯರ ಬೇಸರಬಂಡೀಪುರ ಅರಣ್ಯದಲ್ಲಿ ರಾತ್ರಿ ವೇಳೆ ಉಪಟಳ: ಅರಣ್ಯ ಪ್ರಿಯರ ಬೇಸರ

ಪ್ರಾಣಿಗಳನ್ನು ಬಲಿಕೊಡಬೇಕೇ?

ಪ್ರಾಣಿಗಳನ್ನು ಬಲಿಕೊಡಬೇಕೇ?

ಕೇರಳದ ಲಾಭಕ್ಕಾಗಿ ಪ್ರಾಣಿಗಳನ್ನು ಬಲಿಕೊಡಬೇಕೇ ಎನ್ನುವುದು ವನ್ಯಜೀವಿ ಪ್ರಿಯರ ಪ್ರಶ್ನೆ. ರಾತ್ರಿ ವೇಳೆ ಪ್ರಾಣಿಗಳು ಹೆಚ್ಚಾಗಿ ಸಂಚರಿಸುತ್ತವೆ. ಈಗಾಗಲೇ ಕಾಡಿನ ಮಧ್ಯ ರಸ್ತೆ ಹಾದುಹೋಗಿರುವುದರಿಂದ ಹಗಲಿನ ವೇಳೆಯಲ್ಲಿಯೂ ಅವುಗಳ ಮುಕ್ತ ಓಡಾಟಕ್ಕೆ ತೊಂದರೆಯುಂಟಾಗುತ್ತಿದೆ. ವಾಹನಗಳಿಗೆ ಸಿಲುಕಿ ಪ್ರಾಣಿಗಳು ಸಾಯುತ್ತಿರುವ ಘಟನೆಗಳು ಈಗಲೂ ವರದಿಯಾಗುತ್ತಿವೆ.

ಪ್ರಾಣಿಗಳ ದಾಳಿಯ ಅಪಾಯ

ಪ್ರಾಣಿಗಳ ದಾಳಿಯ ಅಪಾಯ

ಅರಣ್ಯ ರಸ್ತೆ ಅಪಾಯಕಾರಿ ತಿರುವುಗಳನ್ನು ಒಳಗೊಂಡಿದೆ. ಯಾವ ಸಂದರ್ಭದಲ್ಲಿ ಪ್ರಾಣಿಗಳು ರಸ್ತೆಗೆ ನುಗ್ಗುತ್ತವೆಯೋ ಎನ್ನುವುದು ತಿಳಿಯುವುದಿಲ್ಲ. ರಾತ್ರಿ ವಾಹನಗಳನ್ನು ಕಂಡು ಆನೆಗಳು ದಾಳಿ ನಡೆಸುವ ಅಪಾಯವೂ ಇರುತ್ತದೆ. ಇಂತಹ ಘಟನೆಗಳು ನಡೆದಾಗ ಅಥವಾ ಅಪಘಾತಗಳು ಸಂಭವಿಸಿದಾಗ ಪ್ರಾಣಗಳಿಂದ ಅವರನ್ನು ಮತ್ತು ಜನರಿಂದ ಪ್ರಾಣಿಗಳನ್ನು ರಕ್ಷಿಸುವುದು ಹೇಗೆ ಎಂಬ ಸಂಕಷ್ಟ ಎದುರಾಗುತ್ತದೆ.

ಇಲ್ಲಿ ರಾತ್ರಿ ಪ್ರಯಾಣಿಕರನ್ನು ಕಾಯಲು ಹೆಚ್ಚುವರಿ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕಾಗುತ್ತದೆ. ಅಪಘಾತ ಅಥವಾ ಪ್ರಾಣಿಗಳ ದಾಳಿಯಂತಹ ತುರ್ತು ಸಂದರ್ಭದಲ್ಲಿ ನೆರವಾಗುವುದು ಕಷ್ಟ. ಇದರಿಂದ ವನ್ಯಜೀವಿ-ಮನುಷ್ಯರ ನಡುವಣ ಸಂಘರ್ಷ ಮತ್ತಷ್ಟು ಹೆಚ್ಚುತ್ತದೆ ಎನ್ನುತ್ತಾರೆ ವನ್ಯಪ್ರಾಣಿಪ್ರಿಯರು.

ಅಕ್ರಮ ಚಟುವಟಿಕೆಗೆ ರಹದಾರಿ

ಅಕ್ರಮ ಚಟುವಟಿಕೆಗೆ ರಹದಾರಿ

ಬಂಡೀಪುರದಲ್ಲಿ ಕಳ್ಳಬೇಟೆ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಎಷ್ಟೇ ಕಣ್ಗಾವಲು ಇರಿಸಿದರೂ ಅರಣ್ಯದಲ್ಲಿ ಅಕ್ರಮ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುತ್ತವೆ. ರಾತ್ರಿ ವಾಹನ ಪ್ರಯಾಣಕ್ಕೆ ಅವಕಾಶ ನೀಡಿದರೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತದೆ ಎನ್ನುವುದು ವನ್ಯಪ್ರಿಯರ ಕಳವಳ.

