ನಾಡಿನ ಹೆಮ್ಮೆಯ ಯಕ್ಷಗಾನ ಕಲೆಗೆ ಅವಮಾನ: ಫೆವಿಕಾಲ್ ವಿರುದ್ಧ ಆಕ್ರೋಶ
ಬೆಂಗಳೂರು, ನವೆಂಬರ್ 23: ತನಿಷ್ಕ್ ಸಂಸ್ಥೆ, ನಿರ್ಮಾ ವಾಷಿಂಗ್ ಪೌಡರ್ ಮುಂತಾದ ಉತ್ಪನ್ನಗಳ ಜಾಹೀರಾತುಗಳು ವಿವಾದ ಸೃಷ್ಟಿಸಿ, ಜನರ ಆಕ್ರೋಶಕ್ಕೆ ಕಾರಣವಾದ ಬಳಿಕ ಈಗ ಫೆವಿಕಾಲ್ ಸಂಸ್ಥೆ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಸೃಜನಶೀಲತೆ ಹೆಸರಲ್ಲಿ ಧರ್ಮ, ಸಮುದಾಯಗಳ ಅವಹೇಳನೆಯ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಫೆವಿಕಾಲ್ ಜಾಹೀರಾತಿನಲ್ಲಿ ಕರ್ನಾಟಕದ ಹೆಮ್ಮೆಯ ಯಕ್ಷಗಾನ ಕಲೆಯನ್ನು ಅವಹೇಳನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಫೆವಿಕಾಲ್ ಕಂಪೆನಿಯ ಅನೇಕ ತಮಾಷೆಯ ಜಾಹೀರಾತುಗಳು ಜನಪ್ರಿಯತೆಗಳಿಸಿದ್ದವು. ಈಗ ಕಿರುತೆರೆ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಜಾಹೀರಾತು ಕೂಡ ನಗಿಸುವ ಉದ್ದೇಶ ಹೊಂದಿದೆ. ಆದರೆ ಇದರಲ್ಲಿ ಪಾರಂಪರಿಕ ಕಲೆಯೊಂದನ್ನು ಅಪಹಾಸ್ಯ ಮಾಡಲಾಗಿದೆ. ಫೆವಿಕಾಲ್ ಅಂಟಿನ ಜಾಹೀರಾತನ್ನು ಹಾಸ್ಯಮಯವಾಗಿ ನೀಡಲು ಯಕ್ಷಗಾನದ ದೃಶ್ಯವನ್ನು ಬಳಸಿಕೊಳ್ಳಲಾಗಿದೆ. ಆದರೆ ಇಲ್ಲಿ ಕಲಾವಿದರು, ಭಾಗವತರು ಮುಂತಾದವರನ್ನು ತೀರಾ ಅವಹೇಳನಾಕಾರಿಯಾಗಿ ಚಿತ್ರಿಸಲಾಗಿದೆ. ಇದು ನಾಡಿನ ಕಲೆಗೆ ಮಾಡಿರುವ ಅವಮಾನ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಮತ್ತೊಂದು ವಿವಾದ ಸೃಷ್ಟಿಸಿದ ತನಿಷ್ಕ್ ಆಭರಣದ ಹೊಸ ಜಾಹೀರಾತು
ಫೆವಿಕಾಲ್ ಉತ್ಪನ್ನದ ಮೂಲ ಕಂಪೆನಿಯಾದ ಪಿಡಿಲೈಟ್ ಇಂಡಸ್ಟ್ರೀಸ್ಗಾಗಿ ಕೊರ್ಕೊಯಿಸ್ ಫಿಲಂಸ್ ಎಂಬ ಜಾಹೀರಾತು ಕಂಪೆನಿ ಈ ಜಾಹೀರಾತನ್ನು ತಯಾರಿಸಿದೆ. ಯಕ್ಷಗಾನದ ಹಿನ್ನೆಲೆಯಲ್ಲಿ ಈ ಜಾಹೀರಾತನ್ನು ತಯಾರಿಸಿರುವುದಾಗಿ ಸ್ವತಃ ಕಂಪೆನಿ ಹೇಳಿಕೊಂಡಿದೆ. ಮುಂದೆ ಓದಿ.
