ಅಯ್ಯಪ್ಪ ದೊರೆ ಹತ್ಯೆ; ಮತ್ತೆ ಮೂವರು ಆರೋಪಿಗಳ ಬಂಧನ
ಬೆಂಗಳೂರು, ಅಕ್ಟೋಬರ್ 20 : ಅಲಯನ್ಸ್ ವಿವಿ ವಿಶ್ರಾಂತ ಕುಲಪತಿ ಡಾ. ಅಯ್ಯಪ್ಪ ದೊರೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಹತ್ಯೆಗೆ ಸುಪಾರಿ ನೀಡಿದ್ದ ಸುಧೀರ್ ಅಂಗೂರ್, ಪ್ರಮುಖ ಆರೋಪಿ ಸೂರಜ್ ಸಿಂಗ್ ಈಗಾಗಲೇ ಪೊಲೀಸರ ವಶದಲ್ಲಿದ್ದಾರೆ.
ಡಾ. ಅಯ್ಯಪ್ಪ ದೊರೆ (52) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೂರಜ್ ಸಿಂಗ್ ಸ್ನೇಹಿತರನ್ನು ಬಂಧಿಸಲಾಗಿದೆ. ಜೆ. ಸಿ. ನಗರದ ಫಯಾಜ್, ಗಣೇಶ್ ಮತ್ತು ಮಂಜು ಬಂಧಿತ ಆರೋಪಿಗಳಾಗಿದ್ದಾರೆ. ಇದುವರೆಗೂ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಯ್ಯಪ್ಪ ಕೊಲೆಗೆ ಮೂರು ತಿಂಗಳು ಸ್ಕೆಚ್, ಹತ್ಯೆ ಬಳಿಕ ಪಾರ್ಟಿ!
ಹಣದ ಆಸೆಗಾಗಿ ಹತ್ಯೆ ಪ್ರಕರಣದಲ್ಲಿ ಪಾಲ್ಗೊಂಡೆವು ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಅಲಯನ್ಸ್ ವಿವಿ ಹಾಲಿ ಕುಲಪತಿ ಸುಧೀರ್ ಅಂಗೂರ್ ಸಹೋದರ ಮಧುಕರ್ ಅಂಗೂರ್ ಮತ್ತು ಅಯ್ಯಪ್ಪ ದೊರೆ ಹತ್ಯೆಗಾಗಿ 1 ಕೋಟಿ ರೂ. ಸುಪಾರಿ ನೀಡಿದ್ದರು.
ಅಯ್ಯಪ್ಪ ಕೊಲೆಗೆ 1 ಕೋಟಿ ಸುಪಾರಿ, ಹತ್ಯೆ ಮಾಡಿದ್ದು ವಿವಿ ನೌಕರ
25 ಲಕ್ಷ ರೂ.ಗಳನ್ನು ಪಡೆದಿದ್ದ ಪ್ರಮುಖ ಆರೋಪಿ ಸೂರಜ್ ಸಿಂಗ್, ಹಣದ ಆಸೆ ತೋರಿಸಿ ಫಯಾಜ್, ಗಣೇಶ್ ಮತ್ತು ಮಂಜುವನ್ನು ಹತ್ಯೆಗೆ ಪ್ರೇರೆಪಿಸಿದ್ದರು. ಎಲ್ಲರಿಗೂ ರೂಮ್ ಮಾಡಿಕೊಟ್ಟು ಹತ್ಯೆ ಬಳಿಕ ಹಣವನ್ನು ನೀಡುವುದಾಗಿ ಹೇಳಿದ್ದ.
ಅಯ್ಯಪ್ಪ ದೊರೆ ಎಚ್.ಎಂ.ಟಿ. ಮೈದಾನಕ್ಕೆ ವಾಕಿಂಗ್ ಬರುತ್ತಾರೆ ಎಂಬುದನ್ನು ತಿಳಿದಿದ್ದ ಆರೋಪಿಗಳು ರಾತ್ರಿ ಮೈದಾನಕ್ಕೆ ಬಂದಿದ್ದರು. ಚಾಕುವಿನಿಂದ ಚುಚ್ಚಿ ಅಯ್ಯಪ್ಪ ದೊರೆ ಹತ್ಯೆ ಮಾಡಿ, ಸೂರಜ್ ಸಿಂಗ್ ಜೊತೆ ಸುಧೀರ್ ಅಂಗೂರ್ ಮನೆಗೆ ಹೋಗಿ ಪಾರ್ಟಿ ಮಾಡಿದ್ದರು.
ಅಲಯನ್ಸ್ ವಿವಿ ಮಾಜಿ ಉಪ ಕುಲಪತಿ ಅಯ್ಯಪ್ಪ ದೊರೆ ಹತ್ಯೆ
ಆರೋಪಿ ಗಣೇಶ್ ಮುನಿರೆಡ್ಡಿಪಾಳ್ಯದಲ್ಲಿ ಪಂಕ್ಚರ್ ಶಾಪ್ ಇಟ್ಟುಕೊಂಡಿದ್ದ. ಆರೋಪಿಗಳು ಅಲ್ಲಿಯೇ ಡಾ. ಅಯ್ಯಪ್ಪ ಹತ್ಯೆಯ ಸ್ಕೆಚ್ ತಯಾರು ಮಾಡಿದ್ದರು. ಅಯ್ಯಪ್ಪ ಜೊತೆ ಮಧುಕರ್ ಅಂಗೂರ್ ಹತ್ಯೆಗೂ ಸಂಚು ರೂಪಿಸಲಾಗಿತ್ತು.
ಅಯ್ಯಪ್ಪ ದೊರೆ ಹತ್ಯೆಯ ಬಳಿಕ ಮಧುಕರ್ ಅಂಗೂರ್ಗೆ ಪೊಲೀಸರು ಭದ್ರತೆ ನೀಡಿದ್ದರಿಂದ ಅವರ ಹತ್ಯೆಯ ಯತ್ನ ವಿಫಲವಾಯಿತು. ಅಯ್ಯಪ್ಪ ದೊರೆ ಹತ್ಯೆ ನಡೆದ 10 ಗಂಟೆಯಲ್ಲಿಯೇ ಸುಧೀರ್ ಅಂಗೂರ್ ಮತ್ತು ಸೂರಜ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದಾರೆ.