ಯಡಿಯೂರಪ್ಪ ವರಿಷ್ಟರಿಗೆ ಕೊಟ್ಟ ಸಂದೇಶವೇನು
ಬೆಂಗಳೂರು, ಜು. 26: "ನನಗೂ ಗೊತ್ತು ರಿವೇಂಜ್ ಪಾಲಿಟಿಕ್ಸ್ ಮಾಡೋದು. ನನ್ನಿಂದ ತೆರವಾಗುವ ಮುಖ್ಯಮಂತ್ರಿ ಹುದ್ದೆಗೆ ಲಿಂಗಾಯುತ ಸಮುದಾಯ ನಾಯಕ ಬೇಡ. ಆದರೆ ಇವರನ್ನು ಮಾಡಿ ಎಂದು ನಾನು ಯಾರ ಹೆಸರನ್ನೂ ಸೂಚಿಸುವುದಿಲ್ಲ"
ಇಂತದ್ದೊಂದು ನಿಗೂಢ ಅರ್ಥವುಳ್ಳ ಸಂದೇಶವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೇಂದ್ರ ವರಿಷ್ಠರಿಗೆ ರವಾನಿಸಿದ್ದಾರೆ ಎನ್ನಲಾಗಿದೆ. ಕೇಂದ್ರ ವರಿಷ್ಠರು ರಾಜೀನಾಮೆ ಕೇಳಿದ ಬಳಿಕ ತಮ್ಮ ಪರಮಾಪ್ತತೆಯಲ್ಲಿ ಗುರುತಿಸಿಕೊಂಡಿರುವ ನಾಯಕರ ಮುಂದೆ ಇಂತದ್ದೊಂದು ಚರ್ಚೆ ನಡೆದಿದೆ. ಈ ಮಾತಿನ ಮರ್ಮ ನಿಗೂಢವಾಗಿದೆ. ಭವಿಷ್ಯದ ರಾಜಕೀಯ ಲೆಕ್ಕಾಚಾರ ಹಾಕಿ ಹೇಳುವುದಾದರೆ ಹೊಸ ಸಿಎಂ ಮುಂದಿನ ಮೂರು ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೇಂದ್ರ ವರಿಷ್ಠರಿಗೆ ತಲೆನೋವು:
ಲಿಂಗಾಯುತ ಸಮುದಾಯದ ನಾಯಕರು ಸಿಎಂ ಆದರೆ, ಭವಿಷ್ಯದಲ್ಲಿ ಪುತ್ರ ವಿಜಯೇಂದ್ರ ಮೊದಲ ಸಾಲಿನ ನಾಯಕನಾಗಿ ಅಸ್ತಿತ್ವ ಉಳಿಸಿಕೊಳ್ಳಲು ಕಷ್ಟ. ಕರ್ನಾಟಕದಲ್ಲಿ ಲಿಂಗಾಯುತ ಸಮುದಾಯದ ಬೆಂಬಲ ಇಲ್ಲದೇ ರಾಜಕಾರಣ ಮಾಡುವುದು ಸಾಧ್ಯವೇ ಇಲ್ಲ. ಹೀಗಾಗಿಯೇ ಯಡಿಯೂರಪ್ಪ ಕೇವಲ ಬಿಜೆಪಿ ಪಕ್ಷದ ನಾಯಕನಾಗಿ ಗುರುತಿಸಿಕೊಂಡಿಲ್ಲ. ಇಡೀ ಲಿಂಗಾಯತ ಸಮುದಾಯದ ಎಲ್ಲಾ ಪಕ್ಷದ ನಾಯಕರು ಇಷ್ಟ ಪಡುತ್ತಾರೆ. ಸಮುದಾಯದ ವಿಚಾರ ಬಂದಾಗ ಅನ್ಯ ಪಕ್ಷದ ನಾಯಕರಿಗೂ ಈಗಲೂ ಯಡಿಯೂರಪ್ಪ ಮೇಲೆಯೇ ಮಮಕಾರ ಜಾಸ್ತಿ. ಆಸ್ಥಾನವನ್ನು ಮತ್ತೊಬ್ಬರು ತುಂಬುತ್ತಾರೆ ಎನ್ನುವುದು ಊಹಿಸಲಾಗದು. ಮುಂದೆ ಅದರ ಸಾರಥ್ಯವನ್ನು ಬಿ.