ಎಂಜಾಯ್ ಮಾಡಿ ಎಂದ ಕಂಪೆನಿ
'ಯಕ್ಷಗಾನವು ಕರ್ನಾಟಕ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಮುಖ್ಯವಾಗಿ ಅಭಿವೃದ್ಧಿಯಾಗಿರುವ ಸಾಂಪ್ರದಾಯಿಕ ಭಾರತೀಯ ರಂಗಮಂದಿರ ಕಲೆಯಾಗಿದೆ. ಇದು ನೃತ್ಯ, ಸಂಗೀತ, ಸಂಭಾಷಣೆ, ಉಡುಪು, ಪ್ರಸಾದನ ಮತ್ತು ವಿಶಿಷ್ಟ ಶೈಲಿ ಹಾಗೂ ಸ್ವರೂಪದ ವೇದಿಕೆ ತಾಂತ್ರಿಕತೆಗಳನ್ನು ಒಳಗೊಂಡಿದೆ. ಇದರಲ್ಲಿ ರಾಮಾಯಣ, ಮಹಾಭಾರತ, ಭಾಗವತ ಮತ್ತು ಹಿಂದೂ ಹಾಗೂ ಜೈನ ಮತ್ತು ಭಾರತೀಯ ಪರಂಪರೆಯ ಇತರೆ ಪುರಾಣಗಳಿಂದ ಕಥೆಗಳನ್ನು ಬಳಸಲಾಗುತ್ತದೆ. ನೀವು ಇದನ್ನು ಎಂಜಾಯ್ ಮಾಡುತ್ತೀರಿ ಎಂದು ಭಾವಿಸಿದ್ದೇವೆ' ಎಂದು ಜಾಹೀರಾತು ಕಂಪೆನಿ ಹೇಳಿಕೊಂಡಿದೆ.
ಕ್ಷಮೆ ಕೋರಲು ಆಗ್ರಹ
ಆದರೆ, ಇಡೀ ಜಾಹೀರಾತಿನಲ್ಲಿ ಯಕ್ಷಗಾನವನ್ನು ಒಂದು ಗೌರವಯುತ ಕಲೆಯನ್ನಾಗಿ ಬಿಂಬಿಸಿಲ್ಲ. ಬದಲಾಗಿ ಪಾತ್ರಧಾರಿಗಳು ಅಲ್ಲಿಯೇ ಒಬ್ಬರನ್ನೊಬ್ಬರು ತಳ್ಳಾಡಿಕೊಂಡು ಕೆಟ್ಟ ಸಂಭಾಷಣೆಗಳೊಂದಿಗೆ ವೇದಿಕೆ ಮೇಲಿನ ವಸ್ತುಗಳನ್ನು ಬೀಳಿಸಿ ಒಡೆಯುವ ದೃಶ್ಯವಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಫೆವಿಕಾಲ್ ಕ್ಷಮೆ ಕೋರಲಿ ಎಂದು ಆಗ್ರಹಿಸಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಜಾಹೀರಾತು ವಿವಾದಕ್ಕೆ ಕ್ಷಮೆ ಕೋರಿದ ತನಿಷ್ಕ್: ತಣಿಯದ ನೆಟ್ಟಿಗರ ಆಕ್ರೋಶ
ಮೊದಲು ಇತಿಹಾಸ ತಿಳಿಯಿರಿ
'ಯಕ್ಷಗಾನ ಒಂದು ನೃತ್ಯಪ್ರಕಾರ ಅಥವಾ ಕಲೆಯಷ್ಟೇ ಅಲ್ಲ. ಅದಕ್ಕೆ ಶ್ರೀಮಂತ ಪರಂಪರೆಯಿದೆ. ಹೀಗಾಗಿ ಯಾವುದೇ ಅಪರಿಚಿತ ನೃತ್ಯ ಮಾದರಿಯನ್ನು ಬಳಸಿಕೊಳ್ಳುವ ಮುನ್ನ ಅದರ ಇತಿಹಾಸವನ್ನು ತಿಳಿಯಿರಿ, ಅದರ ಬಗ್ಗೆ ಕಲಿಯಿರಿ. ಆಗ ನಿಮಗೆ ಇಂತಹ ಪರಿಸ್ಥಿತಿಗಳು ಎದುರಾಗುವುದಿಲ್ಲ. ಈಗ ಆಗಿರುವುದಕ್ಕೆ ಕ್ಷಮೆ ಕೋರಿ ಮತ್ತು ಜಾಹೀರಾತನ್ನು ಹಿಂಪಡೆಯಿರಿ' ಎಂದು ನಿಕ್ಷಿತಾ ಪೂಜಾರಿ ಟ್ವೀಟ್ ಮಾಡಿದ್ದಾರೆ.
ನಿಮ್ಮ ಗಿಮಿಕ್ ಸಾಧನವಲ್ಲ
ಕ್ಷಮೆ ಕೋರಿ ಮತ್ತು ಈ ಜಾಹೀರಾತನ್ನು ತೆಗೆದುಹಾಕಿ. ಯಕ್ಷಗಾನವು ನಿಮ್ಮ ಪ್ರಚಾರದ ಗಿಮಿಕ್ಗಳ ಸಾಧನವಲ್ಲ. ಇದು ತುಳುನಾಡಿನ ಸಂಸ್ಕೃತಿ, ನಂಬಿಕೆ ಎಂದು ನಿತಿನ್ ಶೆಟ್ಟಿ ಕೆಲಿಂಜಾ ಎಂಬುವವರು ಜಾಹೀರಾತಿನ ವಿಡಿಯೋ ಹಂಚಿಕೊಂಡು ಕಿಡಿಕಾರಿದ್ದಾರೆ.
