‘ಮಾಂಸಕ್ಕಾಗಿ ಗೋವುಗಳ ಮಾರಾಟ’ ನಿಷೇಧಕ್ಕೆ ರಾಮಚಂದ್ರಾಪುರ ಮಠದ ಸ್ವಾಗತ
ಕೇಂದ್ರ ಸರ್ಕಾರ ಬಹಿರಂಗ ಮಾರುಕಟ್ಟೆಯಲ್ಲಿ ಮಾಂಸಕ್ಕಾಗಿ ಗೋವುಗಳ ಮಾರಾಟ ಮಾಡುವುದನ್ನು ನಿಷೇಧಿಸಲು ಮುಂದಾಗಿರುವುದನ್ನು ರಾಮಚಂದ್ರಾಪುರ ಮಠ ಸ್ವಾಗತಿಸಿದೆ.
ಬೆಂಗಳೂರು, ಮೇ 26: ಪ್ರಾಣಿಗಳ ವಿರುದ್ಧದ ಕ್ರೌರ್ಯ ತಡೆ ಕಾಯ್ದೆಯಡಿ ಕೇಂದ್ರ ಸರ್ಕಾರ ಬಹಿರಂಗ ಮಾರುಕಟ್ಟೆಯಲ್ಲಿ ಮಾಂಸಕ್ಕಾಗಿ ಗೋವುಗಳ ಮಾರಾಟ ಮಾಡುವುದನ್ನು ನಿಷೇಧಿಸಲು ಮುಂದಾಗಿರುವುದನ್ನು ರಾಮಚಂದ್ರಾಪುರ ಮಠ ಸ್ವಾಗತಿಸಿದೆ.
ಕೇಂದ್ರ ಸರ್ಕಾರದ ನೂತನ ನಿಯಮದನ್ವಯ ಕೇವಲ ಕೃಷಿಕರು ಮಾತ್ರವೇ ಗೋವುಗಳ ಖರೀದಿ ಹಾಗೂ ಮಾರಾಟದಲ್ಲಿ ತೊಡಗಬಹುದಾಗಿದ್ದು, ಕೃಷಿ ಕಾರ್ಯಗಳಿಗೆ ಮಾತ್ರವೇ ಸಾಗಾಟ ಮಾಡಬಹುದಾಗಿದೆ. [ಗೋಹತ್ಯೆ ನಿಷೇಧಕ್ಕೆ ಕೇಂದ್ರದ ಮಹತ್ವದ ನಿರ್ಧಾರ]
ಕೃಷಿ, ಕೃಷಿಕರು ದೇಶದ ಬೆನ್ನೆಲುಬಾದರೆ, ಗೋವುಗಳು ಕೃಷಿ ಮತ್ತು ಕೃಷಿಕರ ಮೂಲಾಧಾರವಾಗಿದೆ. ಕೇಂದ್ರ ಸರ್ಕಾರದ ಈ ನಡೆಯಿಂದ ಗೋಸಂರಕ್ಷಣೆಯ ಜೊತೆಜೊತೆಗೆ ಕೃಷಿಕ್ಷೇತ್ರದ ಸಂವರ್ಧನೆಯೂ ಆಗಲಿದೆ ಎಂದು ರಾಘವೇಶ್ವರ ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.
ಜೀವಕಾರುಣ್ಯ ಇರುವ ಎಲ್ಲರೂ ಮೋದಿ ಸರಕಾರದ ನಿರ್ಧಾರವನ್ನು ಸ್ವಾಗತಿಸಲೇ ಬೇಕಾಗಿದ್ದು, ಈ ಕಾನೂನು ದೇಶದಾದ್ಯಂತ ಶೀಘ್ರವಾಗಿ ಜಾರಿಯಾಗಲಿ ಎಂದು ರಾಘವೇಶ್ವರ ಶ್ರೀಗಳು ಆಶಿಸಿದ್ದಾರೆ.
ಪ್ರಾಣಿಗಳ ಮೇಲಿನ ಕ್ರೌರ್ಯ ನಿಷೇಧ ತಡೆ ಕಾಯ್ದೆ 1960ಕ್ಕೆ ವಿಶೇಷ ಸೆಕ್ಷನ್ ಕೇಂದ್ರ ಸರಕಾರ ತಂದಿದ್ದು, ಜಾನುವಾರುಗಳನ್ನು ಕಸಾಯಿ ಖಾನೆಗೆ ಮಾರಾಟ ಮಾಡುವುದಕ್ಕೆ ಕೇಂದ್ರ ಸರಕಾರ ನಿಷೇಧ ಹೇರಿದೆ.
ಈ ಸೆಕ್ಷನ್ ನ ಅಡಿಯಲ್ಲಿ ಹೇಳಿರುವ ಪ್ರಕಾರ, ರಾಸುಗಳನ್ನು ಕೃಷಿ ಉದ್ದೇಶಕ್ಕೆ ಬಳಸಬಹುದು ವಿನಾ ಕಸಾಯಿ ಖಾನೆಗೆ ಮಾರುವಂತಿಲ್ಲ. ಇನ್ನು ಹಸು ಖರೀದಿಸಿದ ನಂತರ ಆರು ತಿಂಗಳೊಳಗೆ ಹಸು ಮಾರಾಟಗಾರರಿಗೆ ಮತ್ತೊಮ್ಮೆ ಮಾರುವಂತಿಲ್ಲ. ಕೃಷಿಕ ಎಂಬ ದಾಖಲೆ ಹೊಂದಿರುವ ವ್ಯಕ್ತಿಗಷ್ಟೇ ರಾಸುಗಳ ಮಾರಾಟ ಮಾಡಬೇಕಾಗಿದೆ.