ಕೆಎಂಎಫ್ ಅಧ್ಯಕ್ಷಗಾದಿ ಜಾರಕಿಹೊಳಿ ಕುಟುಂಬಕ್ಕೆ; ರೇವಣ್ಣಗೆ ಹಿನ್ನಡೆ
ಬೆಂಗಳೂರು, ಆಗಸ್ಟ್ 31 : ಕುತೂಹಲಕ್ಕೆ ಕಾರಣವಾಗಿದ್ದ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಎಚ್. ಡಿ. ರೇವಣ್ಣಗೆ ಹಿನ್ನಡೆಯಾಗಿದೆ.
ಶನಿವಾರ ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಎಚ್. ಡಿ. ರೇವಣ್ಣ ನಾಮಪತ್ರವನ್ನು ವಾಪಸ್ ಪಡೆದ ಕಾರಣ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾದರು.
ಕೆಎಂಎಫ್ ಚುನಾವಣೆ: ಬಾಲಚಂದ್ರ ಜಾರಕಿಹೊಳಿಗೆ 'ಹಾಲಿನ ಅಭಿಷೇಕ'?
ಮಾಜಿ ಸಚಿವ ಎಚ್. ಡಿ. ರೇವಣ್ಣ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾ ನಾಯ್ಕ್, ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಅಂತಿಮವಾಗಿ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಅಧ್ಯಕ್ಷ ಪಟ್ಟಕ್ಕೆ ಏರಿದರು.
ಎಚ್.ಡಿ.ರೇವಣ್ಣ ಬಲ ಕುಗ್ಗಿಸಲು ಯಡಿಯೂರಪ್ಪ ಹೊಸ ಹೆಜ್ಜೆ!
ಬಾಲಚಂದ್ರ ಜಾರಕಿಹೊಳಿಗೆ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಕೈ ತಪ್ಪಿತ್ತು. ಆದ್ದರಿಂದ, ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ಮಾಡಲು ಯಡಿಯೂರಪ್ಪ ಪ್ರಯತ್ನ ಮಾಡಿದ್ದರು. ಈಗ ಅದರಲ್ಲಿ ಯಶಸ್ಸು ಕಂಡಿದ್ದಾರೆ.
ಬೆಳಗಾವಿ ಬಂಡಾಯ ತಪ್ಪಿಸಲು ಜಾರಕಿಹೊಳಿಗೆ ಕೆಎಂಎಫ್ ಅಧ್ಯಕ್ಷ ಪಟ್ಟ
ಪುಟಗೋಸಿ ಅಧ್ಯಕ್ಷ ಸ್ಥಾನ ಹೇಳಿಕೆ
ಕೆಎಂಎಫ್ ಅಧ್ಯಕ್ಷ ಸ್ಥಾನ ಕೈ ತಪ್ಪುತ್ತಿದ್ದಂತೆ ಮಾಜಿ ಸಚಿವ ಎಚ್. ಡಿ. ರೇವಣ್ಣ ಪ್ರತಿಕ್ರಿಯೆ ಕೊಟ್ಟರು. "ನನಗೆ ನನ್ನ ಜಿಲ್ಲೆ, ಪ್ರವಾಹಕ್ಕೆ ಒಳಗಾಗಿರುವ 12 ಜಿಲ್ಲೆಗಳು ಮುಖ್ಯ ಪುಟಗೋಸಿ ಡೈರಿ ಅಧ್ಯಕ್ಷ ಸ್ಥಾನಕ್ಕೆ ನಾನು ಏಕೆ ತಲೆಕೆಡಿಸಿಕೊಳ್ಳಲಿ?" ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ರೆಸಾರ್ಟ್ ರಾಜಕೀಯ
ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆ ಕುತೂಹಲಕ್ಕೆ ಕಾರಣವಾಗಿತ್ತು. 10ಕ್ಕೂ ಹೆಚ್ಚು ನಿರ್ದೇಶಕರನ್ನು ಬೆಂಗಳೂರು ಹೊರವಲಯದ ರೆಸಾರ್ಟ್ಗೆ ಕರೆದುಕೊಂಡು ಹೋಗಲಾಗಿತ್ತು. ಹಿಂದೆ ಎಚ್. ಡಿ. ರೇವಣ್ಣ ಬೆಂಬಲಿಸಿದ್ದ ನಿರ್ದೇಶಕರು ಬಳಿಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಸಿದ್ದರು. ಇದರಿಂದಾಗಿ ರೇವಣ್ಣಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿತ್ತು.
ಹಳೆ ಮೈಸೂರು ಭಾಗದಲ್ಲಿ ಹಿನ್ನಡೆ
ಮಂಡ್ಯ ಹಾಲು ಒಕ್ಕೂಟದ ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡಲಾಗಿದೆ. ಆದ್ದರಿಂದ ಅಲ್ಲಿನ ನಿರ್ದೇಶಕರಿಗೆ ಮತದಾನದ ಹಕ್ಕು ಇಲ್ಲವಾಗಿದೆ. ತುಮಕೂರು ಒಕ್ಕೂಟದ ನಿರ್ದೇಶಕರು ಮುಚ್ಚಿದ ಲಕೋಟೆಯಲ್ಲಿ ಮತದಾನ ಮಾಡಲು ಹೈಕೋರ್ಟ್ ಸೂಚನೆ ನೀಡಿತ್ತು. ಹೀಗಾಗಿ ಹಳೆ ಮೈಸೂರು ಭಾಗದಲ್ಲಿಯೇ ರೇವಣ್ಣಗೆ ಹಿನ್ನಡೆ ಉಂಟಾಯಿತು. ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷರಾದರು.
ಚುನಾವಣೆ ಮುಂದೂಡಲಾಗಿತ್ತು
ಜುಲೈ 29ರಂದು ಕೆಎಂಎಫ್ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಹೊಸ ಸರ್ಕಾರ ಬಂದ ತಕ್ಷಣ ಚುನಾವಣೆಯನ್ನು ಮುಂದೂಡಲಾಗಿತ್ತು. ಇದನ್ನು ಪ್ರಶ್ನಿಸಿ ಎಚ್. ಡಿ. ರೇವಣ್ಣ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು.