ಕನ್ನಡ ನಾಮಫಲಕ ಕಾಯಿದೆಗಾಗಿ ಆನ್ ಲೈನ್ ನಲ್ಲಿ ಅರ್ಜಿ, ಸಹಿ ಹಾಕಿ
ಇತ್ತೀಚಿಗೆ ಬೆಂಗಳೂರು ಮಹಾನಗರ ಪಾಲಿಕೆಯು, ನಗರಾದ್ಯಂತ ಇರುವ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ನೂರಕ್ಕೆ ಅರವತ್ತಕ್ಕಿಂತಾ ಹೆಚ್ಚು ಪ್ರಮಾಣದಲ್ಲಿ ಕನ್ನಡ ಇರಬೇಕೆಂದು ಆದೇಶಿಸಿರುವುದನ್ನು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರೀಟೇಲ್ ಲಿಮಿಟೆಡ್ ಮತ್ತು ಭಾರತೀಯ ಚಿಲ್ಲರೆ ಮಾರಾಟಗಾರರ ಸಂಘದವರು ಪ್ರಶ್ನೆ ಮಾಡಿದ್ದಾರೆ.
ಇದರ ವಿಚಾರಣೆ ನಡೆಯುತ್ತಿದ್ದು ಮಾನ್ಯ ನ್ಯಾಯಾಧೀಶರು, ಬೆಂಗಳೂರು ಮಹಾನಗರ ಪಾಲಿಕೆಯನ್ನು 'ಈ ಸಂಬಂಧದ ಆದೇಶವನ್ನು ಯಾವ ಕಾಯ್ದೆಯ ಅಡಿಯಲ್ಲಿ ಜಾರಿಮಾಡಲಾಗಿದೆ' ಎಂದು ಕೇಳಿದ್ದಾರೆ. ನಗರ ಪಾಲಿಕೆಯ ಸದರಿ ಆದೇಶವು ಕರ್ನಾಟಕ ಶಾಪ್ಸ್ & ಎಸ್ಟಾಬ್ಲಿಶ್ಮೆಂಟ್ ರೂಲ್ - 1963, 1976 ಗಳನ್ನು ಆಧಾರವಾಗಿ ಹೊಂದಿದ್ದು ನಾಮಫಲಕದಲ್ಲಿ ಕನ್ನಡವನ್ನು ಕಡ್ಡಾಯ ಮಾಡಿರುವ ಆದೇಶವು 24-A ಅಂಶವು ಕಾಯ್ದೆಯಲ್ಲಿದೆ.
ನಾಮಫಲಕದಲ್ಲಿ ಕನ್ನಡ ಕಡ್ಡಾಯ ಯಾವ ಕಾಯ್ದೆಯೆಲ್ಲಿದೆ? ಹೈಕೋರ್ಟ್
ಈ ಹಿಂದೆ 2014ರಲ್ಲಿ ಇಂಥದ್ದೇ ಆದೇಶದ ವಿರುದ್ಧವಾಗಿ ವೋಡಾಫೋನ್ ಸಂಸ್ಥೆಯು ಉಚ್ಚ ನ್ಯಾಯಾಲಯದ ಮೊರೆ ಹೋಗಿತ್ತು. ಆಗ ತೀರ್ಪು ನೀಡಿದ್ದ ನ್ಯಾಯಾಲಯವು ಇದು ಆ ಕಾಯ್ದೆಯ ಮೂಲಉದ್ದೇಶಗಳಿಗೆ ಪೂರಕವಾಗಿಲ್ಲದ ಕಾರಣದಿಂದ ಕಾನೂನುಬದ್ಧವಲ್ಲ ಎಂದು ತೀರ್ಪು ನೀಡಿತ್ತು.
ಇಲ್ಲಿ ಗಮನಿಸಬೇಕಾದ ಒಂದೆರಡು ಅಂಶಗಳಿವೆ. ಸನ್ಮಾನ್ಯ ನ್ಯಾಯಾಧೀಶರು ವಿಚಾರಣೆಯ ವೇಳೆಯಲ್ಲಿ "ಭಾಷೆಯು ನಮ್ಮ ಸಂಸ್ಕೃತಿಯನ್ನುಬಿಂಬಿಸುತ್ತದೆ. ನಿಮಗೆ ಅದನ್ನು ಪ್ರಚುರಪಡಿಸಬೇಕಿದ್ದರೆ ಶಾಲೆ ಕಾಲೇಜುಗಳ ಮೂಲಕ ಭಾಷೆಯ ಶ್ರೇಷ್ಠತೆ ತಿಳಿಸಿ, ಅದನ್ನು ಬಿಟ್ಟು ವಾಣಿಜ್ಯ ಸಂಸ್ಥೆಗಳ ಮೇಲೇಕೆ ಒತ್ತಡ ಹೇರುತ್ತೀರಿ?" ಎಂದು ಪ್ರಶ್ನಿಸಿದ್ದಾರೆ. ಆ ಮೂಲಕ ತಮ್ಮ ಪೂರ್ವಾಗ್ರಹವನ್ನು ತೆರೆದಿಟ್ಟಿರುವಂತೆ ತೋರಿದರೆ ಅಚ್ಚರಿ.
