ಬಕ್ರೀದ್ ಆಚರಣೆ: ಪ್ರಾಣಿ ಬಲಿ ನಿಷೇಧಿಸಿದ ಕರ್ನಾಟಕ ಸರ್ಕಾರ
ಬೆಂಗಳೂರು ಜುಲೈ 08: ಕರ್ನಾಟಕದಲ್ಲಿ ಜುಲೈ 10ರಂದು ಬಕ್ರೀದ್ ಹಬ್ಬ ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪ್ರಾಣಿ ಬಲಿಗೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Recommended Video
ಪಶುಸಂಗೋಪನಾ ಖಾತೆ ಸಚಿವ ಪ್ರಭು ಚೌವ್ಹಾಣ್ ಬಕ್ರೀದ್ ಹಬ್ಬದಲ್ಲಿ ಜಾನುವಾರುಗಳನ್ನು ಬಲಿ ಕೊಡಲು ಅವಕಾಶ ಇರುವುದಿಲ್ಲ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರಾಜ್ಯದಲ್ಲಿ ಜಾರಿಯಲ್ಲಿರುವ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಮತ್ತು ಸಂರಕ್ಷಣಾ ಕಾಯ್ದೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದೆ.
ಕೃಷಿ ವಿವಿ ತಾತ್ಕಾಲಿಕ ಹುದ್ದೆಗಳಿಗೆ ಜು.21 ರಂದು ನೇರ ಸಂದರ್ಶನ
ಬಕ್ರೀದ್ ಆಚರಣೆ ವೇಳೆ ಬಲಿ ನೀಡುವ ಸಂಪ್ರದಾಯಕ್ಕೆ ಹಲವು ನಿರ್ಬಂಧ ವಿಧಿಸಲಾಗಿದೆ. ಅದನ್ನು ಮೀರಿ ಯಾವುದೇ ವಯಸ್ಸಿನ, ದನ, ಕರುಗಳು, ಆಕಳು, ಎತ್ತುಗಳನ್ನು ಬಲಿ ನೀಡುವಂತಿಲ್ಲ. ಜೊತೆಗೆ ಬಲಿಗಾಗಿ ಅವುಗಳನ್ನು ಸಾಗಾಣೆ ಮಾಡುವಂತೆಯೂ ಇಲ್ಲ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಪ್ರಾಣಿ ಬಲಿ ನಿಷೇಧ
ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ, ಕಾಲೇಜು, ಆಸ್ಪತ್ರೆ ಆವರಣ ಮತ್ತು ಉದ್ಯಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳನ್ನು ಆಚರಣೆ ಹೆಸರಿನಲ್ಲಿ ಬಲಿ ಕೊಡಬಾರದು. ಜಿಲ್ಲಾಡಳಿತ, ಸ್ಥಳೀಯ ಆಡಳಿತ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಬಲಿ ನೀಡಬಹುದಾಗಿದೆ. ಬಲಿ ನೀಡುವಾಗ ಶುಚಿತ್ವ, ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು. ಅಲ್ಲದೇ ಪ್ರಾಣಿ ಮಾಂಸ ಬೇರ್ಪಡಿಸಿದೆ ನಂತರ ಉಳಿಯುವ ತ್ಯಾಜವನ್ನು ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡದೇ ಸೂಕ್ತವಾಗಿ ವಿಲೇವಾರಿ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೊಸಕೋಟೆ; ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ
ಕೋವಿಡ್ ನಿಯಮ ಪಾಲನೆ ಕಡ್ಡಾಯ
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚು ಪತ್ತೆಯಾಗುತ್ತಿವೆ. ಬಕ್ರೀದ್ ಆಚರಣೆ ವೇಳೆ ಕೋವಿಡ್ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ.
ಹಬ್ಬದ ಆಚರಣೆ, ಸಾಮೂಹಿಕ ಪ್ರಾರ್ಥನೆ ವೇಳೆ ಸದ್ಯ ಚಾಲ್ತಿಯಲ್ಲಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ.
