ಬಜರಂಗದಳ ಶೌರ್ಯ ಶಿಬಿರ, ತ್ರಿಶೂಲ ದೀಕ್ಷೆ ಭಯೋತ್ಪಾದನೆ ಎಂದ ಎಸ್ಡಿಪಿಐ
ಬೆಂಗಳೂರು, ಮೇ 16: ಕೊಡಗಿನ ಪೊನ್ನಂಪೇಟೆಯ ಖಾಸಗಿ ಶಾಲೆಯಲ್ಲಿ ತ್ರಿಶೂಲ ದೀಕ್ಷೆ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಭಯೋತ್ಪಾದನ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಎಂದು ಆರೋಪಿಸಿ ಎಸ್ಡಿಪಿಐ ಮುಖಂಡ ಅಫ್ಸರ್ ಕೊಡ್ಲಿಪೇಟೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ಗೆ 17 ಪುಟಗಳ ದೂರು ನೀಡಿದ್ದಾರೆ.
ಸೋಮವಾರ ನೀಡಿರುವ ದೂರಿನಲ್ಲಿ ಶಾಲೆಯ ಮಾನ್ಯತೆಯನ್ನು ರದ್ದು ಮಾಡುವಂತೆ ಮನವಿ ಮಾಡಿದ್ದಾರೆ. ಎಸ್ಡಿಪಿಐ ಆರೋಪವನ್ನು ಶಾಲೆಯ ಆಡಳಿತ ಮಂಡಳಿ ತಳ್ಳಿ ಹಾಕಿದೆ. ಬಜರಂಗದ ಶೌರ್ಯ ಶಿಬಿರವನ್ನು ಸಮರ್ಥಿಸಿಕೊಂಡಿದೆ. ಶಿಬಿರದ ಫೊಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಸಂಘ ಪರಿವಾರದಿಂದ ಬಾಂಬ್ ತಯಾರಿ ತರಬೇತಿ ನೀಡಲಾಗುತ್ತಿದೆ. ಪೊನ್ನಂಪೇಟೆ ಶಾಲೆಯಲ್ಲಿ ಭಯೋತ್ಪಾದಕ ತರಬೇತಿ ಶಿಬಿರ ನಡೆದಿದೆ. ಕೇರಳ ಮತ್ತು ದಕ್ಷಿಣ ಕನ್ನಡದ ಸಂಘ ಪರಿವಾರದ ಕಾರ್ಯಕರ್ತರು ಬಾಂಬ್ ತಯಾರಿಕೆಯಲ್ಲಿ ನುರಿತರನ್ನು ಶಾಲೆಗೆ ಕರೆಸಿ ತರಬೇತಿಯನ್ನ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ, ಧರ್ಮದ ಅರಾಜಕತೆ ಹೆಚ್ಚಾಗಿದೆ. ಸಂಘಪರಿವಾರದ ಪ್ರಯೋಜಿತ ಸಂಘಟನೆಗಳು ಬಾಂಬ್ ತಯಾರಿ ಮಾಡುವ ತರಬೇತಿ ನೀಡುತ್ತಿವೆ. ಆರ್ಎಸ್ಎಸ್ ಒಂದು ನೋಂದಾಯಿತ ಸಂಘಟನೆಯೇ ಅಲ್ಲ. ಕೂಡಲೇ ಸಂಘಪರಿವಾರದ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಎಸ್ಡಿಪಿಐ ಮುಖಂಡ ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.
ತ್ರಿಶೂಲ ತರಬೇತಿ ನೀಡಲಾಗಿದೆ?
ಶಾಲಾ ಆವರಣದಲ್ಲಿ ಹಿಜಾಬ್ ಬೇಡ ಅಂದವರು ಶಾಲೆಯಲ್ಲಿ ತ್ರಿಶೂಲ ದೀಕ್ಷೆ ನೀಡಬಹುದಾ?. ಶಾಲೆಯಲ್ಲಿ ತ್ರಿಶೂಲ ದೀಕ್ಷೆ ತರಬೇತಿ ತರಕಾರಿ ಕಟ್ ಮಾಡಲು ಮಾಡಿದ್ದಾರಾ?. ಹಿಜಾಬ್ ಗೆ ಅವಕಾಶ ಇಲ್ಲವೆಂದಿದ್ದ ಸರ್ಕಾರ ಇದಕ್ಕೆ ಏಕೆ ಅವಕಾಶ ಕೊಟ್ಟಿದೆ?. ಸಂಘ ಪರಿವಾರದಿಂದ ಶಸ್ತ್ರಾಸ್ತ್ರ ತರಬೇತಿಗೆ ಸರ್ಕಾರ ಅವಕಾಶ ನೀಡಿರುವುದು ಹೇಗೆ?. ಕೊಡಗಿನ ಸಾಯಿ ಶಂಕರ ಶಾಲೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಲಾಗಿದೆ. ಸಂಘ ಪರಿವಾರದ ವಿರುದ್ಧ ಭಯೋತ್ಪಾದಕತೆಗೆ ಕುಮ್ಮಕ್ಕು ನೀಡುವ ಪ್ರಕರಣ ದಾಖಲು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮೇ 5 ರಿಂದ 8ರ ತನಕ ತರಬೇತಿ
