ವಿಧಾನಸಭೆಯಲ್ಲಿ ಯಡಿಯೂರಪ್ಪ ಪರ ಯತ್ನಾಳ ಬ್ಯಾಟಿಂಗ್
ಬೆಂಗಳೂರು, ಸೆ. 23: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸದಾ ಟೀಕಿಸುತ್ತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಂದು ಅಚ್ಚರಿಯ ರೀತಿಯಲ್ಲಿ ಅವರನ್ನು ಸಮರ್ಥಿಸಿಕೊಂಡು, ಕಾಂಗ್ರೆಸ್ಗೆ ಟಾಂಗ್ ನೀಡಿದರು.
ವಿಧಾನಸಭೆಯಲ್ಲಿ ನಿಯಮ 69ರಡಿ ಕಲ್ಯಾಣ ಕರ್ನಾಟಕ ಭಾಗದ ಕುರಿತು ಗುರುವಾರ ಮುಂದುವರಿದ ಚರ್ಚೆ ನಡೆಯುತ್ತಿತ್ತು. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗೆ ಸಮರ್ಪಕ ಅನುದಾನ ಒದಗಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಶಾಸಕರು ಮುಗಿಬಿದ್ದಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಸನಗೌಡ ಪಾಟೀಲ ಯತ್ನಾಳ, "ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಹೇಳುತ್ತಿದ್ದಾರೆ. ಆದರೆ, ಕಳೆದ 50 ವರ್ಷಗಳ ಕಾಲ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅಧಿಕಾರದಲ್ಲಿ ಇದ್ದರು. ಇವರ ಆಳ್ವಿಕೆಯಲ್ಲಿ ಯಾಕೆ ಅಭಿವೃದ್ಧಿ ಕಾರ್ಯಗಳು ನಡೆಯಲಿಲ್ಲ ಎಂದು ಟಾಂಗ್ ನೀಡಿದರು. ಮುಂದುವರಿದು, ಕೇವಲ ಮೂರು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸರ್ಕಾರವನ್ನು ಪ್ರಶ್ನೆ ಮಾಡುತ್ತಿದ್ದೀರಿ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಾವಿರಾರು ಕೋಟಿ ರೂಪಾಯಿ ನೀಡಿದ್ದಾರೆ. ಅವರನ್ನು ಟೀಕಿಸುವುದು ಸರಿಯಲ್ಲ' ಎಂದು ಸಮರ್ಥಿಸಿಕೊಂಡರು.
ಆಗ ಮಧ್ಯಪ್ರವೇಶಿಸಿದ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, "ಯಡಿಯೂರಪ್ಪ ಅವರ ಮೇಲೆ ಈಗ ಇರುವ ಪ್ರೀತಿ ಒಂದು ತಿಂಗಳ ಹಿಂದೆ ಏಕೆ ಇರಲಿಲ್ಲ. ಇದೇ ಪ್ರೀತಿ ವಿಶ್ವಾಸ ಮೊದಲೂ ಇದ್ದರೆ ಯಡಿಯೂರಪ್ಪ ಇನ್ನೂ ಮುಖ್ಯಮಂತ್ರಿಯಾಗಿಯೇ ಇರುತ್ತಿದ್ದರು" ಎಂದು ಕಾಲೆಳೆದರು.
ಆದರೂ ಪಟ್ಟು ಬಿಡದ ಯತ್ನಾಳ ಕಾಂಗ್ರೆಸ್ನವರ ಮೇಲೆ ಹರಿಹಾಯುತ್ತಾ, "ಇಷ್ಟು ವರ್ಷಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಕಲ್ಯಾಣ ಕರ್ನಾಟಕಕ್ಕೆ ಶೂನ್ಯ ಕೊಡುಗೆ ನೀಡಿ, ಈಗ ಬಿಜೆಪಿ ಸರ್ಕಾರವನ್ನು ಪ್ರಶ್ನಿಸುವ ನೈತಿಕ ಹಕ್ಕು ಇಲ್ಲ. ಬಿಜೆಪಿಯನ್ನು ಪ್ರಶ್ನಿಸುವ ಮೊದಲು ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿಕೊಳ್ಳಿ" ಎಂದು ತಿರುಗೇಟು ನೀಡಿದರು.
ಅಲ್ಲದೆ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಅವರನ್ನೂ ಟೀಕಿಸಿದ ಯತ್ನಾಳ, "ವೀರಶೈವ ಮಹಾಸಭಾದಲ್ಲಿ ನೀವೇ ತುಂಬಿಕೊಂಡಿದ್ದೀರಿ. ನಾನು ಯಾವುದೇ ಮಠ-ಮಾನ್ಯ, ಶಾಲೆಗಳ ಹೆಸರಿನಲ್ಲಿ ಲೂಟಿ ಮಾಡಿಲ್ಲ. ನನ್ನ ನೈತಿಕತೆಯ ಬಗ್ಗೆ ನೀವು ಮಾತನಾಡಬೇಡಿ" ಎಂದರು.
5,000 ಕೋಟಿ ಬಿಡುಗಡೆ:
"ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 8,880 ಕೋಟಿ ನಿಗದಿ ಮಾಡಲಾಗಿದೆ. ಈ ಪೈಕಿ ಸುಮಾರು 5,000 ಕೋಟಿ ಬಿಡುಗಡೆಯಾಗಿದೆ. ಕಾಮಗಾರಿಗಳಲ್ಲಿ ಪ್ರಗತಿಯಾದರೆ ಉಳಿದ ಮೊತ್ತ ಬಿಡುಗಡೆ ಮಾಡಲಾಗುವುದು" ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಸಚಿವರು ಹೊಸಬರಿದ್ದಾರೆ. ಅವರಿಗೆ ಕಲ್ಯಾಣ ಕರ್ನಾಟಕದ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಮುಖ್ಯಮಂತ್ರಿಗಳೊಂದಿಗೆ ಉತ್ತರ ಒದಗಿಸಿ ಎಂದು ಪಟ್ಟು ಹಿಡಿದರು. ಸಚಿವ ಮುನಿರತ್ನ ಪರ ಬ್ಯಾಟಿಂಗ್ ಮಾಡಿದ ವಿಧಾನಸಭಾಧ್ಯಕ್ಷರು, ಮುನಿರತ್ನ ಇಲಾಖಾ ಸಚಿವರಾಗಿದ್ದಾರೆ. ಅವರ ಒಂದೂವರೆ ತಿಂಗಳ ಅನುಭವದಲ್ಲಿ ಉತ್ತರ ನೀಡಿದ್ದಾರೆ. ಕಲಾಪದಲ್ಲಿ ಸಂಬಂಧಿಸಿದ ಸಚಿವರು ಉತ್ತರ ನೀಡುವಾಗ ಈ ರೀತಿ ಆಕ್ಷೇಪ ವ್ಯಕ್ತಪಡಿಸಬಾರದು'' ಎಂದರು.
ನೇಮಕಾತಿಗೆ ಸಿದ್ದರಾಮಯ್ಯ ಆಗ್ರಹ:
"ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ನೇಮಕಾತಿ ರದ್ದಾಗಿದೆ. ಅಲ್ಲಿನ ಯುವಕರಿಗೆ ಉದ್ಯೋಗ ನೀಡುವ ಮೂಲಕ ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನೀಡಬೇಕು. ಈ ಸಂಬಂಧ ಸರ್ಕಾರ ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ತಕ್ಷಣವೇ ಆರಂಭಿಸಬೇಕು'' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
Recommended Video