ನಿಜಗುಣಾನಂದ ಸ್ವಾಮೀಜಿಗೆ ಕೊಲೆ ಬೆದರಿಕೆ ಅನಾಮಧೇಯ ಪತ್ರ
ಬೆಂಗಳೂರು, ಜ. 24: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಕ್ಷೇತ್ರಗಳ 15 ನಾಯಕರನ್ನು ಕೊಲೆ ಮಾಡುವುದಾಗಿ ಬೆದರಿಕೆಯ ಹಾಕಲಾಗಿದೆ.
ನಿಜಗುಣಾನಂದ ಸ್ವಾಮೀಜಿ ಅವರ ಹೆಸರು ಉಲ್ಲೇಖಿಸಿ ಬಂದಿರುವ ಅನಾಮಧೇಯ ಪತ್ರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಚಿತ್ರ ನಟರಾದ ಪ್ರಕಾಶ್ ರಾಜ್, ಚೇತನ್, ನಿಡುಮಾಮಿಡಿ ವೀರಭದ್ರ ಸ್ವಾಮೀಜಿ ಸೇರಿದಂತೆ ಎಲ್ಲರನ್ನೂ ಇದೇ 2020ರ ಜನವರಿ 29 ರಿಂದ ಸಂಹಾರ ಮಾಡುವುದಾಗಿ ಪತ್ರದಲ್ಲಿ ಎಚ್ಚರಿಕೆ ಕೊಡಲಾಗಿದೆ. ಅಸುರಿ ನಿಜಗುಣಾನಂದ ಸ್ವಾಮೀಜಿವಯರೇ ನೀವು ಮತ್ತು ನಿಮ್ಮೊಂದಿಗಿನ ದೇಶದ್ರೋಹಿ ಹಾಗೂ ಧರ್ಮದ್ರೋಹಿಗಳ ಸಂಹಾರಕ್ಕೆ ಮುಹೂರ್ತ ನಿಶ್ಚಯವಾಗಿದೆ. ಅಂತಿಮ ಯಾತ್ರೆಗೆ ಸಿದ್ದರಾಗಿ ಎಂದು ಎಚ್ಚರಿಕೆ ಕೊಡಲಾಗಿದೆ.
ಜನೆವರಿಯಿಂದ ಒಬ್ಬೊಬ್ಬರನ್ನಾಗಿ ಸಂಹಾರ ಮಾಡುವ ಎಚ್ಚರಿಕೆ
ಬೆಳಗಾವಿಯಿಂದ ಪೋಸ್ಟ್ ಆಗಿ ದಾವಣಗೆರೆ ಬಂದಿರುವ ಅನಾಮಧೇಯ ಪತ್ರದಲ್ಲಿ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರನ್ನು ಸಂಹರಿಸುವ ಎಚ್ಚರಿಕೆ ಕೊಡಲಾಗಿದೆ. ಜನವರಿ 2020ನೇ ಜನವರಿ 29ರಿಂದ ನಿಮ್ಮಗಳ ಸಂಹಾರಕ್ಕೆ ಮುಹೂರ್ತ ನಿಶ್ಚಯವಾಗಿದೆ. ನಿಮ್ಮ ಅಂತಿಮ ಯಾತ್ರೆಗೆ ಸಿದ್ಧರಾಗಿ. ಕೇವಲ ನೀವು ಮಾತ್ರ ಅಲ್ಲ ನಿಮ್ಮೊಂದಿಗೆ ಮುಂದೆ ಬರೆದಿರುವ ಎಲ್ಲರನ್ನೂ ಸಂಹಾರ ಮಾಡಲಾಗುವುದು. ನಿಮ್ಮ ಜೊತೆ ಅಂತಿಮ ಯಾತ್ರೆಗೆ ಇವುರಗಳನ್ನೂ ನೀವು ಸಿದ್ಧಮಾಡಬೇಕು. ಇವರಿಗೆ ನೀವೆ ಹೇಳಿ ಎಂದು ಎಚ್ಚರಿಕೆ ಕೊಡಲಾಗಿದೆ.
ಯಾರು ಯಾರಿಗೆ ಸಂಹಾರದ ಎಚ್ಚರಿಕೆ ಕೊಡಲಾಗಿದೆ?
ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರು ಹಿಟ್ ಲಿಸ್ಟ್ನಲ್ಲಿ ಎರಡನೇ ಸ್ಥಾನದಲ್ಲಿ ಇದ್ದರೆ, ಭಜರಂಗದಳದ ಮಾಜಿ ನಾಯಕ ಮಹೇಂದ್ರಕುಮಾರ್ ಅವರು ಮೊದಲನೆಯ ಸ್ಥಾನದಲ್ಲಿ ಇದ್ದಾರೆ. ಅವರೊಂದಿಗೆ ವಿವಿಧ ಕ್ಷೇತ್ರಗಳಲ್ಲಿರುವ ಇನ್ನು 14 ನಾಯಕರನ್ನು ಸಂಹಾರ ಮಾಡುವ ಎಚ್ಚರಿಕೆ ಕೊಡಲಾಗಿದೆ. ಕೊನೆಯ ಹೆಸರು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರದ್ದಾಗಿದ್ದು, ಯಾರು ಯಾರು ಟಾರ್ಗೆಟ್ ಅನ್ನೋದು ಹೀಗಿದೆ.