ಈ ತರಬೇತಿ ಬಗ್ಗೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಸಾಯಿ ಶಂಕರ ಶಿಕ್ಷಣ ಸಂಸ್ಥೆಯ ಮಾನ್ಯತೆ ರದ್ದು ಮಾಡಬೇಕು. ಶಾಸಕ ಅಪ್ಪಚ್ಚು ರಂಜನ್, ಬಿಜೆಪಿ ಎಂಎಲ್ಸಿ ಸುಜಾ ಕುಶಾಲಪ್ಪ ಸಹ ಇದರಲ್ಲಿ ಭಾಗಿಯಾಗಿದ್ದಾರೆ. ಇದೊಂದು ಸರ್ಕಾರಿ ಪ್ರಾಯೋಜಿತ ಭಯೋತ್ಪಾದಕ ತರಬೇತಿ ಶಿಬಿರ. ಮೇ 5 ರಿಂದ 8 ದಿನಗಳ ಕಾಲ ಈ ತ್ರಿಶೂಲ ತರಬೇತಿ ನಡೆದಿದೆ. ಏರ್ ಗನ್ ಟ್ರೈನಿಂಗ್ ಹೆಸರಲ್ಲಿ ಬಾಂಬ್ ತಯಾರು ಮಾಡುವ ತರಬೇತಿ ಕೊಟ್ಟಿದ್ದಾರೆ ಎಂದು ಎಸ್ಡಿಪಿಐ ಮುಖಂಡ ಅಫ್ಸರ್ ಕೊಡ್ಲಿಪೇಟೆ ಆರೋಪ ಮಾಡಿದ್ದಾರೆ.
ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ
ಇನ್ನು ಕೊಡಗಿನ ಪೊನ್ನಂಪೇಟೆ ಶಾಲೆಯಲ್ಲಿ ತ್ರಿಶೂಲ ದೀಕ್ಷೆ ತರಬೇತಿ ಕರಿತು ಎಸ್ಡಿಪಿಐ ರಾಜ್ಯಪಾಲರ ಕಚೇರಿಯಲ್ಲಿ ಸಲ್ಲಿಸಿರುವ ದೂರಿನ ಕುರಿತು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಗಣಪತಿ ಸ್ಪಷ್ಟನೆಯನ್ನು ನೀಡಿದ್ದಾರೆ. "ನಮ್ಮ ಶಾಲೆಯಲ್ಲಿ ಯಾವುದೇ ಭಯೋತ್ಪಾದನಾ ತರಬೇತಿ ಶಿಬಿರಗಳು ನಡೆದಿಲ್ಲ. ಎಸ್ಡಿಪಿಐ ಮಾಡಿರುವ ಆರೋಪ ಶುದ್ದ ಸುಳ್ಳು" ಎಂದು ತಿಳಿಸಿದ್ದಾರೆ.
ಪೊನ್ನಂಪೇಟೆಯ ಖಾಸಗಿ ಶಾಲೆ
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಈ ಕುರಿತು ಮಾತನಾಡಿದ್ದು, "ಬಜರಂಗದಳ ಪ್ರತಿ ವರ್ಷ ಶೌರ್ಯ ಶಿಬಿರವನ್ನು ನಡೆಸುತ್ತದೆ. ಕೊಡಗಿನ ಪೊನ್ನಂಪೇಟೆ ಖಾಸಗಿ ಶಾಲೆಯಲ್ಲಿ ಮೇ 5 ರಿಂದ 11 ನೇ ತಾರೀಖಿನವರೆಗೂ ಶೌರ್ಯ ಶಿಬಿರವನ್ನು ನಡೆಸಲಾಗಿದೆ. ಈ ಶಿಬಿರದಲ್ಲಿ ಸುಮಾರು 116 ಜನ ಭಾಗವಹಿಸಿದ್ದರು. ದೈಹಿಕ ಮಾತ್ತು ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವ ಸಲುವಾಗಿ ಶಿಬಿರ ನಡೆಸಲಾಗುವುದು. ಮುಂಜಾನೆಯಿಂದ ರಾತ್ರಿಯವರೆಗೂ ಶಿಬಿರವನ್ನು ನಡೆಸಲಾಗುತ್ತದೆ. ಕಾನೂನಿಗೆ ವಿರುದ್ದವಾಗಿ ಯಾವುದೇ ತರಬೇತಿಯನ್ನು ನೀಡಿಲ್ಲ. ಎಸ್ಡಿಪಿಐ ಸುಳ್ಳು ಆರೋಪವನ್ನು ಮಾಡಿದೆ. ಶಿಬಿರದಲ್ಲಿ ಏರ್ ಗನ್, 5 ಇಂಚಿನ ತ್ರಿಶೂಲ ಬಳಸಲಾಗಿದೆ. ದೇಶಭಕ್ತಿಯನ್ನು ಹೆಚ್ಚು ಮಾಡುವುದು ಸೇನೆ ತರಬೇತಿ ಮಾದರಿಯಾಗಿಟ್ಟುಕೊಂಡು ತರಬೇತಿ ನೀಡಲಾಗಿದೆ. ಇದಕ್ಕೆ ದೂರನ್ನು ನೀಡುವ ಅವಶ್ಯಕತೆಯಿಲ್ಲ" ಎಂದು ಹೇಳಿದ್ದಾರೆ.