ರಾಜ್ಯದಾದ್ಯಂತ ಸರಳವಾಗಿ ಬಕ್ರೀದ್ ಆಚರಣೆ: ಸಂತ್ರಸ್ತರಿಗೆ ದೇಣಿಗೆ ಸಂಗ್ರಹ
ಬೆಂಗಳೂರು, ಆಗಸ್ಟ್.22:ವಿಶ್ವ ಭಾತೃತ್ವದ ಸಂಕೇತವಾದ ಬಕ್ರೀದ್ ಹಬ್ಬವನ್ನು ರಾಜ್ಯದಾದ್ಯಂತ ಭಕ್ತಿ ಹಾಗೂ ಶ್ರದ್ಧೆಯಿಂದ ಆಚರಿಸಲಾಯಿತು. ಕೇರಳ ಹಾಗೂ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಮಹಾಮಳೆಯಿಂದ ಉಂಟಾದ ಜಲಪ್ರಳಯದಿಂದಾಗಿ ನೂರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ.
ಈ ಹಿನ್ನಲೆಯಲ್ಲಿ ಸರಳವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲು ಮುಸ್ಲಿಂ ಬಾಂಧವರು ಮುಂದಾಗಿದ್ದಾರೆ. ಜೊತೆಗೆ ಸಂತ್ರಸ್ತರಿಗೆ ಕೆಲವೆಡೆ ದೇಣಿಗೆಯನ್ನೂ ಸಂಗ್ರಹಿಸಿದ್ದಾರೆ. ಇಸ್ಲಾಮೀ ಕ್ಯಾಲೆಂಡರಿನ ದುಲ್ ಹಜ್ ತಿಂಗಳ 10ರಂದು ಅಂದರೆ ಈ ಬಾರಿ ಆಗಸ್ಟ್ 22ರಂದು ಈದುಲ್ ಅಝ್ಹಾ ಅಥವಾ ಬಕ್ರೀದ್ ಆಚರಿಸಲಾಗುತ್ತಿದೆ.
ವಿಶ್ವ ಭ್ರಾತೃತ್ವವನ್ನು ಪ್ರಪಂಚಕ್ಕೆ ಸಾರುವ ಬಕ್ರೀದ್ ಹಿನ್ನೆಲೆ ನಿಮಗೆಷ್ಟು ಗೊತ್ತು?
ಸಾವಿರಾರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ ಅವರು ಮಾಡಿದ್ದ ತ್ಯಾಗ ಬಲಿದಾನದ ಸ್ಮರಣೆಯೇ ಈ ಹಬ್ಬದ ವೈಶಿಷ್ಟ್ಯ. ಪ್ರವಾದಿ ಇಬ್ರಾಹಿಂ ಅವರು ತಮ್ಮ ಪುತ್ರ ಇಸ್ಮಾಯಿಲ್ ಅವರನ್ನೇ ಬಲಿ ಕೊಡಲು ಸಿದ್ಧರಾದ 'ತ್ಯಾಗ'ದ ಪ್ರತೀಕವಾಗಿ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ.
ಬಕ್ರೀದ್: ಮುಸ್ಲಿಮರಿಗೆ ಶುಭಾಶಯ ಕೋರಿದ ಮೋದಿ, ಕೋವಿಂದ್
ಶುಭ್ರ ವಸ್ತ್ರಗಳನ್ನು ಧರಿಸಿದ ಮುಸ್ಲಿಂ ಬಾಂಧವರು ಇಂದು ಮುಂಜಾನೆ ಮಸೀದಿಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಹಾಗೂ ನಮಾಜಿನಲ್ಲಿ ತೊಡಗಿದರು. ಅಂದಹಾಗೆ ಯಾವ ಯಾವ ಜಿಲ್ಲೆಗಳಲ್ಲಿ ಬಕ್ರೀದ್ ಹಬ್ಬವನ್ನು ಹೇಗೆ ಆಚರಿಸಲಾಯಿತು ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ ಓದಿ...
ಮಂಗಳೂರಿನಲ್ಲಿ ಸರಳವಾಗಿ ಆಚರಣೆ
ಮಂಗಳೂರಿನ ಇತಿಹಾಸ ಪ್ರಸಿದ್ಧ ಬಾವುಟಗುಡ್ಡ ಇದ್ಗಾ ಮಸೀದಿಯಲ್ಲೂ ಇಂದು ಬುಧವಾರ ಸಾವಿರಾರು ಮುಸ್ಲಿಂ ಬಾಂಧವರು ಸೇರಿ ಸಾಮೂಹಿಕ ಪಾರ್ಥನೆ ಸಲ್ಲಿಸಿದರು. ದಕ್ಷಿಣಕನ್ನಡ ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಈದುಲ್ ಆಝ್ಹಾ ಪ್ರಾರ್ಥನೆ ನಡೆಯಿತು.