ಮಾಜಿ ಭಜರಂಗದಳದ ನಾಯಕ ಮಹೇಂದ್ರಕುಮಾರ್, ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಚಿತ್ರನಟ ಪ್ರಕಾಶ್ ರಾಜ್, ಜ್ಞಾನಪ್ರಕಾಶ್ ಸ್ವಾಮೀಜಿ, ಚಿತ್ರನಟ ಚೇತನ್ ಕುಮಾರ್, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಮೈಸೂರಿನವರಾದ ಪ್ರೊ. ಮಹೇಶ್ ಚಂದ್ರಗುರು, ಪ್ರೊ. ಭಗವಾನ್, ಮಾಜಿ ಸಿಎಂ ಮಾಧ್ಯಮ ಸಲಹೆಗಾರ, ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಸಾಹಿತಿ ಚಂದ್ರಶೇಖರ್ ಪಾಟೀಲ್, ಲೇಖಕ ಡುಂಡಿ ಗಣೇಶ್, ಪತ್ರಕರ್ತ ಅಗ್ನಿಶ್ರೀಧರ್, ಸಿಪಿಐ(ಎಂ) ಪಾಲಿಟ್ ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಹತ್ಯೆ ಮಾಡುವ ಬೆದರಿಕೆ ಹಾಕಲಾಗಿದೆ.
ಕಳೆದ ಮೂರು ತಿಂಗಳಿನಿಂದಲೂ ಬೆದರಿಕೆ ಕರೆಗಳು
ಈ ಕುರಿತು ಕೇಳಿದಾಗ, ಕಳೆದ ಮೂರು ತಿಂಗಳಿನಿಂದಲೂ ಬೆದರಿಕೆ ಕರೆಗಳು ಬರುತ್ತಿರುವುದಾಗಿ ನಿಜಗುಣಾನಂದ ಸ್ವಾಮೀಜಿ ಒನ್ ಇಂಡಿಯಾಕ್ಕೆ ಮಾಹಿತಿ ಕೊಟ್ಟಿದ್ದಾರೆ. ಮಠಕ್ಕೆ ಹಾಗೂ ಶಿಷ್ಯಂದಿರಿಗೆ ಕರೆ ಮಾಡಿ ಹತ್ಯೆ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ನೇರವಾಗಿ ನನ್ನೊಂದಿಗೆ ಮಾತನಾಡಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರನ್ನು ಭೇಟಿ ಮಾಡಿ ಬೆದರಿಕೆ ಕರೆಗಳ ಬಗ್ಗೆ ಅವರ ಗಮನಕ್ಕೆ ತಂದಿದ್ದೇನೆ. ಜೊತೆಗೆ ಕಿತ್ತೂರು ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ ಎಂದಿದ್ದಾರೆ.
ಕಂದಾಚಾರ, ಮೂಢ ನಂಬಿಕೆ ವಿರೋಧಿ ಹೋರಾಟ
ಕಳೆದ ಹಲವು ವರ್ಷಗಳಿಂದ ಜನರಲ್ಲಿ ವೈಚಾರಿಕೆ ಪ್ರಜ್ಞೆ ಮೂಡುವಂತಹ ಪ್ರವಚನಗಳನ್ನು ನಿಜಗುಣಾನಂದ ಸ್ವಾಮೀಜಿ ಕೊಡುತ್ತಿದ್ದಾರೆ. ಜೊತೆಗೆ ವಿವಿಧ ವಿಚಾರಗಳ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದಾರೆ. ಪತ್ರದಲ್ಲಿ ಬೆದರಿಕೆ ಬಂದಿರುವ ಎಲ್ಲರೂ ಒಂದಿಲ್ಲ ಒಂದು ಕಾರಣದಿಂದ ಹಿಂದು ಧರ್ಮದಲ್ಲಿರುವ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇನ್ನು ಪತ್ರದಲ್ಲಿಯೆ ಬರೆದಿರುವುಂತೆ ಧರ್ಮದ್ರೋಹ, ದೇಶದ್ರೋಹದ ಆರೋಪ ಮಾಡಲಾಗಿದೆ.
ಹಿಂದೆ ವೈಚಾರಿಕ ಭಿನ್ನಮತದಿಂದಲೇ ಪತ್ರಕರ್ತೆ ಗೌರಿ ಲಂಕೇಶ್, ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಹತ್ಯೆಗಳು ರಾಜ್ಯದಲ್ಲಿ ಆಗಿದ್ದವು. ಇದಲ್ಲದೆ ವೈಚಾರಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿಯೆ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿಯೂ ಹತ್ಯೆಗಳಾಗಿದ್ದವು.