ಮುಖ್ಯವಾಗಿ ಕೇರಳದ ಭಾಗದಿಂದ ಕಿಡಿಗೇಡಿಗಳು ಅರಣ್ಯದೊಳಗೆ ಪ್ರವೇಶಿಸಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಸಾಧ್ಯತೆ ಹೆಚ್ಚಿದೆ. ರಾತ್ರಿ ವೇಳೆ ಅವರ ಚಟುವಟಿಕೆಗಳನ್ನು ಪತ್ತೆಹಚ್ಚುವುದು ಸುಲಭವಲ್ಲ.

ಎಲೆವೇಟೆಡ್ ಹೈವೇ ಭಯ

ಎಲೆವೇಟೆಡ್ ಹೈವೇ ಭಯ

ಕರ್ನಾಟಕ ಹಾಗೂ ಕೇರಳ ನಡುವೆ ಬಂಡೀಪುರ ಅರಣ್ಯ ಮಾರ್ಗದಲ್ಲಿ ಎಲಿವೇಟೆಡ್ ಹೈವೇ ಫ್ಲೈಓವರ್ ನಿರ್ಮಿಸುವ ಸಂಬಂಧ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪತ್ರ ಬರೆದಿತ್ತು. ಇದಕ್ಕೆ ಕರ್ನಾಟಕ ಸರ್ಕಾರ ಸಹಮತ ವ್ಯಕ್ತಪಡಿಸಿಲ್ಲ.

ಒಂದು ವೇಳೆ ಇದಕ್ಕೆ ಅನುಮೋದನೆ ದೊರೆತರೆ, ಹುಲಿ ಸಂರಕ್ಷಿತ ಪ್ರದೇಶದ 24 ಕಿ.ಮೀ. ವ್ಯಾಪ್ತಿಯಲ್ಲಿ ವಿಶಾಲವಾದ ಹೈವೇ ನಿರ್ಮಾಣವಾಗಲಿದೆ. 50 ಸಾವಿರಕ್ಕೂ ಅಧಿಕ ಮರಗಳನ್ನು ಬಲಿಕೊಡಬೇಕಾಗುತ್ತದೆ. ಈಗಾಗಲೇ ಅಳಿವಿನಂಚಿರುವ ಹುಲಿಗಳ ಆವಾಸ ಸ್ಥಾನಕ್ಕೆ ಕೊಡಲಿ ಏಟು ನೀಡುವುದರಿಂದ ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಕಳವಳ ವ್ಯಕ್ತವಾಗಿದೆ.

ಆನ್‌ಲೈನ್ ಅಭಿಯಾನಕ್ಕೆ ಕೈಜೋಡಿಸಿ

ಬಂಡೀಪುರದಲ್ಲಿ ಎಲಿವೇಟೆಡ್ ಹೈವೇ ನಿರ್ಮಾಣ ಹಾಗೂ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವುದು ಬೇಡ ಎಂದು ಒತ್ತಾಯಿಸಿ ಆನ್‌ಲೈನ್ ಸಹಿಸಂಗ್ರಹ ಅಭಿಯಾನ ಆರಂಭವಾಗಿದೆ.

ಕರ್ನಾಟಕ ಹೈಕೋರ್ಟ್‌ನ ಆದೇಶದ ಅಡಿ ಸ್ಥಾಪಿತವಾದ ವಿಶೇಷ ಸಮಿತಿಯು, ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅವಕಾಶ ನೀಡುವುದರಿಂದ ಎಲ್ಲ ವನ್ಯಪ್ರಾಣಿಗಳಿಗೆ ಮತ್ತು ಅವುಗಳ ಆವಾಸಸ್ಥಾನಗಳಿಗೆ ತೊಂದರೆಯುಂಟಾಗುತ್ತದೆ. ಹೀಗಾಗಿ ಈಗಿರುವ ನಿಯಮವನ್ನೇ ಮುಂದುವರಿಸಬೇಕು. ಸಾಧ್ಯವಾದರೆ ಸಂಜೆ 6 ಗಂಟೆಯಿಂದಲೇ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಬೇಕು ಎಂದ ಸಮಿತಿ ವರದಿ ನೀಡಿರುವುದನ್ನು ಅಭಿಯಾನ ಪ್ರಸ್ತಾಪಿಸಿದೆ.