ವೈ. ವಿಜಯೇಂದ್ರ ವಹಿಸಬೇಕು ಎಂಬುದು ಯಡಿಯೂರಪ್ಪ ಆಕಾಂಕ್ಷೆ. ಹೀಗಾಗಿ ಲಿಂಗಾಯುತ ಸಮುದಾಯ ಹೊರತು ಪಡಿಸಿದ ನಾಯಕನ ಹುಡುಕಾಟ ಮಾಡುವುದು ಕೇಂದ್ರ ವರಿಷ್ಠರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ರಿವೇಂಜ್ ಪಾಲಿಟಿಕ್ಸ್ :
ಯಡಿಯೂರಪ್ಪ ಅವರ ವಯಸ್ಸು ಆಗಿತ್ತು. ಬಿಜೆಪಿ ಪಕ್ಷದ ನೀತಿಗೆ ವಿರುದ್ಧವಾಗಿ ಯಡಿಯೂರಪ್ಪ ಅವರನ್ನು ಸಿಎಂನ್ನಾಗಿ ನೇಮಿಸಲು ಕೇಂದ್ರ ವರಿಷ್ಠರು ಆಯ್ಕೆ ಮಾಡಿದ್ದು ನಿಜ. ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಪರ್ಯಾಯವಾಗಿ ಸರ್ಕಾರ ರಚನೆ ಮಾಡುವುದು ಸುಲಭದ ಮಾತಲ್ಲ. ಇಂತಹ ಸಂಕಷ್ಟ ಸ್ಥಿತಿಯಿಂದ ಎದುರಾದ ಸವಾಲು ಮೆಟ್ಟಿನಿಂತು ಸರ್ಕಾರ ರಚಿಸಿದ್ದು ಯಡಿಯೂರಪ್ಪ. ದುರಾದೃಷ್ಟ ವಶಾತ್ ಕೊರೊನಾ, ಅತಿವೃಷ್ಠಿ ಪ್ರತಿ ವರ್ಷವೂ ಬಾದಿಸುತ್ತಲೇ ಇದೆ. ಹೊರತಾಗಿಯೂ ಆಡಳಿತ ನಡೆಸಿ ಸರ್ಕಾರ ಬೀಳದಂತೆ ನೋಡಿಕೊಂಡಿದ್ದು ಕೂಡ ಬಿಎಸ್ ವೈ ಅವರೇ. ಇದಕ್ಕಾದರೂ ಯಡಿಯೂರಪ್ಪ ಇಷ್ಟ ಪಡುವ ವರೆಗೂ ಪೂರ್ಣಾವಧಿ ಮುಗಿಸಲು ಕೇಂದ್ರ ವರಿಷ್ಠರು ಅವಕಾಶ ನೀಡಬೇಕಿತ್ತು ಎನ್ನುವುದು ಬಿಎಸ್ ವೈ ಬಣದ ಆಪೇಕ್ಷೆ. ಎರಡು ಮೂರು ಬಾರಿ ನಾಯಕತ್ವ ಬದಲಾವಣೆ ಸನ್ನಿವೇಶ ಒದಗಿದರೂ ಯಡಿಯೂರಪ್ಪ ಅಲ್ಲಾಡಲಿಲ್ಲ. ಇದೀಗ ರಾಜೀನಾಮೆ ಕೊಟ್ಟು ಹೊರ ನಡೆದಿದ್ದಾರೆ. ಯಡಿಯೂರಪ್ಪ ಮೌನವಾಗಿರುವರೇ? ಒಂದು ವೇಳೆ ರಿವೇಂಜ್ ಪಾಲಿಟಿಕ್ಸ್ ಮಾಡಲು ಶುರುವಾದರೆ ಮೂರು ತಿಂಗಳು ಸರ್ಕಾರ ಉಳಿಯುವುದು ಕಷ್ಟ ಎಂದೇ ಹೇಳಲಾಗುತ್ತಿದೆ.
