ವಿಧಾನಸೌಧಕ್ಕೆ 'ಎತ್ತಿನ ಗಾಡಿ'ಯಲ್ಲಿ ತೆರಳುತ್ತಿದ್ದಾರೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್!
ಬೆಂಗಳೂರು, ಸೆ. 13: ಬೆಲೆ ಏರಿಕೆಯನ್ನು ವಿನೂತನವಾಗಿ ಪ್ರತಿಭಟಿಸಲು ರಾಜ್ಯ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದು, ಇಂದಿನಿಂದ ಆರಂಭವಾಗುವ 10 ದಿನಗಳ ವಿಧಾನ ಮಂಡಲ ಅಧಿವೇಶನದಲ್ಲಿ ಭಾಗವಹಿಸಲು ಎತ್ತಿನ ಗಾಡಿಯಲ್ಲಿ ತೆರಳಲಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ನಿವಾಸದಿಂದ ಎತ್ತಿನ ಗಾಡಿಯಲ್ಲಿ ವಿಧಾನಸೌಧಕ್ಕೆ ತೆರಳುತ್ತಿದ್ದಾರೆ. ಆ ಮೂಲಕ ರಾಜ್ಯ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೊರೊನಾ ವೈರಸ್ ನಿರ್ವಹಣೆ, ಕೊರೊನಾ ವೈರಸ್ ಲಸಿಕೆ ಹಾಗೂ ಪ್ರಮುಖವಾಗಿ ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಎಲ್ಲವನ್ನೂ ವಿನೂತನವಾಗಿ ಪ್ರತಿಭಟನೆ ಮಾಡುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನವಿರೋಧಿಯಾಗಿವೆ ಎಂದು ಜನರಿಗೆ ತಿಳಿಸಲು ಕಾಂಗ್ರೆಸ್ ಮುಂದಾಗಿದೆ.
ಸೋಮವಾರ ಬೆಳಗ್ಗೆ 11 ಗಂಟೆಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪ ಆರಂಭವಾಗಲಿದೆ. ಬೆಲೆ ಏರಿಕೆಯನ್ನು ವಿರೋಧಿಸಲು ಕಾಂಗ್ರೆಸ್ ನಾಯಕರು 'ಎತ್ತಿನ ಗಾಡಿ ಚಲೋ' ಚಳುವಳಿ ಹಮ್ಮಿಕೊಂಡಿದ್ದಾರೆ.
ಎತ್ತಿನ ಗಾಡಿಯಲ್ಲಿ ಸಿದ್ದರಾಮಯ್ಯ ಪ್ರಯಾಣ
ಬೆಲೆ ಏರಿಕೆ ಮೂಲಕ ಜನಸಾಮಾನ್ಯರ ಜೀವನವನ್ನು ದುಸ್ಥಿತಿಯತ್ತ ದೂಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ನೀತಿ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಬೆಳಗ್ಗೆ 9 ಗಂಟೆಗೆ 'ಎತ್ತಿನಗಾಡಿ ಚಲೋ' ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೆಂಗಳೂರಿನ ಕುಮಾರಪಾರ್ಕ್ ನಿವಾಸದಿಂದ ವಿಧಾನಸೌಧಕ್ಕೆ ಎತ್ತಿನಗಾಡಿ ಮೂಲಕ ತೆರಳಲಿದ್ದಾರೆ. ಆ ಮೂಲಕ ಸರ್ಕಾರವನ್ನು ಕಲಾಪದಲ್ಲಿ ತರಾಟೆಗೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಅವರು ಸಿದ್ಧತೆ ನಡೆಸಿದ್ದಾರೆ. ಜೊತೆಗೆ ಕೆಪಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಎತ್ತಿನ ಗಾಡಿಯಲ್ಲಿ ತೆರಳಲಿದ್ದಾರೆ.
ಚಕ್ಕಡಿಯಲ್ಲಿ ವಿಧಾನಸೌಧಕ್ಕೆ ಡಿಕೆಶಿ!
