ಸದನದಲ್ಲಿ ಮಾಧ್ಯಮಗಳಿಗೆ ಮುಕ್ತ ಅವಕಾಶ ನೀಡಿ: ಪ್ರಿಯಾಂಕ್ ಖರ್ಗೆ ಮನವಿ
ವಿಧಾನ ಮಂಡಲದ ಅಧಿವೇಶನದಲ್ಲಿ ಖಾಸಗಿ ಸುದ್ದಿ ವಾಹಿನಿಗಳ ನೇರ ಪ್ರಸಾರ ಮತ್ತು ಸದನದಲ್ಲಿ ಛಾಯಾ ಚಿತ್ರ ತೆಗೆಯುವುದನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಸದನದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ಕುರಿತು ಈಗಾಗಲೇ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೀಗ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಅಧಿವೇಶನದ ಕಲಾಪಕ್ಕೆ ಮಾಧ್ಯಮಗಳಿಗೆ ವಿಧಿಸಿರುವ ನಿರ್ಬಂಧವನ್ನು ಹಿಂಪಡೆದು, ಮಾಧ್ಯಮದವರಿಗೆ ವರದಿ ಮಾಡಲು ಮುಕ್ತ ಅವಕಾಶ ಮಾಡಬೇಕೆಂದು ಕೋರಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪ್ರಿಯಾಂಕ್ ಖರ್ಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಇಂದಿನಿಂದ (ಮಾರ್ಚ್ 2) ಬಜೆಟ್ ಅಧಿವೇಶನ ಆರಂಭಗೊಂಡಿದ್ದು, ಈ ಹಿನ್ನಲೆಯಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ. ಪತ್ರದ ಸಾರಾಂಶ ಇಲ್ಲಿದೆ ಓದಿರಿ...
ಮಾಧ್ಯಮ ನಿರ್ಬಂಧ ಸಮಂಜಸವಲ್ಲ.!
ಸಂವಿಧಾನ ಜಾರಿಯಾಗಿ 70 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ಮಾರ್ಚ್ 3 ಮತ್ತು 4 ರಿಂದ ಭಾರತದ ಸಂವಿಧಾನದ ಆಶಯ ಕುರಿತು ಸದನದಲ್ಲಿ ಚರ್ಚೆ ನಡೆಸಲು ತೀರ್ಮಾನಿಸಿರುವುದು ಸ್ವಾಗತಾರ್ಹ. ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಜೊತೆಗೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೇ ಕರೆಯುವ ಅಭಿವ್ಯಕ್ತಿ ಸ್ವಾತಂತ್ರ್ಯದ ರೂಪಕವಾಗಿರುವ ಮಾಧ್ಯಮವನ್ನು ನಿರ್ಬಂಧಿಸಿ ಕಲಾಪ ನಡೆಸುತ್ತಿರುವುದು ಸಮಂಜಸವಲ್ಲ.
ಮಾರ್ಚ್ 2 ರಿಂದ ಅಧಿವೇಶನ ಆರಂಭ, ಗದ್ದಲಕ್ಕೆ ವಿಪಕ್ಷ ಸಜ್ಜು
ಸ್ವಾತಂತ್ರ್ಯ ಹರಣ
ಸದನದ ಕಲಾಪಗಳಿಗೆ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮದವರಿಗೆ ನಿರ್ಬಂಧ ವಿಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ವಾಸ್ತವಿಕ ಸತ್ಯವನ್ನು ತಿಳಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ತಮ್ಮ ಈ ನಿರ್ಧಾರದಿಂದ ಪತ್ರಿಕಾ ಸ್ವಾತಂತ್ರ್ಯದ ಹರಣವಾಗಿದ್ದು, ಇದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಲು ಇಚ್ಛಿಸುತ್ತೇನೆ.
ರಾಜ್ಯದ ಬಿಜೆಪಿ ಸಂಸದರು ಪೇಪರ್ ಹುಲಿಗಳು: ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಪ್ರತಿಯೊಬ್ಬ ಪ್ರಜೆಯ ಹಕ್ಕು
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಅಧಿವೇಶನದಲ್ಲಿ ಪಾಲ್ಗೊಂಡು ತಮ್ಮ ಕ್ಷೇತ್ರದ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾರೆ. ಅದನ್ನು ನೇರವಾಗಿ ಜನರಿಗೆ ತಿಳಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ಇಂತಹ ಸದನಗಳಲ್ಲಿ ಸಮುದಾಯದ ಏಳಿಗೆಗೆ ರೂಪಿತವಾಗುವ ನೀತಿಗಳು ಹಾಗೂ ಕಲಾಪದ ನಡವಳಿಗಳು ಮತ್ತು ಗುಣಮಟ್ಟವನ್ನು ಖುದ್ದು ಅರಿಯುವುದು ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ.
ಖಾಸಗಿ ಚಾನಲ್ಗಳ ಕ್ಯಾಮರಾ ನಿರ್ಬಂಧ ಯಾಕೇ? ಇಲ್ಲಿದೆ ಮಾಹಿತಿ!
ಮಾಧ್ಯಮ ಸಂಪೂರ್ಣ ಸ್ವತಂತ್ರವಾಗಿರಬೇಕು
ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವಾಗಿರುವ ಭಾರತದಲ್ಲಿ ಮಾಧ್ಯಮ ಸಂಪೂರ್ಣ ಸ್ವತಂತ್ರವಾಗಿರಬೇಕು. ಹಾಗೆಯೇ ಸದನದಲ್ಲಿ ನಾವು ತೆಗೆದುಕೊಳ್ಳುವ ನಿರ್ಣಯ, ಚರ್ಚೆಗಳು ವಾಹಿನಿಗಳ ಮೂಲಕ ಜನರಿಗೆ ತಿಳಿಯಬೇಕಾಗಿರುವುದು ಕೂಡ ಪ್ರಜಾಪ್ರಭುತ್ವದ ಆಶಯವಾಗಿದ್ದು, ಮಾನ್ಯ ಸಭಾಧ್ಯಕ್ಷರು ಸದರಿ ಆದೇಶವನ್ನು ಹಿಂಪಡೆದು ಮಾಧ್ಯಮದವರಿಗೆ ವರದಿ ಮಾಡಲು ಮುಕ್ತ ಆವಕಾಶ ಮಾಡಬೇಕೆಂದು ಕೋರಿಕೊಳ್ಳುತ್ತೇನೆ'' ಎಂದು ಪತ್ರದ ಮೂಲಕ ಪ್ರಿಯಾಂಕ್ ಖರ್ಗೆ ಮನವಿ ಮಾಡಿಕೊಂಡಿದ್ದಾರೆ.