ಈ ಸಂದರ್ಭದಲ್ಲಿ ಈದ್ ಸಂದೇಶ ಹಾಗೂ ಪ್ರವಚನ ನೀಡಿದ ಖಾಝಿಯವರು ಕೇರಳ ಹಾಗೂ ಕೊಡಗು ಪ್ರವಾಹ ಸಂತ್ರಸ್ಥರಿಗೆ ನೆರವಾಗಲು ಕರೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸೇರಿದಂತೆ ಅನೇಕ ಗಣ್ಯರು ಈ ಸಾಮೂಹಿಕ ನಮಾಜ್ ನಲ್ಲಿ ಪಾಲ್ಗೊಂಡರು.
ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಮಸೀದಿಗಳಲ್ಲೂ ವಿಶೇಷ ನಮಾಝಿನೊಂದಿಗೆ ಮುಸ್ಲಿಂ ಬಾಂಧವರು ಬಕ್ರೀದ್ ಆಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ನೆರೆಯ ರಾಜ್ಯ ಕೇರಳ ಮತ್ತು ಕೊಡಗು ಜಿಲ್ಲೆಯಲ್ಲಿನ ಅತಿವೃಷ್ಟಿಯಿಂದ ಭಾರಿ ಸಾವು- ನೋವುಗಳನ್ನು ಸಂಭವಿಸಿರುವ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ.
ಬಳ್ಳಾರಿಯಲ್ಲಿ ಅನಾಹುತಗಳಿಂದ ರಕ್ಷಿಸಲು ಪ್ರಾರ್ಥನೆ
ಬಳ್ಳಾರಿಯಲ್ಲಿ ಮುಸ್ಲಿಮರ ಪವಿತ್ರವಾದ ಬಕ್ರೀದ್ ಹಬ್ಬದ ಅಂಗವಾಗಿ ಬಳ್ಳಾರಿಯ ಬಡಾ ಈದ್ಗಾ ಮೈದಾನದಲ್ಲಿ 20 ರಿಂದ 25 ಸಾವಿರ ಮುಸ್ಲಿಮರು ಸಭೆ ಸೇರಿ ಸಾಮೂಹಿಕವಾಗಿ ಅಲ್ಲಾಹುನಲ್ಲಿ, ದೇಶದ ಜನರನ್ನು ರೋಗ, ಪ್ರಕೃತಿ ವಿಕೋಪ ಮತ್ತು ಇನ್ನಿತರೆ ಅನಾಹುತಗಳಿಂದ ರಕ್ಷಿಸಲು ಪ್ರಾರ್ಥನೆ ಸಲ್ಲಿಸಿದರು.
ಬುಧವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಪ್ರಾರ್ಥನೆಯು 10.30 ಕ್ಕೆ ಸಮಾರೋಪಗೊಂಡಿತು. ಪ್ರಾರ್ಥನೆಯಲ್ಲಿ ಪಾಲ್ಗೊಂಡವರು ಕೇರಳ ಮತ್ತು ಕೊಡಗಿನ ನೈಸರ್ಗಿಕ ವಿಕೋಪದ ಬಗ್ಗೆ ಚರ್ಚೆ ನಡೆಸಿ, ವಿಕೋಪಕದ ತೀವ್ರತೆಗೆ ತುತ್ತಾದ ಜನರು, ವಸತಿ ಮತ್ತು ಪ್ರದೇಶಗಳ ಪುನರ್ವಸತಿ ತ್ವರಿತವಾಗಿ ನಡೆಯಲಿ ಎಂದು ದೇವರಲ್ಲಿ ಮನವಿ ಸಲ್ಲಿಸಿದರು.
ಜಿಲ್ಲಾ ನಗರ ಕಾಂಗ್ರೆಸ್ ಅಧ್ಯಕ್ಷ ರಫಿಕ್, ಬಿಜೆಪಿ ಮುಖಂಡ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಗೋವಿಂದರಾಜು, ಈದ್ಗಾ ಮೈದಾನದಲ್ಲಿ ಉಪಸ್ಥಿತರಿದ್ದು, ಮುಸ್ಲಿಂಬಾಂಧವರಿಗೆ ಹಬ್ಬದ ಶುಭಹಾರೈಸಿ, ಪರಸ್ಪರ ಆಲಿಂಗನ ಮಾಡಿಕೊಂಡು, ಹಸ್ತಲಾಘವ ಮಾಡಿದರು.