ಎಲ್ಪಿಜಿ ಬೆಲೆ ಏರಿಕೆ ವಿರುದ್ಧ 'ಸರ್ಕಾರಕ್ಕೆ ಒಂದು ಪ್ರಶ್ನೆ' ಎಂದು ವಿಡಿಯೋ ಮಾಡಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧಕ್ಕೆ ಎತ್ತಿನ ಗಾಡಿಯಲ್ಲಿ ತೆರಳಲಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸೋಮವಾರ ಬೆಳಗ್ಗೆ 9 ಗಂಟೆಗೆ 'ಎತ್ತಿನಗಾಡಿ ಚಲೋ' ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಡಿಕೆಶಿ ಮಾಧ್ಯಮ ವಿಭಾಗ ತಿಳಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಸದಾಶಿವನಗರ ನಿವಾಸದಿಂದ ವಿಧಾನಸೌಧಕ್ಕೆ ಎತ್ತಿನಗಾಡಿ ಮೂಲಕ ತೆರಳಲಿದ್ದಾರೆ. ಆ ಮೂಲಕ ಸರ್ಕಾರದ ನೀತಿ ಖಂಡಿಸಲು ತಯಾರಿನ ಮಾಡಿಕೊಂಡಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುಜರಾತ್ಗೆ ತೆರಳಲಿದ್ದಾರೆ.
ಗುಜರಾತ್ಗೆ ತೆರಳಲಿದ್ದಾರೆ ಸಿಎಂ ಬೊಮ್ಮಾಯಿ!
ಮುಖ್ಯಮಂತ್ರಿಯಾಗಿ ಮೊದಲ ವಿಧಾನ ಮಂಡಲ ಅಧಿವೇಶನವನ್ನು ಬಸವರಾಜ ಬೊಮ್ಮಾಯಿ ಎದುರಿಸುತ್ತಿದ್ದಾರೆ. ಇಂದಿನಿಂದ ಹತ್ತು ದಿನಗಳ ಕಾಲ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ. ಜಲಸಂಪನ್ಮೂಲ, ಗೃಹ ಸೇರಿದಂತೆ ಹಲವು ಇಲಾಖೆಗಳನ್ನು ನಿಭಾಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಸದನದಲ್ಲಿ ಭಾಗವಹಿಸಲಿದ್ದಾರೆ. 11 ಗಂಟೆಗೆ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿ ಅಗಲಿದ ಗಣ್ಯರಿಗೆ ಸಂಪಾಪ ಸೂಚಿಸಿದ ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಅವರು ಗುಜರಾತ್ಗೆ ತೆರಳಲಿದ್ದಾರೆ.
ಅಹಮದಾಬಾದ್ನಲ್ಲಿ ನಡೆಯಲಿರುವ ಗುಜರಾತ್ ನೂತನ ಮುಖ್ಯಮಂತ್ರಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಲಿ ಇಂದು (ಸೋಮವಾರ) ಸಂಜೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.
Recommended Video
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಗವಹಿಸಲಿದ್ದಾರೆ!
ಕರ್ನಾಟಕ 15ನೇ ವಿಧಾನಸಭೆಯ 10ನೇ ಅಧಿವೇಶನದ ಕಾರ್ಯಕಲಾಪಗಳು ಸೆಪ್ಟೆಂಬರ್ 13 ರಿಂದ 24 ರವರೆಗೆ 10 ದಿನಗಳ ಕಾಲ ನಡೆಯಲಿದೆ. ಅಧಿವೇಶನಲ್ಲಿ ಸರ್ಕಾರದಿಂದ 18ಕ್ಕಿಂತ ಹೆಚ್ಚು ವಿಧೇಯಗಳು ಮಂಡನೆಯಾಗಲಿವೆ. ಇದೇ ಮೊದಲ ಬಾರಿ ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳ ಮಾಹಿತಿಗಳು ನಮ್ಮ ವಿಧಾನಮಂಡಲದ ವೆಬ್ಸೈಟ್ನಲ್ಲಿ ಲಭ್ಯವಾಗಲಿವೆ.
ಅಧಿವೇಶನ ಮುಕ್ತಾಯದ ದಿನ ಅಂದರೆ ಸೆಪ್ಟಂಬರ್ 24ರಂದು ಮಧ್ಯಾಹ್ನದ ಊಟದ ನಂತರ ಅರ್ಧ ದಿನ ಸಂಸದೀಯ ಮೌಲ್ಯಗಳ ಕುರಿತಂತೆ ಜಂಟಿ ಅಧಿವೇಶನ ಉದ್ದೇಶಿಸಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಮಾತನಾಡಲಿರುವುದು ವಿಶೇಷ. ಈ ಬಗ್ಗೆ ಸದನದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ಅಂತಿಮ ರೂಪುರೇಷೆ ಸಿದ್ದಪಡಿಸಲು ಸ್ಪೀಕರ್ ಕಾಗೇರಿ ತೀರ್ಮಾನಿಸಿದ್ದಾರೆ.