ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಬೀಸಲಿದೆಯೇ ಜಾತಿ ಸಮೀಕ್ಷಾ ವರದಿ
ಬೆಂಗಳೂರು, ಡಿ 21: ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲೇ ಸಿದ್ದವಾಗಿ, ಗೆದ್ದಲು ಹಿಡಿದು ಕೂತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಸಮೀಕ್ಷಾ ವರದಿ ಸರಕಾರಕ್ಕೆ ಸಲ್ಲಿಕೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಸಮ್ಮಿಶ್ರ ಸರಕಾರದ ಅವಧಿಯಲ್ಲೂ ವರದಿ ಸ್ವೀಕರಿಸಲು ಸರಕಾರ ಹಿಂದೇಟು ಹಾಕಿತ್ತು.
ಈಗ, ಹಿಂದುಳಿದ ವರ್ಗದ ಶಾಶ್ವತ ಆಯೋಗದ ಅಧ್ಯಕ್ಷರಾಗಿ ಕೆ.ಜಯಪ್ರಕಾಶ್ ಹೆಗ್ಡೆ ನೇಮಕಗೊಂಡ ನಂತರ, ಈ ಸಂಬಂಧ ಇಲಾಖೆ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಮಾಡಬೇಕಾಗಿರುವ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದೆ.
ಹಿಂದುಳಿದ ವರ್ಗಗಳ ದನಿಯಾಗಿ ಕೆಲಸ ಮಾಡುತ್ತೇನೆ: ಜಯಪ್ರಕಾಶ್ ಹೆಗ್ಡೆ
"ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಸರಕಾರಕ್ಕೆ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗುವುದು. ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಒಂದು ಹಂತದ ಮಾತುಕತೆಯನ್ನು ನಡೆಸಲಾಗಿದೆ"ಎಂದು ಜಯಪ್ರಕಾಶ್ ಹೆಗ್ಡೆ, 'ಒನ್ ಇಂಡಿಯಾ'ಗೆ ತಿಳಿಸಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಈ ಕೆಲಸ ವೇಗವನ್ನು ಪಡೆದುಕೊಂಡಿದೆ. ಪ್ರತೀ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಹೆಗ್ಡೆ ಸಭೆಯನ್ನು ನಡೆಸುತ್ತಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ವರದಿ ಸಿದ್ದವಾಗಿತ್ತು.
"ಶೂದ್ರರನ್ನು ಶೂದ್ರರು ಎಂದು ಕರೆದರೆ ಬೇಸರಪಟ್ಟುಕೊಳ್ಳುತ್ತಾರೆ ಏಕೆ?"
ಸಿದ್ದರಾಮಯ್ಯ ಬಯಸಿದ್ದರೂ, ಕುಮಾರಸ್ವಾಮಿ ವರದಿ ಸ್ವೀಕರಿಸುವ ಗೋಜಿಗೆ ಹೋಗಿರಲಿಲ್ಲ
ಆದರೆ, ಚುನಾವಣೆ ಎದುರಾದ ನಂತರ ಜೊತೆಗೆ, ಸೂಕ್ಷ್ಮ ವಿಚಾರವಾಗಿರುವುದರಿಂದ, ಕಾಂಗ್ರೆಸ್ ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇದಾದ ನಂತರ, ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದರು. ಆ ವೇಳೆ, ಸಿದ್ದರಾಮಯ್ಯ ಬಯಸಿದ್ದರೂ, ಕುಮಾರಸ್ವಾಮಿ ವರದಿ ಸ್ವೀಕರಿಸುವ ಗೋಜಿಗೆ ಹೋಗಿರಲಿಲ್ಲ ಎಂದು ವರದಿಯಾಗಿತ್ತು.