ಸ್ಥಳೀಯ ಆಡಳಿತ, ಪೊಲೀಸರು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನೀಡಿದ ನಿರ್ದೇಶನಗಳನ್ನು ಅನುಸರಿಸಬೇಕು. ಹೀಗೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಜ್ ಮತ್ತು ವಕ್ಫ್ ಇಲಾಖೆ ಅಧೀನ ಕಾರ್ಯದರ್ಶಿ ಮಹಿಬೂಬ ಸಾಬ ಆದೇಶ ಹೊರಡಿಸಿದ್ದಾರೆ.
ಪ್ರಾಣಿ ಬಲಿ ಬಿಬಿಎಂಪಿ ಎಚ್ಚರಿಕೆ
ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹ ಬಕ್ರೀದ್ ಆಚರಣೆಯಲ್ಲಿ ಪ್ರಾಣಿ ಬಲಿ ಸಂಬಂಧ ಆದೇಶ ಹೊರಡಿಸಿದೆ. ಪ್ರಾಣಿ ಬಲಿ ನಿಷೇಧಿಸಲಾಗಿದೆ. ಪ್ರಾಣಿ ಬಲಿ ಕಾನೂನನ್ನು ಉಲ್ಲಂಘಿಸಿದರೆ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪ್ರಾಣಿ ಬಲಿ ತಡೆ ಕಾಯ್ದೆ ಅನ್ವಯ ಆರು ತಿಂಗಳ ಶಿಕ್ಷೆ, ಭಾರತೀಯ ದಂಡ ಸಂಹಿತೆ (ಐಪಿಸಿ ಸೆಕ್ಷನ್) ಅನ್ವಯ ದಂಡ ಸಹಿತಿ 5 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಅದಲ್ಲದೇ ಪ್ರಾಣಿವಧೆ ಕಾಯ್ದೆಯಡಿ ಆಹಾರಕ್ಕೆ ಯೋಗ್ಯವಾದ ಪ್ರಾಣಿಗಳನ್ನು ಅಧಿಕೃತ ಕಸಾಯಿ ಖಾನೆಗಳಲ್ಲಿ ಮಾತ್ರ ಜೀವ ತೆಗೆಯಲು ಅವಕಾಶ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಸೂಚಿಸಿದ್ದಾರೆ ಎನ್ನಲಾಗಿದೆ.
ಕುರಿ ಮಾರಾಟ ಜೋರಿದೆ
ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಚಾಮರಾಜಪೇಟೆ, ಕೆ. ಆರ್. ಮಾರುಕಟ್ಟೆ, ಕೆ. ಆರ್. ಪುರಂ ಸೇರಿದಂತೆ ಬೆಂಗಳೂರಿನ ಕೆಲವು ಮಾರುಕಟ್ಟೆಗಳಲ್ಲಿ ಅಲ್ಲಲ್ಲಿ ಕುರಿ, ಟಗರು, ಮೇಕೆಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಬೆಂಗಳೂರಿನ ಹೊರ ಭಾಗದ ಹಾಗೂ ರಾಜ್ಯದ ಇತರ ಜಿಲ್ಲೆಗಳಿಂದಲೂ ಕೊಬ್ಬಿದ ವಿವಿಧ ಜಾತಿ ತಳಿಗಳ ಕುರಿಗಳು, ಟಗರು, ಮೇಕೆಗಳು ನಗರದ ಮಾರುಕಟ್ಟೆಗಳಿಗೆ ದಾಂಗುಡಿ ಇಟ್ಟಿವೆ. ಕಳೆದ ಎರಡು ದಿನದಿಂದ ಮಾರುಕಟ್ಟೆಗಳಲ್ಲಿ ಜನರು ಜಮಾಯಿಸಿ ಬಕ್ರೀದ್ಗೆ ಇಷ್ಟದ ಕುರಿ, ಮೇಕೆಗಳ ಖರೀದಿಸುವುದು ಕಂಡು ಬಂದಿದೆ.