ಇತ್ತ ಖಾತೆ ಹಂಚಿಕೆ; ಅತ್ತ ಅಮಿತ್ ಶಾ, ಶ್ರೀರಾಮುಲು ಭೇಟಿ!
Recommended Video
ಬೆಂಗಳೂರು, ಫೆಬ್ರವರಿ 10 : ಸಚಿವ ಸಂಪುಟ ವಿಸ್ತರಣೆ, ಹೊಸದಾಗಿ ಸಂಪುಟ ಸೇರಿದ 10 ಸಚಿವರಿಗೆ ಖಾತೆ ಹಂಚಿಕೆ ಎಂದು ಕರ್ನಾಟಕ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಅತ್ತ ಬಿ. ಶ್ರೀರಾಮುಲು ಅಮಿತ್ ಶಾ ಭೇಟಿಯಾಗಿದ್ದಾರೆ.
ಹೌದು, ನವದೆಹಲಿ ಪ್ರವಾಸದಲ್ಲಿರುವ ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ. ಅಮಿತ್ ಶಾ ಭೇಟಿಯಾದ ಚಿತ್ರಗಳನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ.
ಯಡಿಯೂರಪ್ಪ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ಬಿ. ಶ್ರೀರಾಮುಲು ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ಹೊಸದಾಗಿ ಸಂಪುಟಕ್ಕೆ ಸೇರಿದ 10 ಸಂಪುಟ ದರ್ಜೆ ಸಚಿವರಿಗೆ ಯಡಿಯೂರಪ್ಪ ಖಾತೆ ಹಂಚಿಕೆಯನ್ನು ಮಾಡಿದ್ದಾರೆ.
ಬಿ. ಶ್ರೀರಾಮುಲು ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದರು. ಅಲ್ಲದೇ ಬಳ್ಳಾರಿ ಜಿಲ್ಲಾ ಉಸ್ತುವಾರಿಯನ್ನು ತಮಗೆ ವಹಿಸಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಯಾವ ಬೇಡಿಕೆಗಳು ಈಡೇರಿಲ್ಲ. ಇದರ ನಡುವೆಯೇ ಅಮಿತ್ ಶಾ ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿಯಲ್ಲಿ ಅಮಿತ್ ಶಾ ಭೇಟಿ
ಆರೋಗ್ಯ ಸಚಿವ ಬಿ. ಶ್ರೀರಾಮುಲು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದರು. ಕರ್ನಾಟಕದಲ್ಲಿ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಅಮಿತ್ ಶಾ ಒಪ್ಪಿಗೆ ನೀಡಿದ್ದರು. ಸಂಪುಟ ವಿಸ್ತರಣೆ ಬಳಿಕ ಶ್ರೀರಾಮುಲು ಅಮಿತ್ ಶಾ ಭೇಟಿಯಾದರು.
ರಾಜಕೀಯ ಮಾತನಾಡಿಲ್ಲ
ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿ. ಶ್ರೀರಾಮುಲು, "ಅಮಿತ್ ಶಾ ಜೊತೆಗೆ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿಲ್ಲ. ಉಪ ಮುಖ್ಯಮಂತ್ರಿ ಸ್ಥಾನವನ್ನು ಕೇಳಿಲ್ಲ. ಪುತ್ರಿಯ ವಿವಾಹಕ್ಕೆ ಆಹ್ವಾನ ನೀಡಲು ಭೇಟಿ ಮಾಡಿದ್ದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಉಪ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ
ಬಿ. ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದರು. ಕರ್ನಾಟಕದಲ್ಲಿ ಈಗಾಗಲೇ ಮೂವರು ಉಪ ಮುಖ್ಯಮಂತ್ರಿಗಳಿದ್ದಾರೆ. ಮತ್ತೊಂದು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಇಲ್ಲ ಎಂದು ಯಡಿಯೂರಪ್ಪ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಶ್ರೀರಾಮುಲು ಪುತ್ರಿ ವಿವಾಹ
ಆರೋಗ್ಯ ಸಚಿವ ಬಿ. ಶ್ರೀರಾಮುಲು ಮೊದಲ ಪುತ್ರಿ ರಕ್ಷಿತಾ ನಿಶ್ಚಿತಾರ್ಥ ಹೈದರಾಬಾದ್ ಮೂಲದ ಉದ್ಯಮಿ ಪುತ್ರ ಲಲಿತ್ ಜೊತೆ ಎರಡು ತಿಂಗಳ ಹಿಂದೆ ನಡೆದಿದೆ. ಈಗ ಶ್ರೀರಾಮುಲು ಪುತ್ರಿಯ ವಿವಾಹಕ್ಕೆ ಗಣ್ಯರನ್ನು ಆಹ್ವಾನಿಸುತ್ತಿದ್ದಾರೆ.