ಅಯೋಧ್ಯೆ ತೀರ್ಪು: ಕುಮಾರಸ್ವಾಮಿ ಕುತೂಹಲಕಾರಿ ಟ್ವೀಟ್
ಬೆಂಗಳೂರು, ನ 9: ಇಡೀ ದೇಶದ ಜನತೆ ಬಹಳ ಕುತೂಹಲ/ಆತಂಕದಿಂದ ಎದುರು ನೋಡುತ್ತಿದ್ದ ಅಯೋಧ್ಯೆ ತೀರ್ಪಿನ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, "ರಾಮ ಜನ್ಮ ಭೂ ವಿವಾದದ ತೀರ್ಪನ್ನು ಎಲ್ಲರೂ ಗೌರವಿಸೋಣ. ಶಾಂತಿ ಮತ್ತು ಅಹಿಂಸೆಯನ್ನು ಪ್ರತಿಪಾದಿಸಿದ ಈ ದೇಶದ ಸಿದ್ಧಾಂತವನ್ನು ಪಾಲಿಸೋಣ" ಎಂದಿದ್ದಾರೆ.
ಅಯೋಧ್ಯೆ ಐತಿಹಾಸಿಕ ತೀರ್ಪು: ಅರ್ಜಿದಾರರಿಗೆ ಸಿಹಿ-ಕಹಿ
"ನಾವೆಲ್ಲರೂ ಎಂದಿನಂತೆ ಸಾಮರಸ್ಯದಿಂದ ಬದುಕುತ್ತಾ ಅಭಿವೃದ್ಧಿಯ ಕಡೆ ಚಿಂತಿಸೋಣ. ಅಂದಹಾಗೆ "ಅನ್ನ ದೇವರ ಮುಂದೆ ಇನ್ಯಾವ ದೇವರಿಲ್ಲ..." ರಾಮಮಂದಿರದ ಜೊತೆಗೆ ಅನ್ನದಾತನ ಬದುಕು ಕಟ್ಟಲು ಶ್ರಮಿಸೋಣ" ಎಂದು ಕುಮಾರಸ್ವಾಮಿ ಅನ್ನದಾತನನ್ನು, ಅಯೋಧ್ಯೆ ತೀರ್ಪಿನಲ್ಲೂ ನೆನೆಪಿಸಿಕೊಂಡಿದ್ದಾರೆ.
ಹಲವು ದಶಕಗಳ ಅಯೋಧ್ಯೆ ವಿವಾದದ ತೀರ್ಪು ಇಂದು (ನ 9) ಪ್ರಕಟವಾಗಿತ್ತು, ಈ ತೀರ್ಪಿಗೆ ಅರ್ಜಿದಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ನಿರ್ಮೋಹಿ ಅಖಾರ, ಸ್ವತಂತ್ರ ಅರ್ಜಿದಾರಿ ಇಖ್ಬಾಲ್ ಅನ್ಸಾರಿ, ಹಿಂದು ಮಹಾಸಭಾ ತೀರ್ಪನ್ನು ಸ್ವಾಗತಿಸಿದ್ದರೆ, ಸುನ್ನಿ ವಕ್ಫ್ ಬೋರ್ಡ್, ಸುಪ್ರೀಂ ತೀರ್ಪಿಗೆ ಗೌರವ ನೀಡುತ್ತೇವೆ. ಆದರೆ ತೀರ್ಪಿನ ಬಗ್ಗೆ ತೃಪ್ತಿಯಿಲ್ಲ ಎಂದಿದೆ.
ಅಯೋಧ್ಯೆ ಭೂವ್ಯಾಜ್ಯ ವಿಚಾರದಲ್ಲಿ ಅರ್ಜಿದಾರರಲ್ಲಿ ಒಬ್ಬರಾದ ಸುನ್ನಿ ವಕ್ಫ್ ಮಂಡಳಿಗೆ ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯ ಯಾವ ಭಾಗದಲ್ಲಿಯಾದರೂ ಐದು ಎಕರೆ ಪರ್ಯಾಯ ಭೂಮಿಯನ್ನು ಒದಗಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
'ನಾವು ತೀರ್ಪನ್ನು ಗೌರವಿಸುತ್ತೇವೆ. ಆದರೆ ಇದರಿಂದ ನಮಗೆ ತೃಪ್ತಿ ಸಿಕ್ಕಿಲ್ಲ. ತೀರ್ಪಿನ ಅಂಶಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ' ಎಂದು ಸುನ್ನಿ ವಕ್ಫ್ ಬೋರ್ಡ್ ತಿಳಿಸಿದೆ.