Assembly Election 2023: ಎಎಪಿಯ ಯೋಜನೆಗಳನ್ನೇ ಬಿಜೆಪಿ, ಕಾಂಗ್ರೆಸ್ ಅನುಸರಿಸುತ್ತಿವೆ: ಶಾಸಕಿ ಆರೋಪ
ಡಾ.ಪುನೀತ್ ರಾಜ್ಕುಮಾರ್ ಅವರಂತೆ ಹೇಗೆ ಬದುಕಲು, ನಟಿಸಲು ಬೇರೊಬ್ಬರಿಗೆ ಸಾಧ್ಯವಿಲ್ಲವೋ, ಅದೇ ರೀತಿ ಆಮ್ ಆದ್ಮಿ ಪಾರ್ಟಿ (ಎಎಪಿ) ಯಂತೆ ಆಡಳಿತ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಶಾಸಕಿ ಆತಿಶಿ ಮಾರ್ಲೇನಾ ಹೇಳಿದರು.
ಬೆಂಗಳೂರು, ಜನವರಿ 31: ದಿ.ಡಾ.ಪುನೀತ್ ರಾಜ್ಕುಮಾರ್ ಅವರಂತೆ ಹೇಗೆ ಬದುಕಲು, ನಟಿಸಲು ಬೇರೊಬ್ಬರಿಗೆ ಸಾಧ್ಯವಿಲ್ಲವೋ, ಅದೇ ರೀತಿ ಆಮ್ ಆದ್ಮಿ ಪಾರ್ಟಿ (ಎಎಪಿ) ಯೋಜನೆ ಅನುಷ್ಠಾನ ತರಲು, ಆಡಳಿತ ನೀಡಲು ಸಾಧ್ಯವಿಲ್ಲ ಎಂದು ಶಿಕ್ಷಣ ತಜ್ಞೆಯು ಆದ ದೆಹಲಿ ಶಾಸಕಿ ಆತಿಶಿ ಮಾರ್ಲೇನಾ ಹೇಳಿದರು.
ಬೆಂಗಳೂರಿನ ಎಎಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ. ಅಗಲಿದ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರ ನಟನೆ, ಸಾಧನೆ, ವ್ಯಕ್ತಿತ್ವನ್ನು ಅಭಿಮಾನಿಗಳು ಸ್ಮರಿಸುತ್ತಲೇ ಇದ್ದಾರೆ. ಈ ರೀತಿ ಇನ್ನೊಬ್ಬ ವ್ಯಕ್ತಿ ಇಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಅಪ್ಪು ಅವರ ನಟನೆ, ಸಾಧನೆಯನ್ನು ಶಾಸಕಿ ತಮ್ಮ ಎಎಪಿ ಪಕ್ಷದ ಕಾರ್ಯವೈಖರಿ, ಆಡಳಿತಕ್ಕೆ ಹೋಲಿಕೆ ಮಾಡಿಕೊಂಡು ಬಿಜೆಪಿ ಮತ್ತು ಕಾಂಗ್ರೆಸ್ಗೆ ತಿರುಗೇಟು ನೀಡಿದ್ದಾರೆ.
ಡಿಕೆಶಿಯ ಸಂಬಂಧಿ, ಕೆಪಿಸಿಸಿ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿ.ಪಿ.ಶರತ್ ಚಂದ್ರ ಎಎಪಿ ಸೇರ್ಪಡೆ
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಮಕ್ಕಳ ವಿದ್ಯಾಭ್ಯಾಸವೇ ಎಲ್ಲಕ್ಕಿಂತ ಮುಖ್ಯ ಎಂಬುದು ಮರೆಯಬಾದರು. ಮಹಾನಗರಗಳಿಗೆ ವಲಸೆ ಹೋಗುವ ಪೋಷಕರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದ ಅಗತ್ಯವಿರುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದಕ್ಕಾಗಿ ಪೋಷಕರು ದಿನವಿಡೀ ದುಡಿಯುತ್ತಾರೆ. ಪೋಷಕರು ಸರಾಸರಿ ನಾಲ್ಕನೇ ಒಂದರಷ್ಟು ಆದಾಯವನ್ನು ಖಾಸಗಿ ಶಾಲೆಗಳ ಶುಲ್ಕ ಪಾವತಿಸಲು ಖರ್ಚು ಮಾಡುತ್ತಿದ್ದಾರೆ. ಅಂತವರು ಮತದಾನ ಮಾಡುವ ರಾಜಕೀಯ ಪಕ್ಷ ಶಿಕ್ಷಣಕ್ಕೆ ಎಷ್ಟು ಆದ್ಯತೆ ನೀಡುತ್ತದೆ ಎಂದು ಯೋಚಿಸಬೇಕು. ನಂತರ ಮತ ನೀಡಬೇಕು ಎಂದು ಮಾರ್ಲೇನಾ ಹೇಳಿದರು.
