ಮಾಜಿ ಸ್ಪೀಕರ್ ರಮೇಶ್ ಕುಮಾರ್ ಉಚ್ಛಾಟನೆಗೆ ಸಚಿವ ಸುಧಾಕರ್ ಆಗ್ರಹ
ಬೆಂಗಳೂರು, ಮಾ. 10: ಸಚಿವ ಡಾ. ಸುಧಾಕರ್ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮಧ್ಯೆ ನಡೆದ ಆಕ್ಷೇಪಾರ್ಹ ಸಂಭಾಷಣೆಗೆ ಮಧ್ಯಾಹ್ನದ ಬಳಿಕದ ವಿಧಾನಸಭೆ ಕಲಾಪ ಬಲಿಯಾಗಿದೆ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ 17 ಶಾಸಕರ ರಾಜೀನಾಮೆ ವಿಚಾರ ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ್ದು, ಸಚಿವ ಡಾ. ಸುಧಾಕರ್ ವಿರುದ್ಧ ಕಾಂಗ್ರೆಸ್ ಹಕ್ಕುಚ್ಯುತಿ ನೊಟೀಸ್ ಕೊಟ್ಟಿದೆ.
ವಿಧಾನಸಭೆಯಲ್ಲಿ ಸಂವಿಧಾನದ ಮೇಲೆ ನಡೆದಿದ್ದ ವಿಶೇಷ ಚರ್ಚೆ ವೇಳೆ ಸಚಿವ ಡಾ. ಸುಧಾಕರ್ ಕೊಟ್ಟ ಹೇಳಿಕೆಯಿಂದ ವಿಧಾನಸಭೆಯಲ್ಲಿ ಗದ್ದಲ ಉಂಟಾಯ್ತು. ಅದೇ ಸಂದರ್ಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೂಡ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆಂದು ಆರೋಪಿಸಿ ಬಿಜೆಪಿ ಸದಸ್ಯರು ಘೋಷಣೆ ಹಾಕಿದ್ರು, ಇದರಿಂದಾಗಿ ವಿಧಾನಸಭೆಯಲ್ಲಿ ಕೋಲಾಹಲವೇ ಉಂಟಾಯ್ತು.
ಬ್ರೇಕಿಂಗ್ ನ್ಯೂಸ್ ಕೊಟ್ಟ ಚಾಮುಂಡೇಶ್ವರಿ ಶಾಸಕ ಜಿ. ಟಿ. ದೇವೇಗೌಡ!
ಸಚಿವ ಡಾ. ಸುಧಾಕರ್ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡಿದ್ದಾರೆಂದು ಬಿಜೆಪಿಯ ಸದಸ್ಯರು ರಮೇಶ್ ಕುಮಾರ್ ಉಚ್ಛಾಟನೆಗೆ ಬಿಜೆಪಿ ಒತ್ತಾಯಿಸಿದೆ, ಮತ್ತೊಂದಡೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಕಾಂಗ್ರೆಸ್ ಮುಂದಾಗಿದೆ.
ಸುಧಾಕರ್ ಆರೋಪದಿಂದ ರಾಜೀನಾಮೆಗೆ ಮುಂದಾದ ರಮೇಶ್ ಕುಮಾರ್
ವಿಧಾನಸಭೆಯಲ್ಲಿ ನಡೆಯುತ್ತಿರುವ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಡಾ. ಸುಧಾಕರ್ ಮಾತನಾಡಲು ಶುರುಮಾಡಿದಾಗಿಂದಲೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಸಚಿವ ಸುಧಾಕರ್ ಮಧ್ಯೆ ಆಗಾಗ ಮಾತುಗಳ ವಿನಿಮಯ ವಾಗುತ್ತಲೆ ಇದ್ದವು. ನಂತರ ಸ್ಪೀಕರ್ ಪೀಠದಿಂದ ನಮಗೆ ಅನ್ಯಾಯ ಆಗಿದೆ. ಸ್ಪೀಕರ್ ಕೊಟ್ಟಿದ್ದ ತೀರ್ಪಿನಿಂದ ನಮ್ಮ 17 ಜನರ ಬದುಕು ಹಾಳಾಗುತ್ತಿತ್ತು. ನಮ್ಮ ವಿರುದ್ಧ ಷಢ್ಯಂತ್ರ ಮಾಡಲಾಗಿತ್ತು ಎಂದು ಡಾ. ಸುಧಾಕರ್ ಹೇಳಿದ ತಕ್ಷಣ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗರಂ ಆದರು. ಏಕಾಂಗಿಯಾಗಿ ಸದನದ ಬಾವಿಗಿಳಿದು ಧರಣಿ ಆರಂಭಿಸಿದ್ರು. ಅದೇ ಸಂದರ್ಭದಲ್ಲಿ ಸಚಿವ ಡಾ. ಸುಧಾಕರ್ ವಿರುದ್ಧ ರಮೇಶ್ ಕುಮಾರ್ ಅವರು ಆಕ್ಷೆಪಾರ್ಹ ಪದಗಳ ಬಳಕೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಸದಸ್ಯರು ಘೋಷಣೆ ಹಾಕಿದ್ರು.
