ಸಣ್ಣ ಸಮುದಾಯಗಳ ಹಕ್ಕನ್ನು ಕಿತ್ತುಕೊಳ್ಳೋದು ಸರಿಯಲ್ಲ: ಎಂಎಂ ಚಂದ್ರು
ಬೆಂಗಳೂರು, ಮಾರ್ಚ್ 24: ಮಿಲ್ಲರ್ ಜಾತಿಗಣತಿಯನ್ನು ಉಲ್ಲೇಖಿಸಿ ಲಿಂಗಾಯತ ಸಮುದಾಯದವರೂ ಕೂಡಾ ಶೂದ್ರರು ಎನ್ನುವ ದಾಖಲೆಯನ್ನು ಒದಗಿಸಿ 2ಎ ಮೀಸಲಾತಿ ನೀಡುವಂತೆ ಆಯೋಗದ ಮುಂದೆ ಪಂಚಮಸಾಲಿ ಸಮುದಾಯದವರು ಕೋರಿಕೆಯನ್ನು ಇಟ್ಟಿದ್ದಾರೆ. ಮೇಲ್ಪಂಕ್ತಿಯವರ ಪಂಕ್ತಿಭೇದವನ್ನು ಉಲ್ಲೇಖಿಸಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಈ ಹಿನ್ನಲೆಯಲ್ಲಿ ಶೂದ್ರರು ಎಂದುಕೊಳ್ಳುವುದಾದರೆ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಕೇಳಿ ಎಂದು ಅವರಲ್ಲಿ ನಮ್ಮ ಮನವಿಯನ್ನು ಮಾಡಿಕೊಳ್ಳುತ್ತೇವೆ. ನಮ್ಮ ತಟ್ಟೆಯಲ್ಲಿ ಕೈ ಹಾಕಿ ಅನ್ನವನ್ನು ಕಿತ್ತುಕೊಳ್ಳುವುದು ಬೇಡ ಎಂದು ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಗೌರವಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಮುಂದುವರೆದ ಸಮುದಾಯಗಳಿಗೆ 2ಎ ಪ್ರವರ್ಗ ಪಟ್ಟಿಯಲ್ಲಿ ಸೇರಿಸುವ ಮೂಲಕ ಮೀಸಲಾತಿಯನ್ನು ನೀಡಬಾರದು ಎಂದು ಆಯೋಗಕ್ಕೆ ನೀಡಿದ್ದ ಮನವಿಯ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಬಹಿರಂಗ ವಿಚಾರಣೆಯಲ್ಲಿ ಅವರು ತಮ್ಮ ವಾದವನ್ನು ಮಂಡಿಸಿದರು. 2 ಎ ಪ್ರವರ್ಗದಲ್ಲಿ ಸುಮಾರು 102 ಜಾತಿಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ.
ಲಿಂಗಾಯತ ಸಮುದಾಯ ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಲಾಢ್ಯವಾಗಿವೆ. ತಮ್ಮ ಪ್ರಭಾವನ್ನು ಬಳಸಿಕೊಳ್ಳುವ ಮೂಲಕ ರಾಜ್ಯ ಸರಕಾರದ ಮೇಲೆ ಒತ್ತಡವನ್ನು ಹೇರುವ ಮೂಲಕ ತಮ್ಮ ಕೆಲಸವನ್ನು ಮಾಡಿಕೊಳ್ಳುತ್ತಿದ್ದಾರೆ.
ಮೀಸಲಾತಿಯ ಉಪಯೋಗ ಪಡೆದುಕೊಂಡಿಲ್ಲ
ಪಟ್ಟಿಯಲ್ಲಿ ಈಗಾಗಲೇ ಇರುವ ಹಲವಾರು ಸಮುದಾಯಗಳ ವ್ಯಕ್ತಿಗಳು ಇದುವರೆಗೂ ಒಂದು ಬಾರಿಯೂ ಕೂಡಾ ಮೀಸಲಾತಿಯ ಉಪಯೋಗ ಪಡೆದುಕೊಂಡಿಲ್ಲ. ಈ ಪಟ್ಟಿಯಲ್ಲಿ ಮುಂದುವರೆದ ಪ್ರಬಲ ಜಾತಿಗಳನ್ನು ಸೇರಿಸಿದಲ್ಲಿ ಕುಲಕಸುಬು ಆಧಾರಿತ ಸಮುದಾಯಗಳು ತಮ್ಮ ಅಸ್ತಿತ್ವನ್ನೇ ಕಳೆದುಕೊಳ್ಳಬೇಕಾಗುತ್ತದೆ. ನಮ್ಮ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ರಾಜ್ಯ ಸರಕಾರ ತಪ್ಪಿಸಬೇಕಾಗಿತ್ತು.