ಈಗಿರುವ ರಸ್ತೆಯನ್ನೇ ಬಳಸಬಹುದು

ಕರ್ನಾಟಕ ಮತ್ತು ಕೇರಳ ನಡುವೆ ಸಂಪರ್ಕ ಕಲ್ಪಿಸುವ ಇನ್ನೊಂದು ಪರ್ಯಾಯ ಮಾರ್ಗವಿದೆ. ಕರ್ನಾಟಕ ಸರ್ಕಾರದ ಕಡೆಯಿಂದ 500 ಮಿಲಿಯನ್ ಹಾಗೂ ಕೇರಳ ಸರ್ಕಾರದ ಕಡೆಯಿಂದ 300 ಮಿಲಿಯನ್ ವೆಚ್ಚದಲ್ಲಿ ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗಿದೆ.

ಹುಣಸೂರು-ಗೋಣಿಕೊಪ್ಪ-ಕುಟ್ಟಾ-ಕಾರ್ತಿಕುಳಂ ಮಾರ್ಗ ಹಾಗೂ ಕೋಣನೂರು-ಮಾಕುಟ್ಟಾ, ಮಡಿಕೇರಿ-ಕುಟ್ಟಾ ಮಾರ್ಗಗಳಲ್ಲಿ ಕೇರಳವನ್ನು ಸಂಪರ್ಕಿಸಬಹುದು. ಈ ರಸ್ತೆಗಳು ಹಗಲು ರಾತ್ರಿ ಸಂಚಾರಕ್ಕೆ ಈಗಾಗಲೇ ಮುಕ್ತವಾಗಿ ಬಳಕೆಯಾಗುತ್ತಿವೆ. ಈ ಪರ್ಯಾಯ ಮಾರ್ಗವು ಕೇವಲ 30 ಕಿ.ಮೀ. ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತದೆ ಎಂದು ಸಹಿ ಸಂಗ್ರಹ ಅಭಿಯಾನ ಆರಂಭಿಸಿರುವ ಕೃಷ್ಣ ನವೀನ್ ವಾದಿಸಿದ್ದಾರೆ.

ಅರ್ಜಿದಾರನ ವಿರುದ್ಧ ದೂರು

ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿರುವ ಅರ್ಜಿದಾರನ ವಿರುದ್ಧ ಮೂರು ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗಿವೆ.

ಆನೆಯ ಮರಿಯನ್ನು ಕೊಂದಿರುವುದು, ಅರಣ್ಯ ಪ್ರದೇಶದ ಒತ್ತುವರಿ ಮತ್ತು ಅರಣ್ಯದ ಗಡಿಭಾಗವನ್ನು ಹಾಳುಗೆಡಿಸಿರುವ ಆರೋಪಗಳು ಆತನ ವಿರುದ್ಧವಿದೆ. ಆರೋಪಿಯೊಬ್ಬನು ರಾತ್ರಿ ಸಂಚಾರಕ್ಕೆ ಅನುಮತಿ ನೀಡುವಂತೆ ಹೋರಾಟ ನಡೆಸುತ್ತಿರುವುದು ದೊಡ್ಡ ಮಟ್ಟದ ಅನುಮಾನವನ್ನು ಹುಟ್ಟಿಸಿದೆ ಎಂದು ಕೃಷ್ಣ ನವೀನ್ ಹೇಳಿದ್ದಾರೆ.

ಮಲೆಮಹದೇಶ್ವರದಲ್ಲೂ ನಿರ್ಬಂಧ?

ಚಾಮರಾಜನಗರದ ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಧಾಮಗಳಲ್ಲಿನ ರಾಜ್ಯ ಹೆದ್ದಾರಿ 79ರಲ್ಲಿಯೂ ರಾತ್ರಿ ಸಂಚಾರಕ್ಕೆ ನಿರ್ಬಂಧ ವಿಧಿಸುವ ಪ್ರಸ್ತಾವವನ್ನು ಅರಣ್ಯ ಇಲಾಖೆ ಜಿಲ್ಲಾಧಿಕಾರಿ ಮುಂದೆ ಇರಿಸಿದೆ.