ಸದನದಲ್ಲಿ ಗದ್ದಲ ಉಂಟಾದಾಗ ಸ್ಪೀಕರ್ ಪೀಠದಲ್ಲಿದ್ದ ಹಿರಿಯ ಸದಸ್ಯ ಶಿವಾವಂದ್ ಪಾಟೀಲ್ ಸದನವನ್ನು ಮುಂದೂಡಿದರು. ಡಾ. ಸುಧಾಕರ್ ಆರೋಪದಿಂದ ರಾಜೀನಾಮೆ ಕೊಡುವುದಾಗಿ ಬೆದರಿಕೆ ಹಾಕಿದ್ದ ಮಾಜಿ ಸ್ಫಿಕರ್ ರಮೇಶ್ ಕುಮಾರ್ ಅವರನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸೇರಿದಂತೆ ಸದಸ್ಯರು ಸಮಾಧಾನ ಮಾಡಿದ್ರು.
ಸ್ಪೀಕರ್ ಕಚೇರಿಯಲ್ಲಿ ನಡೆದ ಸಂಧಾನ ಸಭೆ ವಿಫಲ
ವಿಧಾನಸಭೆಯಲ್ಲಿ ನಡೆದ ಕೋಲಾಹಲ ಶಮಗೊಳಿಸುವ ನಿಟ್ಟಿನಲ್ಲಿ ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಗೇರಿ ಸಂಧಾನ ಸಭೆ ನಡೆಸಿದ್ರು. ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ, ಗೃಹಸಚಿವ ಬಸವರಾಜ್ ಬೊಮ್ಮಾಯಿ, ಸ್ಪೀಕರ್ ಕಾಗೇರಿ ಅವರು, ರಾಜೀನಾಮೆ ಕೊಡದಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡರು. ರಾಜೀನಾಮೆ ನಿರ್ಧಾರಕ್ಕೆ ಬಂದು ದುಡುಕಬೇಡಿ ಎಂದು ಮನವೊಲಿಕೆ ಮಾಡಿದ್ರು. ಸಭೆಯ ಬಳಿಕವೂ ರಮೇಶ್ ಕುಮಾರ್ ವಿಧಾನಸಭೆ ಕಲಾಪದಲ್ಲಿ ಭಾಗಿಯಾಗಲಿಲ್ಲ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಕಿಡಿಕಾರಿದ ವಿಶ್ವನಾಥ್
ಸಂಧಾನ ಸಭೆ ಬಳಿಕ ಹಕ್ಕುಚ್ಯತಿಗೆ ಕಾಂಗ್ರೆಸ್ ನಿರ್ಧಾರ
ಸಭೆಯ ಬಳಿಕ ವಿಧಾನಸಭೆ ಕಲಾಪ ಆರಂವಾಗುತ್ತಿದ್ದಂತೆಯೆ ಸದನದಲ್ಲಿ ಮತ್ತೆ ಗದ್ದಲ ಉಂಟಾಯ್ತು. ಕಾಂಗ್ರೆಸ್ ಸದಸ್ಯರಿಂದ ಸ್ಪೀಕರ್ ಪೀಠಕ್ಕೆ ಸಚಿವ ಸುಧಾಕರ್ ಅಪಮಾನ ಮಾಡಿದ್ದಾರೆ ಎಂದು ಸಚಿವ ಸುಧಾಕರ್ ಅವರನ್ನು ಸಸ್ಪೆಂಡ್ ಮಾಡಬೇಕೆಂದು ಕಾಂಗ್ರೆಸ್ ಸದಸ್ಯರು ಆಗ್ರಹ ಮಾಡಿದ್ರು. ರಮೇಶ್ ಕುಮಾರ್ ಅವರು ಡಾ. ಸುಧಾಕರ್ ವಿರುದ್ಧ ಆಕ್ಷೇಪಾರ್ಹ ಪದಗಳ ಬಳಕೆ ಮಾಡಿದ್ದಾರೆಂದು ಬಿಜೆಪಿ ಸದಸ್ಯರು ಆರೋಪಿಸಿದ್ದರು.
ಇದೇ ಸಂದರ್ಭದಲ್ಲಿ ಹಕ್ಕುಚ್ಯುತಿ ಮಂಡನೆ ಕುರಿತು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸುಧಾಕರ್ ವಿರುದ್ಧ ಹಕ್ಕುಚ್ಯುತಿ ನೊಟೀಸ್ ಕೊಟ್ಟಿದೀನಿ. ಇದರ ಪ್ರಸ್ತಾವನೆಗೆ ಅವಕಾಶ ಕೊಡಿ ಎಂದು ಸ್ಪೀಕರ್ ಕಾಗೇರಿ ಅವರಿಗೆ ಸಿದ್ದರಾಮಯ್ಯ ಒತ್ತಾಯ ಮಾಡಿದ್ರು. ಆದರೆ ಬಿಜೆಪಿ ಸದಸ್ಯರು ರಮೇಶ್ ಕುಮಾರ್ ವಿರುದ್ಧ ಘೋಷಣೆ ಹಾಕಲು ಶುರುಮಾಡಿದ್ದರಿಂದ ಸದನದಲ್ಲಿ ಮತ್ತೆ ಗೊಂದಲದ ವಾತಾವರ ಉಂಟಾಯ್ತು.