ಜಿಲ್ಲೆಯಾದ್ಯಂತ ಬಕ್ರೀದ್ ಹಬ್ಬವು ಶಾಂತಿ ಮತ್ತು ಸಹಬಾಳ್ವೆಯ ಸಂಕೇತವಾಗಿ ಶಾಂತಿಯುತವಾಗಿ ಆಚರಿಸಲ್ಪಟ್ಟಿತು.
ಸಾಯುವ ಕೆಲವೇ ಕ್ಷಣ ಮೊದಲು ಬಕ್ರೀದ್ ಶುಭಾಶಯ ಹೇಳಿದ್ದ ಕಾಂಗ್ರೆಸ್ ಮುಖಂಡ
ಭಟ್ಕಳ ತಾಲೂಕಿನಲ್ಲಿರುವ 20 ಮಸೀದಿಗಳಲ್ಲಿ ಪ್ರಾರ್ಥನೆ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ 20 ಮಸೀದಿಗಳಲ್ಲಿ ಸಾವಿರಾರು ಮುಸ್ಲಿಮರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಖಲೀಫಾ ಜಾಮೀಯಾ ಮಸೀದಿ, ನವಾಯತ್ ಕಾಲನಿ, ತಂಜೀಮ್ ಜುಮ್ಮಾ ಮಸೀದಿ ಮತ್ತು ಮುಗ್ದುಮ್ ಕಾಲನಿಯ ಜುಮ್ಮಾ ಮಸೀದಿಯಲ್ಲಿ 20 ಸಾವಿರಕ್ಕೂ ಅಧಿಕ ಜನರು ಪ್ರಾರ್ಥನೆ ಸಲ್ಲಿಸಿದರು.
ಮೌಲಾನಾ ಅಬ್ದುಲ್ ಅಲೀಮ್ ಖತೀಬ್ ನದ್ವಿ ಅವರು ಪ್ರಾರ್ಥನಾ ವಿಧಿ ಬೋಧಿಸಿದರು. ಸುರಿಯುತ್ತಿದ್ದ ಮಳೆಯಲ್ಲೂ ಮುಸ್ಲಿಮರು ತಂಡೋಪತಂಡವಾಗಿ ಮಸೀದಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷವಾಗಿತ್ತು.
ಬಾಗಲಕೋಟೆಯಲ್ಲಿ 12 ಸಾವಿರ ರೂ.ದೇಣಿಗೆ ಸಂಗ್ರಹ
ಬಾಗಲಕೋಟೆಯಲ್ಲಿ ಕೇರಳ ಮತ್ತು ಕೊಡಗಿನಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಒಂದು ವರ್ಷದಲ್ಲಿ ಮುಸ್ಲಿಂ ಸಮಾಜದ ಜನಾಂಗದವರು ಎರಡು ಹಬ್ಬಗಳನ್ನು ಆಚರಿಸುತ್ತಾರೆ. ಒಂದು ರಂಜಾನ್, ಇನ್ನೊಂದು ಬಕ್ರೀದ್ ಹಬ್ಬವಾಗಿದೆ.
ಆದರೆ ರಾಜ್ಯದ ಕೊಡಗಿನಲ್ಲಿ ಕೇರಳದಲ್ಲಿ ಪ್ರವಾಹ ಉಕ್ಕಿ ಸಂತ್ರಸ್ತರಾಗಿರುವ ಜನರ ನೋವಿನಲ್ಲಿ ಭಾಗಿಯಾಗಲು ಮುಸ್ಲಿಂ ಸಮಾಜದವರು ಇಂದು ಹಬ್ಬವನ್ನು ಸರಳವಾಗಿ ಆಚರಿಸಿದರು.
ನಗರದ ಹಳೆ ಅಂಜುಮನ್ ಕಾಲೇಜ್ ಆವರಣದ ಸಮೀಪದ ಹಾಗೂ ನವನಗರದ ಇದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರಿಗೆ ಒಳ್ಳೆಯದನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಇನ್ನು ಕಮತಗಿ ಪಟ್ಟಣದ ಗುಡ್ಡದ ಮೇಲಿರುವ ಇದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಮುಸ್ಲಿ ಸಮಾಜದವರು ಇಲ್ಲಿ ಸುಮಾರು 12 ಸಾವಿರ ರೂ.ದೇಣಿಗೆ ಸಂಗ್ರಹಿಸಿ ಸಂತ್ರಸ್ತರಿಗೆ ತಲುಪಿಸಿದರು.
ಶಿವಮೊಗ್ಗದಲ್ಲಿ ಆಚರಣೆ ಜೊತೆಯಲ್ಲಿಯೇ ದೇಣಿಗೆ ಸಂಗ್ರಹ
ಶಿವಮೊಗ್ಗದಲ್ಲಿ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮ ಹಾಗೂ ಸಡಗರದಿಂದ ಆಚರಿಸಿದರು.