ಆದರೆ, ರಾಜಕೀಯ ಪ್ರಭಾವ ಬಳಸಿ ಹಾಕಿರುವ ಒತ್ತಡಗಳ ಅನಿವಾರ್ಯತೆಯಿಂದ ಅವರನ್ನು ಪ್ರವರ್ಗ ಪಟ್ಟಿಗೆ ಸೇರಿಸಲು ಸರಕಾರವೇ ಮುಂದಾಗಿದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಿ ಸದನದಲ್ಲೂ ಭರವಸೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ನಾವು ಆಯೋಗದ ಮುಂದೆ ಬಂದಿದ್ದೇವೆ. ಈಗ ಆಯೋಗ ಸಣ್ಣ ಸಮುದಾಯಗಳ ಆಸ್ಮಿತೆಯನ್ನು ಕಾಪಾಡುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಸಣ್ಣ ಸಮುದಾಯದ ಹಿತಾಸಕ್ತಿ ಕಾಪಾಡುವಂತಹ ಪ್ರವರ್ಗ 2 ಎ
ಪ್ರಬಲ ಸಮುದಾಯದ ಹಿನ್ನಲೆಯ ಹೊಂದಿರುವ ಪಂಚಮಸಾಲಿ ಸಮುದಾಯದವರು ಶೈಕ್ಷಣಿಕ ಸಂಸ್ಥೆಗಳ ಮೂಲಕ, ಮಠಗಳ ಮೂಲಕ, ತಮ್ಮ ಸಮುದಾಯವನ್ನು ಪ್ರತಿನಿಧಿಸುವ ಶಾಸಕರನ್ನು ಹೊಂದುವ ಮೂಲಕ ಎಲ್ಲಾ ರೀತಿಯಲ್ಲೂ ಶಕ್ತರಾಗಿದ್ದಾರೆ. ಆದರೆ, ಅವರುಗಳು ತಮ್ಮ ಮಠಾಧೀಶರ ನೇತೃತ್ವದಲ್ಲಿ ಸಣ್ಣ ಸಮುದಾಯದ ಹಿತಾಸಕ್ತಿಯನ್ನು ಕಾಪಾಡುವಂತಹ ಪ್ರವರ್ಗ 2 ಎ ನಲ್ಲಿ ಸೇರಿಸಂತೆ ವಾದವನ್ನು ಮಂಡಿಸಿದ್ದಾರೆ. ಅಲ್ಲದೆ, ಅದಕ್ಕೆ ಮಿಲ್ಲರ್ ಸಮಿತಿಯ ವರದಿಯನ್ನು ಉಲ್ಲೇಖಿಸಿ ತಾವುಗಳು ಶೂದ್ರರ ಸ್ಥಾನಮಾನದವರು ಎನ್ನುವ ವಾದವನ್ನು ತಮ್ಮ ಮುಂದೆ ಇಟ್ಟಿದ್ದಾರೆ.
