ಮೂಡಿಗೆರೆ ಕಾಫಿ ತೋಟದಲ್ಲಿ ಧೂಳೆಬ್ಬಿಸಿದ ರೇಸ್ ಕಾರ್ಗಳು
ಚಿಕ್ಕಮಗಳೂರು, ನವೆಂಬರ್ 25 : ಪ್ರತಿಷ್ಠಿತ ಏಷ್ಯಾ ಪೆಸಿಫಿಕ್ ಮತ್ತು ಇಂಡಿಯನ್ ನ್ಯಾಷನಲ್ ರ್ಯಾಲಿಗೆ ಶುಕ್ರವಾರ (ನವೆಂಬರ್ 24) ಚಿಕ್ಕಮಗಳೂರಿನಲ್ಲಿ ಚಾಲನೆ ದೊರೆತಿದೆ. ಮೂರು ದಿನಗಳ ಕಾಲ ವಿವಿಧ ರೀತಿಯ ರೇಸ್ ಕಾರು ಅಬ್ಬರಕ್ಕೆ ಚಿಕ್ಕಮಗಳೂರು ಸಾಕ್ಷಿಯಾಗಲಿದೆ.
ಇಲ್ಲಿನ ಮೂಡಿಗೆರೆಯ ಚಂದ್ರಾಪುರ ಕಾಫಿ ಎಸ್ಟೇಟ್ ನಲ್ಲಿ ಕಾರುಗಳ ರೇಸ್ ನ ಮೊದಲ ಹಂತ ಮುಗಿದಿದೆ. ಕಾರುಗಳು ಮೂಡಿಗೆರೆ ಸಮೀಪದ ಚಟ್ನಹಳ್ಳಿ ಕಾಫಿ ತೋಟದಲ್ಲಿ ಸಂಚರಿಸಿ ಮೊದಲ ಹಂತ ಮುಗಿಸಿವೆ. ನಂತರ ಜಾಗರ ಮನೆ ಮುಖಾಂತರ ಕುಂಬರಗೋಡು, ಚಂದ್ರಾಪುರದಲ್ಲಿ 2ನೇ ಹಂತ ಮುಕ್ತಾಯಗೊಳ್ಳಲಿದೆ. ಭಾನುವಾರ ಬೆಳಿಗ್ಗೆ ಮೂಡಸಸಿ, ಜಾಗರಮನೆ, ಮತ್ತೆ ಮೂಡಸಸಿ, ಜಾಗರಮನೆಯನ್ನು ಸುತ್ತಿ ಕೊಂಡು ಎಬಿಸಿ ಆವರಣಕ್ಕೆ ಬಂದು ಸ್ಪರ್ಧೆ ಮುಕ್ತಾಯಗೊಳ್ಳಲಿದೆ. ಭಾನುವಾರ ಮಧ್ಯಾಹ್ನ ಎಬಿಸಿ ಆವರಣದಲ್ಲಿ ಪೋಡಿಯಂ ಅಂತ್ಯದ ನಂತರ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ.
ಈಗಾಗಲೇ ಮೊದಲ ಹಂತ ಮುಗಿಸಿರುವ ರೇಸರ್ ಗಳು ಶನಿವಾರ ಎರಡನೇ ಹಂತದ ರೇಸ್ ನಲ್ಲಿ ಪಾಲ್ಗೊಂಡಿದ್ದಾರೆ. ಸ್ಪರ್ಧೆಯಲ್ಲಿ ಎಪಿಆರ್ಸಿ ಮತ್ತು ಐಎನ್ಆರ್ಸಿ ಎಂಬ ಎರಡು ವಿಭಾಗಗಳಿದ್ದು, ಮೊದಲ ವಿಭಾಗದಿಂದ ಸ್ಪರ್ಧಿಸುವ ಸ್ಪರ್ಧಿಗಳು ಒಟ್ಟು 502 ಕಿ.ಮೀ ಕ್ರಮಿಸಬೇಕಿದ್ದು, ಇದರಲ್ಲಿ 207 ಕಿ.ಮೀ ವಿಶೇಷ ಹಂತ ಒಳಗೊಂಡಿರುತ್ತದೆ. ಎರಡನೇ ವಿಭಾಗದಲ್ಲಿ ಸ್ಪರ್ಧಿಸುವ ಸ್ಪರ್ಧಾಳುಗಳು 260 ಕಿ.ಮೀ ಕ್ರಮಿಸಬೇಕಾಗಿರುತ್ತದೆ.
ಏಷ್ಯಾ ಪೆಸಿಫಿಕ್ ರ್ಯಾಲಿಯ ಕಳೆದ ಬಾರಿಯ ಚಾಂಪಿಯನ್ ಗೌರವ್ ಗಿಲ್ ಅವರ ಮೇಲೆ ಎಲ್ಲರ ಕಣ್ಣೂ ನೆಟ್ಟಿದ್ದು ಈ ಬಾರಿಯೂ ಅವರೇ ಗೆಲ್ಲಬಹುದು ಎಂಬ ನಿರೀಕ್ಷೆ ಇದೆ.