ಸರ್ಕಾರಿ ಶಾಲೆಗಳಿಗೆ ಸರ್ಕಾರ ಆದ್ಯತೆ ನೀಡಲಿ
ಕಳೆದ ಮೂರು ವರ್ಷಗಳಲ್ಲಿ, ದೆಹಲಿ ಖಾಸಗಿ ಶಾಲೆಗಳ ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ವರ್ಗವಾಗಿದ್ದಾರೆ. ದೇಶದ ಬೇರೆ ಯಾವುದೇ ರಾಜ್ಯದಲ್ಲೂ ಹೀಗಾಗಿಲ್ಲ. ಕರ್ನಾಟಕದಲ್ಲೂ ಇಂತಹ ಬದಲಾವಣೆಯನ್ನು ತರಬೇಕಿದೆ. ಆದರಿಂದ ರಾಜ್ಯ ಸರ್ಕಾರ ಇಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.
ಶಿಕ್ಷಣಕ್ಕೆ ಎಎಪಿಯಿಂದ ಶೇ.25, ಬಿಜೆಪಿ ಶೇ.12 ಅನುದಾನ ಮೀಸಲು
ಪ್ರಸ್ತುತದಲ್ಲಿ ಎಎಪಿಯು ಶಿಕ್ಷಣಕ್ಕೆ ಶೇ.25ರಷ್ಟು ಅನುದಾನ ಮೀಸಲಿಟ್ಟರೆ, ಬಿಜೆಪಿಯು ಕೇವಲ ಶೇ.12ರಷ್ಟು ಅನುದಾನ ಮೀಸಲಿಡುತ್ತಿದೆ. ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಹಣ ಖರ್ಚು ಮಾಡಲು ಸಿದ್ಧವಿಲ್ಲದಿರುವಾಗ ಶಾಲೆಗಳಲ್ಲಿ ಮೂಲ ಸೌಕರ್ಯ ಹಾಗೂ ಬೋಧನೆಯ ಗುಣಮಟ್ಟ ಸುಧಾರಣೆಯಾಗುವುದು ಅಸಾಧ್ಯ. ಇಂದು ಕರ್ನಾಟಕದಲ್ಲಿ 18,000 ಕಾಲೇಜು ಉಪನ್ಯಾಸಕರ ಪೈಕಿ 11,000 ಉಪನ್ಯಾಸಕರು ಅತಿಥಿ ಉಪನ್ಯಾಸಕರು. ಇವರನ್ನು ಸರ್ಕಾರ ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ. ಇವರನ್ನು ಖಾಯಂಗೊಳಿಸುತ್ತಿಲ್ಲ?. ಆಮ್ ಆದ್ಮಿ ಪಾರ್ಟಿಯ ಪಂಜಾಬ್ ಸರ್ಕಾರವು ಈಗಾಗಲೇ 8,000 ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಿದೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಲೆಗಳು ದುಸ್ಥಿತಿ: ಮಕ್ಕಳಿಗೆ ಓದಲು ಬರಲ್ಲ
ಕರ್ನಾಟಕದ ಸರ್ಕಾರಿ ಶಾಲೆಗಳು ಶೋಚನೀಯ ಸ್ಥಿತಿಯಲ್ಲಿವೆ. ಕೊಠಡಿಗಳು, ಶೌಚಾಲಯ ಮೂಲಸೌಕರ್ಯಗಳು ಇಲ್ಲ. ಮೇಲ್ಚಾವಣಿಗಳು ದುಸ್ಥಿತಿಯಲ್ಲಿವೆ. ದೆಹಲಿಯಲ್ಲಿ ಇವೆಲ್ಲವೂ ಉತ್ತಮ ಗುಣಮಟ್ಟದಿಂದ ಕೂಡಿವೆ. ಆ್ಯನುವಲ್ ಸ್ಟೇಟಸ್ ಆಫ್ ಎಜುಕೇಷನ್ ರಿಪೋರ್ಟ್ (ಎಎಸ್ಇಆರ್) ವರದಿ ಪ್ರಕಾರ, ಕರ್ನಾಟಕದಲ್ಲಿ ಒಂದನೇ ತರಗತಿಯಲ್ಲಿರುವ ಶೇ.40ರಷ್ಟು ವಿದ್ಯಾರ್ಥಿಗಳಿಗೆ ಓದಲೂ ಬರುವುದಿಲ್ಲ. ಮೂರನೇ ತರಗತಿಯಲ್ಲಿರುವ ಶೇ.10.5ರಷ್ಟು ಮಕ್ಕಳಿಗೆ ಓದಲು ಬರುವುದಿಲ್ಲ.