ಈ ಅರಣ್ಯಗಳ ವ್ಯಾಪ್ತಿಯಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಈಗ ನಿರ್ಬಂಧವಿಲ್ಲ. ಆದರೆ, ವಾಹನಗಳಿಗೆ ಡಿಕ್ಕಿಯಾಗಿ ಪ್ರಾಣಿಗಳು ಬಲಿಯಾದ ಘಟನೆಗಳು ಆಗಾಗ ನಡೆಯುತ್ತಲೇ ಇವೆ. ಹೀಗಾಗಿ ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯ ತಾಳಬೆಟ್ಟ ಕ್ರಾಸ್‌ನಿಂದ ಅಸ್ತೂರ್ ಕ್ರಾಸ್‌ವರೆಗೆ (14 ಕಿ.ಮೀ) ಹಾಗೂ ಕಾವೇರಿ ವನ್ಯಧಾಮ ವ್ಯಾಪ್ತಿಯ ಪಾಲಾರ್ ಕ್ರಾಸ್‌ನಿಂದ ಆಲಂಬಾಡಿ ಕ್ರಾಸ್‌ವರೆಗೆ (33 ಕಿ.ಮೀ.) ರಾತ್ರಿ ವಾಹನ ಸಂಚಾರವನ್ನು ನಿಷೇಧಿಸಬೇಕು ಎಂದು ವನ್ಯಜೀವಿ ಮಂಡಳಿ ಶಿಫಾರಸು ಮಾಡಿತ್ತು.

ಹುಲಿ, ಆನೆ, ಕಾಡೆಮ್ಮೆ ಸೇರಿದಂತೆ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಅಪಘಾತದಿಂದ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ 2009ರಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 212 ಮತ್ತು 69 ರಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರವನ್ನು ನಿಷೇಧಿಸಿ ಚಾಮಾರಾಜನಗರ ಜಿಲ್ಲಾ ಆಡಳಿತ ಆದೇಶ ಹೊರಡಿಸಿತ್ತು. ವಾಹನಗಳ ಸಂಚಾರ ನಿಷೇಧವನ್ನು ರದ್ದುಪಡಿಸದಂತೆ ಕರ್ನಾಟಕ ಹೈಕೋರ್ಟ್ 2010ರಲ್ಲಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇರಳ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ನಡೆಯುತ್ತಿದೆ.

ಬಲಿಯಾದ ಪ್ರಾಣಿಗಳೆಷ್ಟು?

ಬಲಿಯಾದ ಪ್ರಾಣಿಗಳೆಷ್ಟು?

ಹಗಲಿನ ವೇಳೆಯೇ ರಸ್ತೆ ಅವಘಡಗಳು ಸಂಭವಿಸುತ್ತಿವೆ. ಬಂಡೀಪುರದಲ್ಲಿ ಪ್ರತಿ ವರ್ಷವೂ ವಾಹನಗಳಿಗೆ ಸಿಲುಕಿ ಪ್ರಾಣಿಗಳು ಸಾಯುತ್ತಿರುವುದು ವರದಿಯಾಗುತ್ತವೆ.
2004ರಲ್ಲಿ 32, 2005ರಲ್ಲಿ 7, 2007ರಲ್ಲಿ 41, 2008 ರಲ್ಲಿ 2, 2009 ರಲ್ಲಿ 2, 2010ರಲ್ಲಿ 3, 2011ರಲ್ಲಿ 7, 2012ರಲ್ಲಿ 10, 2013ರಲ್ಲಿ 6, 2014ರಲ್ಲಿ 1, 2015ರಲ್ಲಿ 2, 2016ರಲ್ಲಿ 1, 2017ರಲ್ಲಿ 2, 2018ರಲ್ಲಿ 2 ಪ್ರಾಣಿಗಳು ಬಲಿಯಾಗಿರುವುದು ವರದಿಯಾಗಿವೆ.

ಮಲೆಮಹದೇಶ್ವರ ಮತ್ತು ಕಾವೇರಿ ವನ್ಯಧಾಮಗಳಲ್ಲಿಯೂ ಅನೇಕ ಪ್ರಕರಣಗಳು ವರದಿಯಾಗಿವೆ. ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ 2012ರಲ್ಲಿ ಚಿರತೆಯೊಂದು ಬಸ್ಸಿಗೆ ಸಿಲುಕಿ ಬಲಿಯಾಗಿತ್ತು. 2013ರಲ್ಲಿ ಚಿರತೆ ಮರಿ ಮತ್ತು ಕಡವೆ ಬಲಿಯಾಗಿದ್ದವು.

2015ರಲ್ಲಿ ಹನೂರು ಬಫರ್ ವಲಯದಲ್ಲಿ ವಾಹನಕ್ಕೆ ಡಿಕ್ಕಿ ಹೊಡೆದು ಗರ್ಭಿಣಿ ಜಿಂಕೆ ಮೃತಪಟ್ಟಿತ್ತು. ಈ ಘಟನೆಯಲ್ಲಿ ಜಿಂಕೆಯ ಹೊಟ್ಟೆಯೊಳಗಿದ್ದ ಮರಿ ಹೊರಬಂದಿದ್ದು ನೋಡಿದವರ ಕರಳು ಹಿಂಡುವಂತಿತ್ತು.

English summary
Wildlife activists opposing the proposal of allowing vehicles at night in Bandipur National Park. An online petition also been started regarding this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X