ನಗರದ ಸವಾಯಿ ಪಾಳ್ಯ, ಮದರೀ ಪಾಳ್ಯ, ರಾಗಿಗುಡ್ಡ, ಗೋಪಾಳ, ಡಿಸಿ ಕಛೇರಿ ಎದುರಿನ ಈದ್ಗಾ ಮೈದಾನ ಸೇರಿದಂತೆ ಮಸೀದಿಗಳಲ್ಲಿ ಮುಸ್ಲೀಂ ಬಾಂಧವರು ಸೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಪ್ರತಿವರ್ಷದಂತೆ ಇಂದು ಸಹ ನಗರದ ಡಿಸಿ ಕಛೇರಿ ಎದುರು ಇರುವ ಈದ್ಗಾ ಮೈದಾನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲೀಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಬೆಳಗ್ಗೆ 8-30 ರಿಂದ 9-30 ರವರೆಗೆ ನಡೆದ ಈ ಸಾಮೂಹಿಕ ಪ್ರಾರ್ಥನೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನ ಸೇರಿದ್ದು ವಿಶೇಷವಾಗಿತ್ತು.
ಸೂಡಾ ಮಾಜಿ ಅಧ್ಯಕ್ಷ ಬೋಂಡಾ ರಮೇಶ್, ಹಾಲಿ ಅಧ್ಯಕ್ಷ ಇಸ್ಮಾಯಿಲ್ ಖಾನ್, ಹಬೀಬ್, ಖಲೀಂ ಪಾಷ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ನಗರದ ಎಲ್ಲಾ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಂತರ ದೇಣಿಗೆ ಸಂಗ್ರಹಿಸಲಾಯಿತು.
ರಾಯಚೂರಿನಲ್ಲಿಯೂ ದೇಣಿಗೆ ಸಂಗ್ರಹ
ರಾಯಚೂರಿನ ಜಾಲಹಳ್ಳಿ ಪಟ್ಟಣದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಕೊಡಗು ಹಾಗೂ ಕೇರಳದಲ್ಲಿ ಸಂಭವಿಸಿದ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸಿದರು. ಸಂಗ್ರಹದ ನೇತೃತ್ವವನ್ನು ಮುಸ್ಲಿಂ ಸಮಾಜ, ಟಿಪ್ಪುಸುಲ್ತಾನನ ಸಂಘ, ಡಿವೈಎಫ್ಐ, ಎಸ್ಎಫ್ಐ ಜಂಟಿಯಾಗಿ ವಹಿಸಿಕೊಂಡು ದೇಣಿಗೆ ಸಂಗ್ರಹಿಸಿದರು.
ಉಡುಪಿಯಲ್ಲಿ ಬೆಳಗ್ಗಿನಿಂದಲೇ ಈದ್ ನಮಾಜ್
ಉಡುಪಿಯಲ್ಲಿ ಮುಸ್ಲಿಂ ಬಾಂಧವರಿಂದ ಬೆಳಗ್ಗೆ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಉಡುಪಿ ನಗರ ಸೇರಿದಂತೆ ವಿವಿಧೆಡೆ ಮಸೀದಿಗಳಲ್ಲಿ ಬೆಳಗ್ಗಿನಿಂದಲೇ ಈದ್ ನಮಾಜ್ ಮಾಡಲಾಯಿತು.
ಸಾಮೂಹಿಕ ನಮಾಜಿನ ಬಳಿಕ ಮುಸ್ಲಿಂ ಬಾಂಧವರಿಂದು ಬಂಧು ಮಿತ್ರರ ಮನೆಗಳಿಗೆ ತೆರಳುವುದು ವಾಡಿಕೆ. ಬಂಧು ಮಿತ್ರರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ತಮ್ಮಿಂದ ತಪ್ಪಾಗಿದ್ದರೆ ಕ್ಷಮಿಸುವಂತೆ ಕೋರಿಕೊಳ್ಳುತ್ತಾರೆ.
ಮೈಸೂರಿನಲ್ಲಿ ಪ್ರಾರ್ಥನೆ ಸಲ್ಲಿಕೆ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಲ್ಲೆಡೆ ಬಕ್ರೀದ್ ಹಬ್ಬದ ಸಂಭ್ರಮ ಮನೆ ಮಾಡಿತ್ತು. ತಿಲಕ್ ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಸರ್ ಖಾಜಿ ಹರ್ಜತ್ ಮೌಲಾನ ಮಹಮ್ಮದ್ ಸಾಮೂಹಿಕ ಪ್ರಾರ್ಥನೆ ಬೋಧನೆ ಮಾಡಿದರು.