ಕರ್ನಾಟಕ ಪೊಲೀಸರ ಎರಡನೇ ದೊಡ್ಡ ಕಾರ್ಯಾಚರಣೆ
ಬೆಂಗಳೂರು / ಅನಂತಪುರ, ಡಿ 7: ಎಟಿಎಂನಲ್ಲಿ ಕಾರ್ಪೋರೇಶನ್ ಬ್ಯಾಂಕ್ ಉದ್ಯೋಗಿಯ ಮೇಲೆ ಹಲ್ಲೆ ನಡೆದು ಹದಿನೆಂಟು ದಿನ ಕಳೆದರೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಇದುವರೆಗೆ ಸಫಲತೆಯನ್ನು ಕಂಡಿಲ್ಲ. ಇದು ಕರ್ನಾಟಕ ಪೊಲೀಸರು ಜಂಟಿಯಾಗಿ ನಡೆಸುತ್ತಿರುವ ಎರಡನೇ ಅತಿದೊಡ್ದ ಕಾರ್ಯಾಚರಣೆ. (ಎಟಿಎಂ ಹಲ್ಲೆ : ಜ್ಯೋತಿ ಉದಯ್ ಆರೋಗ್ಯದಲ್ಲಿ ಚೇತರಿಕೆ)
ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯಲ್ಲಿ ಕರ್ನಾಟಕ ಮತ್ತು ಆಂಧ್ರದ ಸುಮಾರು 400 ಪೊಲೀಸರು ಜಂಟಿಯಾಗಿ ಆರೋಪಿಯನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ. ಈ ಹಿಂದೆ ಕರ್ನಾಟಕ ಮತ್ತು ತಮಿಳುನಾಡಿನ 500 ಪೊಲೀಸರು ಜಂಟಿಯಾಗಿ ನರಹಂತಕ ವೀರಪ್ಪನ್ ಕಾರ್ಯಾಚರಣೆಯಲ್ಲಿ ತೊಡಗಿದ್ದರು. (ಎಟಿಎಂ ಹಲ್ಲೆ : ಆರೋಪಿ ಮೂಲ ಆಂಧ್ರಪ್ರದೇಶ)
ಈಗ ಎರಡು ರಾಜ್ಯದ 400 ಪೊಲೀಸರು ಎಟಿಎಂ ಪಾತಕಿಯನ್ನು ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ. ನಮ್ಮ ಮತ್ತು ಕರ್ನಾಟಕದ ಪೊಲೀಸ್ ಅಧಿಕಾರಿಗಳ ನಡುವೆ ಹೊಂದಾಣಿಕೆಯ ಕೊರತೆಯಿದೆ ಎನ್ನುವ ಮಾತು ಸತ್ಯಕ್ಕೆ ದೂರವಾದದು ಎಂದು ಆಂಧ್ರ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದು ವೀರಪ್ಪನ್ ನಂತರದ ಅತಿ ದೊಡ್ಡ ಕಾರ್ಯಾಚರಣೆ. ಅನಂತಪುರಂ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಪ್ರತೀ ಮನೆಗೂ ಪೊಲೀಸರು ಭೇಟಿ ನೀಡಿ ವೋಟರ್ ಐಡಿ, ರೇಶನ್ ಕಾರ್ಡ್ ಮುಂತಾದವನ್ನು ಪರಿಶೀಲಿಸುತ್ತಿದ್ದಾರೆ. ಅನುಮಾನಾಸ್ಪದ ವ್ಯಕ್ತಿಯನ್ನು ತೀವ್ರ ವಿಚಾರಣೆಗೆ ಗುರಿ ಪಡಿಸಲಾಗುತ್ತಿದೆ. ಆರೋಪಿಯ ಸ್ಕೆಚನ್ನು ಎಲ್ಲಾ ಕಡೆ ಅಂಟಿಸಲಾಗಿದೆ ಎಂದು ಆಂಧ್ರ ಪೊಲೀಸರು ಹೇಳಿದ್ದಾರೆ.
ಪಾತಕಿಯು ಕನ್ನಡ ಮತ್ತು ತೆಲುಗು ಭಾಷೆಯನ್ನು ನಿರರ್ಗಳವಾಗಿ ಮಾತನಾಡಬಲ್ಲ. ಹಾಗಾಗಿ ಬಳ್ಳಾರಿ ಮತ್ತು ಕರ್ನೂಲ್ ಜಿಲ್ಲೆಗೂ ಪರಾರಿಯಾಗಿರಬಹುದು. ಕನ್ನಡ ಮತ್ತು ತೆಲುಗು ಮಾತನಾಡಬಲ್ಲ ಮನೆಯಲ್ಲಿ ಹೆಚ್ಚಿನ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಹಿಂದೆ ಪೊಲೀಸ್ ಮತ್ತು ರಕ್ಷಣಾ ಪಡೆಗೆ ಸವಾಲಾಗಿ ಪರಣಮಿಸಿದ್ದ ನರಹಂತಕ, ಕಾಡುಗಳ್ಳ, ದಂತಚೋರ ವೀರಪ್ಪನ್ ನನ್ನು ಸೆರೆ ಹಿಡಿಯಲು ಪೊಲೀಸ್, STF ಮತ್ತು BSF ಪಡೆಯನ್ನು ನಿಯೋಜಿಸಲಾಗಿತ್ತು. ತನ್ನ ಚಾಣಾಕ್ಷತನದಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ವೀರಪ್ಪನ್ ಬಗ್ಗೆ ಸುಳಿವು ನೀಡಿದವರಿಗೆ ಸರಕಾರ ಮೂರು ಕೋಟಿ ರೂಪಾಯಿ ಇನಾಮು ಘೋಷಿಸಿತ್ತು.
ಡೈನಾಮಿಕ್ ಪೊಲೀಸ್ ಅಧಿಕಾರಿಗಳಾದ ಹರಿಕೃಷ್ಣ, ಶಕೀಲ್ ಅಹ್ಮದ್ ಸೇರಿ ನೂರಾರು ಪೊಲೀಸರು ಮತ್ತು ಜನರನ್ನು ಹತ್ಯೆಗೈದಿದ್ದ ವೀರಪ್ಪನ್ ಕನ್ನಡದ ವರನಟ ಡಾ.ರಾಜಕುಮಾರ್ ಅವರನ್ನು ಜುಲೈ 30, 2000ರಲ್ಲಿ ಅಪಹರಿಸಿದ್ದ. (ವೀರಪ್ಪನ್ ನಿಂದ ರಾಜ್ ಅಪಹರಣ ಆಗಿದ್ದು ಹೀಗೆ)
ಅಕ್ಟೋಬರ್ 18, 2004ರಲ್ಲಿ STF ಮುಖ್ಯಸ್ಥ ವಿಜಯ್ ಕುಮಾರ್ ನೇತೃತ್ವದ ತಂಡ ವೀರಪ್ಪನ್ ಮತ್ತು ಆತನ ಇಬ್ಬರು ಸಹಚರರನ್ನು ಹೊಡೆದುರುಳಿಸಿದ್ದರು.