ದೆಹಲಿ ಹಾಗೂ ಪಂಜಾಬ್ನಲ್ಲಿ ಆಮ್ ಆದ್ಮಿ ಪಾರ್ಟಿಯು ಜಾರಿಗೆ ತಂದ ಯೋಜನೆಗಳನ್ನು ಕರ್ನಾಟಕದಲ್ಲಿ ಬೇರೆ ಪಕ್ಷಗಳು ಆಶ್ವಾಸನೆ ನೀಡುತ್ತಿವೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು 'ಕಾಪಿ ಕ್ಯಾಟ್' ಆಗಿದ್ದು ಎಎಪಿ ಯೋಜನೆಗಳನ್ನು ಕಾಪಿ ಮಾಡುತ್ತಿವೆ ಎಂದರು.
ಅಧಿಕಾರದಲ್ಲಿದ್ದ ಕಡೆ ಕಾಂಗ್ರೆಸ್ ಉಚಿತ ವಿದ್ಯುತ್ ನೀಡುತ್ತಿದೆಯೆ?
ಮತ್ತೆ ಅಧಿಕಾರಕ್ಕೆ ಬಂದರೆ 24,000 ಶಾಲಾ ಕೊಠಡಿ ನಿರ್ಮಿಸುವುದಾಗಿ ಬಿಜೆಪಿ ಹೇಳುತ್ತಿದೆ. ಇಷ್ಟು ವರ್ಷ ಅಧಿಕಾರದಲ್ಲಿದ್ದಾಗ ಏಕೆ ಬಿಜೆಪಿ ಈ ಕೆಲಸವನ್ನು ಮಾಡಲಿಲ್ಲ. ಕಾಂಗ್ರೆಸ್ ಪಕ್ಷವು 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳುತ್ತಿದೆ. ಛತ್ತೀಸ್ಗಡ, ರಾಜಸ್ತಾನ, ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಅಲ್ಲೆಲ್ಲ ಎಷ್ಟು ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡುತ್ತಿದೆಯೇ?. ಅಲ್ಲೆಲ್ಲೂ ಉಚಿತ ವಿದ್ಯುತ್ ನೀಡದಿರುವುದನ್ನು ಗಮನಿಸಿದರೆ, ಕಾಂಗ್ರೆಸ್ಗೆ ಇದರಲ್ಲಿ ಬದ್ಧತೆಯಿಲ್ಲ ಎಂಬುದು ತಿಳಿಯುತ್ತದೆ ಎಂದು ಕಾಂಗ್ರೆಸ್ ಬಿಜೆಪಿ ಆಶ್ವಾಸನೆಗಳ ವಿರುದ್ಧ ಆತಿಶಿ ಮಾರ್ಲೇನಾ ಕಿಡಿ ಕಾರಿದರು.
ಅಂಗನವಾಡಿಗಳ ಕಾರ್ಯಕರ್ತೆಯರು, ಪ್ರಾಥಮಿಕ-ಪ್ರೌಢ ಶಾಲಾ ಅತಿಥಿ ಶಿಕ್ಷಕರು, ಕಾಲೇಜು ಹಾಗೂ ವಿವಿಗಳ ಅತಿಥಿ ಉಪನ್ಯಾಸಕರು ಪದೇಪದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಬೇಡಿಕೆ ನ್ಯಾಯಯುವಾಗಿದ್ದರೂ ಸರ್ಕಾರ ಈಡೇರಿಸುತ್ತಿಲ್ಲ ಬದಲಾಗಿ ಪ್ರತಿಭಟನೆ ಹತ್ತಿಕ್ಕಲು ಕುತಂತ್ರ ಅನುಸರಿಸುತ್ತವೆ ಎಂದು ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.