ಕನ್ನಡಕ್ಕೆ ಯಾಕೆ ಪ್ರಾತಿನಿಧ್ಯ ಇರಬೇಕು
'ನಾಮಫಲಕಗಳಲ್ಲಿ ಕನ್ನಡಕ್ಕೆ ಯಾಕೆ ಪ್ರಾತಿನಿಧ್ಯ ಇರಬೇಕು' ಎನ್ನುವ ಪ್ರಶ್ನೆಗೆ ನಾವು ಉತ್ತರ ಹೇಳಲೇಬೇಕಿದೆ. ಕರ್ನಾಟಕದಲ್ಲಿ ನಿವಾಸಿಗಳಾದ ಕನ್ನಡಿಗರಲ್ಲಿ ಸುಮಾರು ಅರ್ಧದಷ್ಟು ಜನರಿಗೆ ಕನ್ನಡವಲ್ಲದೆ ಬೇರೆ ಯಾವ ನುಡಿಯೂ ಓದಲು ಬರೆಯಲು ಬಾರದು. ಹೀಗೆ ಕನ್ನಡವನ್ನು ಮಾತ್ರಾ ಗೊತ್ತಿರುವ ಜನರಿಗೆ ಅವರದೇ ನೆಲದಲ್ಲಿ ಇರುವ ಅಂಗಡಿ ಮುಂಗಟ್ಟುಗಳ ನಾಮಫಲಕಗಳು ತಿಳಿಯುವ ಭಾಷೆಯಲ್ಲಿರಬೇಕಷ್ಟೇ!
ಕನ್ನಡ ಭಾಷೆ ಕಲಿಕೆ ಕಡ್ಡಾಯ: ಖಾಸಗಿ ಶಾಲೆಗಳಿಗೆ ಖಡಕ್ ಆದೇಶ
ಇಡೀ ಕನ್ನಡನಾಡಿನ ಹಿತ ಕಾಯಬೇಕಾದ ರಾಜ್ಯಸರ್ಕಾರ ಈ ನಿಟ್ಟಿನಲ್ಲಿ ನಮ್ಮ ನೆಲದ ಅಂಗಡಿ ಮುಂಗಟ್ಟುಗಳನ್ನು ಕನ್ನಡದಲ್ಲಿ ನಾಮಫಲಕ ಹಾಕುವುದು ಕಡ್ಡಾಯ ಎನ್ನುವ ಕಾಯ್ದೆ ಮಾಡಿದರೆ ತಪ್ಪೇನು? ನಮಗೆ ಕನ್ನಡ ಸಂಸ್ಕೃತಿ ಉಳಿಸುವ/ ಪ್ರಚುರ ಪಡಿಸುವ ಕಾರಣಕ್ಕೆ ನಾಮಫಲಕದಲ್ಲಿ ಕನ್ನಡ ಬೇಕಿಲ್ಲ. ನಮ್ಮ ಜನಕ್ಕೆ ಆಗುತ್ತಿರುವ ಅನಾನುಕೂಲ ತಪ್ಪಲು ಕನ್ನಡ ನಾಮಫಲಕ ಬೇಕಾಗಿದೆ. ನ್ಯಾಯಾಲಯ ತನ್ನ ವ್ಯಾಪ್ತಿ ಮೀರಿ ಪೂರ್ವಾಗ್ರಹಪೀಡಿತವಾಗಿ ಅಭಿಪ್ರಾಯಗಳನ್ನು ಕೊಡುತ್ತಿದೆಯೆನ್ನುವ ಅನಿಸಿಕೆ ಜನರಲ್ಲಿ ಮೂಡದಂತೆ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ.
ಗಮನಿಸಬೇಕಾದ ಮತ್ತೊಂದು ಅಂಶವೆಂದರೆ 2014ರ ತೀರ್ಪಿನ ಮೂಲಕ ಬಿದ್ದುಹೋದ ಈ ಕಾಯ್ದೆಯನ್ನು ಸರಿಯಾಗಿ ಮರು ರೂಪಿಸಿ ಜಾರಿಗೊಳಿಸಲು ನಾಡಿನ ಎಲ್ಲಾ ಸರ್ಕಾರಗಳು ತೋರಿಸಿದ ನಿರಾಸಕ್ತಿ.
