ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ
ಬೆಂಗಳೂರು, ಮಾರ್ಚ್ 17: ಶಿಕ್ಷಕರ ವರ್ಗಾವಣೆ ನಿಯಂತ್ರಣ ವಿಧೇಯಕಕ್ಕೆ ಸೋಮವಾರ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.
ಈ ವೇಳೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಇದೊಂದು ಶಿಕ್ಷಕ ಸ್ನೇಹಿ, ಶಿಕ್ಷಣಕ್ಕೆ ಪೂರಕ ಹಾಗೂ ವಿದ್ಯಾರ್ಥಿಗಳ ಹಿತಚಿಂತಕ ವಿಧೇಯಕವಾಗಿದೆ. ವರ್ಗಾವಣೆ ಸರಳೀಕರಣಗೊಳಿಸಲು ಈ ವಿಧೇಯಕ ತರಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು. ಕಳೆದ ವಾರ ಮಂಡಿಸಲಾಗಿದ್ದ ವಿಧೇಯಕವನ್ನು ಸರ್ವಾನುಮತದಿಂದ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಪತಿ ಮತ್ತು ಪತ್ನಿ ಪ್ರಕರಣದ ಸಂದರ್ಭದಲ್ಲಿ ಒಂದೇ ಸ್ಥಳದಲ್ಲಿ ಸ್ಥಳ ನಿಯುಕ್ತಿಗಾಗಿ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗುತ್ತದೆ.
ಕಡ್ಡಾಯ ವರ್ಗಾವಣೆಯ ಶಾಕ್; ಕೋಮಾಕ್ಕೆ ಜಾರಿದ್ದ ಶಿಕ್ಷಕ ಸಾವು
ಈ ವಿಧೇಯಕದ ಪ್ರಕಾರ ಶಿಕ್ಷಕ ಅಥವಾ ಆ ಶಿಕ್ಷಕರ ಪತಿ ಅಥವಾ ಪತ್ನಿ ಅಥವಾ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ ಮತ್ತು ಅದಕ್ಕೆ ವೈದ್ಯಕೀಯ ಚಿಕಿತ್ಸೆ ಎಲ್ಲೂ ದೊರೆಯದಿದ್ದಲ್ಲಿ ಅಂತಹವರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗುತ್ತದೆ.
ಕಳೆದ ಒಂದು ವರ್ಷದಿಂದ ಶಿಕ್ಷಕರ ಕಡ್ಡಾಯ ವರ್ಗಾವಣೆಗೆ ದಿನಾಂಕಗಳು ನಿಗದಿಯಾದರೂ ಕೂಡ ಹಲವು ಬಾರಿ ಮುಂದೂಡಲ್ಪಟ್ಟಿತ್ತು.