ಬಿಜೆಪಿ ಸರಕಾರ
ಜಾತಿ ಸಮೀಕರಣವೇ ಈಗಿನ ರಾಜಕೀಯದ ಪ್ರಮುಖ ಅಸ್ತ್ರವಾಗಿರುವುದರಿಂದ, ಜೆಡಿಎಸ್ ಅಥವಾ ಕಾಂಗ್ರೆಸ್ ಈ ವರದಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಈಗ, ಬಿಜೆಪಿ ಸರಕಾರದಲ್ಲಿ ವರದಿ ಸಲ್ಲಿಕೆಯ ಮುನ್ನ ನಡೆಯಬೇಕಾಗಿರುವ ಕೆಲಸಗಳು ಮತ್ತೆ ಚಾಲನೆ ಪಡೆದುಕೊಂಡಿದೆ. "ಆಯೋಗದ ಹಿಂದಿನ ತೀರ್ಮಾನದ ಬಗ್ಗೆ ನಾನು ಪ್ರಶ್ನಿಸುವುದಿಲ್ಲ. ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಿ ತಾರ್ಕಿಕ ಅಂತ್ಯ ಹಾಡಲಾಗುವುದು"ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದರು.
ಭಾರತ್ ಎಲೆಕ್ಟ್ರಾನಿಕ್ಸ್ (ಬಿಇಎಲ್) ಸಂಸ್ಥೆ ಜೊತೆ ಒಪ್ಪಂದ
ಸಮೀಕ್ಷೆ ಸಿದ್ದಪಡಿಸಲು ಸುಮಾರು 158 ಕೋಟಿ ರೂಪಾಯಿಯನ್ನು ಸರಕಾರ ಖರ್ಚು ಮಾಡಿತ್ತು. ಭಾರತ್ ಎಲೆಕ್ಟ್ರಾನಿಕ್ಸ್ (ಬಿಇಎಲ್) ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡು ಈ ಸಮೀಕ್ಷೆಯನ್ನು ಸಿದ್ದಪಡಿಸಲಾಗಿತ್ತು. ಸಮೀಕ್ಷೆಯ ವರದಿ ಮುದ್ರಣಗೊಂಡು, ಈಗ ಬೆಂಗಳೂರಿನ ಕ್ವೀನ್ಸ್ ರಸ್ತೆಗೆ ಹೊಂದಿಕೊಂಡಿರುವ ದೇವರಾಜು ಅರಸು ಭವನದ ಕೊಠಡಿಯಲ್ಲಿ ರಾಶಿರಾಶಿ ಧೂಳು ಹಿಡಿದುಕೊಂಡು ಬಿದ್ದಿದೆ.
ಸಮೀಕ್ಷಾ ವರದಿಯಲ್ಲಿ ಯಾವ ಜಾತಿಯವರು ಎಷ್ಟು ಸಂಖ್ಯೆಯಲ್ಲಿದ್ದಾರೆ
ಸಮೀಕ್ಷಾ ವರದಿಯಲ್ಲಿ ಯಾವ ಜಾತಿಯವರು ರಾಜ್ಯದಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎನ್ನುವ ಅನಧಿಕೃತ ಮಾಹಿತಿಯ ಸುದ್ದಿಗಳು ಭಾರೀ ಸದ್ದನ್ನು ಮಾಡಿದ್ದವು. ಈ ವರದಿ ಸರಕಾರಕ್ಕೆ ಸಲ್ಲಿಕೆಯಾದರೆ, ಪ್ರಾತಿನಿಧ್ಯದ ವಿಚಾರದಲ್ಲಿ ಮಹತ್ವದ ಬದಲಾವಣೆ ಆಗುವುದರಿಂದ ಈ ವರದಿಯಲ್ಲಿ ಏನಿದೆ ಎನ್ನುವ ವಿಚಾರ ಭಾರೀ ಕುತೂಹಲಕ್ಕೆ ಎಡೆಮಾಡಿದೆ.
Recommended Video
ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ವರದಿಯ ಅಧ್ಯಯನ
ಈಗ, ಸದ್ಯ ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವರದಿಯ ಅಧ್ಯಯನ ನಡೆಸುತ್ತಿದ್ದಾರೆ. ಮುಂದಿನ ಕೆಲವು ತಿಂಗಳಲ್ಲಿ ಈ ವರದಿ ಸರಕಾರಕ್ಕೆ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಮತ್ತು, ರಾಜ್ಯದ ಜಾತಿ ಸಮೀಕರಣ ಹೊಸ ರೂಪವನ್ನು ಪಡೆದುಕೊಳ್ಳುವ ಸಾಧ್ಯತೆಯಿಲ್ಲದಿಲ್ಲ.