ನಮ್ಮ ಯಾವ ರಾಜಕೀಯ ಪಕ್ಷಗಳಿಗೂ ಇಂಥದ್ದೊಂದು ಕಾಯ್ದೆಯ ಮಹತ್ವವೇ ಅರಿವಿಲ್ಲದಿದ್ದರೆ ಇಂತಹ ಜನಪರ ಆದೇಶಗಳು ಜಾರಿಯಾಗುವುದು ಹೇಗೆ ಸಾಧ್ಯ? ಗಟ್ಟಿಯಾದ ಕಾನೂನಿನ ಬಲವಿಲ್ಲದ, ಪಾಲಿಕೆಯ ಆದೇಶಗಳು ಕೇವಲ ಕಣ್ಣೊರೆಸುವ ತಂತ್ರಗಳಾಗದೇ? ರಾಜ್ಯಸರ್ಕಾರವು ತಕ್ಷಣದಲ್ಲೇ ವಿಧಾನಸಭೆಯ ಅಧಿವೇಶನ ಕರೆದು, ಸೂಕ್ತ ಕಾನೂನು ಸಲಹೆ ಪಡೆದು ಇಂಥದ್ದೊಂದು ಕಾಯ್ದೆಯನ್ನು ರೂಪಿಸಲೇಬೇಕಿದೆ.
ಇನ್ನೊಂದು ಪ್ರಮುಖ ಅಂಶವೆಂದರೆ ನಾಡಿನಲ್ಲಿ ಉದ್ದಿಮೆಗಳನ್ನು ನಡೆಸುತ್ತಾ ಇಲ್ಲಿನ ಜನರನ್ನೇ ತನ್ನ ವ್ಯಾಪಾರಕ್ಕಾಗಿ ಅವಲಂಬಿಸಿರುವ, ಸಾರ್ವಜನಿಕರೊಡನೆ ನೇರಸಂಪರ್ಕವಿಟ್ಟುಕೊಂಡಿರುವ ಬಿರ್ಲಾ, ವೊಡಾಫೋನ್, ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘವೇ ಮೊದಲಾದವುಗಳು ಕರ್ನಾಟಕದ ಆಡಳಿತ ಭಾಷೆಯನ್ನು, ಈ ನೆಲದ ಜನರ ಭಾಷೆಯನ್ನೇ ಬಳಸಲು ತೋರಿಸುತ್ತಿರುವ ಪ್ರತಿರೋಧ.
ಇವರ ಉದ್ಧಟತನಕ್ಕೆ ನಾಡಿನ ಜನರು ತಕ್ಕ ಉತ್ತರ ನೀಡಬೇಕಾಗಿದೆ. ನಮ್ಮ ನುಡಿಯನ್ನು ಧಿಕ್ಕರಿಸುವ ಎಲ್ಲಾ ಸಂಸ್ಥೆಗಳ ಉತ್ಪನ್ನಗಳನ್ನು/ ಸೇವೆಗಳನ್ನು ಬಹಿಷ್ಕರಿಸೋಣ.
ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವವನ್ನು ಒಪ್ಪದವರ ಸರಕು ನಮಗೆ ಬೇಕಿಲ್ಲ ಎನ್ನುವ ನಿರ್ಧಾರವನ್ನು ಕನ್ನಡಿಗರು ಕೈಗೊಳ್ಳಬೇಕಾದ ಸಮಯ ಇಂದು ಬಂದೊದಗಿದೆ, ಈ ನಿಟ್ಟಿನಲ್ಲಿ ಬನವಾಸಿ ಬಳಗವು ಪೆಟಿಶನ್ ಒಂದನ್ನು ರೂಪಿಸಿ, ಕರ್ನಾಟಕ ರಾಜ್ಯ ಸರಕಾರವು ಸರಿಯಾದ ನಾಮಫಲಕ ಕಾನೂನನ್ನು ರೂಪಿಸುವಂತೆ ಒತ್ತಾಯಿಸಲು ಮುಂದಾಗಿದೆ. ಈ ಪಿಟಿಶನ್ನಿಗೆ ಸಹಿ ಹಾಕುವ ಮೂಲಕ ಈ ಕೂಗಿಗೆ ಬಲತುಂಬಬೇಕೆಂದು ಕೋರುತ್ತೇವೆ.