ಯಡಿಯೂರಪ್ಪ ಶಾಸಕ ಪಡೆ:
ಬಿಜೆಪಿ ಪಕ್ಷವನ್ನು ನಂಬಿ ಇರುವ ರೀತಿಯಲ್ಲಿಯೇ ಯಡಿಯೂರಪ್ಪನನ್ನು ನಂಬಿರುವ ಶಾಸಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಯಡಿಯೂರಪ್ಪ ಅವರ ರಾಜೀನಾಮೆ ಪರ್ವ ಒಂದು ಸಮುದಾಯಕ್ಕೆ ಮಾಡಿದ ಅವಮಾನ ಎಂದೇ ಬಿಂಬಿತವಾಗಿದೆ. ಇದೇ ಸಮುದಾಯದ ನಾಯಕನ್ನು ಕೂರಿಸದಂತೆ ಯಡಿಯೂರಪ್ಪ ಅವರೇ ಪಟ್ಟು ಹಿಡಿದಿರುವ ಕಾರಣ ಅವರ ಸರ್ಕಾರದ ಸುರಕ್ಷತಾ ದೃಷ್ಟಯಿಂದ ಅನ್ಯ ಸಮುದಾಯದ ನಾಯಕನಿಗೆ ಕೇಂದ್ರ ವರಿಷ್ಠರು ಮಣೆ ಹಾಕಬೇಕಿದೆ. ಅನ್ಯ ಸಮುದಾಯದ ನಾಯಕರು ಸಿಎಂ ಆದರೂ ಅವರ ಆಡಳಿತ ಅಷ್ಟು ಸುಗಮವಾಗಿರುತ್ತದೆ ಎಂದು ಭಾವಿಸಲು ಸಾಧ್ಯವಿಲ್ಲ. ಹೀಗಾಗಿ ಸಿಎಂ ಆಗುವರಿಗೆ ಎದುರಾಳಿ ಪಕ್ಷಗಳಿಂದ ಎದುರಾಗುವ ಸವಾಲಿಗಿಂತಲೂ ಬೆಜೆಪಿ ಆಂತರಿಕ ಬೇಗುದಿ ಶಮನ ಮಾಡುವುದರಲ್ಲೇ ಕಾಲ ಕಳೆಯಬೇಕಾದೀತು. ಯಡಿಯೂರಪ್ಪನಂತೆ ಆಡಳಿತ ನೀಡಲಿಲ್ಲ ಎಂಬುದನ್ನು ಸಮಾಜಕ್ಕೆ ತೋರಿಸಬೇಕು ಎನ್ನುವ ಯಡಿಯೂರಪ್ಪ ರಿವೇಂಜ್ ಪಾಲಿಟಿಕ್ಸ್ ಗೆದ್ದರೆ ಮತ್ತೆ ಯಡಿಯೂರಪ್ಪ ಅವರ ಪುತ್ರನಿಗೆ ಸಿಗುವ ಆದ್ಯತೆ, ಅಧಿಕಾರ ಯಾರೂ ಅಲುಗಾಡಿಸಲು ಸಾಧ್ಯವಾಗದು. ಇದಕ್ಕಾಗಿ ಯಡಿಯೂರಪ್ಪ ಅವರು ಮಾಜಿಯಾದರೂ ಮಾಡುವ ತಂತ್ರಗಾರಿಕೆಯನ್ನು ಅಲ್ಲಗಳೆಯುವಂತಿಲ್ಲ ಎಂಬುದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಆಗುತ್ತಿರುವ ವಿಚಾರ.
Recommended Video