ಅಶ್ಲೀಲ ಪದ ಬಳಕೆ ಮಾಡಿರುವ ರಮೇಶ್ ಕುಮಾರ್ ಸಸ್ಪೆಂಡ್ ಮಾಡಿ
ಗದ್ದಲದ ಮಧ್ಯೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು, ಸಚಿವ ಡಾ. ಸುಧಾಕರ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಸಸ್ಪೆಂಡ್ ಮಾಡಿ ಎಂದು ಸಚಿವ ಕೆ ಎಸ್ ಈಶ್ವರಪ್ಪ ಒತ್ತಾಯ ಮಾಡಿದ್ರು. ಈ ಮಧ್ಯೆ ಆಕ್ಷೇಪಾರ್ಹ ಸದನದಲ್ಲಿ ಪದಗಳನ್ನು ಬಳಸಲು ನಿಯಮಾವಳಿಯಲ್ಲಿ ಅವಕಾಶವಿದೆಯೆ ಎಂದು ಡಾ. ಸುಧಾಕರ್ ಪ್ರಶ್ನೆ ಮಾಡಿದ್ರು.
ಸರವಣಗೆ ಕಿರಿಕಿರಿ ತಂದ ಕೊರೊನಾ ವೈರಸ್ ಕಾಲರ್ ಟ್ಯೂನ್!
ನಾಳೆ ಹಕ್ಕುಚ್ಯುತಿ ಮಂಡನೆಗೆ ಮುಂದಾದ ಇಬ್ಬರೂ ನಾಯಕರು
ನಾಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಪರಿವಾಗಿ ಹಕ್ಕುಚ್ಯುತಿ ಮಂಡನೆ ಮಾಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ. ರಮೇಶ್ ಕುಮಾರ್ ಅವರು ರಮೇಶ್ ಕುಮಾರ್ ಆಗಿ 17 ಶಾಸಕರ ಮೇಲೆ ಮಾಡಿರುವ ಆದೇಶ ಅವರು ಸ್ಪೀಕರ್ ಆಗಿ ಮಾಡಿರುವಂಥದ್ದು. ಸಚಿವ ಡಾ. ಸುಧಾಕರ್ ಅನಗತ್ಯವಾಗಿ ರಮೇಶ್ ಕುಮಾರ್ ಅವರ ಬಗ್ಗೆ ಮಾತನಾಡಿದ್ದರೆಂದು ಸಿದ್ದರಾಮಯ್ಯ ಕಲಾಪದ ಬಳಿಕ ಆರೋಪಿಸಿದ್ದಾರೆ.
ವಿಧಾನಸಭೆ ಕಲಾಪ ಬಳಿಕ ಮಾತನಾಡಿರುವ ಸಚಿವ ಡಾ. ಸುಧಾಕರ್ ಅವರು, ರಮೇಶ ಕುಮಾರ್ ಅವರಿಗೆ ನಾಟಕ ಮಾಡೋದು ಚೆನ್ನಾಗಿ ಗೊತ್ತಿದೆ. ಅದಕ್ಕಾಗಿ ಅವರು ಗದ್ದಲದ ಬಳಿಕ ಸದನಕ್ಕೆ ಬಂದಿಲ್ಲ. ನಾಳೆ ನಾನು ಸ್ಪೀಕರ್ ಅವರಿಗೆ ದೂರು ಸಲ್ಲಿಸುತ್ತೇನೆ. ನಾಳೆ ನಾವು ಎಲ್ಲ ಬಿಜೆಪಿ ಸದಸ್ಯರೂ ರಮೇಶ್ ಕುಮಾರ್ ಉಚ್ಛಾಟನೆಗೆ ಒತ್ತಾಯಿಸಲು ನಿರ್ಧರಿಸಿದ್ದೇವೆ. ನಾಳೆ ಸದನದಲ್ಲಿ ರಮೇಶ್ ಕುಮಾರ್ ಉಚ್ಛಾಟನೆಗೆ ಆಗ್ರಹಿಸಲು ನಾವು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ.
ನಾಳೆ ವಿಧಾನಸಭೆ ಕಲಾಪ ಆರಂಭವಾದ ಬಳಿಕವೂ ಸದನದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ವಾಗ್ಯುದ್ಧವಾಗುವ ಸಾಧ್ಯತೆಗಳು ಹೆಚ್ಚಾಗಿವೆ.