ಪ್ರವೇಶ ನಿರಾಕರಣೆಯಿಂದ ಪ್ರವರ್ಗ 2ಎ ಸ್ಥಾನಮಾನ
ಈ ಹಿನ್ನಲೆಯಲ್ಲಿ ಮಠಾಧೀಶರುಗಳಿಗೆ ನಮ್ಮ ಸವಿನಯ ಮನವಿ ಏನೆಂದರೆ, ಸಾಮಾಜಿಕವಾಗಿ ಅಷ್ಟೆಲ್ಲಾ ನೋವುಗಳನ್ನು ಹೊಂದಿರುವ ಅವರುಗಳು ಹೆಚ್ಚಿನ ಮೀಸಲಾತಿ ಪ್ರಮಾಣ ಹೊಂದಿರುವ ಪರಿಶಿಷ್ಟ ವರ್ಗಕ್ಕೆ ಸೇರಿಸುವ ಬೇಡಿಕೆಯನ್ನು ಇಡಬೇಕು. ಕೇವಲ ಶೇಕಡಾ 15 ರಷ್ಟು ಮೀಸಲಾತಿಯನ್ನು ಹೊಂದಿರುವ ಪ್ರವರ್ಗಕ್ಕೆ ಸೇರ್ಪಡೆಗೊಳ್ಳುವ ಮೂಲಕ ಸಣ್ಣ ಸಮುದಾಯದವರ ಹಕ್ಕನ್ನು ಕಸಿದುಕೊಳ್ಳುವುದು ಸರಿಯಲ್ಲ. ಅಲ್ಲದೆ, ಪಂಕ್ತಿಭೇಧ ಹಾಗೂ ದೇವಸ್ಥಾನಗಳಿಗೆ ಪ್ರವೇಶ ನಿರಾಕರಣೆಯಿಂದ ಪ್ರವರ್ಗ 2ಎ ಸ್ಥಾನಮಾನ ಯಾವುದೇ ರಕ್ಷಣೆಯನ್ನು ನೀಡುವುದಿಲ್ಲ. ಅದಕ್ಕೆ ಅವರು ಪೋಲೀಸರ ಮೊರೆ ಹೋಗಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.
Recommended Video
ಬಲಿಷ್ಠ ಸಮುದಾಯವನ್ನು ಪ್ರವರ್ಗ 2 ಎ ಗೆ ಸೇರಿಸಿ
ಆದರೆ, ಕುಲಕಸುಬು ಆಧಾರಿತ ಸಮುದಾಯಗಳಿಗೆ ಯಾವುದೇ ರಾಜಕೀಯ ಪ್ರಾತಿನಿಧ್ಯ ಇಲ್ಲದೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಸಾಧ್ಯವಾಗುತ್ತಿಲ್ಲ. ರಾಜಕೀಯ ಒತ್ತಡಕ್ಕೆ ಮಣಿಯದೆ ನ್ಯಾಯಯುತವಾದಂಥ ವರದಿಯನ್ನು ಸರಕಾರಕ್ಕೆ ನೀಡಬೇಕು ಹಾಗೂ ಅತಿ ಹಿಂದುಳಿದ ಜಾತಿಗಳ ಆಸ್ಮಿತೆ ಹಾಗೂ ಅಸ್ತಿತ್ವ ವನ್ನು ಕಾಪಾಡಬೇಕು. ಮೃಗಾಲಯದಲ್ಲಿ ಪ್ರಾಣಿಗಳನ್ನು ಪ್ರತ್ಯೇಕವಾಗಿ ಇಟ್ಟಿರಲಾಗುತ್ತದೆ. ಅದೇ ಬಲಿಷ್ಠ ಪ್ರಾಣಿಗಳ ಜೊತೆಯಲ್ಲೇ ಇತರ ಸಣ್ಣ ಪ್ರಾಣಿಗಳನ್ನು ಬಿಟ್ಟರೆ ಅವು ಹೇಗೆ ಅಹಾರ ಸ್ವೀಕರಿಸಲು ಸಾಧ್ಯ. ಪಂಚಮಸಾಲಿಯಂತಹ ಬಲಿಷ್ಠ ಸಮುದಾಯವನ್ನು ಪ್ರವರ್ಗ 2 ಎ ಗೆ ಸೇರಿಸಿದಲ್ಲಿ ಇದೇ ಪರಿಸ್ಥಿತಿ ಎದುರಾಗುತ್ತದೆ ಎಂದರು.
ಈ ಸಭೆಯಲ್ಲಿ ವೇದಿಕೆಯ ಉಪಾಧ್ಯಕ್ಷರಾದ ಡಾ.ಜಿ. ರಮೇಶ್, ಎಚ್ ಸುಬ್ಬಣ್ಣ, ಕಾರ್ಯಕಾರಿ ಸಮಿತಿ ಸದಸ್ಯರಾರದ ಜಿ.ಡಿ ಗೋಪಾಲ್, ಎಚ್ ಸಿ ರುದ್ರಪ್ಪ, ಟಿ.ಸಿ ನಟರಾಜ್, ಎಂ.ಬಿ ಬಸವರಾಜ್ ಉಪಸ್ಥಿತರಿದ್ದರು.