ಬಸ್ ಪ್ರಯಾಣಿಕರು ನಿಟ್ಟುಸಿರು: ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ
ಬೆಂಗಳೂರು, ಜನವರಿ 27: ಬಸ್ ಪ್ರಯಾಣ ದರ ಏರಿಕೆ ಚಿಂತನೆ ಸದ್ಯಕ್ಕಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.
ದಿನದಿಂದ ದಿನಕ್ಕೆ ಇಂಧನ ದರ ಏರಿಕೆ, ಬಿಡಿಭಾಗಗಳ ಬೆಲೆ ಏರಿಕೆ, ಮೆಟ್ರೋ ರೈಲು ಬಳಕೆಯಿಂದಾಗಿ ಬಿಎಂಟಿಸಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಹೀಗಾಗಿ ಟಿಕೆಟ್ ದರ ಏರಿಕೆ ಕುರಿತು ಚಿಂತನೆ ನಡೆಸಲಾಗಿತ್ತು. ಬಿಎಂಟಿಸಿಗೆ ಪ್ರತಿದಿನ 1 ಕೋಟಿ ರೂ ನಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಿಎಂಟಿಸಿ ಚಾಲಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ವಿಚಾರ
ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎನ್ನುವ ಆಗ್ರಹ ಕೇಳಿಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನೇಮಿಸಿರುವ ಸಮಿತಿ ವರದಿ ಬಂದ ಬಳಿಕ ನಿರ್ಧಾರ ತಿಳಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಬಿಎಂಟಿಸಿ ನೌಕರರ ಪ್ರತಿಭಟನೆ: ಬಸ್ ಸಂಚಾರದಲ್ಲಿ ವ್ಯತ್ಯಯವಿಲ್ಲ
ಸಾರಿಗೆ ಇಲಾಖೆಯು ಆದಾಯ ಗಳಿಕೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಮಾರ್ಚ್ ಅಂತ್ಯದ ವೇಳೆಗೆ ಈ ಪರಿಸ್ಥಿತಿ ಸುಧಾರಣೆ ಕಾಣಬಹುದೆಂಬ ನಿರೀಕ್ಷೆ ಇದೆ.
ಎಲೆಕ್ಟ್ರಿಕ್ ಬಸ್ ಸೌಕರ್ಯ ನೀಡಲು ವಿದೇಶ ಕಂಪನಿ ಮುಂದು
ಎಲೆಕ್ಟ್ರಿಕ್ ಬಸ್ ಸೌಕರ್ಯವನ್ನು ನೀಡಲು ವಿದೇಶಿ ಕಂಪನಿಗಳು ಮುಂದೆ ಬಂದಿವೆ. ಅವುಗಳಿಗೆ ನಮ್ಮ ಸಂಚಾರ ಮಾರ್ಗ ಮತ್ತು ನಿಲ್ದಾಣಗಳನ್ನು ಬಿಟ್ಟುಕೊಟ್ಟರೆ ಆದಾಯಗಳಲ್ಲಿ ನಮಗೆ ಶೇ.60, ಅವರಿಗೆ ಶೇ.40 ಹಂಚಿಕೆ ಮಾಡಿಕೊಳ್ಳುವ ಪ್ರಸ್ತಾಪವನ್ನು ಮುಂದಿಟ್ಟಿವೆ.
ದುಬಾರಿ ವಾಹನ ಖರೀದಿಸುವವರಿಗೆ ತೆರಿಗೆ ಹಣ ಉಳಿಸಲು ಪ್ಲ್ಯಾನ್
ರಾಜ್ಯದಲ್ಲಿ ದುಬಾರಿ ವಾಹನಗಳನ್ನು ಖರೀದಿಸುತ್ತಿರುವವರು ತೆರಿಗೆ ಹಣ ಉಳಿಸಲು ಹೊರರಾಜ್ಯಗಳಲ್ಲಿ ನೋಂದಣಿ ಮಾಡಿಸುತ್ತಾರೆ. ಇಲಾಖೆಯ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಈ ನಿಟ್ಟಿನಲ್ಲಿ ಒಂದೇ ದೇಶ ಒಂದೇ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಚಿಂತಿಸುತ್ತಿರುವುದು ಸ್ವಾಗತಾರ್ಹ ಎಂದರು. ಅದೇ ನಿಟ್ಟಿನಲ್ಲಿ ಕೇಂದ್ರದ ಭೂಸಾರಿಗೆ ಸಚಿವರು ಎಲ್ಲಾ ರಾಜ್ಯಗಳ ಸಾರಿಗೆ ಸಚಿವರ ಸಭೆ ಕರೆಯಬೇಕು ಎಂದರು.
ಬಿಎಂಟಿಸಿ ಬಸ್ ನೌಕರರ ಪ್ರತಿಭಟನೆ
ಬಿಎಂಟಿಸಿ ಬಸ್ ಚಾಲಕರು ಮತ್ತು ನಿರ್ವಾಹಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಆದರೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ. ಎರಡು ಪಾಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.