ಕ್ಷಮೆ ಕೇಳೋವರೆಗೂ ಬಿಡೊಲ್ಲ
ಯಕ್ಷಗಾನಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಇದೆ. ಚೌಕಿಯಲ್ಲಿ ಪೂಜೆ ಆಗದೆ ಕಲಾವಿದರು ಗೆಜ್ಜೆ ಕಟ್ಟುವುದಿಲ್ಲ. ಹರಕೆ ಹೊತ್ತುಕೊಂಡರೂ ಸೇವೆ ನೀಡಲು ವರ್ಷಗಟ್ಟಲೆ ಕಾಯಬೇಕು! ನಿಮಗೆ ಬೇಕಾದ ಹಾಗೆ ಅಡ್ವರ್ಟೈಸ್ಮೆಂಟ್ ಮಾಡೋದಲ್ಲ. ಕ್ಷಮೆ ಕೇಳೋವರೆಗೂ ನಾವು ಬಿಡೋದು ಇಲ್ಲ ಎಂದು ಸಂದೀಪ್ ಎಸ್ಜಿ ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಅಂಟಿನ ಬಳಕೆ ಬೇಕಿಲ್ಲ
ನಿಮ್ಮ ಜಾಹೀರಾತು ಪಬ್ಲಿಸಿಟಿ ಗೆ ನಮ್ಮ ಗಂಡು ಕಲೆಯನ್ನು ಬಳಸಿಕೊಳ್ಳುವ ಅವಶ್ಯಕತೆ ಏನಿತ್ತು? ಯಕ್ಷಗಾನಕ್ಕೆ ತನ್ನದೇ ಆದ ನಂಟಿದೆ! ನಿಮ್ಮ ಕಿತ್ತು ಹೋಗೋ ಅಂಟಿನ ಬಳಕೆಯ ಅಗತ್ಯವಿಲ್ಲ ಎಂದು ಜಿ. ಕೃಷ್ಣ ಪುತ್ತೂರು ಹೇಳಿದ್ದಾರೆ.
ಭಾವನೆಗಳನ್ನು ಅವಮಾನಿಸಿದ್ದೀರಿ
ಯಕ್ಷಗಾನ ಅನ್ನೋದು ದೈವದತ್ತವಾದಂತಹ ಒಂದು ಕಲೆ ನಿಮ್ಮ ಪ್ರಾಡಕ್ಟ್ ನ ಮಾರಾಟಕ್ಕಾಗಿ ಯಕ್ಷಗಾನವನ್ನು ಬಳಸಿಕೊಂಡು ಕಲೆಗೆ ಅವಮಾನ ಮಾಡಿದ್ದಲ್ಲದೆ ನಮ್ಮ ಭಾವನೆಗಳನ್ನು ಅವಮಾನಿಸಿದ್ದೀರಿ. ಆ ಜಾಹೀರಾತನ್ನು ವಾಪಾಸ್ ತಗೊಂಡು ಕ್ಷಮೆ ಕೇಳಿ.!- ಜೆಕೆ ಬಂಗೇರಾ
Recommended Video
|
ನಂಬಿಕೆ ಮತ್ತು ಸಂಸ್ಕೃತಿ ಪ್ರತೀಕ
ಯಕ್ಷಗಾನ ಕರಾವಳಿ ಜನರ ನಂಬಿಕೆ ಹಾಗೂ ಸಂಸ್ಕೃತಿಯ ಪ್ರತೀಕ. ಈ ಕಲೆಯ ಬಗ್ಗೆ ಇಲ್ಲಿಯ ಜನತೆಗೆ ಶ್ರದ್ಧೆ ಇದೆ. ಕೀಳುಮಟ್ಟದ ಜಾಹೀರಾತು ಮೂಲಕ ಫೆವಿಕಾಲ್ ಸಂಸ್ಥೆ ಜನರ ನಂಬಿಕೆಗೆ ಘಾಸಿಯನ್ನುಂಟುಮಾಡುವುದು ಸರಿಯಲ್ಲ. ಈ ಕೂಡಲೇ ಈ ಜಾಹೀರಾತನ್ನು ಹಿಂಪಡೆಯಬೇಕೆಂದು #Fevicol ಸಂಸ್ಥೆಗೆ ಆಗ್ರಹಿಸುತ್ತೇನೆ- ರಾಜೇಶ್ ನಾಯ್ಕ್